ಕಲಿತು ಕಲಿಸಿ ಹೊಸತನ ರೂಢಿಸಿಕೊಳ್ಳಿ

Chandrashekhara Kulamarva
0

ವಿವಿ ಕಾಲೇಜು: ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿಗಳಿಗೆ ಡಾ. ಗಣನಾಥ ಎಕ್ಕಾರು ಕರೆ


ಮಂಗಳೂರು: ರೆಡ್ ಕ್ರಾಸ್ ಶ್ರೀಮಂತ ಇತಿಹಾಸ, ಧ್ಯೇಯೋದ್ದೇಶ ಇರುವ ಸಂಸ್ಥೆ. ಅದನ್ನು ಮೊದಲು ಅರಿಯಬೇಕು. ಕಲಿತದ್ದನ್ನು ವಿದ್ಯಾರ್ಥಿಗಳಿಗೆ ಕಲಿಸುವುದರಿಂದ ತರಬೇತುದಾರರಾಗಿ ಬೆಳೆಯಲು, ಹೊಸದನ್ನು ಕಲಿಯಲು ಸಾಧ್ಯ, ಎಂದು ತರಬೇತುದಾರ, ವಿಶ್ರಾಂತ ಪ್ರಾಧ್ಯಾಪಕ ಡಾ. ಗಣನಾಥ ಎಕ್ಕಾರು ಅಭಿಪ್ರಾಯಪಟ್ಟರು. 


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಕರ್ನಾಟಕ ರಾಜ್ಯ ಶಾಖೆ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ಜಂಟಿಯಾಗಿ ನೂತನ ಪಠ್ಯಕ್ರಮ ಕುರಿತು ಯುವ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ ಕಾರ್ಯಾಗಾರದ ಸಮಾರೋಪದಲ್ಲಿ ಶುಕ್ರವಾರ ಅವರು ಮಾತನಾಡಿದರು.  


ಜಿಲ್ಲಾ ಯುವ ರೆಡ್ ಕ್ರಾಸ್ ಸಂಯೊಜಕ ಸಚೇತ್ ಸುವರ್ಣ ಮಾತನಾಡಿ, ಆಸಕ್ತ 30 ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿಗಳಿಗೆ ರಾಷ್ಟ್ರ ಮಟ್ಟದ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು, ಎಂದರು. ಮಂಗಳೂರು ವಿಶ್ವವಿದ್ಯಾನಿಲಯದ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ, ಕಾರ್ಯಕ್ರಮ ಅಧಿಕಾರಿಗಳು ತಮ್ಮತನವನ್ನು ಅಳವಡಿಸಿಕೊಂಡು, ಪ್ರೌಢಶಾಲೆಯಿಂದಲೇ ರೆಡ್ ಕ್ರಾಸ್ ನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ಬಂದರೆ, ಕಾಲೇಜು ಹಂತದಲ್ಲಿ ಕಾರ್ಯಕ್ರಮಗಳ  ಜಾರಿ ಸುಲಭವಾಗುತ್ತದೆ, ಎಂದರು. 


ಅಭಿಪ್ರಾಯ ಹಂಚಿಕೊಂಡ ಭಾಗಿಗಳು, ಕೆಲಸಗಳ ಒತ್ತಡದ ನಡುವೆಯೂ ನಡೆದ ಕಾರ್ಯಕ್ರಮ ಫಲಪ್ರದವಾಗಿದೆ. ಅನೇಕ ಹೊಸ ವಿಷಯಗಳನ್ನು ಕಲಿಯಲು, ಗೊಂದಲ ನಿವಾರಿಸಿಕೊಳ್ಳಲು ಸಾಧ್ಯವಾಗಿದೆ, ಎಂದರು. ಭಾಗವಹಿಸಿದವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಎನ್ಎಸ್ಎಸ್ ಮತ್ತು ವೈಆರ್ಸಿ ನಿವೃತ್ತ ಸಲಹೆಗಾರ ಡಾ.ಹೆಚ್.ಎಸ್.ಸುರೇಶ್, ಜಿಲ್ಲಾ ರೆಡ್ ಕ್ರಾಸ್ ಗೌರವ ಕಾರ್ಯದರ್ಶಿ ಕುಸುಮಾಧರ್, ಸಂಪನ್ಮೂಲ ವ್ಯಕ್ತಿ ನಿತ್ಯಶ್ರೀ ಬಿವಿ ಮೊದಲಾದವರು ಉಪಸ್ಥಿತರಿದ್ದರು.


ಗೋವಿಂದದಾಸ ಕಾಲೇಜಿನ ಯುವ ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿ ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೇವರಾಜ್ ಸ್ವಾಗತ ಕೋರಿದರೆ, ಕಾವೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೇಖಾ ಧನ್ಯವಾದ ಸಮರ್ಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top