ಆಳ್ವಾಸ್‍ನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ: ಸಂಭ್ರಮಕ್ಕೆ ಸಾಕ್ಷಿಯಾದ ಸುಪ್ರೀಂಕೋರ್ಟ್ ನ್ಯಾಯಾಧೀಶ ಅಬ್ದುಲ್ ನಝೀರ್

Upayuktha
0

25,000ಕ್ಕೂ ಅಧಿಕ ಜನರನ್ನು ಸಾಕ್ಷೀಕರಿಸಿದ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆ



ಮೂಡುಬಿದಿರೆ: ಸರ್ವಧರ್ಮ ಶ್ರೇಷ್ಠ ಚಿಂತನೆಯನ್ನು ಜಗತ್ತಿಗೆ ಸಾರಿದ ಏಕೈಕ ರಾಷ್ಟ್ರ ಭಾರತ ಎಂದು ಭಾರತದ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ನಝೀರ್ ಹೇಳಿದರು.


ಪುತ್ತಿಗೆಯ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆದ 75ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು, ಭಾರತವು ಸರ್ವಧರ್ಮ ಸಮಾನತೆಯನ್ನು ಸಾರಿದ ದೇಶ. ಗಾಂಧೀಜಿಯ ನಿರಂತರ ಶಾಂತಿಯುತ ಹೋರಾಟದ ತತ್ತ್ವಗಳು ಹಾಗೂ ಅವರ ಅನುಯಾಯಿಗಳು ದೇಶದ ಸ್ವಾತಂತ್ರ್ಯಕ್ಕೆ ನೀಡಿದ ಕೊಡುಗೆ ಮಹತ್ತರವಾದದ್ದು. ಇಂತಹ ಮಹನೀಯರನ್ನು ಪ್ರತಿಯೊಬ್ಬರು ನೆನೆಯಬೇಕು. ಸ್ವಾತಂತ್ರ್ಯ ಹೋರಾಟಗಾರರ ಶ್ರಮವನ್ನು ವಿದ್ಯಾರ್ಥಿಗಳು ಅರಿತುಕೊಂಡರೆ ಅವರ ಶ್ರಮಕ್ಕೆ ಸಾರ್ಥಕತೆ ದೊರೆಯುತ್ತದೆ. ದೇಶಕ್ಕೆ ಕಾನೂನಿನ ಮಾರ್ಗದರ್ಶನ ನೀಡಲು ಬೌದ್ಧಿಕ ಶಕ್ತಿಯನ್ನು ಬಳಸಿ ರಚಿಸಿದ ಸಂವಿಧಾನದ ಆಶಯಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಮಕ್ಕಳಿಗೆ ಅಗತ್ಯವಿದೆ. ಮಾಧ್ಯಮಗಳು ಜವಾಬ್ದಾರಿಯುತ ವರದಿಗಳನ್ನು ಮಾಡಿ, ಉತ್ತಮ ಆಡಳಿತ ವ್ಯವಸ್ಥೆಯಲ್ಲಿನ ಪಾರದರ್ಶಕತೆ ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕು. ಈ ಮೂಲಕ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಅರ್ಥಪೂರ್ಣಗೊಳಿಸಿ ಎಂದರು. ಬಡತನ ನಿರ್ಮೂಲನೆ, ಅಶಕ್ತರು, ಹಿಂದುಳಿದ ವರ್ಗಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಕ್ಕಳು, ಹಿರಿಯ ನಾಗರಿಕರು, ಅಂಗವಿಕಲರು, ರೈತರು, ಅಸಂಘಟಿತ ವಲಯದ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರ ಮೂಲಕ ಈ ಅಮೃತ ಮಹೋತ್ಸವದ ಸ್ವಾತಂತ್ರ್ಯೋತ್ಸವದ ಆಚರಣೆಗೆ ಒಂದು ಅರ್ಥ ತಂದು ಕೊಡುಬೇಕಾದ ಅನಿವಾರ್ಯತೆ ಜತಗೆ ಬದ್ದತೆಯ ಜವಾಬ್ದಾರಿ ನಮ್ಮ ಮೇಲಿದೆ ಎಂದರು.



ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ,  ಸ್ಕೌಟ್ಸ್-ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್ ಸಿಂಧಿಯಾ, ಅಬ್ದುಲ್ ನಝೀರ್‍ರವರ ಧರ್ಮಪತ್ನಿ ಸಮೀರಾ ನಝೀರ್, ಗುಜರಾತಿನ ರಾಷ್ಟ್ರ ವೇದಿಕ್ ಮಿಷನ್ ಟ್ರಸ್ಟಿ ಸ್ವಾಮಿ ಧರ್ಮಬಂಧುಜಿ,  ಉದ್ಯಮಿ ಶ್ರೀಪತಿ ಭಟ್, ಜಯಶ್ರೀ ಅಮರನಾಥ ಶೆಟ್ಟಿ, ಆಳ್ವಾಸ್ ಸಂಸ್ಥೆಯ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ. ವಿನಯ್ ಆಳ್ವ ಉಪಸ್ಥಿತರಿದ್ದರು.


ನೌಕಾದಳದ ಕೆಡೆಟ್ ಕ್ಯಾಪ್ಟನ್ ಶಾಶ್ವತ್ ರೈ ಅವರಿಂದ ಗೌರವ ರಕ್ಷೆ ಸ್ವೀಕರಿಸಲಾಯಿತು. ಪೆರೇಡ್ ಕಮಾಂಡರ್ ಆಗಿ ಕೆಡೆಟ್ ಪುಷ್ಯ, ಪೈಲೆಟ್ಸ್‍ಗಳಾಗಿ ಅಮೃತ ಭಟ್, ಅಯನಾ, ತೇಜಸ್ವಿನಿ, ದೀಕ್ಷಾ ನಿರ್ವಹಿಸಿದರು. ಆಳ್ವಾಸ್‍ನ ವಿವಿಧ ಶಿಕ್ಷಣ ಸಂಸ್ಥೆಗಳ 25,000ಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕರು, ಸೇನಾ ಅಧಿಕಾರಿಗಳು, ಪೋಷಕರು, ಸಾರ್ವಜನಿಕರು ಬೃಹತ್ ಆಚರಣೆಗೆ ಸಾಕ್ಷಿಯಾದರು. ಆಳ್ವಾಸ್ ಪ.ಪೂ ಕಾಲೇಜಿನ ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.


ರಾಜ್ಯದ ಬೆಂಗಳೂರು, ಬೆಳಗಾವಿ, ಮೈಸೂರು, ಮಂಗಳೂರು, ಬಳ್ಳಾರಿ ಕಾಂಟಿಜೆಂಟ್‍ಗಳಿಂದ 550 ಎನ್‍ಸಿಸಿ ಕೆಡೆಟ್‍ಗಳು, ಸೇನಾಧಿಕಾರಿಗಳು, ಯೋಧರು ಭಾಗವಹಿಸಿದರು.


ಕರ್ನಾಟಕದ ಭರತನಾಟ್ಯ, ಡೊಳ್ಳು ಕುಣಿತ, ಮಹಾರಾಷ್ಟ್ರದ ಲಾವಣಿ, ಕೇರಳದ ಮೋಹಿನಿಯಾಟ್ಟಂ, ಮಣಿಪುರದ ರಾಸ್‍ಲೀಲಾ, ಒಡಿಶಾದ ಓಡಿಸ್ಸಿ, ಪಶ್ಚಿಮ ಬಂಗಾಳಾದ ಪುರ್ಲಿಯೋ, ಕಥಕ್, ಕರ್ನಾಟಕದ ತೆಂಕು ಹಾಗೂ ಬಡಗು ತಿಟ್ಟಿನ ಯಕ್ಷಗಾನ, ಪಂಜಾಬಿನ ಬಾಂಗ್ರಾ, ಯೋಗ ಹಾಗೂ ಪಿರಮಿಡ್ ತಂಡಗಳು, ಜಾನಪದ ಕ್ರೀಡೆ ಮಲ್ಲಕಂಬದ ತಂಡಗಳು ವೇದಿಕೆಯನ್ನು ಅಲಂಕರಿಸಿದ್ದವು.


ಸಮಾರಂಭದ ಮೆರುಗು ಹೆಚ್ಚಿಸಲು ಸ್ಟ್ರೀಮರ್ಸ್ ಹಾಗೂ ಬ್ಲೋವರ್ಸ್‍ನ್ನು ಬಳಸಿ ತ್ರಿವರ್ಣ ಧ್ವಜದ ಬಣ್ಣಗಳನ್ನು ಹಾರಿಸಲಾಯಿತು. ಈ ಮೂಲಕ ವೇದಿಕೆಯ ಆವರಣದ ಅಂದವನ್ನು ತ್ರಿವರ್ಣಮಯಗೊಳಿಸಲಾಯಿತು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top