|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀ ರಾಮ ವೈಭವ: ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ

ಶ್ರೀ ರಾಮ ವೈಭವ: ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ



ನಮ್ಮ ಸಂಸ್ಕೃತಿಯಲ್ಲಿ ಶ್ರೀರಾಮಚಂದ್ರನು ಹಾಸುಹೊಕ್ಕಾಗಿದ್ದು ಎಲ್ಲರಿಗೂ ಆದರ್ಶಪ್ರಾಯನಾಗಿರುತ್ತಾನೆ. ಪಿತೃವಾಕ್ಯ ಪರಿಪಾಲಕಾನದ ಶ್ರೀರಾಮಚಂದ್ರ ಮರ್ಯಾದಾ ಪುರುಷೋತ್ತಮನೆಂದು ಎಲ್ಲೆಡೆ ಪೂಜಿಸಲ್ಪಡುತ್ತಿದ್ದಾನೆ. ಹಾಗಾಗಿ ಶ್ರೀರಾಮನವಮಿ ಅತ್ಯಂತ ಮಹತ್ವವೆನಿಸಿಕೊಂಡಿದೆ.


ಸೂರ್ಯವಂಶ ಸಾರ್ವಭೌಮ ದಶರಥ ಮಹಾರಾಜನಿಗೆ ಕೌಸಲ್ಯೆ, ಸುಮಿತ್ರ ಮತ್ತು ಕೈಕೇಯಿ ಎಂಬ ಮೂವರು ಪತ್ನಿಯರು. ಅವರಾರಿಗೂ ಮಕ್ಕಳಿರಲಿಲ್ಲ. ಕುಲಪುರೋಹಿತರಾದ ವಸಿಷ್ಠ ಮಹರ್ಷಿಗಳ ಸಲಹೆಯ ಮೇರೆಗೆ ಪುತ್ರಿಕಾಮೇಷ್ಠಿ ಯಾಗವನ್ನು ಮಾಡಿದಾಗ ವಿಷ್ಣುವಿನ ಅನುಗ್ರಹದ ಯಾಗದ ಪ್ರಸಾದವನ್ನು ದಶರಥ ಮಹಾರಾಜನು ಸೇವಿಸಿ ಉಳಿದ ಶೇಷ ಪ್ರಸಾದವನ್ನು ಮೂವರು ಪತ್ನಿಯರಿಗೂ ಹಂಚಿದ. ಇದರ ಪರಿಣಾಮ ಮೂವರೂ ಗರ್ಭವತಿಯರಾಗಿ ಎಲ್ಲರೂ ಗಂಡು ಮಕ್ಕಳಿಗೆ ಜನ್ಮ ನೀಡುತ್ತಾರೆ. ಕೌಸಲ್ಯೆಯ ಹೊಟ್ಟೆಯಲ್ಲಿ ರಾಮ, ಕೈಕೇಯಿಯ ಹೊಟ್ಟೆಯಲ್ಲಿ ಭರತ, ಸುಮಿತ್ರೆಯ ಹೊಟ್ಟೆಯಲ್ಲಿ ಲಕ್ಷ್ಮಣ, ಶತೃಘ್ನ ಅವಳಿ ಮಕ್ಕಳು ಜನಿಸುತ್ತಾರೆ. ಶ್ರೀರಾಮಚಂದ್ರನು ಚೈತ್ರಮಾಸದ ಶುಕ್ಲಪಕ್ಷದ ನವಮಿಯಂದು ಪುನರ್ವಸು ನಕ್ಷತ್ರದಲ್ಲಿ ಮಹಾತೇಜಸ್ವಿಯಾಗಿ ಅವತರಿಸಿದ್ದು ಶ್ರೀರಾಮನವಮಿಯಾಗಿ ಜಗದ್ವಿಖ್ಯಾತಿಯಾಗಿ ಅವತರಿಸಿದ್ದು ಶ್ರೀರಾಮನವಮಿಯಾಗಿ ಜಗದ್ವಿಖ್ಯಾತಿಗೊಂಡಿದೆ.


ಕೆಲವೆಡೆ ಗರ್ಭರಾಮನವಮಿ (ರಾಮನು ಕೌಸಲ್ಯೆಯ ಹೊಟ್ಟೆಯಲ್ಲಿರುವಾಗ) ಜನನ ರಾಮನವಮಿ (ರಾಮ ಜನಿಸಿದ ಮೇಲೆ) ನಡೆಸುವ ಸಂಪ್ರದಾಯವನ್ನು ಹೊಂದಿರುತ್ತಾರೆ. (ಜನನ ರಾಮನವಮಿಯೇ ಹೆಚ್ಚಾಗಿ ಕಂಡುಬರುತ್ತದೆ) ಶ್ರೀಮದ್ ವಾಲ್ಮೀಕಿ ರಚಿತ ರಾಮಾಯಣ ಮಹಾಗ್ರಂಥವನ್ನು ವ್ಯಾಸಪೀಠದ ಮೇಲೆ ಇರಿಸಿ ಶೋಡಷೋಪಚಾರ ಪೂಜೆಗಳನ್ನು ನೆರವೇರಿಸಿ ಪ್ರಥಮ ಕಾಂಡದಿಂದ ಪಾರಾಯಣವನ್ನು ಆರಂಭಿಸಿ ಶ್ರೀರಾಮಪಟ್ಟಾಭಿಷೇಕ ದವರೆಗೆ 9 ದಿನಗಳ ಪರ್ಯಂತ ರಾಮಾಯಣ ಪಾರಾಯಣಾದಿಗಳು ಕ್ರಮವಾಗಿ ನಡೆಯುತ್ತವೆ.  


ಶ್ರೀರಾಮಾಯಣ ಗ್ರಂಥವು-ಬಾಲಾಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂದಾಕಾಂಡ, ಸುಂದರಕಾಂಡ, ಯುದ್ಧಕಾಂಡ ಹಾಗೂ ಉತ್ತರಕಾಂಡಗಳೆಂದು 7 ಕಾಂಡಗಳನ್ನು ಹೊಂದಿದೆ. ಪುರಾಣ ಎನ್ನುವವರಿಗೆ- ರಾಮಾಯಣ ಒಂದು ಪುರಾಣ. ಇತಿಹಾಸ ಎನ್ನುವವರಿಗೆ-ರಾಮಾಯಣ ಒಂದು ಇತಿಹಾಸ. ಧಾರ್ಮಿಕರಿಗೆ ರಾಮಾಯಣ ಒಂದು ಧರ್ಮಗ್ರಂಥ. ಕಾವ್ಯರಸಿಕರಿಗೆ ರಾಮಾಯಣ ಒಂದು ಅಪೂರ್ವಕಾವ್ಯ. ಋಷಿ ವಾಲ್ಮೀಕಿಯ ಹೃದಯಾಂತರಾಳದಿಂದ ಹರಿದು ಬಂದ ರಸ ಗಂಗೆ. 


ಶ್ರೀರಾಮನವಮಿ ಸುಡುಬಿಸಿಲಿನ ಬೇಸಿಗೆಯಲ್ಲಿ ಬರುವುದರಿಂದ ತಂಪು ಚೆಲ್ಲುವ ಸುವಾಸಿತ ತಾಜಾಹಣ್ಣುಗಳ ಪಾನಕ. ಕಬ್ಬಿನಹಾಲು, ಅಲೆಮನೆಯ ಬಿಸಿ ಬಿಸಿ ಬೆಲ್ಲ, ಮಜ್ಜಿಗೆ ಕುಡಿದು ಬಗೆ ಬಗೆಯ ಕೋಸಂಬರಿಗಳನ್ನು ಸೇವಿಸುವುದೇ ಗ್ರಾಮೀಣಭಾಗದ ಮಜಲು. ಮಧ್ಯಾಹ್ನವೆಲ್ಲಾ ಬೇಸಿಗೆಯ ಬಿಸಿಲ ತಾಪಕ್ಕೆ ಭಕ್ತರಿಗೆ ತಂಪೆರೆಯುವಂತೆ ಸಂಧ್ಯಾಕಾಲದಲ್ಲಿ ಶಾಸ್ತ್ರೀಯ ಸಂಗೀತದ ರಸದೌತಣದ ಸಮಾರಾಧಾನೆಯೇ ನೆರವೇರುತ್ತದೆ. ಶ್ರೀರಾಮನನ್ನೇ ಸಾಕ್ಷಾತ್ಕರಿಸಿಕೊಂಡಿದ್ದ ಸಂಗೀತಸಾರ್ವಭೌಮ ಶ್ರೀ ತ್ಯಾಗರಾಜರು ಹೇ ರಾಮ ನೀನಾಮಮು ಎಂತ ರುಚಿರಾ-ಎಮಿ ರುಚಿರ ಎಂಬ ಸಾವಿರಾರು ಸಂಕೀರ್ತನೆಗಳನ್ನು ಶ್ರೀರಾಮ ನವಮಿ ಸಂಗೀತೋತ್ಸವಗಳಲ್ಲಿ ಇಂದಿಗೂ ಕಾಣಬಹುದಾಗಿದೆ.


“ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ| 

ಆರೂಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್”


ಅಂದರೆ ಮರದ ಕೊಂಬೆಗಳ ಮೇಲೆ ಕುಳಿತು ಸವಿಯಾದ ಮಧುರವಾದ ಅಕ್ಷರಗಳಿಂದ ರಾಮ ರಾಮ ರಾಮ ಎಂದು ಉಲಿಯುತ್ತಿರುವ ವಾಲ್ಮೀಕಿ ಕೋಕಿಲವನ್ನು ವಂದಿಸುತ್ತೇನ್ನುವ  ಈ ಕರ್ಣಾನಂದಕರ ಶ್ಲೋಕ ಎಷ್ಟೋಂದು ಸುಮಧುರ, ಎಂಥಾ ಭಾವಸಿಂಧೂರ! “ರಾಮ” ಎಂಬ ಎರಡಕ್ಷರಗಳ ಮೃದು ಮಧುರ ಪದ ಭಾರತೀಯರ ಎದೆಗಡಲಲ್ಲಿ ಸರಿಗಮ ಪದನಿಸವಾಗಿ ನಿತ್ಯ ನಿನದಿಸುವ ಮಧುರ ಸಂಗೀತ. ಅಂತಹ ಅಮೃತ ತುಂಬಿದೆ. 


ರಾಮನಾಮ ಕಿವಿಗೆ ಬಿದ್ದರೆ ಸಾಕು ರಾಮಭಕ್ತರು ರೋಮಾಂಚನಗೊಳ್ಳುತ್ತಾರೆ. ಸಾಕ್ಷಾತ್ ಶ್ರೀರಾಮನನ್ನೇ ತಮ್ಮ ಮನಸ್ಸಿನಲ್ಲಿ ಸಾಕ್ಷಾತ್ಕರಿಸಿಕೊಂಡು ಪರಮಾನಂದಿತರಾಗುತ್ತಾರೆ. ಜೀವ-ಜೀವನವೆಲ್ಲಾ ರಾಮಾನಾಮಾಮೃತದಿಂದ ಪಾವನವಾಯಿತೆಂದು ಸಂತುಷ್ಟಗೊಳ್ಳುತ್ತಾರೆ. ಪವಿತ್ರ ತೀರ್ಥಕ್ಷೇತ್ರ ಕಾಶಿಯಲ್ಲಿ ದೇಹತ್ಯಾಗ ಮಾಡುವವರಿಗೆ ಕಾಶಿ ವಿಶ್ವನಾಥನೇ ಕಿವಿಯಲ್ಲಿ ರಾಮನಾಮ ಉಪದೇಶ ಮಾಡುತ್ತಾನೆಂಬ ನಂಬಿಕೆ ಭಾರತೀಯರಲ್ಲಿದೆ. 


ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ

ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆಯನ್ನು ವಿಠಲನೆಂಬ ತುಪ್ಪ ಬೆರೆಸಿ ಬಾಯಿ ಚಪ್ಪರಿಸಿರೋ ಎಂಬಂತೆ, ರಾಮನಾಮಾಮೃತವನ್ನು ನಾಲಿಗೆಯಲ್ಲಿ ಹರಿದಾಡಿಸೋ ಶ್ರೀರಾಮಭಕ್ತಿ ಸುಧೆಯು ಸಿಹಿ ಜೇನಿನ ಹಬ್ಬವೆಂದರೆ ಅತಿಶಯೋಕ್ತಿಯಾಗುವುದಿಲ್ಲ.


“ಶ್ರೀರಾಮ ರಾಮೇತಿರಮೇರಾಮೇ ಮನೋರಮೇ | 

ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ ||


ರಾಮ ಎಂಬ ಒಂದೇ ನಾಮ ವಿಷ್ಣುವಿನ ಸಹಸ್ರನಾಮಗಳಿಗೆ ಸಮವೆಂದು ಪುರಾಣಗಳೇ ಸಾರಿ ಹೇಳುತ್ತವೆ. ಸರ್ವೋತ್ತಮನೆಂದರೆ, ಪರಿಪೂರ್ಣ ಶ್ರೇಷ್ಠ ಮನುಷ್ಯನೆಂದರೆ, ಮನುಷ್ಯನಿಂದಲೇ ದೇವನಾದನೆಂದರೆ ರಾಮ. ಅದೇ ರಾಮಶಕ್ತಿ. ರಾಮನಾಮದ ಧೀಶಕ್ತಿ. “ರಾಮಂ ಮಾನುಷಂ ಮನ್ಯೆ” ಎನ್ನುವುದರ ಮೂಲಕ ವಾಲ್ಮೀಕಿ ಮಹರ್ಷಿಗಳು ರಾಮಾಯಣದಲ್ಲಿ ಶ್ರೀರಾಮನನ್ನು ಓರ್ವ ಸಾಮಾನ್ಯ ಮನುಷ್ಯನಾಗಿಯೇ ಚಿತ್ರಿಸಿ, ಸಾರ್ಥಕ ಬದುಕಿನ ಅವನ ನಡವಳಿಕೆಯಿಂದಲೇ ದೇವನನ್ನಾಗಿಸುತ್ತಾರೆ. ಇಡೀ ಸಂಪೂರ್ಣ ರಾಮಯಣವನ್ನೇ ನಾವು ಅವಲೋಕಿಸಿದರೆ ರಾಮನ ಚಿತ್ರಣದಲ್ಲೇ ಕುಟುಂಬ ವಾತ್ಸಲ್ಯದ ಚಿತ್ರಣವಿರುವುದನ್ನು ಕಾಣಬಹುದು. ದೇವನಾಗಿಯೂ ರಾಮ ತಾನೊಬ್ಬನೇ ಎಲ್ಲಿಯೂ ಪೂಜಿಸಿಕೊಳ್ಳುವುದಿಲ್ಲ. ಸೀತೆ ಮಾತ್ರವಲ್ಲದೆ ಆಂಜನೇಯ, ಲಕ್ಷ್ಮಣ, ಭರತ, ಶತೃಘ್ನರೊಡಗೂಡಿದ ದೇವತಾ ಸ್ವರೂಪವೇ ಇವತ್ತಿಗೂ ನಮ್ಮ ಕಣ್ಮುಂದಿನ ಚಿತ್ರವಾಗಿದೆ. ಗುಹನಲ್ಲಿ ಸೋದರ ವಾತ್ಸಲ್ಯ ತೋರಿದ, ಶಿಲೆಯಾದ ಅಹಲ್ಯೆಯನ್ನು ಉದ್ಧರಿಸದ, ಶಬರಿಯ ಎಂಜಲನ್ನು ತಿಂದ, ಆಯಸ್ಸು ಮುಗಿಯುವ ಮುನ್ನವೇ ಮಂತ್ರಿ ಸುಮಂತ್ರನನ್ನು ಮರಣಿಸುವಂತೆ ಮಾಡಿದ ಯಮನ ವಿರುದ್ಧವೇ ಸಮರ ಸಾರಿ ಸುಮಂತ್ರನನ್ನು ಬದುಕಿಸಿದ, ಅಳಿಲಿನ ಸೇವೆಯನ್ನೂ ಸಹ ಮುಖ್ಯವಾಗಿ ಕಂಡ ರಾಮನ ಮಹಾ ವ್ಯಕ್ತಿತ್ವಕ್ಕೆ ಸಾಟಿಯುಂಟೆ? 


ರಾಮನ ಆದರ್ಶ ಬದುಕು ಅಂಥಾದ್ದು. ಹಾಗಾಗಿ ರಾಮನಾಮ ಸೀಮೋಲ್ಲಂಘನ, ಸಾಗರೋಲ್ಲಂಘನವಾಗಿ ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ರಾಮ ಆರಾಧ್ಯ ದೈವವಾಗಿದ್ದಾನೆ. ರಾಮನನ್ನು ದಕ್ಷಿಣ ಏಷ್ಯಾದ ಸಾರ್ವಕಾಲಿಕ ಆದರ್ಶವೆಂದು ಖ್ಯಾತ ಸಂಶೋಧಕ, ವಿದ್ವಾಂಸ ಪ್ರೊ. ಡಬ್ಲ್ಯೂ. ಹೆಚ್. ಸ್ಪಟರ್ ಹೀವ ಹೇಳಿದ್ದು, ಬಾಲಿ ದ್ವೀಪದ ರಾಮನ ಪೂಜೆಯ ಬಗ್ಗೆ ವಿವರಿಸುತ್ತಾ “ಇಲ್ಲಿ ರಾಮ ಕಥೆಯ ಸಾರಾಂಶ ಗೊತ್ತಿಲ್ಲದ ಒಬ್ಬ ಹುಡುಗನನ್ನು ಕಾಣಲಾರಿರಿ. ಬೆಳೆದಂತೆಲ್ಲಾ ಅದನ್ನು ಸಂಪೂರ್ಣವಾಗಿ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಪಾಠವನ್ನು ಇಲ್ಲಿ ಹೇಳಿಕೊಡಲಾಗುತ್ತದೆ” ಎಂದು ಅವರು ಉಲ್ಲೇಖಿಸಿದ್ದಾರೆ.


“ರಾಮಾಯ ರಾಮ ಭದ್ರಾಯಾ ರಾಮಚಂದ್ರಾಯ ವೇಧಸೇ 

ರಘುನಾಥಾಯಾ ನಾಥಾಯಾ ಸೀತಾಯಾ ಪತಯೇ ನಮಃ” 


ಇದು ರಾಮಾಯಾಣದಲ್ಲಿ ಬರುವ ದೃಷ್ಟಾಂತ, ಇಕ್ಷ್ವಾಕು ವಂಶದ ಆರ್ಥಾತ್ ಸೂರ್ಯವಂಶ ಸಾರ್ವಭೌಮ ದಶರಥ ಮಹಾರಾಜನಿಗೆ ಕೌಸಲ್ಯೆ, ಸುಮಿತ್ರೆ ಮತ್ತು ಕೈಕೇಯಿ ಎಂಬ ಮೂವರು ಪತ್ನಿಯರು. ಆದರೆ ಯಾರಿಗೂ ಮಕ್ಕಳಿರಲಿಲ್ಲ. ಹಾಗಾಗಿ ಕುಲಗುರು ವಶಿಷ್ಠ ಮಹರ್ಷಿ ಮತ್ತು ಪ್ರಧಾನ ಮಂತ್ರಿ ಸುಮಂತ್ರರ ಸಲಹೆಯ ಮೇರೆಗೆ ಪುತ್ರಕಾಮೇಷ್ಟಿಯಾಗ ಮಾಡಿದಾಗ ಮಹಾವಿಷ್ಣುವಿನ ಅನುಗ್ರಹದ ಯಾಗದ ಪ್ರಸಾದವನ್ನು ದಶರಥ ಮಹಾರಾಜ ಸೇವಿಸಿ ಉಳಿದಿದ್ದನ್ನು ತನ್ನ ಮೂವರೂ ಪತ್ನಿಯರಿಗೂ ಹಂಚಿದ .ಪರಿಣಾಮ ಕಾಲಕ್ರಮೇಣ ಮೂವರೂ ಗರ್ಭವತಿಯರಾಗಿ ಎಲ್ಲರೂ ಗಂಡು ಮಕ್ಕಳಿಗೆ ಜನ್ಮ ನೀಡುತ್ತಾರೆ. ಕೌಸಲ್ಯೆಯ ಹೊಟ್ಟೆಯಲ್ಲಿ ರಾಮ ಜನಿಸಿದರೆ, ಸುಮಿತ್ರೆಯಲ್ಲಿ ಲಕ್ಷ್ಮಣ-ಶತ್ರುಘ್ನ ಅವಳಿ ಮಕ್ಕಳು ಮತ್ತು ಕೈಕೇಯಿಯಲ್ಲಿ ಭರತ ಜನಿಸುತ್ತಾರೆ. ಶ್ರೀರಾಮ ಚೈತ್ರಮಾಸದ ಶುಕ್ಲಪಕ್ಷನವಮಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಮಹಾ ತೇಜಸ್ವಿಯಾಗಿ, ಜಗದ ಬೆಳಕಾಗಿ ಆವತರಿಸಿದ್ದು ಅದು ಶ್ರೀರಾಮ ನವಮಿಯಾಗಿ ಜಗತ್ತಿನಲ್ಲಿ ಪೂಜನೀಯ ಸ್ಥಾನ ಪಡೆದಿದೆ. ರಾಮಾವತಾರವು ವಿಷ್ಣುವಿನ ದಶಾವತಾರಗಳಲ್ಲಿ ಒಂದಾಗಿದ್ದು ಅನುಕ್ರಮಣಿಕೆಯಲ್ಲಿ ಏಳನೆಯದಾಗಿದೆ.

ಭಾರತೀಯ ಸಂಸ್ಕೃತಿ, ಸಂಪ್ರದಾಯ, ಪರಂಪರೆಗಳಲ್ಲಿ ಸಂಖ್ಯಾಶಾಸ್ತ್ರಕ್ಕೂ ಮಹತ್ವವಿದೆ ಆ ಪ್ರಕಾರ ಸಂಖ್ಯೆ ‘ಏಳು’ ವಿಶೇಷ ಮಹತ್ವ ಪಡೆದುಕೊಂಡಿದೆ, ರಾಮನ ವಿಷಯದಲ್ಲೂ ಏಳು ಬಹಳ ಮಹತ್ವವೆನಿಸಿದೆ, ವಾಲ್ಮೀಕಿ ಮಹರ್ಷಿಗಳಿಂದ ರಚಿತವಾದ ರಾಮಾಯಣ ಕೂಡ ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾ ಕಾಂಡ, ಸುಂದರಕಾಂಡ, ಯುದ್ಧಕಾಂಡ ಹಾಗೂ ಉತ್ತರಕಾಂಡಗಳೆಂಬ ಏಳು ಕಾಂಡಗಳಲ್ಲಿದೆ.ಶ್ರೀರಾಮನ ಜನ್ಮ ನಕ್ಷತ್ರ ಪುನರ್ವಸು. ಇದು ಸಪ್ತರ್ಷಿ ಮಂಡಲದಲ್ಲಿ ಏಳನೇಯದು.

ಶ್ರೀರಾಮನ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ನಡೆದಾಗ ಮಾತ್ರ ಶ್ರೀರಾಮನವಮಿ ಆಚರಣೆಗೆ ನೈಜ ಅರ್ಥ ಸಿಕ್ಕಿದಂತಾಗುತ್ತದೆ.


ರಾಮನೆಂಬ ನಾಮದೈವ:

ಮಹಾತ್ಮಗಾಂಧಿ ಅವರಿಗೆ ರಾಮನೊಂದು ಧ್ಯಾನದೈವ. ರಾಮರಾಜ್ಯ ಅವರ ಆದರ್ಶ. ರಾಮರಾಜ್ಯ (ವೆಲ್ಫೇರ್ ಸ್ಟೇಟ್), ರಾವಣನ ರಾಜ್ಯ (ಡಿಕ್ಟೇಟರ್ ಶಿಪ್), ವಾನರ ರಾಜ್ಯ (ಅವ್ಯವಸ್ಥಿತ ಅನಾರ್ಕಿ) ವಾಲ್ಮೀಕಿ ಋಷಿಯು ಕಲ್ಪಿಸಿದ ವಿಭಿನ್ನ ರಾಜ್ಯವ್ಯವಸ್ಥೆಗಳಾಗಿವೆ. ನಿಸ್ವಾರ್ಥಿಗಳಾದ ಎಂಟು ಮಂದಿ ಮಂತ್ರಿಗಳುಳ್ಳ ಮಂತ್ರಿಮಂಡಲ, ವಸಿಷ್ಟ, ವಾನದೇವರಂಥ ಮಾರ್ಗದರ್ಶಿ ವಿಚಾರ ಪುರುಷರು. ಸಜ್ಜಾದ ಚತುರ್ಬಲ ವ್ಯವಸ್ಥೆ. ಭೋಗವಿರಹಿತವಾದ ರಾಮನಂಥ ರಾಜನ ಜೀವನ ಕ್ರಮ. ಎಲ್ಲಕ್ಕಿಂತ ಮುಖ್ಯವಾಗಿ ಧರ್ಮದ ನೆಲೆಗಟ್ಟಿನ ಮೇಲೆ ನಡೆಯುವ ರಾಜಕೀಯ ವ್ಯವಸ್ಥೆ. ಎಲ್ಲೂ ಎಲ್ಲೆ ದಾಟದಂಥದ್ದು. ಅದಕ್ಕೆ ಅಅನು ಮರ್ಯಾದ ಪುರುಷೋತ್ತಮ. ಏಕಪತ್ನೀವ್ರತಸ್ಥ. ತಂದೆಯ ವಚನ ಉಳಿಸಲಿಕ್ಕಾಗಿ ಸಿಂಹಾಸನ ತ್ಯಾಗ ಮಾಡಿದ ಧರ್ಮಶೀಲ. ಸದಾ ಹಸನ್ಮುಖಿ. ತನ್ನನ್ನು ದೂರುವವರಲ್ಲೂ ಪ್ರೀತಿ ತೋರುವನು. ಸ್ಮಿತಪೂರ್ವಭಾಷಿ. ಯಾರನ್ನೇ ಆಗಲಿ ನಗುನಗುತ್ತಾ ಮೊದಲು ಮಾತನಾಡಿಸುವವನು. ಯಾರೇ ಇರಲಿ ಶರಣಾದವರನ್ನು ರಕ್ಷಿಸುವವನು. ಇಷ್ಟಾಗಿಯೂ ತನ್ನ ಜೀವಿತದಲ್ಲಿ ರಾಮ ಕೈಗೊಂಡ ಕೆಲವು ನಿರ್ಣಯಗಳು ಪ್ರಶ್ನಾತೀತವೇನಲ್ಲ. ಶ್ರೀರಾಮ ಪರೀಕ್ಷಣವೂ ಕಾಲಕಾಲಕ್ಕೆ ನಡೆಯುತ್ತಲೇ ಬಂದಿದೆ. ಯಾರೂ ವಿಮರ್ಶಾತೀತರಲ್ಲ. ಕಾಲದ ಪರಿಪ್ರೇಕ್ಷ್ಯದಲ್ಲೇ ನಮ್ಮ ವಿಮರ್ಶೆಯ ಅನುಸಂಧಾನವೂ ನಡೆಯಬೇಕಾಗಿದೆ. ರಾಮಕಥೆಯ ಹಂಗೇ ಇಲ್ಲದ ರಾಮನಾಮ ಸಂಕೀರ್ತನೆಯಿಂದಲೇ ಮೋಕ್ಷಸಾಧನೆ ಸಾಧ್ಯವೆಂದು ನಂಬುವ ಮಹಾಭಕ್ತರೂ, ಮಹಾನ್ ಕಲಾವಿದರೂ ನಮ್ಮಲ್ಲಿ ಆಗಿಹೋಗಿದ್ದಾರೆ. ನೀನ್ಯಾಕೊ ನಿನ್ನ ಹಂಗ್ಯಾಕೋ? ಎನ್ನುವ ದಾಸವಾಣಿ ಮತ್ತೆ ಕಿವಿಗಳಲ್ಲಿ ಗುಂಯ್‌ಗುಡುತ್ತಿದೆ.


ರಾಮ ಮಂತ್ರದ ಮಹತ್ತು:

ಆಧ್ಯಾತ್ಮ ಸಾಧನೆಯಲ್ಲಿ  ರಾಮ ಮಂತ್ರಕ್ಕೆ ವಿಶೇಷ ಮಹತ್ವವಿದೆ. ಅಷ್ಟಿಲ್ಲದೇ ಪುರಂದರ ದಾಸರು ‘ರಾಮ ಮಂತ್ರವ ಜಪಿಸೋ ಹೇ ಮನುಜಾ’ ಎಂದದ್ದು. ದಾಸರು ಮುಂದುವರಿದು ‘ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ. ಸೋಮಶೇಖರ ತನ್ನ ಭಾಮಿನಿಗೆ ಪೇಳಿದ ಮಹಾಮಂತ್ರ’ ಎನ್ನುತ್ತಾರೆ. ದಾಸರ ಪದದ ಹಿಂದಿನ ಭಾವವನ್ನು ತಿಳಿಯಬೇಕಾದರೆ ಒಮ್ಮೆ ವಿಷ್ಣು ಸಹಸ್ರನಾಮದ ಈ ಶ್ಲೋಕದತ್ತ ನಮ್ಮ ಗಮನ ಹರಿಯಬೇಕು. ವಿಷ್ಣು ಸಹಸ್ರನಾಮ ಗಂಗಾಪುತ್ರ ಭೀಷ್ಮರಿಂದ ರಚಿಸಲ್ಪಟ್ಟ ಮಹಾಸ್ತೋತ್ರ. ವಿಷ್ಣು ಸಹಸ್ರನಾಮದಲ್ಲಿ 108 ಶ್ಲೋಕಗಳಿವೆ. 108 ಶ್ಲೋಕಗಳಲ್ಲಿ ಶ್ರೀಮನ್ ನಾರಾಯಣನ ಸಾವಿರ ನಾಮಗಳಿವೆ. ಸಹಸ್ರನಾಮದ ಫಲಶ್ರುತಿಯಲ್ಲಿ ಶಿವನು ಪಾರ್ವತಿಗೆ ರಹಸ್ಯಮಯವಾದ ಮಂತ್ರವೊಂದನ್ನು ಉಪದೇಶಿಸುತ್ತಾನೆ. ಅದೆಂದರೆ, ‘ಶ್ರೀರಾಮ ರಾಮೇತಿ ರಮೇ ರಾಮೇ ಮನೋರಮೆ! ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ||’ ಅಂದರೆ ರಾಮ ರಾಮ ರಾಮ ಎಂದು ಮೂರಾವರ್ತಿ ಜಪಿಸು. ಶ್ರೀಮನ್ ನಾರಾಯಣನ ಸಹಸ್ರನಾಮವನ್ನೇ ಜಪಿಸಿದಂತಾಗುತ್ತದೆ ಎನ್ನುತ್ತಾನೆ ಪರಮೇಶ್ವರ. ಅಕ್ಷರ ಮಾಲಿಕೆಯ ಕೊನೆಯಲ್ಲಿ ಬರುವ ‘ಯ, ರ, ಲ, ವ’ ದಲ್ಲಿ ‘ರ’ ಎರಡನೆಯ ಅಕ್ಷರವಾಗಿದ್ದರೆ ‘ವ’ ಐದನೇಯ ಅಕ್ಷರವಾಗಿದೆ. ರಾಮ (2x5= 10). ಮೂರಾವರ್ತಿ ರಾಮ ಎಂದಾಗ 10x10x10=1000 ಬಾರಿ ಜಪಿಸಿದಂತಾಗುತ್ತದೆ ಎನ್ನುವುದೇ ಅದರ ಅರ್ಥ.

ಅಮ್ಮ ಎನ್ನುವ ಪದವನ್ನು ವಿಶ್ಲೇಷಿಸಿದಂತೆ ಇದೀಗ ರಾಮ ಪದವನ್ನು ವಿಶ್ಲೇಷಿಸೋಣ. ರಾಮ ಎನ್ನುವ ಬೀಜಾಕ್ಷರ ಸ್ವಾಧಿಷ್ಠಾನ ಚಕ್ರದಲ್ಲಿ ಬರುತ್ತದೆ. ಸ್ವಾಧಿಷ್ಠಾನವು ಜಲತತ್ವ. ಅಂದರೆ ರಾ ಮತ್ತು ಮ ಎನ್ನುವುದು ಜಲತತ್ವವೇ. ಸ್ವಾಧಿಷ್ಠಾನ ಚಕ್ರವು ಪ್ರಾಣಮಯ ಕೋಶವನ್ನು ಜಾಗೃತಗೊಳಿಸುತ್ತದೆ. ಅಂದರೆ ಸ್ವಾಧಿಷ್ಠಾನ ಚಕ್ರದೊಳಗಿನ ಬೀಜಾಕ್ಷರವನ್ನು ಪಠಿಸುವ ಮೂಲಕ ಪ್ರಾಣಮಯ ಕೋಶವನ್ನು ಜಾಗೃತಗೊಳಿಸಬಹುದು. ಶರೀರದೊಳಗಿನ ಪ್ರಾಣಮಯವು ಜಾಗೃತವಾಗುವುದೆಂದರೆ ವಿವೇಕವು ಜಾಗೃತವಾದಂತೆ. ಈ ಸ್ಥಿತಿಯಲ್ಲಿ ಶರೀರವು ಎಚ್ಚರದ ಸ್ಥಿತಿಯಲ್ಲಿರುತ್ತದೆ. ಆಧ್ಯಾತ್ಮ ಭಾವದಲ್ಲಿ ನೋಡಿದಾಗ ಜಾಗೃತ್ ಸ್ಥಿತಿಯೇ ಸಾಧನೆಯ ಮೂಲವಾಗಿದೆ. ಅಂದರೆ ರಾಮ ಮಂತ್ರದ ಅನುಷ್ಠಾನದಿಂದ ಮನಸ್ಸು ಜಾಗೃತವಾಗುತ್ತದೆ. ಜಾಗೃತಗೊಂಡ ಮನಸ್ಸು ಮೋಹರಹಿತವಾಗಿರುತ್ತದೆ. ಸುತ್ತಣ ಪರಿಸರವನ್ನು ನೋಡಿ ಆನಂದಿಸುತ್ತದೆ. ಆ ಆನಂದದೊಳಗೆ ತನ್ನನ್ನು ಲೀನವಾಗಿಸಿಕಕೊಳ್ಳುತ್ತದೆ. ನಮ್ಮ ಋಷಿ, ಮುನಿಗಳು ಅಂತಹ ಸ್ಥಿತಿಯನ್ನೇ ದಿವ್ಯಾನುಭೂತಿ ಎಂದರು. ಆ ಕಾರಣದಿಂದಲೇ ರಾಮನು, ರಾಮ ನಾಮವು ಆನಂದಮಯವಾಗಿದೆ. ಆ ಮಾಲಿಕೆಯನ್ನು ಹೇಳುವಾಗ ಮನಸ್ಸು ಮುದಗೊಳ್ಳುತ್ತದೆ. ಆನಂದಭಾವವು ಸ್ಫುರಿಸುತ್ತದೆ. ರಾಮ ಎಂಬ ಒಂದೇ ನಾಮ ವiಹಾವಿಷ್ಣುವಿನ ಸಹಸ್ರನಾಮಗಳಿಗೆ ಸಮವೆಂದು ಪುರಾಣಗಳು ಸಾರಿ ಹೇಳುತ್ತಿವೆ. ಅದೇ ರಾಮನಾಮದ ಧೀ ಶಕ್ತಿ.


ಶುದ್ಧ ಬ್ರಹ್ಮ ಪರಾತ್ಪರ ರಾಮ 

ಆನಂದಮಯ ಈ ಜಗ ಹೃದಯ. ಅಂದರೆ ಸುತ್ತಣ ಪರಿಸರದೊಳಗೆ ಮಧುರಾಮೃತವೇ ತುಂಬಿಕೊಂಡಿದೆ. ರಾಮ ನಾಮವೇ ಪಾಯಸ ಎನ್ನುವ ದಾಸರ ಮಾತಿನಂತೆ, ‘ರಾಮ ನಾಮವ ತಿಳಿ ತಿಳಿ’ ಎನ್ನುವ ನಾಣ್ನುಡಿಯಂತೆ ‘ಶುದ್ಧಬ್ರಹ್ಮ ಪರಾತ್ಪರ ರಾಮ’ ಕಾವ್ಯ ಮಾಲಿಕೆ ಆನಂದ ವೃಷ್ಟಿಯ ಅನುಭವವನ್ನು ನಿಮ್ಮದಾಗಿಸುತ್ತದೆ. 


ರಾಮ ಎನ್ನುವ ಪದದಲ್ಲಿ ಆನಂದವಿದೆ. ಈ ಆನಂದವನ್ನು ಮಂತ್ರ ಜಪ (13 ಅಕ್ಷರಗಳುಳ್ಳ ರಾಮ ಮಂತ್ರ)ದಲ್ಲಿ ಕಾಣುತ್ತಾರೆ. ಆದರೆ ಶ್ರೀಸಾಮಾನ್ಯರ ಮಟ್ಟಿಗೆ ‘ಶುದ್ಧ ಬ್ರಹ್ಮಪರಾತ್ಪರ ರಾಮ’ ಎನ್ನುವ ಸರಳ ರೂಪದ ಮಾಲಿಕೆಯೇ ಅಯ್ಯಾಯಮಾನ. ಅದುವೇ ಆನಂದದ ಸಾಯುಜ್ಯ. ವಾಲ್ಮೀಕಿ ರಾಮಾಯಣದ ಸಂಕ್ಷಿಪ್ತ ರೂಪ. ಶುದ್ಧ ಬ್ರಹ್ಮ ಪರಾತ್ಪರ ರಾಮ ಮೂಲಕೃತಿಕಾರರು ಯಾರು ಎಂಬುದು ಗೋಪ್ಯವಾಗಿದ್ದರೂ ಸ್ತೋತ್ರ ಮಾಲಿಕೆ ಮಾತ್ರ ಗೋವಿನ ಹಾಡಿನಷ್ಟೇ ಜನಜನಿತ. ಅದರಲ್ಲೂ ರಚ್ಚೆ ಹಿಡಿಯುವ ಮಕ್ಕಳ ಮನಸ್ಸನ್ನು ಹಿಡಿತಕ್ಕೆ ತರಲು ಸಿದ್ಧಕಾವ್ಯ ಸಾರ ಎಂಬುದೀಗ ಅಧ್ಯಯನಗಳಿಂದಲೂ ಸ್ಪಷ್ಟವಾಗಿದೆ. ಈ ಸ್ತೋತ್ರ ಮಾಲಿಕೆಯಲ್ಲಿ ಭಕ್ತಿರಸ, ಆನಂದರಸ, ಜ್ಞಾನರಸದ ಸಂಗಮವಿದೆ. 


ರಾಮ ರಾಮ ಜಯ ರಾಜಾರಾಮ

ಪರಬ್ರಹ್ಮ ಸ್ವರೂಪನಾಗಿ ಕಾಲಾತೀತನಾದ ಶ್ರೀರಾಮ ಚಂದ್ರನಿಗೆ ನನ್ನ ನಮನಗಳು ಎನ್ನುವ ಮೂಲಕ ಪ್ರಾರಂಭವಾಗುತ್ತದೆ. ರಾಮನೇ ಮಹಾವಿಷ್ಣುವು ಎನ್ನುವ ದೃಷ್ಟಿಯಲ್ಲಿ ಆತ ಶೇಷನಾಗುವ ಮೇಲೆ ಪವಡಿಸಿದ್ದಾನೆ. ಆತನ ಪಾದ ಕಮಲಗಳ ಅರ್ಚನೆಯನ್ನು ಮಾಡಲು ಎಲ್ಲರೂ ಉದ್ಯುಕ್ತರಾಗಿದ್ದಾರೆ. ಹೇ ಪ್ರಭು ಶ್ರೀರಾಮ ನೀನು ದಶರಥನ ಪುತ್ರ. ಮಾತೆ ಕೌಸಲ್ಯೆಗೆ ಅಪರಿಮಿತ ಸಂತೋಷವನ್ನು ತಂದೆ. ವಿಶ್ವಾಮಿತ್ರನಿಗೆ ಅಗರ್ಭ ಸಂಪತ್ತಿನಂತೆ ದೊರೆತ ಹೀಗೆ ಕೃತಿಯ ಸಾಲುಗಳು ಸಾಗುತ್ತವೆ. ಒಂದೊಂದು ಚರಣವು ರಾಮ ರಾಮ ಜಯ ರಾಜಾರಾಮ| ರಾಮ ರಾಮ ಜಯ ಸೀತಾರಾಮ ಎಂಬ ಉದ್ಘೋಷದೊಂದಿಗೆ ಕೊನೆಗೊಳ್ಳುತ್ತದೆ. ‘ಘೋರ ತಾಟಕ ಘಾತಕ ರಾಮ| ಮಾರೀಚಾದಿ ನಿಪಾತಕ ರಾಮ’ ಎಂದರೆ ತಾಟಕಾಸುರನನ್ನು ಮಾರೀಚರಂತಹ ಅಸುರರನ್ನು ಸಂಹರಿಸಿದ ರಾಮನೇ ನಿನಗೆ ಶರಣು ಎನ್ನುತ್ತಾರೆ. ಹೀಗೆ ಪ್ರತಿಯೊಂದು ಸಾಲಿನಲ್ಲೂ ಭಗವದ್ಭಕ್ತಿ ಪ್ರತಿಬಿಂಬಿತವಾಗುತ್ತದೆ. ಶರಣಾಗತಿಯ ಹೊರತು ದಿವ್ಯ ಸಂದೇಶವನ್ನು ಸಾರುತ್ತದೆ. ಮುಖ್ಯವಾಗಿ ನಾವಿಲ್ಲಿ ಗಮನಿಸಬೇಕಾದ ಸಂಗತಿಯೊಂದಿದೆ. ಇಡೀ ಮಾಲಿಕೆ ಪ್ರಾಸಬದ್ಧವಾಗಿದ್ದು ಎಲ್ಲಿಯೂ ರಸಾನುಭೂತಿಗೆ ಅಡಚಣೆ ಉಂಟು ಮಾಡುವುದಿಲ್ಲ. ಮುಖ್ಯವಾಗಿ ರಾಮ ರಾಮ ಎನ್ನುವ ಮೂಲಕ ಮನಸ್ಸು ಶಾಂತವಾಗುತ್ತದೆ. ಚಂದ್ರನ ಬೆಳದಿಂಗಳಂತೆ ಸುತ್ತಣ ಪರಿಸರ ತಂಪಾಗುತ್ತದೆ ಅರ್ಥಾತ್ ಪ್ರಪುಲ್ಲವಾಘುತ್ತದೆ. ಅಂತಹ ಪ್ರಪುಲ್ಲತೆಯಲ್ಲೇ ಮನಸ್ಸುಗಳು ಅರಳುತ್ತವೆ, ತಾಮಸಿಕ, ರಾಜಸಿಕ ಗುಣಗಳು ಶಾಂತವಾಗಿ ಸಾತ್ವಿಕ ಚಿಂತನೆಗಳು ವಿಕಾಸಗೊಳ್ಳುತ್ತವೆ. ಒಮ್ಮೆ ಸಾತ್ವಿಕ ಮನೋಭಾವ ಮೈದಳೆದಂತೆ ರಾಗ-ದ್ವೇಷಗಳು, ಕಾಮ-ಕ್ರೋಧಾದಿ ಅರಿಷಡ್ವರ್ಗಗಳು ಶಮನವಾಗುತ್ತವೆ. ರಾಮ ನಾಮದ ಮಹತ್ತು ಅಡಗಿರುವುದೇ ಈ ಅಂಶದಲ್ಲಿ!  

ಯೋಗಸೂತ್ರದ ಪ್ರಕಾರ ಶರೀರವು ಪಂಚಭೂತಾತ್ಮಕ ವಸ್ತುವಿನಿಂದ (ಆಕಾಶ, ಪೃಥ್ವಿ, ಜಲ, ಅಗ್ನಿ, ವಾಯು), ಹತ್ತು ಬಗೆಯ ನಾಡಿಯಿಂದ, ಏಳು ಬಗೆಯ ಧಾತುಗಳಿಂದ ಮಾಡಲ್ಪಟ್ಟಿದೆ. ಶರೀರ ಭಾವದಲ್ಲಿ ಏಳು ಚಕ್ರಗಳಿಗೆ. ಅವೆಂದರೆ ಮೂಲಾಧಾರ, ಸ್ವಾಧಿಷ್ಠಾನ, ಅನಾಹುತ, ಮಣಿಪುರ, ಆಜ್ಞಾ, ವಿಶುದ್ಧಿ ಮತ್ತು ಸಹಸ್ರಾರ. ಪ್ರತಿಯೊಂದು ಚಕ್ರವೂ ಬೀಜಾಕ್ಷರಗಳು. ಅಂದರೆ ನಾವು ಉಚ್ಚರಿಸುವ ಪ್ರತಿಯೊಂದು ಪದವೂ ಬೀಜಾಕ್ಷರದ ರೂಪವೇ. ಪ್ರತಿಯೊಂದು ಪದವೂ ಒಂದೊಂದು ಚಕ್ರದೊಳಗಿನ ಭಾವದ ಸಂಕೇತವೇ. ಅದುವೇ ಪ್ರಾಣವು. ಉಸಿರಾಟದ ಗತಿಯ ಸೂಚನೆ. ಒಂದು ಸಣ್ಣ ಉದಾಹರಣೆ ಮೂಲಕ ಈ ಅಂಶವನ್ನು ತಿಳಿದುಕೊಳ್ಳೊಣ. ಅಮ್ಮ ಎನ್ನುವ ಪದವು ಪದವನ್ನೇ ತೆಗೆದುಕೊಳ್ಳಿ. ಅಮ್ಮ ಎನ್ನುವ ಪದವು ಎರಡು ಬೀಜಾಕ್ಷರಗಳಿಂದ ಕೂಡಿದೆ. ಅವೆಂದರೆ ಅ ಮತ್ತು ಮ. ‘ಅ’ ಎನ್ನುವುದು ವಿಶುದ್ಧ ಚಕ್ರದೊಳಗಿನ ಬೀಜಾಕ್ಷರ. ‘ಮ’ ಎನ್ನುವುದು ಸ್ವಾಧಿಷ್ಠಾನ ಚಕ್ರದ ಬೀಜಾಕ್ಷರ. ಅಮ್ಮ ಎನ್ನುವುದು ಪ್ರಜ್ಞಾವಂತಿಕೆ, ಆನಂದ ಭಾವವನ್ನು ಸೂಚಿಸುತ್ತದೆ. ವಿಶುದ್ಧ ಚಕ್ರವು ಜ್ಞಾನ ತತ್ತ್ವವಾದರೆ, ಸ್ವಾಧಿಷ್ಟಾನವು ಜಲತತ್ತ್ವವಾಗಿದೆ. ಇವೆರಡರ ಸಮ್ಮಿಲನವೇ ಪ್ರಜ್ಞಾವಂತಿಕೆ, ಆನಂದದ ಭಾವ. ಜಲತತ್ತ್ವವೇ ಸೃಷ್ಟಿಯ ಮೂಲ. ಸೃಷ್ಟಿಯ ಆರಂಭದೊಡನೆ ಜೀವಜಗತ್ತು ಸಂಭ್ರಮಿಸುತ್ತದೆ. ಸುತ್ತಣ ಪರಿಸರದಲ್ಲಿ ಆನಂದವನ್ನು ಹರಡುತ್ತದೆ. ಅಂತೆಯೇ ಮಗುವಿನ ಜನ್ಮವು. ಕತ್ತಲಿನಿಂದ ಬೆಳಕಿಗೆ ಬಂದಕೂಡಲೇ ಮಗು ಪ್ರಜ್ಞಾವಂತಿಕೆಯಿಂದ ಇರುವಿಕೆಯನ್ನು ವ್ಯಕ್ತಪಡಿಸುತ್ತದೆ. ‘ಅಮ್ಮಾ’ ಎಂದು ಕೂಗುತ್ತದೆ. ಅಮ್ಮ ಎಂದರೆ ಏನೋ ಹರುಷ!. ಮತ್ಯಾವುದೇ ವಸ್ತುವಿನಿಂಧ ಸಿಗದ ಆನಂದ ಅಲ್ಲಿ ದೊರೆಯುತ್ತದೆ. ಕಾರಣ ಈ ಪದ ಪ್ರಯೋಗವು ಪ್ರಜ್ಞಾಪೂರ್ವಕವಾಗಿ ಬಂದದ್ದು. ಅಂದರೆ ಪ್ರಜ್ಞೆಯೊಳಗೇ ಆನಂದವಿದೆ ಎನ್ನುವುದೀಗ ಸ್ಪಷ್ಟವಾಯಿತು. ಆದರೆ ನಾವಿಂದು ಮಾಡುತ್ತಿರುವುದಾದರೂ ಏನು? ಕಣ್ಣಿನ ವಸ್ತುಗಳಲ್ಲಿ ಆನಂದವನ್ನು ಕಾಣಲು ಬಯಸುತ್ತಿದ್ದೇವೆ. ಅಂತೆಯೇ ಕಲೆವೊಂದು ಪದ ಪ್ರಯೋಗಗಳು ನಮ್ಮನ್ನು ತೀರಾ ಖಿನ್ನರಾಗುವಂತೆ ಮಾಡುತ್ತದೆ ಅಥವಾ ಮನದೊಳಗಿನ ಶಾಂತತೆಯನ್ನು ಹಾಳುಗೆಡುವುತ್ತದೆ ಅಥವಾ ಉದ್ವಿಘ್ನಗೊಂಡ ನರ ನಾಡಿಗಳು ರೋಷಾವೇಶಕ್ಕೆ ಕಾರಣವಾಗುತ್ತವೆ. ಇದೇಕೆ ಹೀಗೆ? ಎನ್ನುವುದಕ್ಕೂ ಮೇಲಿನ ಉದಾಹರಣೆಯೇ ವಿವರಣೆಯಾಗಬಹುದೇನೋ! ಈ ನಿಟ್ಟಿನಲ್ಲಿ ಮತ್ತಷ್ಟು ಅಧ್ಯಯನಗಳು ನಡೆಯಬೇಕಿವೆ.

-ಡಾ. ಗುರುರಾಜ ಪೋಶೆಟ್ಟಿಹಳ್ಳಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 Comments

Post a Comment

Post a Comment (0)

Previous Post Next Post