|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜೀವಪರ ಮನುಷ್ಯ ಸ್ವಭಾವದ ಮೂಲಕ ಪರಿಸರ ಸಂರಕ್ಷಣೆ: ಡಾ.ಡಿ. ವೀರೇಂದ್ರ ಹೆಗ್ಗಡೆ

ಜೀವಪರ ಮನುಷ್ಯ ಸ್ವಭಾವದ ಮೂಲಕ ಪರಿಸರ ಸಂರಕ್ಷಣೆ: ಡಾ.ಡಿ. ವೀರೇಂದ್ರ ಹೆಗ್ಗಡೆ

 ಉಜಿರೆಯಲ್ಲಿ ಪಶ್ಚಿಮ ಘಟ್ಟ ಸಂರಕ್ಷಣೆ, ನೇತ್ರಾವತಿ ನದಿ ಪ್ರಾಮುಖ್ಯತೆ ಕುರಿತ ವಿಚಾರ ಸಂಕಿರಣ



ಉಜಿರೆ: ನೈಸರ್ಗಿಕ ಸಮತೋಲನ ಕಾಯ್ದುಕೊಳ್ಳಲು ಪೂರಕವಾಗುವಂತೆ ಜೀವಪರ ಸ್ವಭಾವಗಳನ್ನು ರೂಢಿಸಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಯ ಹೊಣೆ ನಿಭಾಯಿಸುವ ಅನಿವಾರ್ಯತೆ ಇದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಅಭಿಪ್ರಾಯಪಟ್ಟರು.


ಕರ್ನಾಟಕ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ, ಅರಣ್ಯ ಇಲಾಖೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಉಜಿರೆಯ ಶ್ರೀ ಸಿದ್ದವನ ಗುರುಕುಲದ ಸಭಾಂಗಣದಲ್ಲಿ ಗುರುವಾರ ಆಯೋಜಿತವಾದ ‘ಪಶ್ಚಿಮ ಘಟ್ಟಗಳ ಸಂರಕ್ಷಣೆ, ಮಹತ್ವ, ನೇತ್ರಾವತಿ ಮತ್ತು ಇತರ ಉಪನದಿಗಳ ಪವಿತ್ರತೆ -ಪ್ರಾಮುಖ್ಯತೆ’ ಕುರಿತ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ದೇವರು, ಧರ್ಮ ಸಂಬಂಧಿತ ನಂಬಿಕೆಯು ಮೂಲತಃ ಜೀವಪರವಾದದ್ದು. ಪ್ರಕೃತಿಪರವಾದದ್ದು. ಪ್ರಕೃತಿಯಲ್ಲಿರುವ ಜೀವಿಗಳನ್ನೂ ಕರುಣೆಯಿಂದ ನೋಡಬೇಕು. ಆದರೆ, ಜನರು ಹಾವುಗಳನ್ನು ಕಂಡಾಗ ಕೊಲ್ಲುತ್ತಾರೆ. ಕೊಂದ ನಂತರ ದೋಷ ಪರಿಹಾರಕ್ಕಾಗಿ ದೇವಸ್ಥಾನಕ್ಕೆ ಬರುತ್ತಾರೆ. ಈ ಬಗೆಯ ವೈರುಧ್ಯದ ಸ್ವಭಾವದಿಂದ ಪ್ರಯೋಜನವಿಲ್ಲ. ಉಳಿದ ಜೀವಿಗಳನ್ನು ಕೊಲ್ಲುವ ಮನಸ್ಥಿತಿಯಿಂದ ಹೊರಬರಬೇಕು. ಎಲ್ಲ ಜೀವಿಗಳ ಬಗ್ಗೆ ಅಂತಃಕರಣವಿಟ್ಟುಕೊಂಡು ದೇವಸ್ಥಾನದ ಸನ್ನಿಧಿಗೆ ಬಂದು ಸಲ್ಲಿಸುವ ಪ್ರಾರ್ಥನೆ, ಶ್ರದ್ಧೆ ಅರ್ಥಪೂರ್ಣ ಎನ್ನಿಸಿಕೊಳ್ಳುತ್ತದೆ ಎಂದು ಹೇಳಿದರು.


ವಿದೇಶಗಳಲ್ಲಿ ಅರಣ್ಯವನ್ನು ಉಳಿಸಿಕೊಳ್ಳುವ ಪ್ರಜ್ಞೆ ಇದೆ. ಈ ಕಾರಣಕ್ಕಾಗಿಯೇ ವ್ಯಾಪಕ ಮಳೆಕಾಡುಗಳು ಅಲ್ಲಿ ಕಾಣಸಿಗುತ್ತವೆ. ಸೂರ್ಯನ ಬೆಳಕು ಬೀಳದ ಅರಣ್ಯಪ್ರದೇಶಗಳಿವೆ. ನಮ್ಮಲ್ಲಿಯೂ ವೈವಿಧ್ಯಮಯ ನೈಸರ್ಗಿಕ ಸಂಪನ್ಮೂಲ ಇದೆ. ಆದರೆ, ಅಭಿವೃದ್ಧಿ, ವಾಣಿಜ್ಯಿಕ ಲಾಭದ ಉದ್ದೇಶಗಳಿಗಾಗಿ ಈ ನಿಸರ್ಗ ವೈವಿಧ್ಯತೆಗೆ ಧಕ್ಕೆಯುಂಟಾಗುತ್ತಿದೆ. ವನ್ಯಜೀವಿಗಳು ಮನುಷ್ಯ ಹಾವಳಿಯ ಕಾರಣಕ್ಕಾಗಿಯೇ ಸಂಕಷ್ಟಕ್ಕೆ ಸಿಲುಕಿವೆ ಎಂದರು.


ವನ್ಯಜೀವಿಗಳಿಗೂ ಮಾತು ಬರುತ್ತಿದ್ದರೆ ಅವುಗಳೂ ಸಂಘಟಿತವಾಗುತ್ತಿದ್ದವು. ಅವೂ ಸಭೆ ನಡೆಸಿ ಮನುಷ್ಯ ಹಾವಳಿಯ ವಿರುದ್ಧ ಧ್ವನಿ ಎತ್ತುತ್ತಿದ್ದವು. ಊರು, ನಗರಗಳ ಕಡೆಗೆ ವನ್ಯಜೀವಿಗಳು ಬರುತ್ತಿರುವುದಕ್ಕೆ ಅವುಗಳ ಆವಾಸಸ್ಥಾನವನ್ನು ಅತಿಕ್ರಮಿಸುತ್ತಿರುವುದೇ ಕಾರಣ. ಅವುಗಳ ಆವಾಸಸ್ಥಾನಕ್ಕೆ ಧಕ್ಕೆಯಾಗದ ಹಾಗೆ ಅವುಗಳಿರುವ ಹಾಗೆಯೇ ಉಳಿಸಿಕೊಳ್ಳಬೇಕು. ಅಲ್ಲಿ ವನ್ಯಜೀವಿಗಳ ಆಹಾರಕ್ರಮಕ್ಕೆ ಅನುಗುಣವಾದ ಮರಗಳಿರುವಂತೆ ನೋಡಿಕೊಳ್ಳಬೇಕು. ಹಾಗಾದಾಗ ಮಾತ್ರ ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ನುಡಿದರು.


ಅಡುಗೆ ಮತ್ತಿತರ ಉದ್ದೇಶಗಳಿಗಾಗಿ ಪರ್ಯಾಯ ಸಂಪನ್ಮೂಲಗಳ ಬಳಕೆ ಇದೀಗ ಹೆಚ್ಚಾಗಿದೆ. ನಿತ್ಯ ಬಳಕೆಗಾಗಿ ಮರಗಳ ಉತ್ಪನ್ನವನ್ನು ಹೊರತುಪಡಿಸಿ ಪರ್ಯಾಯ ವಸ್ತುಗಳು ಲಭ್ಯವಾಗುತ್ತಿವೆ. ಧರ್ಮಸ್ಥಳದಲ್ಲಿ ಕಳೆದ 40 ವರ್ಷಗಳಿಂದ ಅಡುಗೆ ಮತ್ತಿತರ ಉದ್ದೇಶಗಳಿಗಾಗಿ ಉರುವಲು, ಮರದ ಉತ್ಪನ್ನಗಳನ್ನು ಬಳಸುತ್ತಿಲ್ಲ. ಪರ್ಯಾಯ ಸಂಪನ್ಮೂಲಗಳ ಬಳಕೆಯ ಮೂಲಕ ಮರಗಳನ್ನು ಉಳಿಸಲಾಗುತ್ತಿದೆ ಎಂದು ತಿಳಿಸಿದರು.


ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಅಧ್ಯಕ್ಷ ರವಿ ಕುಶಾಲಪ್ಪ ಅವರು ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಅಗತ್ಯತೆಯನ್ನು ಪ್ರತಿಪಾದಿಸಿದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್.ನಟಾಲ್ಕರ್, ಉಜಿರೆ ಎಸ್.ಡಿ.ಎಂ ಕಾಲೇಜು ಪ್ರಾಂಶುಪಾಲರಾದ ಡಾ.ಪಿ.ಎನ್. ಉದಯಚಂದ್ರ ಅವರು ಉಪಸ್ಥಿತರಿದ್ದರು. ಡಾ.ಕುಮಾರ್ ಹೆಗ್ಡೆ ಅವರು ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post