
ಉಡುಪಿ: ಹಿಮಾಲಯ ತಪ್ಪಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಅಮರನಾಥದ ಬಳಿ ಸಂಭವಿಸಿದ ಭೀಕರ ಮೇಘಸ್ಫೋಟ ಸೃಷ್ಟಿಸಿದ ಅವಾಂತರದ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಪ್ರಾಕೃತಿಕ ವಿಪತ್ತಿನಿಂದ ಅನೇಕ ಯಾತ್ರಿಗಳು ಪ್ರಾಣ ಕಳೆದು ಕೊಂಡು ಇನ್ನೂ ಅನೇಕರು ನೆಲದಡಿಯಲ್ಲಿ ಸಿಲುಕಿರುವ ಹಾಗೂ ನೂರಾರು ಮಂದಿ ಗಾಯಗೊಂಡು ಸಂತ್ರಸ್ತರಾಗಿರುವ ವರ್ತಮಾನಗಳು ತೀವ್ರ ವಿಷಾದ ಉಂಟುಮಾಡಿದೆ. ಯಾತ್ರಿಗಳ ಸುರಕ್ಷತೆ ಮತ್ತು ಗಾಯಾಳುಗಳ ಚಿಕಿತ್ಸೆಗಾಗಿ ಭಾರತೀಯ ಸೇನಾ ಸಿಬಂದಿಗಳು ಹಗಲಿರುಳು ಶ್ರಮಿಸುತ್ತಿರುವುದನ್ನು ಶ್ಲಾಘಿಸಿದ ಶ್ರೀಗಳು ಅವರಿಗೆ ಶ್ರೀ ಕೃಷ್ಣನು ಮತ್ತಷ್ಟು ಶಕ್ತಿ ಚೈತನ್ಯವನ್ನು ದೇವರು ಕರುಣಿಸಬೇಕು. ದುರಂತದಲ್ಲಿ ಮಡಿದ ಯಾತ್ರಿಗಳಿಗೆ ಸದ್ಗತಿ, ಗಾಯಾಳುಗಳು ಶೀಘ್ರ ಗುಣಮುಖರಾಗುವಂತೆಯೂ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದೂ ಶ್ರೀಗಳು ಸಂದೇಶದಲ್ಲಿ ತಿಳಿಸಿದ್ದಾರೆ.
ನೆರೆಹಾನಿಯ ಬಗ್ಗೆಯೂ ಕಳವಳ: ರಾಜ್ಯವೂ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದ ಉಂಟಾಗಿರುವ ಪ್ರವಾಹ ಮತ್ತು ಅಪಾರ ಪ್ರಮಾಣದ ಹಾನಿಯ ವಿಚಾರವೂ ಮನಸ್ಸಿಗೆ ತುಂಬ ನೋವು ತಂದಿದೆ. ಪ್ರಕೃತಿಯು ನಮ್ಮ ಮೇಲೆ ಕರುಣೆ ತೋರಿ ಮತ್ತಷ್ಟು ಹಾನಿಯನ್ನು ತರದಂತೆಯೂ ಎಲ್ಲೆಡೆ ನೆಮ್ಮದಿ ಕ್ಷೇಮ ಶಾಂತಿ ನೆಲೆಗೊಳ್ಳುವಂತೆಯೂ ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತೇವೆ ಎಂದೂ ಶ್ರೀಗಳು ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ