ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಕಾರ್ಯಕ್ರಮ ಸರಣಿಯ ಮೊದಲ ಭಾಗವಾಗಿ ಮಂಗಳವಾರ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಉಂಟುಮಾಡುತ್ತಿರುವ ಬದಲಾವಣೆಯ ಬಗ್ಗೆ ಸಿಂಗಾಪುರ ಮೂಲದ ಪ್ರತಿಭಾ ನಿರ್ವಹಣಾ ತಜ್ಞ ಮನೋಜ್ ಸಾಲಿಯಾನ್ ವಿಶೇಷ ಉಪನ್ಯಾಸ ನೀಡಿದರು.
ವಿಶೇಷವಾಗಿ ಅರ್ಹ ಉದ್ಯೋಗಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕೃತಕ ಬುದ್ಧಿಮತ್ತೆಯ ಪ್ರವೇಶ ಉಂಟುಮಾಡಿರುವ ಬದಲಾವಣೆಗಳನ್ನು ವೀಡಿಯೋಗಳ ಸಹಿತ ವಿವರಿಸಿದ ಅವರು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮೂಲಕ ಪ್ರಸ್ತುತಿಯಲ್ಲಿನ ವೃತ್ತಿಪರತೆ, ಸಾಮರ್ಥ್ಯದ ಮಟ್ಟ, ಸಂವಹನ ಚಾತುರ್ಯ, ಸಾಮಾಜಿಕವಾಗಿ ಬೆರೆಯಬಲ್ಲ ಗುಣಗಳನ್ನು ಸಂದರ್ಶನದಲ್ಲಿ ಕೆಲವೇ ಸೆಕೆಂಡ್ಗಳಲ್ಲಿ ಅಳೆಯಬಹುದು. ಧನಾತ್ಮಕ ಮಾತುಗಳು, ನಸುನಗು ಸಂದರ್ಶನಕಾರನನ್ನು ಸೆಳೆಯಬಲ್ಲವು, ಎಂದರು. “ಹುದ್ದೆಗೆ ಹೊಂದುವಂತಹ ಸಿವಿ ತುಂಬಾ ಮುಖ್ಯ,” ಎಂಬುದನ್ನು ಒತ್ತಿ ಹೇಳಿದರು. ಅಂತಿಮ ವರ್ಷದ ವಿದ್ಯಾರ್ಥಿಗಳ ವೀಡಿಯೋ ಸಂದರ್ಶನ ನಡೆಸಿದ ಅವರು. ಧನಾತ್ಮಕ ಅಂಶಗಳು ಮತ್ತು ಬೆಳೆಸಿಕೊಳ್ಳಬೇಕಾದ ಕೌಶಲ್ಯಗಳನ್ನು ವಿವರಿಸಿದರು.
ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಡಾ. ಯತೀಶ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರೆ, ದೀಪಿಕಾ ಎಂ ಬಿ ಧನ್ಯವಾದ ಸಮರ್ಪಿಸಿದರು. ಮಧುರಾ ಪ್ರಾರ್ಥಿಸಿದರು. ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ