ಉಜಿರೆ : ಸದೃಢ ದೇಶ ನಿರ್ಮಾಣದಲ್ಲಿ ಪ್ರತಿಯೊಬ್ಬರ ಪಾತ್ರ ಮುಖ್ಯ. ನನ್ನ ದೇಹಕ್ಕಿಂತಲೂ , ನನ್ನ ದೇಶ ಮಿಗಿಲು ಎಂಬ ಭಾವನೆ ಯಾವಾಗ ನಮ್ಮಲ್ಲಿ ಮೂಡುತ್ತದೆಯೋ ಆಗ ಸದೃಢ ದೇಶ ನಿರ್ಮಾಣ ಸಾಧ್ಯ. ನಾನು ಎಂಬುದನ್ನು ಮರೆತು ನಾವು ಎನ್ನುವುದನ್ನು ಅಳವಡಿಸಿಕೊಂಡಾಗ ದೇಶ ಮುನ್ನೆಡೆಸಲು ಸಾಧ್ಯ ಎಂದು ಖ್ಯಾತ ಭಾಷಣಕಾರ್ತಿ ಶ್ರೀದೇವಿ ಅಭಿಪ್ರಾಯಪಟ್ಟರು.
ಉಜಿರೆ ಶ್ರೀ. ಧ. ಮಂ. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ ಹಾಗೂ ಮಹಿಳಾ ಅಭಿವೃದ್ಧಿ ಕೋಶ ವಿಭಾಗದ ವತಿಯಿಂದ ಸೋದರಿ ನಿವೇದಿತಾ ಜಯಂತಿಯ ಪ್ರಯುಕ್ತ ನಡೆದ ದೇಶ ಕಟ್ಟುವಿಕೆಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಕುರಿತಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸೋದರಿ ನಿವೇದಿತಾ ಮಹಿಳಾ ಸಬಲೀಕರಣದ ರುವಾರಿಯಾಗಿದ್ದು, ಭಾರತೀಯ ಮಹಿಳೆಯರ ಶಿಕ್ಷಣದ ಸಲುವಾಗಿ ಹೋರಾಡಿದವರಲ್ಲಿ ಒಬ್ಬರು. ಕಿರಣ್ ಮಜುಂದಾರ್ ಷಾ, ಕಲ್ಪನಾ ಸರೋಜ್, ಸುಧಾ ಮೂರ್ತಿ ಮೊದಲಾದವರು ಮಹಿಳಾ ಸಬಲೀಕರಣದ ಉತ್ತಮ ಉದಾಹರಣೆಗಳು. ಅಷ್ಷೇ ಅಲ್ಲದೇ ಮನೆಯವರ ಏಳಿಗೆಗೆ ಶ್ರಮಿಸುವ ತಾಯಿಯೂ ಭವ್ಯ ಭಾರತದ ನಿರ್ಮಾದಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ ಎಂದರು.
ಕಾರ್ಯಕ್ರಮದ ಉದ್ಘಾಟಕ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶಲೀಫ್ ಕುಮಾರಿ ಎ.ಪಿ. ಮಾತನಾಡಿ, ಸೋದರಿ ನಿವೇದಿತಾರ ಕುರಿತು ಸುದೀರ್ಘ ವಿವರಣೆ ನೀಡಿದರು. ಐರ್ಲೆಂಡಿನಿಂದ ಭಾರತೀಯ ಮಹಿಳೆಯರಿಗೆ ಶಿಕ್ಷಣ ನೀಡಲು ಬಂದ ಇವರು ಪ್ಲೇಗ್ ವಾತಾವರಣದಲ್ಲೂ ಭಾರತೀಯರ ನಿರಂತರ ಸೇವೆಗೈದರು. ವೃತ್ತಿ ಶಿಕ್ಷಣದ ಕುರಿತು ಅಂದಿನ ಕಾಲದಲ್ಲಿಯೇ ದೂರದೃಷ್ಟಿ ಹೊಂದಿದ್ದರು ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಮಹೇಶ್ ಶೆಟ್ಟಿ, ರಾಷ್ಟೀಯ ದಿನಗಳನ್ನು ಹೊರತುಪಡಿಸಿರೆ ಉಳಿದ ದಿನಗಳಲ್ಲಿ ದೇಶದ ಕುರಿತು ಯೋಚನೆ ಮಾಡಲು ನಾವು ಮಾರೆತಿದ್ದೇವೆ, ರಾಷ್ಟçಭಕ್ತಿಯನ್ನು ಕೇವಲ ಒಂದೆರಡು ದಿನಕ್ಕಾಗಿ ಸೀಮಿತವಾಗಿಡದೇ ನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಅಭಿವೃದ್ದಿ ಕೋಶದ ಸಂಯೋಜಕರಾದ ಮಾಲಿನಿ ಅಂಚನ್, ವಿಜೇತಾ ಪೈ ಹಾಗೂ ಮತ್ತಿತರ ಪ್ರಾಧ್ಯಾಪಕರು ಹಾಜರಿದ್ದರು. ಕಾರ್ಯಕ್ರಮವನ್ನು ಜಯಶ್ರೀ ನಿರೂಪಿಸಿ, ಸ್ನೇಹಾ ಸ್ವಾಗತಿಸಿ, ಅನನ್ಯ ಜೈನ್ ವಂದಿಸಿದರು.