ಜ್ಞಾನವೆಂಬುದು ಶಾಶ್ವತ ಸಂಪತ್ತು: ಡಾ. ಐ ರಮೇಶ್ ಮಿತ್ತಂತಾಯ
ನಿಟ್ಟೆ: 'ಜ್ಞಾನವೆಂಬ ಸಂಪತ್ತನ್ನು ನಾವು ಸಂಪಾದಿಸಿದರೆ, ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಜ್ಞಾನವೆಂಬ ಸಂಪತ್ತನ್ನು ಕಾಲು ಭಾಗ ಗುರುಗಳಿಂದ, ಕಾಲು ಭಾಗ ತಮ್ಮ ಸ್ವಂತ ಸಾಧನೆಯಿಂದ, ಕಾಲು ಭಾಗವನ್ನು ಸಹಪಾಠಿಗಳ ಸಹಕಾರದಿಂದ ಹಾಗೂ ಇನ್ನುಳಿದ ಕಾಲು ಭಾಗವನ್ನು ಕಾಲಕ್ರಮೇಣವಾಗಿ ಅನುಭವದಿಂದ ಕಲಿಯಬಹುದಾಗಿದೆ' ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ. ಐ ರಮೇಶ್ ಮಿತ್ತಂತಾಯ ಅಭಿಪ್ರಾಯಪಟ್ಟರು.
ಅವರು ಆ.22 ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗವು ಆರಂಭಿಸಿರುವ 'ರಿನಿವೇಬಲ್ ಎನರ್ಜಿ ಕ್ಲಬ್' ನ್ನು ಉದ್ಘಾಟಿಸಿ ಅಂದೇ ವಿಭಾಗವು ಹಮ್ಮಿಕೊಂಡ 'ನ್ಯೂ & ರಿನಿವೇಬಲ್ ಸೋರ್ಸಸ್ ಆಫ್ ಎನರ್ಜಿ' ಎಂಬ ಒಂದು ದಿನದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದ ಯು.ಬಿ.ಡಿ.ಟಿ ಕಾಲೇಜು ದಾವಣಗೆರೆಯ ಇಂಡಸ್ಟ್ರಿಯಲ್ ಪ್ರೊಡಕ್ಷನ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ.ನಾಗೇಶ್ ಅವರು ಮಾತನಾಡಿ 'ಹಲವಾರು ಸುಭಾಷಿತಗಳಲ್ಲಿ ವಿದ್ವಾಂಸರು ಉಲ್ಲೇಖಿಸಿರುವಂತೆ ವಿದ್ಯೆ/ಜ್ಞಾನ ಎಂಬುದು ಮಾನವ ಜೀವನದ ಅತ್ಯಮೂಲ್ಯವಾದ ಸಂಪತ್ತು. ಈ ಸಂಪತ್ತು ಯಾರಿಂದಲೂ ಕಳವು ಮಾಡುವುದಕ್ಕಾಗಲಿ, ವಿಭಾಗಿಸಿ ಇನ್ನೊಬ್ಬರು ಕೊಂಡೊಯ್ಯೂವುದಕ್ಕಾಗಲಿ ಸಾಧ್ಯವಾಗದು. ವಿದ್ಯೆಯನ್ನು ಗುರು ಮುಖೇನ ಹಾಗೂ ರಿನಿವೇಬಲ್ ಎನರ್ಜಿ ಕ್ಲಬ್ ನಂತಹ ತಾಂತ್ರಿಕ ಕೂಟಗಳಲ್ಲಿ ವಿಮರ್ಶಾತ್ಮಕ ಚಿಂತನೆಗಳನ್ನು ನಡೆಸುವುದರ ಮೂಲಕ ವೃದ್ಧಿಸಿಕೊಳ್ಳಲು ಸಾಧ್ಯ' ಎಂದು ಅವರು ಅಭಿಪ್ರಾಯಪಟ್ಟರು.
ಇನ್ನೋರ್ವ ಗೌರವ ಅತಿಥಿಯಾಗಿ ಭಾಗವಹಿಸಿದ್ದ ಎನ್.ಐ.ಟಿ.ಕೆ ಸುರತ್ಕಲ್ ನ ಮೆಕ್ಯಾನಿಕಲ್ ವಿಭಾಗದ ಪ್ರೊಫೆಸರ್ ಡಾ.ಸತ್ಯಭಾಮ ಅವರು ತಮ್ಮ ಮಾತುಗಳಲ್ಲಿ 'ಇಂತಹ ಕಾರ್ಯಾಗಾರಗಳು ವಿದ್ಯಾರ್ಜನೆಯ ದೃಷ್ಠಿಯಿಂದ ಕಾಲೇಜುಗಳಲ್ಲಿ ಹಮ್ಮಿಕೊಳ್ಳುವುದು ಅತಿಮುಖ್ಯ. ಇಂತಹ ವಿಷಯಗಳ ಬಗೆಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳುವುದರಿಂದ ಇಂಧನಗಳನ್ನು ಹೇಗೆ ಹಿತ-ಮಿತವಾಗಿ ಬಳಸಬಹುದು, ಬೇರೆ ಯಾವರೀತಿಯ ಇಂಧನ ಮೂಲಗಳನ್ನು ಬಳಸಬಹುದು ಮುಂತಾದ ವಿಚಾರಗಳ ಬಗೆಗೆ ಮಾಹಿತಿ ಸಿಗಬಹುದಾಗಿದೆ' ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ 'ತಾಂತ್ರಿಕ ಜ್ಞಾನಾರ್ಜನೆಯಲ್ಲಿ ಹೆಚ್ಚಿನ ವಿಚಾರಗಳೂ ಪ್ರಾಯೋಗಿಕ ಕಲಿಯುವಿಕೆಯೇ ಆಗಿದೆ. ವಿದ್ಯೆಯಂತೆ ರಿನಿವೇಬಲ್ ಎನರ್ಜಿ ಸೋರ್ಸ್ (ನವೀಕರಿಸಬಹುದಾದ ಇಂಧನ ಪ್ರಕಾರಗಳು) ನ್ನು ಯಾರೂ ಕಳವು ಮಾಡುವುದಕ್ಕಾಗಲಿ, ವಿಭಾಗಿಸಿ ಇನ್ನೊಬ್ಬರು ಕೊಂಡೊಯ್ಯೂವುದಕ್ಕಾಗಲಿ ಸಾಧ್ಯವಾಗದು. ಈ ಇಂಧನ ಶಕ್ತಿಯು ಪ್ರಕೃತಿಯಲ್ಲಿ ಉಚಿತವಾಗಿ ದೊರೆಯುವುದು. ಇದನ್ನು ನಾವು ನಮಗೆ ಬೇಕಾದ ಪ್ರಕಾರಕ್ಕೆ ಪರಿವರ್ತಿಸುವ ಕಾರ್ಯ ಮಾಡಬೇಕಾಗಿದೆ' ಎಂದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ಪೈ ಸ್ವಾಗತಿಸಿದರು. ಸಹಪ್ರಾಧ್ಯಾಪಕಿ ಡಾ.ರಶ್ಮೀ ಪಿ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಾಗಾರದ ಸಂಯೋಜಕ ಡಾ. ಅನಂತಕೃಷ್ಣ ಸೋಮಯಾಜಿ ವಂದಿಸಿದರು. ಸಹಪ್ರಾಧ್ಯಾಪಕ ಡಾ.ಅಜಿತ್ ಹೆಬ್ಬಾಳೆ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ