ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ ನಡೆದ ವೈಭವೋಪೇತ ‘ಸ್ವಾತಂತ್ರ್ಯದ ನಡಿಗೆ’

Upayuktha
0

ಪುತ್ತೂರು ನಗರದಾದ್ಯಂತ ದೇಶಪ್ರೇಮ ಪಸರಿಸಿದ ಅಂಬಿಕಾ ವಿದ್ಯಾರ್ಥಿಗಳು



ಪುತ್ತೂರು: ಒಂದೆಡೆಯಲ್ಲಿ ಆದ್ಯಾತ್ಮ ಭಾರತದ ಸೊಗಡು, ಭಾರತಾಂಬೆಯ ಮಡಿಲಲ್ಲಿ ಕುಳಿತ ಶ್ರೀ ಶಂಕರಾಚಾರ್ಯರ ಚಿನ್ಮಯ ಮುದ್ರೆ, ಚತುರಾಮ್ನಾಯ ಪೀಠದ ಪ್ರಸ್ತುತಿ. ಅಮೃತ ಭಾರತ– ಆಧ್ಯಾತ್ಮ ಭಾರತ ಎಂಬ ಕಲ್ಪನೆಯ ಅನಾವರಣ. ಮತ್ತೊಂದೆಡೆ ಭಾರತದ ಬ್ರಹ್ಮ ಶಕ್ತಿಯಾದ ಬ್ರಹ್ಮೋಸ್ ಕ್ಷಿಪಣಿಯ ವೈಭವ, ಇನ್ನೊಂದೆಡೆ ಶಿವಾಜಿ ಮಹಾರಾಜನ ಕ್ಷಾತ್ರ ತೇಜಸ್ಸು, ಹಾಗೆಯೇ ದೇಶಕ್ಕಾಗಿ ಪ್ರಾಣಾರ್ಪಣೆಗೈದ ಭಗತ್ ಸಿಂಗ್ ರಾಜಗುರು ಸುಖದೇವ್ ಅವರಂತಹ ಮಹಾನ್ ದೇಶಪ್ರೇಮಿಗಳ ಚಿತ್ರಣ. ಅಂತೆಯೇ ಕಾರ್ಗಿಲ್‍ನ ಹಿಮಾಚ್ಛಾದಿತ ಪ್ರದೇಶದಲ್ಲಿ ದೇಶರಕ್ಷಣೆಗಾಗಿ ಸೆಟೆದು ನಿಂತಿರುವ ಯೋಧರ ಸನ್ನಿವೇಶ. ಜತೆಗೆ ಇತ್ತೀಚೆಗಷ್ಟೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ದ್ರೌಪದಿ ಮುರ್ಮು ಅವರ ಪ್ರಸ್ತುತಿ. ಹೀಗೆ ದೇಶದ ಬಗೆಗೆ ಹೆಮ್ಮೆ ಉಕ್ಕಿಸುವ ಹತ್ತು ಹಲವು ವಿಚಾರಧಾರೆಗಳು. ಇವೆಲ್ಲವೂ ಕಂಡು ಬಂದದ್ದು ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ನಡೆದ ಸ್ವಾತಂತ್ರ್ಯದ ನಡಿಗೆ ಎಂಬ ಬೃಹತ್ ಜಾಥಾದಲ್ಲಿ.


ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ 75ನೆಯ ಸ್ವಾತಂತ್ರ್ಯ ದಿನಾಚರಣೆ – ಅಮೃತ ಮಹೋತ್ಸವ ಅದ್ಧೂರಿಯಿಂದ ಆಚರಿಸಲ್ಪಟ್ಟಿತು. ಸದಾ ದೇಶಭಕ್ತಿಯನ್ನು ಎಳೆಯ ಮನಸ್ಸುಗಳಲ್ಲಿ ತುಂಬುವ ಅಂಬಿಕಾ ಶಿಕ್ಷಣ ಸಂಸ್ಥೆ ಈ ಬಾರಿಯ ಅಮೃತ ಮಹೋತ್ಸವಕ್ಕೆ ವಿಶೇಷ ಮೆರುಗನ್ನು ನೀಡುವ ಪ್ರಯತ್ನ ನಡೆಸಿ, ಸಫಲವಾಯಿತು.


ದರ್ಭೆ, ಬೊಳುವಾರು, ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಿಂದ ಏಕಕಾಲಕ್ಕೆ ಬೃಹತ್ ಮೆರವಣಿಗೆ ನಡೆಯಿತು. ಪ್ರತಿಯೊಂದು ಮೆರವಣಿಗೆಯಲ್ಲೂ ವಿವಿಧ ಸ್ಥಬ್ಧ ಚಿತ್ರಗಳು ಮೆರೆದಾಡಿದವು. ಸಾವಿರಾರು ಮಂದಿ ವಿದ್ಯಾರ್ಥಿಗಳು ಭಾರತ ಮಾತೆಗೆ ಜೈಕಾರ ಕೂಗುತ್ತಾ, ವಂದೇ ಮಾತರಂ ಘೋಷಣೆ ಮೊಳಗಿಸುತ್ತಾ, ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ಮುನ್ನಡೆಯುತ್ತಿದ್ದರೆ ಇಡಿಯ ನಗರವೇ ಶೃಂಗಾರಗೊಂಡಂತೆ ಕಂಡುಬಂತು. ದರ್ಭೆಯಲ್ಲಿ ಶಾಸಕ ಸಂಜೀವ ಮಠಂದೂರು ಜಾಥಾಕ್ಕೆ ಚಾಲನೆ ನೀಡಿದರೆ ಉಳಿದ ಕಡೆಗಳಲ್ಲಿ ಮಾಜಿ ಸೈನಿಕರು ಚಾಲನೆ ನೀಡಿದರು. 


75ರ ಅಮೃತ ಮಹೋತ್ಸವದ ನೆಲೆಯಲ್ಲಿ ಸ್ವಾತಂತ್ರ್ಯದ ನಡಿಗೆ ಎಂಬ ಮಹತ್ವದ ಕಲ್ಪನೆಯನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಯೋಜಿಸಿದ್ದವು. ಅದರನ್ವಯ ಅಂಬಿಕಾ ಸಂಸ್ಥೆಗಳೊಡನೆ ಸಂತ ಫಿಲೋಮಿನಾವೂ ಸೇರಿದಂತೆ ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಬೋಧಕರು ಜತೆಸೇರಿದ್ದರು. ಅಂಬಿಕಾದ ವಿದ್ಯಾರ್ಥಿಗಳಲ್ಲದೆ ಹೆತ್ತವರು, ಆಡಳಿತ ಮಂಡಳಿ, ಬೋಧಕ-ಬೋಧಕೇತರ ವೃಂದದವರೆಲ್ಲರೂ ಈ ಸ್ವಾತಂತ್ರ್ಯದ ನಡಿಗೆಯಲ್ಲಿ ಪಾಲ್ಗೊಂಡದ್ದು ವಿಶೇಷವಾಗಿತ್ತು. 


ಈ ಬೃಹತ್ ಜಾಥಾ ಅಂತಿಮವಾಗಿ ಕಿಲ್ಲೆ ಮೈದಾನದ ಬಳಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ರೂಪಿಸಲಾಗಿರುವ ದಕ್ಷಿಣ ಭಾರತದ ಏಕೈಕ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಕೊನೆಗೊಂಡು ಅಲ್ಲಿ ಸರ್ಕಾರದ ವತಿಯಿಂದ ಆಯೋಜಿಸಲಾದ ಸ್ವಾತಂತ್ರ್ಯ ದಿನಾಚರಣೆಗೆ ಸಾಕ್ಷಿಯಾಯಿತು.


ಸಭಾ ಕಾರ್ಯಕ್ರಮ:

ಸ್ವಾತಂತ್ರ್ಯದ ನಡಿಗೆಯ ನಂತರ ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಅಂಬಿಖಾ ಸಂಸ್ಥೆಗಳ ವತಿಯಿಂದ ಸಭಾಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿವಮೊಗ್ಗದ ವಾಗ್ಮಿ ಕಿರಣ್ ಹೆಗ್ಗದ್ದೆ ಮಾತನಾಡಿ ಸ್ವಾತಂತ್ರ್ಯ ಸುದೀರ್ಘವಾದ ಇತಿಹಾಸವನ್ನು ಹೊಂದಿದೆ. ಭಾರತದಲ್ಲಿ ವಂದೇ ಮಾತರಂ ಎಂದು ಕೂಗಲು, ರಾಷ್ಟ್ರ ಧ್ವಜವನ್ನು ಹಾರಿಸಲು ಅವಕಾಶವಿಲ್ಲದ ಕಾಲವಿತ್ತು. ಅಂತಹ ಸಂದರ್ಭದಲ್ಲಿಯೂ ಭಾರತೀಯರು ಆ ನಿಯಮಗಳ ವಿರುದ್ಧವಾಗಿ ನಿಂತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಹಲವಾರು ಮಂದಿ ತಮ್ಮ ಪ್ರಾಣವನ್ನು ಭಾರತಮಾತೆಗಾಗಿ ಅರ್ಪಿಸಿದ್ದಾರೆ. ಕೆಚ್ಚಿನಿಂದ ಹೋರಾಡಿ, ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ ಎಂದು ಹೇಳಿದರು.


ಮಣ್ಣಿನ ಗುಣವನ್ನು ಅರಿತವರು ಭಾರತಾಂಬೆಯ ರಕ್ಷಣೆಗೆ ಧಾವಿಸುತ್ತಾರೆ. ಶತ್ರುಗಳ ಅಡಿಯಲ್ಲಿಯೇ ಇದ್ದು, ಅವರ ಜಾಲವನ್ನು ಅರಿಯುತ್ತಾರೆ ಹಾಗೂ ತಾಯಿ ಭಾರತಿಯನ್ನು ಶತ್ರುವಿನ ಕಪಿಮುಷ್ಠಿಯಿಂದ ರಕ್ಷಿಸುತ್ತಾರೆ. ಶಿವಾಜಿ, ಹರಿಹರ, ಚೆನ್ನಮ್ಮ, ಝಾನ್ಸಿರಾಣಿ, ಸಂಗೊಳ್ಳಿ ರಾಯಣ್ಣ, ನಾನಾ ಸಾಹೇಬ್, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಸಾವರ್ಕರ್, ಭಟುಕೇಶ್ವರ ದತ್ತ ಹೀಗೆ ಅದೆಷ್ಟೋ ಮಂದಿ ವೀರರು ಅನ್ಯರ ಬಂಧನದಿಂದ ಹೊರಬರಲು ಜೀವವನ್ನು, ಜೀವನವನ್ನು ಒತ್ತೆಯಿರಿಸಿದ್ದಾರೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ,  ಇಂದು ನಾವು ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದರೆ ಹಿಂದೆ ಹಲವಾರು ಹೋರಾಟಗಳು ನಡೆದಿವೆ. ಬದುಕಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ದೇಶದ ಇತಿಹಾಸವನ್ನು ಪ್ರತಿಯೊಬ್ಬ ಪ್ರಜೆಯೂ ತಿಳಿದುಕೊಳ್ಳಬೇಕು. ಪೂರ್ವಜರ ಶೌರ್ಯ, ಪರಾಕ್ರಮಗಳು ಇಂದಿನ ಪೀಳಿಗೆಯವರಲ್ಲಿ ಮುಂದುವರೆಯಬೇಕು. ಅನ್ಯಾಯ, ದೌರ್ಜನ್ಯಗಳು ಕಂಡುಬಂದಲ್ಲಿ, ಸೆಟೆದು ನಿಲ್ಲಬೇಕಾದ ಅಗತ್ಯವಿದೆ. ಯಾವುದೇ ವೃತ್ತಿಯಲ್ಲಿದ್ದರೂ  ದೇಶಕ್ಕಾಗಿ ಮಿಡಿಯುವ ಅಂತಃಕರಣ ನಮ್ಮದಾಗಬೇಕಿದೆ. ದೇಶ ಪ್ರೇಮವನ್ನು ತೋರಿ, ಭಾರತವನ್ನು ವಿಶ್ವಗುರುವಾಗಿಸಬೇಕು ಎಂದರು.


ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಂಬಿಕಾ ವಿದ್ಯಾಲಯ, ಸಿಬಿಎಸ್‍ಇ, ಪದವಿಪೂರ್ವ ವಿದ್ಯಾಲಯ ಹಾಗೂ ಮಹಾವಿದ್ಯಾಲಯದ ಮಕ್ಕಳಿಗೆ ನಡೆಸಿದ್ದ  ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ನೆಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾರ್ಥಿಗಳು ಸಂಕಲಿಸಿದ 75 ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಕುರಿತಾದ ಪರಿಚಯ ಕೃತಿ ‘ಕೇಳಿಸದ ದನಿ' ಯನ್ನು ಬಿಡುಗಡೆಗೊಳಿಸಲಾಯಿತು.


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಆಡಳಿತ ಮಂಡಳಿಯ ಸದಸ್ಯರಾದ ಸುರೇಶ್ ಶೆಟ್ಟಿ ಹಾಗೂ ಡಾ.ಎಚ್. ಮಾಧವ ಭಟ್ ಮತ್ತು ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶೈಲೇಶ್, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ, ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇಯ ಪ್ರಾಚಾರ್ಯೆ ಮಾಲತಿ ಡಿ ಉಪಸ್ಥಿತರಿದ್ದರು.


ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿ, ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ಸುಚಿತ್ರಾ ಪ್ರಭು ವಂದಿಸಿದರು. ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಕೌಶಲ್ಯ ಕಾರ್ಯಕ್ರಮ ನಿರೂಪಿಸಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top