ಉಜಿರೆ: ಪಶ್ಚಿಮ ಘಟ್ಟಗಳು ಅಳಿದರೆ ಜೀವ ಸಮೂಹವನ್ನು ಸಲಹುತ್ತಿರುವ ನದಿ ಮೂಲಗಳು ಬತ್ತಿ ಹೋಗಿ ಸಂಕಷ್ಟಗಳು ಎದುರಾಗಬಹುದು ಎಂದು ಪರಿಸರ ಪರ ಹೋರಾಟಗಾರ ಭಾಸ್ಕರ್ ಗಣೇಶ್ ಹೆಗ್ಡೆ ನುಡಿದರು.
ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ, ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಮತ್ತು ಉಜಿರೆಯ ಶ್ರೀ ಧ. ಮಂ. ಕಾಲೇಜು ಸಹಭಾಗಿತ್ವದಲ್ಲಿ ಉಜಿರೆಯ ಸಿದ್ದವನ ಗುರುಕುಲದಲ್ಲಿ ನಡೆದ ಪಶ್ಚಿಮ ಘಟ್ಟಗಳ ಸಂರಕ್ಷಣೆ, ಮಹತ್ವ ಹಾಗೂ ನೇತ್ರಾವತಿ ಮತ್ತು ಇತರೆ ಉಪನದಿಗಳ ಪವಿತ್ರತೆ- ಪ್ರಾಮುಖ್ಯತೆ ಕುರಿತಾದ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದರು.
ಪಶ್ಚಿಮ ಘಟ್ಟಗಳಲ್ಲಿ ಹಲವು ನದಿಗಳು ಹುಟ್ಟಿ ತನ್ನ ಪಥದಲ್ಲಿ ಪೂರ್ವ ಅಥವ ಪಶ್ಚಿಮಾಭಿಮುಖವಾಗಿ ಹರಿದು ಸಾಗರ ಸೇರುತ್ತದೆ. ಬಹುಮುಖ್ಯವಾಗಿ ಈ ನದಿಗಳು ಪಶ್ಚಿಮಘಟ್ಟದ ನಿತ್ಯಹರಿದ್ವರ್ಣದ ಕಾಡುಗಳು ಮತ್ತು ಜೀವವೈವಿದ್ಯತೆಯನ್ನು ಸಲಹುತ್ತಿದೆ ಎಂದು ಅಭಿಪ್ರಾಯಪಟ್ಟರು.
ತಲಾ ತಲಾಂತರದಿಂದ ಸಾಗಿಬಂದ ಮಾನವನ ಬದುಕು ನದಿ ಮತ್ತು ನದಿ ಮೂಲಗಳನ್ನು ಅವಲಂಬಿಸಿದೆ. ಜೀವನಕ್ಕೆ ಆಧಾರವಾಗಿರುವ ನದಿಗಳ ಮಹತ್ವವನ್ನು ಅರ್ಥೈಸಿಕೊಂಡು ಅವುಗಳನ್ನು ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.
ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಗಣೇಶ್ ಶೆಂಡ್ಯೆ ಕಾರ್ಯಕ್ರಮ ನಿರ್ವಹಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ