ಉಡುಪಿ : ಕಾರ್ಕಳ ತಾಲೂಕಿನ, ಕೈಯಾರ್ಲದ ಶ್ರೀ ಮಹಾಕಾಳಿ ದೇವಾಲಯದ ಸಮೀಪದಲ್ಲಿನ ನಾಗಬನದಲ್ಲಿ ಪುರಾತನ ನಾಗಭೈರವ ಶಿಲ್ಪ ಪತ್ತೆಯಾಗಿದೆಯೆಂದು, ಶಿರ್ವದ ಎಂ.ಎಸ್.ಆರ್.ಎಸ್. ಕಾಲೇಜಿನ ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿಯವರು ಇಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಆಯತಾಕಾರದ ಬಳಪದ ಶಿಲೆಯ ಕೆಳಭಾಗದಲ್ಲಿ ಕಾಲುಮಂಡಲದ ನಾಲ್ಕು ಪವಿತ್ರ ಗಂಟುಗಳನ್ನು ಒಳಗೊಂಡ ಒಂದು ನಾಗರಾಜನ ಶಿಲ್ಪವನ್ನು ರಚಿಸಲಾಗಿದ್ದು, ನಾಗನ ಹೆಡೆಯ ಮೇಲೆ ಚರ್ತುಭಾಹು ನಾಗಭೈರನ ಶಿಲ್ಪವನ್ನು ನಿಂತಂತೆ ರಚಿಸಲಾಗಿದೆ. ಹಿಂದಿನ ಎರಡು ಕೈಗಳಲ್ಲಿ ಎರಡು ಹೆಡೆಬಿಚ್ಚಿದ ನಾಗಗಳನ್ನು ಹಿಡಿದಂತೆ ಚಿತ್ರಿಸಲಾಗಿದೆ ಮುಂದಿನ ಬಲಗೈಯಲ್ಲಿ ನಾಗ ದಂಡವಿದೆ, ಎಡಗೈಯಲ್ಲಿ ರುಂಡವಿದೆ. ನಾಗಭೈರವ ಶಿಲ್ಪದ ಎಡ-ಬಲಗಳಲ್ಲಿ ಹೆಡೆಬಿಚ್ಚಿದ ನಾಗಗಳನ್ನು ಕೈಯಲ್ಲಿ ಹಿಡಿದ ನಾಗ ಕನ್ನಿಕೆಯರ ಶಿಲ್ಪಗಳಿವೆ. ನಾಗಭೈರವನ ತಲೆಯ ಮೇಲೆ ಐದು ಹೆಡೆಗಳ ನಾಗಕೊಡೆಯಿದೆ. ಜನಿವಾರ ಮತ್ತು ಮತ್ತು ಸೊಂಟದ ಕೆಳಗೆ ಅರೆಪಂಚೆಯ ಅಲಂಕಾರವಿದೆ. ಶುದ್ಧ ಜನಪದ ಶೈಲಿಯಲ್ಲಿ ರಚಿತವಾಗಿರುವ ಈ ಶಿಲ್ಪ ಸುಮಾರು 14-15 ನೇ ಶತಮಾನದ ಜೈನ ನಾಗಶಿಲ್ಪವಾಗಿದೆ. ದೇವಾಲಯದ ಅರ್ಚಕರಾದ ಶ್ರೀ ಕಿರಣ್ ಚೌಟ, ಆಡಳಿತಾಧಿಕಾರಿ ಚಂದ್ರಹಾಸ ಚೌಟ, ವಿದ್ಯಾರ್ಥಿಗಳಾದ ಶ್ರೇಯಸ್, ಕಾರ್ತಿಕ್, ಗೌತಮ್, ದಿಶಾಂತ್ ಈ ಶಿಲ್ಪದ ಅಧ್ಯಯನದಲ್ಲಿ ಸಹಕರಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ