ಬಂಟ್ವಾಳ: ಇಲ್ಲಿನ ಪುರಾಣ ಪ್ರಸಿದ್ಧ ಕಾರಿಂಜ ಪಾರ್ವತಿ- ಪರಮೇಶ್ವರ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಹಿಂದೂ ಜಾಗರಣ ವೇದಿಕೆ ವತಿಯಿಂದ ಇದೇ ಮೊದಲ ಬಾರಿಗೆ ಕೈಗೊಂಡ 'ಶಿವಮಾಲಾಧಾರಣೆ' ಯಾತ್ರೆಗೆ ಮಂಗಳವಾರ ಸಂಜೆ ಸಂಘಟನೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ ಚಾಲನೆ ನೀಡಿದರು.
ವಗ್ಗ ರಾಷ್ಟ್ರೀಯ ಹೆದ್ದಾರಿ ಬಳಿ ಸುಮಾರು 400 ಕ್ಕೂ ಮಿಕ್ಕಿ ಮಂದಿ ಮಾಲಾಧಾರಿಗಳು ಶಿವನಾಮಸ್ಮರಣೆ ಜಪಿಸುತ್ತಾ ಕ್ಷೇತ್ರಕ್ಕೆ ಹೆಜ್ಜೆ ಹಾಕಿದರು. ಆರಂಭದಲ್ಲಿ ದೇವಳದ ರಥಬೀದಿಯಲ್ಲಿರುವ ಗಜತೀರ್ಥ ಕೆರೆಯಲ್ಲಿ ತೀರ್ಥಸ್ನಾನ ಮಾಡಿದ ಮಾಲಾಧಾರಿಗಳು ಬಳಿಕ ಬೆಟ್ಟ ಏರಿ ದೇವರ ದರ್ಶನ ಪಡೆದರು.
ಸಂಘಟನೆ ಮುಖಂಡರಾದ ರಾಧಾಕೃಷ್ಣ ಅಡ್ಯಂತಾಯ, ಪ್ರಶಾಂತ್ ಬಂದ್ಯೋಡ್, ರವಿರಾಜ್ ಕಡಬ, ರತ್ನಾಕರ ಶೆಟ್ಟಿ ಕಲ್ಲಡ್ಕ, ಜಗದೀಶ್ ನೆತ್ತರಕೆರೆ, ನರಸಿಂಹ ಮಾಣಿ, ಪ್ರಶಾಂತ್ ಕೆಂಪುಗುಡ್ಡೆ, ಅಜಿತ್ ಹೊಸಮನೆ, ಚಂದ್ರ ಕಲಾಯಿ, ಬಾಲಕೃಷ್ಣ ಕಲಾಯಿ, ರಾಜೇಶ್ ಪುಂಚೋಡಿ, ರಾಜೇಶ್ ಬೊಳ್ಳುಕಲ್ಲು, ರಾಜಾರಾಮ್ ಭಟ್ ಮುಡಿಪು, ತಿರುಲೇಶ್ ಬೆಳ್ಳೂರು, ಯೋಗೀಶ್ ಕುಮ್ಡೇಲು, ರವಿ ಕೆಂಪುಗುಡ್ಡೆ, ಹರೀಶ್ ತಲೆಂಬಿಲ, ರಮೇಶ್ ವಗ್ಗ, ಜಗದೀಶ್ ಕಾಮಾಜೆ, ಮನೋಜ್ ಪೆರ್ನೆ, ಶರತ್ ಸರಪಾಡಿ, ದಿನೇಶ್ ಕಕ್ಕೆಪದವು ಮತ್ತಿತರರು ಇದ್ದರು.
ಕಾರಿಂಜ ಕ್ಷೇತ್ರದ ಬಳಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ಮತ್ತು ಕ್ಷೇತ್ರ ಸಂರಕ್ಷಣೆ ಹಿನ್ನೆಲೆಯಲ್ಲಿ ಈ ವ್ರತಾಚರಣೆ ಮತ್ತು ಯಾತ್ರೆಗೆ ಜಗದೀಶ್ ಕಾರಂತ ಅವರು ಸಂಘಟನೆ ಸದಸ್ಯರಿಗೆ ಕರೆಕೊಟ್ಟಿದ್ದರು. ಇದೀಗ ಶಬರಿಮಲೆ ಮಾದರಿಯಲ್ಲಿ ಹೊಸ ಸಂಪ್ರದಾಯ ಇಲ್ಲಿನ ಭಕ್ತರ ಗಮನ ಸೆಳೆದಿದೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ