ಪ್ರಜಾಪ್ರಭುತ್ವಕ್ಕೆ ಕನಕನ ದಾರಿ ಆದರ್ಶ: ಪ್ರೊ.ಪ್ರಶಾಂತ ನಾಯ್ಕ್
ಮಂಗಳಗಂಗೋತ್ರಿ: ಜಾತಿ ಭ್ರಮೆಗಳ ಲೋಕವನ್ನು ಮೀರಿ ಮಾನವೀಯತೆಯನ್ನು ಎತ್ತಿಹಿಡಿದ ವೈಷ್ಣವ ಪರಂಪರೆಯಲ್ಲಿ ಗುರುತಿಸಿಕೊಂಡಿದ್ದಾಗಲೂ ಶಿವ, ಶಾರದೆ, ಗಣಪತಿ ಹೀಗೆ ಹಲವು ದೇವರುಗಳನ್ನು ಸ್ತುತಿಸಿದ ಕನಕ ಬಹುತ್ವದಲ್ಲಿ ನಂಬಿಕೆಯಿಟ್ಟವ. ಪ್ರಜಾಪ್ರಭುತ್ವದ ನಮ್ಮ ಕಾಲಕ್ಕೆ ಕನಕನ ಸಮಾನತೆಯ, ಎಲ್ಲವನ್ನೂ ಒಳಗೊಳ್ಳುವ ದಾರಿ ಆದರ್ಶವಾಗಬೇಕು ಎಂದು ಶಿವಮೊಗ್ಗದ ಕುವೆಂಪು ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಪ್ರಶಾಂತ್ ನಾಯಕ್ ಹೇಳಿದರು.
ಅವರು ಗುರುವಾರ ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದ ವತಿಯಿಂದ ಆಂಧ್ರಪ್ರದೇಶದ ಕುಪ್ಪಂ ದ್ರಾವಿಡ ವಿಶ್ವವಿದ್ಯಾನಿಲಯದ ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗದ ಸಹಯೋಗದೊಂದಿಗೆ ಕುಪ್ಪಂನ ವಿವಿ ಸಭಾಂಗಣದಲ್ಲಿ ನಡೆದ ಕನಕ ತತ್ತ್ವ ಚಿಂತನ ಪ್ರಚಾರೋಪನ್ಯಾಸ ಮಾಲಿಕೆಯಡಿ ಕನಕದಾಸರು ಮತ್ತು ಸಾಮಾಜಿಕ ನ್ಯಾಯ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ತಳಸಮುದಾಯದಿಂದ ತನ್ನ ಹೋರಾಟದ ಮೂಲಕ ತಾನು ಪಟ್ಟ ಪಾಡುಗಳನ್ನು ಹಾಡಾಗಿಸಿದ ಕನಕ ದೈವಲೀಲೆಯನ್ನು ಹೇಳುವಾಗಲೂ ಅನುಭವನಿಷ್ಠೆಯನ್ನು ಹೊಂದಿದ್ದ. ಕನಕನ್ನು ಕತೆಯಾಗಿ ಗ್ರಹಿಸಬೇಕಿಲ್ಲ. ಜಯಂತಿ ಆಚರಣೆಗಳಲ್ಲಿ ಕನಕ ಕತೆಯಾಗಿದ್ದಾನೆ. ಆತನನ್ನು ನಾವು ಭಾವವಾಗಿ ಗ್ರಹಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಪ್ಪಂ ದ್ರಾವಿಡ ವಿವಿಯ ಮಾನವಿಕ ವಿಭಾಗದ ಡೀನ್ ಪ್ರೊ. ಶಿವಕುಮಾರ್ ಬಿ.ಎಸ್ ಮಾತನಾಡಿ ನಮ್ಮ ಕಾಲದ ಸಾಮಾಜಿಕ ಸವಾಲುಗಳಿಗೆ ಉತ್ತರವಾಗಬೇಕಿದ್ದ ಕನಕ ರಾಜಕೀಯ ದಾಳವಾಗುತ್ತಿರುವುದು ವಿಷಾದನೀಯ. ಕನಕದಾಸರನ್ನು ದ್ರಾವಿಡ ಸಂತತತ್ತ್ವದ ಜೊತೆಗೆ ತೌಲನಿಕ ಅಧ್ಯಯನ ಸಾಧ್ಯವಾಗಬೇಕು ಎಂದರು.
ಕುಪ್ಪಂ ದ್ರಾವಿಡ ವಿವಿಯ ಕನ್ನಡ ಭಾಷೆ ಮತ್ತುಅನುವಾದ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಕೆ ಶಾರದಾ, ಮಂಗಳೂರು ವಿವಿಯ ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಮಾತನಾಡಿದರು.
ದ್ರಾವಿಡ ವಿವಿ ಕುಪ್ಪಂನ ಜಾನಪದ ವಿಭಾಗದ ಪ್ರೊ.ಎಂ ಎನ್ ವೆಂಕಟೇಶ್, ಪ್ರೊ.ಸುಶೀಲಾ, ಕನ್ನಡ ಅಧ್ಯಯನ ವಿಭಾಗದ ಪ್ರೊ. ಜಯಲಲಿತಾ, ಡಾ. ದುರ್ಗಾಪ್ರವೀಣ, ಪ್ರಸಾರಾಂಗದ ಡಾ. ಮಲ್ಲೇಶ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ