|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ....

ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ....



37 ವರ್ಷಗಳ ಸೇವೆಯ ನಂತರ, ದೇಶದ ವಿವಿಧ ಭಾಗಗಳಲ್ಲಿ, ಅವಕಾಶವಾದಿಗಳು, ವಂಚಕರು, ಕಪಟಿಗಳು, ತೆರಿಗೆ ವಂಚಕರು, ಕಳ್ಳಸಾಗಾಣಿಕೆದಾರರು, ಮೋಸಗಾರರು, ಸೊಕ್ಕಿನ ಅಹಂಕಾರದ ಅಧಿಕಾರಿಗಳು ಮತ್ತು ಆಡಂಬರದ ರಾಜಕಾರಣಿಗಳನ್ನು ಎದುರಿಸುವ ನನ್ನ ಕರ್ತವ್ಯವನ್ನು ಶಕ್ತಿಮೀರಿ ನಿರ್ವಹಿಸಿ ದಣಿದಿದ್ದೇನೆ. ಇನ್ನು ಪ್ರಶಾಂತವಾದ ವಾತಾವರಣದ ನಡುವೆ ಮನಃಶ್ಶಾಂತಿಯೊಂದಿಗೆ, ಪ್ರಕೃತಿಗೆ ನಿಕಟವಾಗಿ ಬದುಕಬೇಕೆಂಬ ಆಸೆಯಿಂದ   ಸಾಕಷ್ಟು ಯೋಚನೆ, ಚರ್ಚೆಯ ನಂತರ ದೇವರ ಸ್ವಂತ ನಾಡು- ನನ್ನ ಹುಟ್ಟೂರು ಕೇರಳಕ್ಕೆ ಮರಳಲು ನಿರ್ಧರಿಸಿದೆ.


ಒಂದು ದಿನ, ಒಂದು ಕುಟುಂಬ ಸಮಾರಂಭದಲ್ಲಿ, ನಾನು ಗಲ್ಫ್ ಮೂಲದ ಸೋದರ ಸಂಬಂಧಿಯನ್ನು ಭೇಟಿಯಾದೆ, ಅವರು ಸಂಭಾಷಣೆಯ ಸಮಯದಲ್ಲಿ ನನ್ನನ್ನು ಕೇಳಿದರು, "ಚೆಟ್ಟಾ, ನೀವು ಇತ್ತೀಚೆಗೆ ಇರಿಂಜಲಕುಡದಲ್ಲಿರುವ ನಮ್ಮ ಪೂರ್ವಜರ ಮನೆಗೆ ಹೋಗಿದ್ದೀರಾ?" ಪೂರ್ವಿಕರ ಮನೆಯನ್ನು 45 ವರ್ಷಗಳ ಹಿಂದೆಯೇ ಮಾರಾಟ ಮಾಡಲಾಗಿದೆ, ಅದು  ಈಗಲೂ ಅಸ್ತಿತ್ವದಲ್ಲಿದೆಯೇ ಎಂದು ಯಾರಿಗೆ ತಿಳಿದಿದೆ? ಆದರೆ ನನ್ನ ಸೋದರ ಸಂಬಂಧಿಯ ಪ್ರಶ್ನೆಯು ನನ್ನ ಮನಸ್ಸಿನಲ್ಲಿ ಆಳವಾದ ಕುತೂಹಲವನ್ನು ಹುಟ್ಟುಹಾಕಿತು. ಒಂದು ದಿನ ನಾನು ಹೋಗಿ ನಮ್ಮ ಪೂರ್ವಿಕರ ಮನೆ ಹೇಗಿದೆ ಎಂಬುದನ್ನು ಪರಿಶೀಲಿಸಲು ನಿರ್ಧರಿಸಿದೆ.


ನಾನು ತೀವ್ರ ಕುತೂಹಲದಿಂದ ನನ್ನ ಕಾರಿನಲ್ಲಿ ಇರಿಂಜಲಕುಡಕ್ಕೆ ಹೋದೆ. ನನಗೆ ಆಶ್ಚರ್ಯವಾಗುತ್ತಿತ್ತು. ಇರಿಂಜಲಕುಡವು ಎರ್ನಾಕುಲಂನಿಂದ ಕೇವಲ ಎರಡು ಗಂಟೆಗಳ ಪ್ರಯಾಣದಲ್ಲಿದೆ. ಹಾಗಿದ್ದರೂ 40 ವರ್ಷಗಳ ಬಳಿಕ ನನ್ನ ಜನ್ಮಸ್ಥಳಕ್ಕೆ ಪುನಃ ಭೇಟಿ ನೀಡುತ್ತಿದ್ದೇನೆ ಎಂದು ರೋಮಾಂಚಿತನಾದೆ!


ಕಾರು ಇರಿಂಜಲಕುಡದ ಹೊರವಲಯವನ್ನು ಪ್ರವೇಶಿಸುತ್ತಿದ್ದಂತೆ, ಮನಸ್ಸಿನ ಕಣ್ಣುಗಳು ಅಸ್ಪಷ್ಟವಾಗಿ ಅನೇಕ ಸ್ಥಳಗಳನ್ನು ಗುರುತಿಸಲಾರಂಭಿಸಿದವು. ರೈಲ್ವೇ ನಿಲ್ದಾಣ, ಖಾಸಗಿ ಬಸ್-ಸ್ಟ್ಯಾಂಡ್ ಇವೆಲ್ಲವೂ ಆಧುನಿಕತೆಯಿಂದ ಈಗಲೂ ದೂರವೇ ಉಳಿದಿದ್ದವು. ತಾನಾ ಎಂಬ ಬ್ಯುಸಿ ಶಾಪಿಂಗ್ ಏರಿಯಾದಲ್ಲಿ ಅನೇಕ ಹೊಸ ಅಂಗಡಿಗಳು ಮತ್ತು ಹೋಟೆಲ್‌ಗಳು ಹುಟ್ಟಿಕೊಂಡಿವೆ. ತಾನಾದಿಂದ ನೇರವಾದ ದಾರಿಯು ಪ್ರಸಿದ್ಧ ಕೂಡಲಮಾಣಿಕ್ಯ ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ತಲುಪುವ ಮಾರ್ಗ ಎಂದು ನನಗೆ ತಿಳಿದಿತ್ತು.  ನಾನು ಮುಂದೆ ಹೋದಂತೆ, ದೇವಾಲಯದ ಮುಂಭಾಗವು ಸ್ಪಷ್ಟ ಮತ್ತು ಪ್ರಕಾಶಮಾನವಾಗಿ ಗೋಚರಿಸಿತು. ನಾನು ಉಸಿರು ಬಿಗಿಹಿಡಿದು ನೋಡಿದೆ, ಏನೂ ಬದಲಾಗಿಲ್ಲ, ಕಾಲಾಂತರದಲ್ಲಿ ದೇವಾಲಯದ ಮುಂಭಾಗವೇನೂ ಬದಲಾಗಿರಲಿಲ್ಲ.


ಅಪಾರ ಸಂತೋಷದಿಂದ ನಾನು ದೇವಾಲಯದ ಪ್ರವೇಶದ್ವಾರದಲ್ಲಿ ಸಣ್ಣಗೆ ಕಂಪಿಸುತ್ತ ಹೊರಬಂದೆ; ಹಲವು ದಶಕಗಳ ನಂತರ ಈ ಪವಿತ್ರ ಭೂಮಿಯ ಮಣ್ಣನ್ನು  ನನ್ನ ಪಾದಗಳು ಸ್ಪರ್ಶಿಸುತ್ತಿವೆ. ನಾನು ಆಳವಾದ ಸಂತೃಪ್ತಿಯೊಂದಿಗೆ  ಒಳಗಿನ ಅಂಗಳಕ್ಕೆ ಹೋದೆ. 45 ವರ್ಷಗಳ ಹಿಂದಿನ ಬಾಲ್ಯದ ನೆನಪುಗಳು ಒತ್ತರಿಸಿ ಬಂದವು. ನಾವೆಲ್ಲರೂ ಒಟ್ಟಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ಸಂತೋಷದಿಂದ ಪ್ರಾರ್ಥಿಸುತ್ತಿದ್ದ ನೆನಪುಗಳು ಬರತೊಡಗಿದವು. ಆ ಭಗವಂತನು ವಿಚಲಿತನಾಗದೆ ಅಂದು ಹೇಗಿದ್ದನೋ ಹಾಗೆಯೇ ನಿಂತಿದ್ದನು, ಪ್ರಶಾಂತವಾದ ಕಂಪನವೊಂದು ಅಲ್ಲಿನ ವಾತಾವರಣದಲ್ಲಿತ್ತು. ಮೌನವಾಗಿ ಪ್ರಾರ್ಥನೆ ಸಲ್ಲಿಸಿದೆ. ಕ್ಷೇತ್ರಕ್ಕೆ ಬರಲು ಬಹಳ ತಡವಾಗಿದ್ದಕ್ಕೆ ಕ್ಷಮೆಯಾಚಿಸಿದೆ.  ನನ್ನ ಪಾದಗಳು ಉತ್ಸಾಹದಿಂದ ನನ್ನನ್ನು ‘ಮೀನೂಟು’ ಕೌಂಟರ್‌ಗೆ ಕರೆದೊಯ್ದವು. ಬಾಲ್ಯದಲ್ಲಿ, ದೇವಾಲಯಕ್ಕೆ ಬಂದಾಗಲೆಲ್ಲ ಕುಲಿಪಿನಿ ತೀರ್ಥದ ಮೀನುಗಳಿಗೆ ಅಕ್ಕಿ ಕಾಳುಗಳನ್ನು ಹಾಕುತ್ತಿದ್ದೆವು. ಅವುಗಳನ್ನು ತಿನ್ನಲು ನೀರಿನಲ್ಲಿ ಗುಂಪಾಗಿ ಬರುತ್ತಿದ್ದ ಅಪಾರ ಸಂಖ್ಯೆಯ ಮೀನುಗಳನ್ನು ನೋಡಿದಾಗ ಸಂತೋಷವಾಗುತ್ತಿತ್ತು. ಅದು ಸಂಪೂರ್ಣ ಪರಿಶುದ್ಧವಾದ ನೀರಿನ ಪುಷ್ಕರಿಣಿಯಾಗಿತ್ತು.


ನಾವು ಮನುಷ್ಯರು, ಭೂಮಿಯ ಮೇಲೆ ವಾಸಿಸುತ್ತಿದ್ದೇವೆ, ನೀರಿನಲ್ಲಿ ವಾಸಿಸುವ ಜೀವಿಗಳಿಗೆ ಆಹಾರವನ್ನು ನೀಡುತ್ತೇವೆ, ಎಲ್ಲಾ ಜೀವಿಗಳ ವಿಚಿತ್ರ ಬಂಧ ಮತ್ತು ಪರಸ್ಪರ ಅವಲಂಬನೆ ವಿಸ್ಮಯಕಾರಿ. ಭಗವಂತನಿಗೆ ನಮಸ್ಕರಿಸಿ, ನನ್ನ ಪೂರ್ವಜರ ಮನೆಗೆ ಹೊರಟೆ.


ಅಂಕುಡೊಂಕಾದ ರಸ್ತೆ ಹಾಗೆಯೇ ಇತ್ತು, ನನ್ನ ಮನಸ್ಸಿನಲ್ಲಿ ನಿಗೂಢವಾದ ಜಿಪಿಎಸ್ ಸ್ವಿಚ್ ಆನ್ ಆಗಿತ್ತು, ಅದು ಸ್ಪಷ್ಟವಾಗಿ ದಾರಿ ತೋರಿಸುತ್ತಿದೆ, ಪ್ರತಿ ಕರ್ವ್, ಪ್ರತಿ ತಿರುವು ಬಹಳ ಸುಲಭವಾಗಿ ಮತ್ತು ಪರಿಚಿತವಾದ ಮಾರ್ಗದಲ್ಲಿ ನನ್ನನ್ನು ಕರೆದೊಯ್ದಿತು. ಕಾರು ಕಾಂಜಿರತೋಡ್ ಲೇನ್ ಪ್ರವೇಶಿಸಿತು.


ನನ್ನ ಹೃದಯ ಬಡಿತ ಒಂದು ಕ್ಷಣ ಸ್ತಬ್ದವಾಯಿತು. ಕಣ್ಣುಗಳು 'ಚಂದ್ರ ವಿಹಾರ್' ಎಂಬ ನನ್ನ ಪೂರ್ವಜರ ಮನೆಯನ್ನು ಹುಡುಕಾಡಿದವು. ಓ ದೇವರೇ! ಅದು ಅಲ್ಲಿ ಇರಲಿಲ್ಲ; ಆ ಕಾಂಪೌಂಡಿನಲ್ಲಿ ಬೃಹತ್ ಕಾಂಕ್ರೀಟ್ ಮಹಲು ತಲೆ ಎತ್ತಿತ್ತು. ದುಃಖದ ಛಾಯೆ ನನ್ನನ್ನು ಆವರಿಸಿದಂತೆ ನನ್ನ ಹೃದಯವು ನಿಟ್ಟುಸಿರು ಬಿಟ್ಟಿತು. ನಿರುತ್ಸಾಹದಿಂದ ಕುಳಿತಾಗ ಜ್ಯೋತಿಷಿ ಗೆಳೆಯನೊಬ್ಬ ಹೇಳಿದ ಮಾತು ನೆನಪಾಯಿತು, ವಾಸ್ತುಶಾಸ್ತ್ರದ ಪ್ರಕಾರ ಮನೆಗಳಿಗೂ ಮನುಷ್ಯರಂತೆ ಆಯುಷ್ಯವಿದೆ. ನಾನು ಹೊಸ ಮಹಲಿನ ಮೇಲೆ ಕಣ್ಣು ಹಾಯಿಸಿದಾಗ, ಮನಸ್ಸು ಇದ್ದಕ್ಕಿದ್ದಂತೆ ನನ್ನ ಪೂರ್ವಜರ ಮನೆಯ ಚಿತ್ರವನ್ನು ಅದರ ಮೇಲೆ ಇರಿಸಿತು ಮತ್ತು ಕಲ್ಪನೆಯ ವೀಕ್ಷಣೆಗಾಗಿ ನನ್ನನ್ನು ಒಳಗೆ ಸೆಳೆದುಕೊಂಡಿತು.


ಗೇಟ್‌ನ ಪ್ರವೇಶದ್ವಾರದಲ್ಲಿ, ನನಗೆ ಸ್ಪಷ್ಟವಾಗಿ ನೆನಪಿದೆ, ಅಲ್ಲಿ ಸಣ್ಣ ಸಣ್ಣ ಮೀನುಗಳು ಮತ್ತು ಗೊದಮೊಟ್ಟೆಗಳು ತುಂಬಿದ್ದವು. ಬಾಲ್ಯದಲ್ಲಿ ನಾವು ನೀರಿನಿಂದ ಆಗಾಗ್ಗೆ ಮೇಲಕ್ಕೆ ನೆಗೆಯುತ್ತಿದ್ದ ಮೀನುಗಳೊಂದಿಗೆ ಆಟವಾಡುತ್ತ ದೀರ್ಘಕಾಲ ಕಳೆಯುತ್ತಿದ್ದೆವು, ಆ ತೊರೆ ಈಗ ಸಂಪೂರ್ಣ ಬತ್ತಿ ಹೋಗಿದ್ದು, ಅದರ ಜಾಗದಲ್ಲಿ ರಸ್ತೆ ಅಗಲೀಕರಣ ಮಾಡಲಾಗಿದೆ.


ಗೇಟಿನ ಹಾದಿಯಲ್ಲಿ ಮೆಟ್ಟಿಲುಗಳ ಮೇಲೆ ನನ್ನ ಅಜ್ಜ ತಮ್ಮ ನೆಚ್ಚಿನ ಸಾಕು ನಾಯಿ 'ಜಾಲಿ'ಯೊಂದಿಗೆ ಕುಳಿತುಕೊಳ್ಳುತ್ತಿದ್ದರು. ಪ್ರತಿದಿನ ಸಂಜೆ 4 ಗಂಟೆಗೆ, ನಾವು ಮೆಟ್ಟಿಲುಗಳ ಮೇಲೆ ಕುಳಿತು ಹತ್ತಿರದ ಶಾಲೆಯಲ್ಲಿ ತರಗತಿ ಮುಗಿದ ನಂತರ ಆ ದಾರಿಯಾಗಿ ಹಾದುಹೋಗುವ ನಮ್ಮದೇ ವಯಸ್ಸಿನ ವಿದ್ಯಾರ್ಥಿಗಳನ್ನು ನೋಡುತ್ತಿದ್ದೆವು. 'ಜಾಲಿ' ಚಿಕ್ಕ ಮಕ್ಕಳಿಗೆ ಬಹಳ ಖುಷಿ ಕೊಡುತ್ತಿತ್ತು. ಎಲ್ಲರೂ ಅದನ್ನು ಕೀಟಲೆ ಮಾಡಿ, ಆಟವಾಡಿಸುತ್ತಿದ್ದರು. ನಾನು ಗೇಟ್ ದಾಟಿ ಮುಖ್ಯ ದ್ವಾರಕ್ಕೆ ಹೋದೆ.


ಪೋರ್ಟಿಕೋದಲ್ಲಿ, ನನ್ನ ಅಜ್ಜ ಕುಳಿತುಕೊಳ್ಳುತ್ತಿದ್ದ ಈಸಿ-ಚೇರ್ ಅನ್ನು ನಾನು ನೋಡಿದೆ. ಅದರ ಮೇಲೆ ಕುಳಿತುಕೊಳ್ಳುವ ಧೈರ್ಯ ಬೇರೆ ಯಾರಿಗೂ ಇರಲಿಲ್ಲ. ಅವರು ಮಾತ್ರ ಸಂಜೆಯ ಸಮಯದಲ್ಲಿ ಅದರ ಮೇಲೆ ಕುಳಿತು ಪ್ರಾರ್ಥನೆ, ಶ್ಲೋಕಗಳನ್ನು ಹೇಳುತ್ತಿದ್ದರು ಮತ್ತು ಊಟದ ಸಮಯದವರೆಗೆ ವಿಶ್ರಾಂತಿ ಪಡೆಯುತ್ತಿದ್ದರು.


ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ನನ್ನ ಬಲಬದಿಯಲ್ಲಿ ನನ್ನ ಅಜ್ಜಿ ಪ್ರಾರ್ಥನೆ ಮಾಡುತ್ತಿದ್ದ ಕೊಠಡಿ ಇತ್ತು. (ಅವರು ನ್ಯಾಷನಲ್ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು). ಕೋಣೆಯ ಗೋಡೆಗಳಲ್ಲಿ ಪವಿತ್ರ ಗ್ರಂಥಗಳ ಹೊರತಾಗಿ ದೇವರು ಮತ್ತು ದೇವತೆಗಳ ಛಾಯಾಚಿತ್ರಗಳು, ಎಲ್ಲಾ ಗಾತ್ರದ ದೀಪಗಳು ಮತ್ತು ಪೂಜಾ ಸಾಮಗ್ರಿಗಳು ತುಂಬಿದ್ದವು. ಪ್ರತಿದಿನ, ಬೆಳಿಗ್ಗೆ ಮತ್ತು ಸಂಜೆ ಅವಳು ವಿಧಿಪೂರ್ವಕವಾಗಿ ಮುಖ್ಯ ಬಾಗಿಲಿನ ಪ್ರವೇಶದ್ವಾರದಲ್ಲಿ ನಿಲವಿಳಕ್ಕು (ಕಾಲುದೀಪ) ಬೆಳಗಿಸುತ್ತಿದ್ದಳು, ನಂತರ ಪದ್ಮಾಸನದಲ್ಲಿ ಕುಳಿತು ದೇವರ ಪ್ರಾರ್ಥನೆ- ಶ್ಲೋಕಗಳನ್ನು ಪಾರಾಯಣ ಮಾಡುತ್ತಿದ್ದರು. ಒಂದು ಸಂದರ್ಭದಲ್ಲಿ ಅವರು  ನಿಲವಿಲಕ್ಕು ತೋರಿಸಿ ಅದು ಏನು ಎಂದು ಕೇಳಿದಳು. ನಾನು ಉತ್ತರಿಸಲು ಸಾಧ್ಯವಾಗಲಿಲ್ಲ, ಆಗ ಅಜ್ಜಿಯೇ ನನಗೆ ವಿವರಿಸಿದರು.- ನೀಲವಿಲಕ್ಕು ಮೂಲವು ಸೃಷ್ಟಿಕರ್ತ ಬ್ರಹ್ಮನನ್ನು ಪ್ರತಿನಿಧಿಸುತ್ತದೆ, ಕಾಂಡವು ಬ್ರಹ್ಮಾಂಡದ ರಕ್ಷಕನಾದ ವಿಷ್ಣುವನ್ನು ಪ್ರತಿನಿಧಿಸುತ್ತದೆ ಮತ್ತು ನೀಲವಿಲಕ್ಕುನ ತಲೆಯು ಬ್ರಹ್ಮಾಂಡದ ವಿನಾಶಕನಾದ ಶಿವನನ್ನು ಪ್ರತಿನಿಧಿಸುತ್ತದೆ. ಎಣ್ಣೆಯು ಬ್ರಹ್ಮನ ಪತ್ನಿ ಸರಸ್ವತಿ ದೇವಿ, ಬತ್ತಿಗಳು ಶಿವನ ಪತ್ನಿ ಪಾರ್ವತಿ ದೇವಿಯನ್ನು ಪ್ರತಿನಿಧಿಸುತ್ತವೆ ಮತ್ತು ಜ್ವಾಲೆಯ ಶಾಖವು ವಿಷ್ಣುವಿನ ಪತ್ನಿ ಮಹಾಲಕ್ಷ್ಮಿ ದೇವಿಯನ್ನು ಪ್ರತಿನಿಧಿಸುತ್ತದೆ.


ನಾವು ದೀಪವನ್ನು ಬೆಳಗಿಸಿದಾಗ, ಅದು ಬೆಳಗುತ್ತದೆ, ಬ್ರಹ್ಮ-ವಿಷ್ಣು-ಶಿವನ ಪವಿತ್ರ ತ್ರಿಮೂರ್ತಿಗಳು ತಮ್ಮ ದೇವಿಯರೊಂದಿಗೆ ಆ ಸ್ಥಳದಲ್ಲಿ ತಮ್ಮ ದೈವಿಕ ಉಪಸ್ಥಿತಿಯನ್ನು ಮಾಡುತ್ತಾರೆ. ಅವರು ವಿಧಿವತ್ತಾಗಿ ಪವಿತ್ರ ಮಂತ್ರವನ್ನು ಪಠಿಸುತ್ತಿದ್ದರು:


“ಶುಭಂ ಕರೋತಿ ಕಲ್ಯಾಣಮ್

ಆರೋಗ್ಯಂ ಧನ ಸಂಪದ

ಶತ್ರುಬುದ್ಧಿ ವಿನಾಶಾಯ

ದೀಪ ಜ್ಯೋತಿರ್ ನಮೋಸ್ತುತೇ”

ನನ್ನ ಅಜ್ಜಿಯ ಪುಣ್ಯ ಪಾದಗಳಲ್ಲಿ ಹಿಂದೂ ಧರ್ಮ ಮತ್ತು ಹಿಂದೂ ಸಂಸ್ಕೃತಿಯ ನನ್ನ ಮೊದಲ ಪಾಠ. ಎಂದಿಗೂ ಮರೆಯಲಾಗದ ಪಾಠಗಳು ಅವು.


ನಾನು ಹೆಜ್ಜೆ ಹಾಕಿದ ಮುಂದಿನ ಕೋಣೆ ‘ತಾಳಂ’ ಎಂಬ ದೊಡ್ಡ ಹಾಲ್, ಅಲ್ಲಿ ಚಿಕ್ಕಮ್ಮ ಮತ್ತು ಮಕ್ಕಳೆಲ್ಲರೂ ನೆಲದ ಮೇಲೆ ಹಾಸಿದ ಹತ್ತಿ ಹಾಸಿಗೆಗಳ ಮೇಲೆ ರಾತ್ರಿ ಮಲಗುತ್ತಿದ್ದರು. ನನ್ನ ಅತ್ತೆಯಂದಿರ ಪೈಕಿ ಒಬ್ಬರು ಚೆನ್ನಾಗಿ ಹಾಡುತ್ತಿದ್ದರು ಮತ್ತು ಕತ್ತಲೆಯಲ್ಲಿ ಅವರು ಆ ದಿನಗಳ ಸೂಪರ್‌ ಹಿಟ್ ಹಾಡುಗಳೊಂದಿಗೆ ನಮ್ಮೆಲ್ಲರನ್ನು ರಂಜಿಸುತ್ತಿದ್ದರು. ಸಾರ್ವಕಾಲಿಕ ಮೆಚ್ಚುಗೆಯ ಯೇಸುದಾಸ್ ಅವರ ಅಮರ ಪ್ರಣಯ ಗೀತೆ "ಅಲ್ಲಿಯಂಬಾಳ್ ಕಡವಿಲ್...." ಆ ಕಾಲದ ಪ್ರತಿಯೊಬ್ಬ ಪ್ರೇಮಿಯ ಬಾಯಲ್ಲೂ ಈ ಹಾಡು ಇತ್ತು. ಜಯಚಂದ್ರನ “ಮಂಜಲಾಯಿಲ್ ಮುಂಗಿ ತೊರ್ತಿ...” ಎಂಬ ಮಧುರ ಗಾನವನ್ನು ಹಾಡುವ ಮೂಲಕ ಪ್ರೇಮಿಗಳು ಮನಸೋ ಇಚ್ಛೆ ಕೋಮಲ ಕ್ಷಣಗಳನ್ನು ಅನುಭವಿಸುತ್ತಿದ್ದರು.


ನಾನು ಡೈನಿಂಗ್ ಹಾಲ್ ಮತ್ತು ಅಡುಗೆಮನೆಗೆ ಕಾಲಿಡುತ್ತಿದ್ದಂತೆ, ಸೌದೆಯ ಒಲೆಯಲ್ಲಿ ಬೇಯಿಸಿದ ಆಹಾರದ ಪರಿಮಳವು ನನ್ನ ಇಂದ್ರಿಯಗಳನ್ನು ಸೆಳೆಯಿತು. ಊಟದ ಕೋಣೆಯಲ್ಲಿ, ಅಜ್ಜಿ ಬಾಳೆಹಣ್ಣಿನ ಚಿಪ್ಸ್, ಶರ್ಕರ ಉಪ್ಪೇರಿ, ಹಲಸಿನ ಹಣ್ಣಿನ ಚಿಪ್ಸ್, ಮಿಶ್ರಣ, ಲಾಡುಗಳನ್ನು ಸಂಗ್ರಹಿಸಿ, ಅದನ್ನು ಹೊಳಪಿನ ಮಣ್ಣಿನ ಜಾಡಿಗಳಲ್ಲಿ ಸಂಗ್ರಹಿಸುತ್ತಿದ್ದರು, ನಾವು ಮಕ್ಕಳಿಗೆ ತಿನ್ನಲು. ಉದ್ದನೆಯ ಡೈನಿಂಗ್ ಟೇಬಲ್ ಮತ್ತು ಮರದ ಬೆಂಚು, ಅಲ್ಲಿ ನಾನು ಊಟಕ್ಕೆ ಬಹಳ ಗಂಟೆಗಳ ಕಾಲ ಕುಳಿತುಕೊಳ್ಳುತ್ತಿದ್ದೆ. ಅನ್ನ ನನಗೆ ಎಂದಿಗೂ ಪ್ರಿಯವಾಗಿರಲಿಲ್ಲ; ಆದ್ದರಿಂದ ಊಟದ ಸಮಯವು ದೀರ್ಘವಾಗಿತ್ತು. ಮಧ್ಯಾಹ್ನ 12.30 ರಿಂದ ಉಣ್ಣಲು ಕುಳಿತರೆ ಮುಗಿಸಿ ಏಳುವಾಗ 3 ಗಂಟೆಯೂ ಆಗುತ್ತಿತ್ತು..! ಎಲ್ಲಾ ಆಂಟಿಯರಿಂದ (ಚಿಕ್ಕಮ್ಮ-ಅತ್ತೆ)  ಸಾಕಷ್ಟು ಬೈಗುಳ ತಿನ್ನುತ್ತಿದ್ದೆ. ಬರೇ ನೀರು ಕುಡಿಯುತ್ತಲೇ ಕೂರುತ್ತಿದ್ದೆ. ಅನ್ನವನ್ನು ಉಣ್ಣಲು ನಿರಾಕರಿಸುತ್ತಿದ್ದೆ. ಇಂದು ಅದೆಲ್ಲವೂ ಸಿಹಿ ನೆನಪುಗಳು.


ನಾನು ಅಡುಗೆಮನೆಗೆ ಕಾಲಿಡುತ್ತಿದ್ದಂತೆ, ಚಟುವಟಿಕೆಯ ಜೇನುಗೂಡಿನಂತಹ ಸ್ಥಳವನ್ನು ನಾನು ನೆನಪಿಸಿಕೊಳ್ಳುತ್ತೇನೆ. ಎಲ್ಲಾ ಚಿಕ್ಕಮ್ಮಂದಿರು ಯಾವುದೋ ಕೆಲಸದಲ್ಲಿ ತೊಡಗಿದ್ದರು, ನನ್ನ ತಾಯಿ ಸೌದೆಯ ತುಂಡುಗಳನ್ನು ಒಲೆಗೆ ಹಾಕಿ ಬೆಂಕಿ ಹಿಡಿಸಲು ಪ್ರಯತ್ನಿಸುತ್ತಿದ್ದಾರೆ, ಆಗಾಗ್ಗೆ ಟೊಳ್ಳಾದ ಕೊಳವೆಯ ಮೂಲಕ ಗಾಳಿಯನ್ನು ಬೀಸುತ್ತಿದ್ದರು. ತಾಜಾ, ಬೇಯಿಸಿದ ಆಹಾರ, ಯಾವಾಗಲೂ ಸಮಯಕ್ಕೆ, ದಿನಕ್ಕೆ ಮೂರು ಬಾರಿ ಬಡಿಸಲಾಗುತ್ತಿತ್ತು.


ಕಡಿದಾದ ಮರದ ಏಣಿ ಮೆಟ್ಟಿಲು ಉಪ್ಪರಿಗೆಗೆ ಹೋಗುವ ದಾರಿಯಾಗಿತ್ತು. ಮಧ್ಯಾಹ್ನ, ನಾವು ಮಕ್ಕಳು ಅಟ್ಟ ಹತ್ತಿ ಎಲ್ಲಾ ರೀತಿಯ ಕುತೂಹಲಕಾರಿ ವಸ್ತುಗಳು, ಕಲಾಕೃತಿಗಳು, ಛಾಯಾಚಿತ್ರಗಳು ಮತ್ತು ಎಲ್ಲಾ ರೀತಿಯ ಲೋಹದ ವಸ್ತುಗಳನ್ನು ಹುಡುಕಾಡುತ್ತಿದ್ದೆವು. ತಾವು ಮೊದಲನೇ ವಿಶ್ವ ಸಮರದಲ್ಲಿ ಹೋರಾಡಿದ ಮತ್ತು ಮೆಸೊಪೊಟಾಮಿಯಾದಲ್ಲಿ ಸೇವೆ ಸಲ್ಲಿಸಿದ ಕಥೆಗಳನ್ನು ನನ್ನ ಅಜ್ಜ ನಮಗೆಲ್ಲ ಹೇಳುತ್ತಿದ್ದರು. ಬಹುಶಃ ಆ ಕುತೂಹಲಿಗಳು ಯಾವುದೋ ದೂರದ ದೇಶಗಳಿಗೆ ಸೇರಿದವರಾಗಿರಬಹುದು. ಆ ಟ್ರಂಕ್‌ಗಳಲ್ಲಿ ಸಂಗ್ರಹಿಸಲಾದ ಆ ವಿಚಿತ್ರ ಸಂಗ್ರಹಗಳನ್ನು ನೋಡುವಾಗ ವಿಸ್ಮಯವೆನಿಸುತ್ತಿತ್ತು.


ನಾನು ಮೆಟ್ಟಿಲುಗಳನ್ನು ಕೆಳಗಿಳಿದು ಹೊರಗಿನ ಜಗುಲಿಗೆ ಕಾಲಿಟ್ಟಾಗ, ಅಲ್ಲಿ ನಮ್ಮ ಸೇವಕಿ ರೋಸಿ ನಿಂತಿರುತ್ತಿದ್ದಳು, ಪ್ರತಿದಿನ ಮುಂಜಾನೆ, ಅವಳು ತಪ್ಪದೆ ಬರುತ್ತಿದ್ದಳು, ಬೆಳಿಗ್ಗೆ ಕಾಫಿಗೆ ಸಮಯಕ್ಕೆ ಸರಿಯಾಗಿ ಯಾವಾಗಲೂ ತನ್ನ ಕೈಯಲ್ಲಿ ಹಾಲಿನ ಮಡಕೆಯೊಂದಿಗೆ ನಗುತ್ತ ನಿಂತಿರುತ್ತಿದ್ದಳು. ಚಿಕ್ಕವರು ಮತ್ತು ಹಿರಿಯರು ಎಲ್ಲರಿಗೂ ಪ್ರಿಯವಾಗಿದ್ದಳು. ರೋಸಿ ಯಾವಾಗಲೂ ನೆನಪಿನಲ್ಲಿ ಉಳಿಯುತ್ತಾಳೆ. ಏಕೆಂದರೆ ಅದು ಅಮರವಾದ "ಅಲ್ಲಿಯಂಬಲ್ ಕಡವಿಲ್..."ಎಂಬ ಅಮರವಾದ ಚಲನಚಿತ್ರದ ಹೆಸರಾಗಿದೆ,

ಜಗುಲಿಯ ಆಚೆಗೆ ಅಡಿಕೆ ಮರಗಳು, ತೆಂಗಿನ ಮರಗಳಿಂದ ತುಂಬಿದ ಕಾಂಪೌಂಡ್, ಮತ್ತು ಮುಂದೆ ನೆರೆಯವರಿಗೆ ಸೇರಿದ ನೀರು ತುಂಬಿದ ಬೃಹತ್ ಕೊಳ. ಹಿಂದೆ ಯಾವುದೇ ರೀತಿಯ ವಿಭಾಜಕ ಗೋಡೆ ಇರಲಿಲ್ಲ, ಯಾರ ನಿರ್ಬಂಧವೂ ಇರಲಿಲ್ಲ. ಎಲ್ಲರೂ ಸಂತಸದಿಂದ ಕೆರೆಯ ಬಳಕೆ ಮಾಡುತ್ತಿದ್ದರು.


ಅತ್ತೆಯಂದಿರು ದಿನವೂ ಒಗೆಯಲು ಅಪಾರ ಪ್ರಮಾಣದ ಬಟ್ಟೆಗಳನ್ನು ಒಯ್ಯುತ್ತಿದ್ದರು. ಅಕ್ಕಪಕ್ಕದ ಹೆಂಗಸರು ಮಕ್ಕಳೂ ಸೇರುತ್ತಿದ್ದರು. ಅಲ್ಲಿ ಒಂದು ಮಧುರ ಬಾಂಧವ್ಯವಿತ್ತು. ಹೆಂಗಸರು ಹರಟೆ ಹೊಡೆಯುವುದು ಮತ್ತು ಮಕ್ಕಳು ನೀರಿನಲ್ಲಿ ಕುಣಿದು ಕುಪ್ಪಳಿಸುವುದು, ಎಲ್ಲರ ಮೇಲೆ ನೀರು ಚೆಲ್ಲುವುದು... ಹೀಗೆ ಮೋಜಿನ ದಿನಗಳಾಗಿದ್ದವು. ಈಗ, ಆ ಕೊಳವೇ ಇರಲಿಲ್ಲ! ಅದು ನೆಲಸಮವಾಗಿದ್ದು, ನಿರ್ಜೀವ ಕಾಂಕ್ರೀಟ್ ಮನೆ ಆ ಸ್ಥಳದಲ್ಲಿ ನಿಂತಿದೆ. ಈಗ ಇಲ್ಲದಿರುವ ಆ ಕೊಳಕ್ಕಾಗಿ ಒಂದು ನಿಟ್ಟುಸಿರು ನಾನು ವ್ಯಕ್ತಪಡಿಸಲು ಸಾಧ್ಯವಾಯಿತು.


ನಿನ್ನೆಯ ಸಂತೋಷದ ಕ್ಷಣಗಳು ಇಂದಿನ ವೇದನೆಯ ಕ್ಷಣಗಳಾಗಿ ಮಾರ್ಪಟ್ಟಿದ್ದವು. ಎಲ್ಲ ಬಿಟ್ಟು ಹೋಗಿದ್ದಾರೆ. ಅತ್ತೆಯಂದಿರು ಮತ್ತು ಚಿಕ್ಕಪ್ಪಂದಿರು ಮದುವೆಯಾದರು, ತಮ್ಮ ಪ್ರತ್ಯೇಕ ಮಾರ್ಗಗಳಲ್ಲಿ ನಡೆದರು. ಕೆಲವರು ದೂರದ ದೇಶಗಳಿಗೆ ಹೋದರು. ಕೆಲವು ಸಂಬಂಧಿಕರ ಮದುವೆ ಅಥವಾ ಸಾವಿನ ಸಂದರ್ಭದಲ್ಲಿ ಪರಸ್ಪರ ಭೇಟಿಯಾಗುವುದನ್ನು ಹೊರತುಪಡಿಸಿ, ಸಂಪರ್ಕಗಳು ಅಪರೂಪವಾದವು. ಅನೇಕರು ಇಹಲೋಕ ಯಾತ್ರೆ ಮುಗಿಸಿದ್ದರು. ಅನೇಕ ತಲೆಮಾರುಗಳು ಶಾಶ್ವತವಾಗಿ ಅಳಿಸಿಹೋಗಿವೆ ಎಂಬುದನ್ನು ಯೋಚಿಸಿದರೆ ದುಃಖವಾಗುತ್ತದೆ.


ನಾನು ದುಃಖದಿಂದ ಕಾರಿನಲ್ಲಿ ಕುಳಿತಾಗ, ಆ ಹೊಸ ಕಟ್ಟಡವನ್ನು ಪ್ರವೇಶಿಸಲು ಮತ್ತು ಆ ಸ್ಥಳದಲ್ಲಿ ಬಹಳ ಹಿಂದೆಯೇ ವಾಸಿಸುತ್ತಿದ್ದವನೆಂದು ಪರಿಚಯಿಸಿಕೊಳ್ಳೋಣ ಎಂಬ ಯೋಚನೆ ಒಂದು ಕ್ಷಣ ನನ್ನ ಮನಸ್ಸಿನಲ್ಲಿ  ಹರಿದಾಡಿತು. ಆದರೆ ಅವರ ಸ್ಥಿತಿ ನೋಡಿ ಯಾಕೋ ಬೇಡವೆನಿಸಿತು. ಈಗ ಆ ಬಂಗಲೆಯೊಳಗೆ ಒಬ್ಬ ವೃದ್ಧ ದಂಪತಿಗಳು ಮಾತ್ರ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ, ವೃದ್ಧಾಪ್ಯ ಮತ್ತು ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾರೆ, ವಿಚಿತ್ರ ಕ್ಯಾಪ್ಸೂಲ್‌ಗಳು, ಮಾತ್ರೆಗಳು ಮತ್ತು ಚುಚ್ಚುಮದ್ದುಗಳೊಂದಿಗೆ ಹೋಮ್-ನರ್ಸ್ ಸಹಾಯ ಮಾಡುತ್ತಾರೆ ಎಂದು ಯಾರಿಗೆ ತಿಳಿದಿದೆ. ಬಹುಶಃ, ಅವರು ಇತರ ದೇಶಗಳ ಪೌರತ್ವವನ್ನು ಪಡೆದು ಶಾಶ್ವತವಾಗಿ ತಾಯ್ನಾಡನ್ನು ತೊರೆದ ತಮ್ಮ ಪುತ್ರರು ಮತ್ತು ಪುತ್ರಿಯರ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳಬಹುದು ಅಷ್ಟೆ. ಆದರೆ ಒಳಗಿರುವ ನೋವು ಹೊರಗೆ ಕಾಣಿಸದು.


ದುರದೃಷ್ಟವಶಾತ್, ತಾಯ್ನಾಡನ್ನು ತೊರೆದು ವಿದೇಶಿ ಪೌರತ್ವವನ್ನು ಪಡೆದು ಅಲ್ಲೇ ನೆಲೆಸುವುದು ಕೇರಳೀಯರ ಯಶಸ್ಸು ಎಂಬಂತೆ ಬಿಂಬಿಸಲಾಗುತ್ತಿದೆ.  ಸಾವಿರಾರು ವರ್ಷಗಳ ಹಿಂದೆ ಹೋಮರ್ ಹೇಳಿದ್ದನ್ನು ನಾವು ಮರೆತಿದ್ದೇವೆ: 

"ಆದ್ದರಿಂದ, ಒಬ್ಬ ಮನುಷ್ಯನು ಐಷಾರಾಮಿ ಮನೆಯಲ್ಲಿ ನೆಲೆಸಿದ್ದರೂ, ವಿದೇಶದಲ್ಲಿದ್ದರೂ ಅವನ ತಾಯ್ನಾಡು, ಹೆತ್ತವರಿಗಿಂತ ಪ್ರಿಯವಾದುದು ಬೇರೆ ಯಾವುದೂ ಇಲ್ಲ" - ಹೋಮರ್, ದಿ ಒಡಿಸ್ಸಿ (ಕೌಪರ್).

(ಮೂಲ: www.quotepark.com)


ನಾನು ಒಳಗೆ ಹೋಗುವುದು ಬೇಡ ಎಂದು ನಿರ್ಧರಿಸಿ, ಭಾರವಾದ ಹೃದಯದಿಂದ ಮರು ಪ್ರಯಾಣಕ್ಕಾಗಿ ಕಾರು ಸ್ಟಾರ್ಟ್ ಮಾಡಿದೆ. ಕವಿ ರಾಬರ್ಟ್ ಫ್ರಾಸ್ಟ್ ಅವರ ಪ್ರಸಿದ್ಧ ಸಾಲುಗಳು ನನ್ನ ಮನಸ್ಸಿಗೆ ಬಂದವು:


"ಕಾಡುಗಳು ಸುಂದರ, ಗಾಢ ಮತ್ತು ದಟ್ಟವಾಗಿವೆ

ಆದರೆ ನಾನು ಭರವಸೆಗಳನ್ನು ಉಳಿಸಿಕೊಳ್ಳುವೆ

ನಾನು ಮಲಗುವ ಮುನ್ನ ಸಾಗಬೇಕಿದೆ ಮೈಲುಗಳ ದೂರ

ನಾನು ಮಲಗುವ ಮುನ್ನ ಸಾಗಬೇಕಿದೆ ಮೈಲುಗಳ ದೂರ.''

*****



-ಡಾ. ಜಿ .ಶ್ರೀಕುಮಾರ್ ಮೆನನ್, IRS (Rtd) Ph. D (ನಾರ್ಕೋಟಿಕ್ಸ್),

ಮೊಬೈಲ್: 9810144308,

ಮಾಜಿ ಮಹಾನಿರ್ದೇಶಕರು

ನ್ಯಾಷನಲ್ ಅಕಾಡೆಮಿ ಆಫ್ ಕಸ್ಟಮ್ಸ್ ಇನ್‌ಡೈರೆಕ್ಟ್‌ ಟ್ಯಾಕ್ಸಸ್‌ ಅಂಡ್‌ ನಾರ್ಕೋಟಿಕ್ಸ್‌,

& ಮಲ್ಟಿ-ಡಿಸಿಪ್ಲಿನರಿ ಸ್ಕೂಲ್ ಆಫ್ ಎಕನಾಮಿಕ್ ಇಂಟೆಲಿಜೆನ್ಸ್ ಇಂಡಿಯಾ,

ಫೆಲೋ, ಜೇಮ್ಸ್ ಮಾರ್ಟಿನ್ ಸೆಂಟರ್ ಫಾರ್ ನಾನ್-ಪ್ರೊಲಿಫರೇಶನ್ ಸ್ಟಡೀಸ್, USA.

ಫೆಲೋ, ಸೆಂಟರ್ ಫಾರ್ ಇಂಟರ್ನ್ಯಾಷನಲ್ ಟ್ರೇಡ್ & ಸೆಕ್ಯುರಿಟಿ, ಜಾರ್ಜಿಯಾ ವಿಶ್ವವಿದ್ಯಾಲಯ, USA


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم