ಉಜಿರೆ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಯೋಜಿಸಿರುವ 'ನುಡಿ ಸಾಮ್ರಾಜ್ಯದಲ್ಲಿ ಸ್ವರಾಜ್ಯ' ಮೂರನೇ ರಾಜ್ಯ ಅಧಿವೇಶನದ, ವಸ್ತು ಪ್ರದರ್ಶನವು ಉಜಿರೆಯ ಜನಾರ್ಧನ ದೇವಸ್ಥಾನದ ಬಳಿ ಶ್ರೀಕೃಷ್ಣಾನುಗ್ರಹ ಸಭಾಭವನದ ಹೊರಾಂಗಣದಲ್ಲಿ ಚಾಲನೆ ದೊರಕಿತು.
ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಿದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ವಿಭಾಗದ ಅಧ್ಯಕ್ಷರಾದ ಸಿ. ಎ ಶಾಂತರಾಮ ಶೆಟ್ಟಿ ಮಾತನಾಡಿ, ಕೊರೊನಾ ಸೊಂಕಿನ ಅಡೆತಡೆಗಳ ನಂತರ ನಡೆಯುತ್ತಿರುವ ಕಾರ್ಯಕ್ರಮ ಇದಾಗಿದ್ದು, ಈ ಸಮ್ಮೇಳನವು ಕಲೆ ಸಂಸ್ಕೃತಿ ಮತ್ತು ಭಾರತೀಯ ಇತಿಹಾಸದ ಕುರಿತಾದ ಧನಾತ್ಮಕ ಚಿಂತನೆಯನ್ನು ಬಿತ್ತರಿಸಲಿ ಎಂದು ಆಶಿಸಿದರು.
ಸಮ್ಮೇಳನದ ಆಶಯಕ್ಕೆ ಪೂರಕವಾಗಿ ವಿವಿಧ ಮಳಿಗೆಗಳಿದ್ದು, ವೀಕ್ಷಕರಲ್ಲಿ ಧನಾತ್ಮಕ ಚಿಂತನೆ ಮೂಡಿಸುವ ಧ್ಯೇಯ ಹೊಂದಿದೆ. ಈ ಮೂಲಕ ಮುಂದಿನ ಪೀಳಿಗೆಗೆ ಕಲೆ ಮತ್ತು ಬರಹದ ಕುರಿತು ಅರಿವು ಮೂಡಿಸುವ ಅಳಿಲಸೇವೆ ಇಲ್ಲಿ ನಡೆಯುತ್ತಿದೆ. ಇಲ್ಲಿ ಪ್ರದರ್ಶನಗೊಂಡಿರುವ ಪುಸ್ತಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕಿರುಪರಿಚಯ ಫಲಕಗಳು ಜಗದ ಜನನಿ ಭಾರತಾಂಬೆಯ ಇತಿಹಾಸ ಸಾರುತ್ತಿದೆ. ಈ ವಸ್ತು ಪ್ರದರ್ಶನದಿಂದಾಗಿ ಜನರಲ್ಲಿ ಒಂದು ಅಂಶ ಧನಾತ್ಮಕ ಚಿಂತನೆ ಹುಟ್ಟಿಕೊಂಡರೂ ಅದು ವಸ್ತುಪ್ರದರ್ಶನಕ್ಕೆ ಸಿಕ್ಕ ಯಶಸ್ಸು ಎಂದರು.
ಸಾಹಿತಿ ನಾಮೊಗಸಾಲೆ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಉಪಾಧ್ಯಕ್ಷರಾದ ಹರಿಪ್ರಕಾಶ್ ಕೋಣೆಮನೆ, ವಸ್ತುಪ್ರದರ್ಶನದ ಸಂಚಾಲಕ ಕೃಷ್ಣ ಶೆಟ್ಟಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ವಸ್ತು ಪ್ರದರ್ಶನವು ಎರಡು ದಿನಗಳ ಕಾಲ ನಡೆಯಲಿದೆ.
ವಸ್ತು ಪ್ರದರ್ಶನದಲ್ಲಿ ಏನೇನಿದೆ:
ವಸ್ತುಪ್ರದರ್ಶನದಲ್ಲಿ ಐವತ್ನಾಲ್ಕು ಮಳಿಗೆಗಳು ಇದ್ದು, ಇದರಲ್ಲಿ ಸುಮಾರು ಇಪ್ಪತ್ತು ಪುಸ್ತಕ ಮಳಿಗೆಗಳಿವೆ. ಎಪ್ಪತೈದು ಸ್ವಾತಂತ್ರ್ಯ ಹೋರಾಟಗಾರರ ಕಿರು ಪರಿಚಯದ ಫಲಕಗಳಿವೆ. ಸ್ವದೇಶಿ ಆಶಯವನ್ನೇ ಬಿಂಬಿಸುವ ಖಾದಿ ಬಟ್ಟೆ, ಗ್ರಹೋಪಯೋಗಿ ವಸ್ತುಗಳು, ಮನೆಯಲ್ಲೇ ತಯಾರಿಸಿದ ಆಹಾರ ಉತ್ಪನ್ನಗಳು, ಹೂವಿನಗಿಡ ಮೊದಲಾದ ಮಳಿಗೆಗಳು ವಿಶೇಷ ಮೆರುಗನ್ನು ನೀಡಿವೆ. ಶಿವಮೊಗ್ಗ, ಮೈಸೂರು, ಬೆಂಗಳೂರು, ಹಾಸನ, ಕೊಡಗು ಮತ್ತು ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಿಂದ ವಸ್ತು ಪ್ರದರ್ಶನದ ಮಳಿಗೆಗಳನ್ನು ಇಡಲಾಗಿದೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ