ಪುತ್ತೂರು: ಜೀವನ ಎಂದರೆ ಒಂದು ಪ್ರಯಾಣ ಈ ಪ್ರಯಾಣದಲ್ಲಿ ಮದುವೆ, ಮಕ್ಕಳು ಹೀಗೆ ಹಲವಾರು ಬದಲಾವಣೆಗಳಾಗುತ್ತದೆ ಆದರೆ ನಾವು ನಮ್ಮ ವಿದ್ಯಾಭ್ಯಾಸ, ಕಲಿಕೆಯನ್ನು ನಿಲ್ಲಿಸಬಾರದು ಕಲಿತಷ್ಟು ಜ್ಞಾನ ಹೆಚ್ಚಾಗುತ್ತದೆ. ಸಂಶೋಧನೆಯಲ್ಲಿ ನಮ್ಮ ಗುರಿಯನ್ನು ತಲುಪುವಾಗ ಒಂದು ಹಂತಕ್ಕೆ ತಲುಪಿರುತ್ತವೆ. ಸಂಶೋಧನೆಯಲ್ಲಿ ತಾಳ್ಮೆ ಬಹಳ ಮುಖ್ಯ. ಈ ಸಂದರ್ಭದಲ್ಲಿ ಕಷ್ಟಗಳು ಎದುರಾದಾಗ ನಮ್ಮಿಂದ ಸಾಧ್ಯವಿಲ್ಲ ಎಂದು ತಿಳಿಯದೇ ಅವುಗಳನ್ನು ಎದುರಿಸುವ ಆತ್ಮವಿಶ್ವಾಸ ನಮ್ಮಲ್ಲಿರಬೇಕು ಎಂದು ಹಿರಿಯ ವಿದ್ಯಾರ್ಥಿನಿ ಹಾಗೂ ಮಂಗಳೂರಿನ ಶ್ರೀನಿವಾಸ್ ಇನ್ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ ವಲಚಿಲ್ ಕಾಲೇಜಿನ ನಿರ್ವಹಣಾ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ವೀಣಾ ಸಂತೋಷ್ ರೈ ಹೇಳಿದರು.
ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಘಟಕ, ವಾಣಿಜ್ಯ ವಿಭಾಗ, ವ್ಯವಹಾರ ಅಧ್ಯಯನ ವಿಭಾಗ ಮತ್ತು ಮಾನವಿಕ ವಿಭಾಗ ಇದರ ಜಂಟಿ ಆಶ್ರಯದಲ್ಲಿ, ವಿವೇಕಾನಂದ ಸಂಶೋಧನಾ ಕೇಂದ್ರ ಆಯೋಜಿಸಲಾದ ಸಂಶೋಧನಾ ಮಾಹಿತಿ ಕಾರ್ಯಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಬುಧವಾರ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ ಒಂದು ವಿಷಯದ ಬಗ್ಗೆ ಆಳವಾಗಿ ತಿಳಿಯುವುದು ಸಂಶೋಧನೆ ಮತ್ತು ಸಂಶೋಧನೆಗೆ ಸರಿಯಾದ ಮಾಹಿತಿ ಮತ್ತು ಸಾಕ್ಷಿಗಳು ಇರಬೇಕು. ಮೂಲವಿಜ್ಞಾನದಲ್ಲಿ ಒಂದು ಸಮಾಜದ ಬಗ್ಗೆ ಸಮಾಜದ ಜನಜೀವನದ ಬಗ್ಗೆ ಸಂಶೋಧನೆಯನ್ನು ಮಾಡಬಹುದು, ಈ ಸಂಶೋಧನೆಯಲ್ಲಿ ಅಂಕಿಅಂಶ, ಗಣಿತಶಾಸ್ತ್ರದ ಬಳಕೆ ಹೆಚ್ಚಾಗಿರುತ್ತವೆ. ಸಂಶೋಧನೆ ಮಾಡುವಾಗ ನಮ್ಮಲ್ಲಿ ಒಂದು ಗುರಿ ಇರಬೇಕು ಆ ಗುರಿಯನ್ನು ತಲುಪಲು ಸರಿಯಾದ ಪೂರ್ವ ತಯಾರಿ ನಮ್ಮಲ್ಲಿರಬೇಕು ಎಂದು ತಿಳಿಸಿದರು.
ಕಾರ್ಯಾಗಾರವು ಮೂರು ಗೋಷ್ಠಿಗಳನ್ನು ಒಳಗೊಂಡಿತ್ತು. ಮೊದಲ ಗೋಷ್ಠಿಯಲ್ಲಿ ಸಾಮಾಜಿಕ ವಿಜ್ಞಾನ ಸಂಶೋಧನೆಯ ಬಗ್ಗೆ ಸಂಪನ್ಮೂಲ ವ್ಯಕ್ತಿ ಡಾ. ವೀಣಾ ಸಂತೋಷ್ ರೈ ಮಾಹಿತಿ ನೀಡಿದರು ಎರಡನೇ ಗೋಷ್ಠಿಯಲ್ಲಿ field survey and data analysis ಬಗ್ಗೆ ಕಾಲೇಜಿನ ವಾಣಿಜ್ಯ ವಿಭಾಗ ಉಪನ್ಯಾಸಕ ಮುಕುಂದಕೃಷ್ಣ ಅವರು ಮಾಹಿತಿ ನೀಡಿದರು. ಮೂರನೇ ಗೋಷ್ಠಿಯಲ್ಲಿ How to write project report ಬಗ್ಗೆ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ರವಿಕಲಾ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತೃತೀಯ ಬಿಕಾಂ ವಿದ್ಯಾರ್ಥಿನಿ ಕೀರ್ತಿ ಪ್ರಾರ್ಥಿಸಿದರು. ವಿವೇಕಾನಂದ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಹೆಚ್.ಜಿ ಶ್ರೀಧರ್ ಸ್ವಾಗತಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯಕ್ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಮಂಜುಳಾ ಡಿ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ