ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆ

Upayuktha
0

ಸ್ತ್ರೀ ಶಕ್ತಿಯನ್ನು ಅನಾವರಣಗೊಳಿಸಬೇಕಾದ ಅಗತ್ಯವಿದೆ: ಸುಜನಿ ಬೋರ್ಕರ್


ಪುತ್ತೂರು: ಮಹಿಳೆ ಸಬಲೆಯೇ ಅಬಲೆಯೇ ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಪ್ರಸ್ತುತ ಸಮಾಜದಲ್ಲಿ ಮಹಿಳೆಯ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಮಹಿಳೆಯು ಕೌರ್ಯ ಮತ್ತು ಭೋಗದ ವಸ್ತುವಾಗಿದ್ದಾಳೆ. ಇವುಗಳಿಂದ ಹೊರಬರಲು ಆಕೆಯು ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡು ಬಲಿಷ್ಠಳಾಗಬೇಕಾದ ಅಗತ್ಯವಿದೆ. ಸ್ತ್ರೀಶಕ್ತಿಯ ಇನ್ನೊಂದು ಮುಖವನ್ನು ಅನಾವರಣಗೊಳಿಸುವ ಅನಿವಾರ್ಯತೆಯಿದೆ ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ (ಸಿ.ಬಿ.ಎಸ್.ಇ) ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಹೇಳಿದರು.


ಅವರು ಅಂಬಿಕಾ ಮಹಾವಿದ್ಯಾಲಯದಲ್ಲಿ ಮಹಿಳಾ ಸಂಘ ಹಾಗೂ ಐಕ್ಯೂಎಸಿ ಘಟಕದ ಆಶ್ರಯದಲ್ಲಿ ಮಂಗಳವಾರದಂದು ನಡೆದ ರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣದ ಬಗೆಗೆ ವಿಶೇಷ ಉಪನ್ಯಾಸವನ್ನು ನೀಡಿದರು.


ಹಳ್ಳಿಗಳಲ್ಲಿ ಮಹಿಳೆಯರು ವಿವಿಧ ಗ್ರಾಮಾಭಿವೃದ್ಧಿ ಯೋಜನೆಗಳಿಂದಾಗಿ ಬಲಾಢ್ಯರಾಗಿದ್ದಾರೆ. ಈ ತೆರನಾದ ಕಾರ್ಯಗಳಲ್ಲಿ ಮಹಿಳೆಯರು ಭಾಗಿಯಾಗಿ ಸಶಕ್ತರಾಗಬೇಕು. ಕೇವಲ ಪುರುಷನಿಂದ ಸುಸ್ಥಿರ ಸಮಾಜವನ್ನು ಕಟ್ಟಲು ಅಸಾಧ್ಯ. ದೇಶವನ್ನು ಉನ್ನತಿಯತ್ತ ಕೊಂಡೊಯ್ಯುವಲ್ಲಿ ಮಹಿಳೆಯರ ಪಾತ್ರ ಅತಿ ಪ್ರಮುಖವಾದುದು ಎಂದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ, ಪುರಾತನಕಾಲದಿಂದ ಇಂದಿನವರೆಗೂ ಮಹಿಳೆಯರಿಗೆ ಪೂಜನೀಯ ಸ್ಥಾನವಿದೆ. ಅದು ಸದಾ ಕಾಲಕ್ಕೂ ಇರುವಂಥದ್ದು. ಮಹಿಳೆ ಮೌಲ್ಯಕ್ಕೂ ಮೀರಿ ಶ್ರೇಷ್ಠವಾದವಳು. ಅಂತಹ ಗೌರವವನ್ನು ಹೊಂದಿದ್ದರೂ ಮಹಿಳೆಯ ಮೇಲೆ ಅನಾಚಾರಗಳು ಎಸಗಲ್ಪಡುತ್ತದೆ. ಮನುಷ್ಯನ ಮನಸ್ಸಿನಲ್ಲಿ ಅರಿಷಡ್ವರ್ಗಗಳು ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಅತ್ಯಾಚಾರಗಳು ನಡೆಯುತ್ತಿರುತ್ತದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಮಾತನಾಡಿ, ಪ್ರತಿಯೊಬ್ಬರಲ್ಲಿರುವ ಚೈತನ್ಯ ಪ್ರಜ್ವಲಿಸಬೇಕಾದರೆ ಭರವಸೆಯು ಅಗತ್ಯ. ಆ ಶಕ್ತಿಯು ಪುರಾತನ ಭಾರತೀಯರಲ್ಲಿತ್ತು. ಚರಿತ್ರೆಯನ್ನು ಅರಿತುಕೊಂಡು, ಸಂಸ್ಕೃತಿಯ ಸಾರವನ್ನೂ ಅರಗಿಸಿಕೊಂಡು ಮುಂದಡಿಯಿಟ್ಟಾಗ ಸಬಲೀಕರಣವು ತನ್ನಿಂದ ತಾನಾಗಿ ಆಗುತ್ತದೆ ಮತ್ತು ದೇಶವು ಸದೃಡವಾಗುತ್ತದೆ ಎಂದರು.


ಮಹಿಳಾ ದಿನದ ಅಂಗವಾಗಿ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿನಿಯರಾದ ವೈಷ್ಣವೀ, ಅದಿತಿ, ನಯನ, ಜಯಶ್ರೀ ಇವರುಗಳಿಗೆ ಬಹುಮಾನವನ್ನು ನೀಡಲಾಯಿತು.


ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ಚೈತನ್ಯ ಮತ್ತು ತಂಡ ಗಾಯನವನ್ನು ಪ್ರಸ್ತುತ ಪಡಿಸಿದರು. ಶಶಾಂಕ್, ಅನ್ಮಯ್ ಭಟ್, ರಮ್ಯ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡರು. ವಿದ್ಯಾರ್ಥಿನಿಯರಾದ ಅಂಕಿತಾ ಪ್ರಾರ್ಥಿಸಿ, ಶ್ರಾವ್ಯ ಸ್ವಾಗತಿಸಿದರು. ಮಹಿಳಾ ಸಂಘದ ಅಧಿಕಾರಿ ಸಂಧ್ಯಾ ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ನಿಶ್ಚಿತಾ ವಂದಿಸಿ, ವಿದ್ಯಾರ್ಥಿನಿ ಅದಿತಿ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top