ಮೂಡಬಿದಿರೆ: ಕುವೆಂಪು ಸಾಹಿತ್ಯಗಳು ಯುವಕರನ್ನು ಓದುವಂತೆ ಪ್ರೆರೇಪಿಸುವ ಜೊತೆಗೆ ಪ್ರಕೃತಿಯನ್ನು ಆಸ್ವಾದಿಸುವ ಸಂವೇದನೆಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತವೆ ಎಂದು ಪ್ರಸಿದ್ಧ ವಿಮರ್ಶಕ ಡಾ. ಹೆಚ್. ಎಸ್ ಸತ್ಯನಾರಾಯಣ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಉಜಿರೆ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ಇವರ ಸಹಯೋಗದೊಂದಿಗೆ ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ನಡೆದ "ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ" ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುವೆಂಪು ನುಡಿದಂತೆ ನಡೆದವರು ಆಧ್ಯಾತ್ಮವನ್ನು ಮೆಚ್ಚಿ ಅನಾಚಾರಗಳನ್ನು ಕಡೆಗಣಿಸಿದವರು. ಇಪ್ಪತ್ತನೇ ಶತಮಾನವನ್ನು ತನ್ನ ವೈಚಾರಿಕ ಪ್ರತಿಭೆಯಿಂದ ಬೆಳಗಿ, ಮಾತೃಭಾಷೆಯನ್ನು ಗೌರವಿಸುವುದನ್ನು ಹಾಗೂ ದಮನಿತರ ಜೀವನಕ್ಕೆ ಸಾಹಿತ್ಯದ ಮೂಲಕ ಬೆಳಕಾದವರು ಎಂದರು.
ಎಲ್ಲಾ ಕ್ಷೇತ್ರಗಳಲ್ಲಿಯೂ ಬದಲಾವಣೆ ತರಲು ಯುವ ಸಮುದಾಯದಿಂದ ಸಾಧ್ಯ ಆದರೆ ಇಂದಿನ ಯುವಕರು ಸದಾ ಅವಲಂಬಿತರಾಗಿರುವುದರಿಂದ ವಿಚಾರಧಾರೆಗಳನ್ನು ಕಾರ್ಯರೂಪಕ್ಕೆ ತರಲು ಅಸಾಧ್ಯವಾಗುತ್ತಿದೆ. ಆದ್ದರಿಂದ ಯುವಕರು ಸ್ವತಂತ್ರ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಕಾಲೇಜಿನ ಆಧ್ಯಾತ್ಮಿಕ ಪೋರಮ್ ನ ವಿದ್ಯಾರ್ಥಿಗಳು "ಕುವೆಂಪು ಗೀತೆ" ಯನ್ನು ಹಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕ ಡಾ.ರಾಜಶೇಖರ್ ಹಳೆಮನೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆಳ್ವಾಸ್ ಸಾಂಸ್ಕೃತಿಕ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ಆಳ್ವಾಸ್ ಪದವಿ ಕಾಲೇಜಿನ ಉಪನ್ಯಾಸಕ ಪ್ರೊ. ಹರೀಶ್ ಟಿ.ಜಿ ಸ್ವಾಗತಿಸಿದರು. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಜ್ಯೋತಿ ರೈ ಕಾರ್ಯಕ್ರಮ ನಿರೂಪಿಸಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ ಯೋಗೀಶ್ ಕೈರೋಡಿ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ