ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಯಕ್ಷಗಾನದ ಪಾತ್ರ ಅಪಾರ: ಡಾ.ವಿನಾಯಕ ಭಟ್ಟ ಗಾಳಿಮನೆ
ಪುತ್ತೂರು: ಜೀವನದಲ್ಲಿ ಮಾತೃ ಭಾಷೆ ಹಾಗೂ ಮಾತೃಭಾವ ಮುಖ್ಯವಾದುದು. ತಾಯಿ ಹೇಗೆ ಮಗುವನ್ನು ರಕ್ಷಿಸುವ ಅಭೇದ್ಯ ಕೋಟೆಯೋ ಹಾಗೆಯೇ ಮಾತೃಭಾಷೆಯು ನಮ್ಮನ್ನು ಪೊರೆಯುತ್ತದೆ. ಮಾತೃಸ್ವರೂಪಿ ಮಾತೃಭಾಷೆಯನ್ನು ಬೆಳೆಸುವಲ್ಲಿ ವ್ಯಕ್ತಿಯ ಪಾತ್ರ ಮಹತ್ತರವಾದುದು. ಅಲ್ಲದೆ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದಂತಹವರ ವ್ಯಕ್ತಿತ್ವವನ್ನು ಭಾಷೆಯು ಉನ್ನತೀಕರಿಸುತ್ತದೆ ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಹೇಳಿದರು.
ಅವರು ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಮಂಗಳವಾರದಂದು ನಡೆದ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಭಾಷೆಯ ಬಳಕೆಯು ಇತರ ಭಾಷೆಗಳ ಮಧ್ಯ ಪ್ರವೇಶದಿಂದಾಗಿ ಕುಸಿದಿದೆ. ಶಬ್ಧದ ದುರ್ಬಳಕೆಯೂ ಹೇರಳವಾಗಿ ಕಾಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡವನ್ನು ಉಳಿಸಲು, ಕನ್ನಡಕ್ಕೊಂದು ಆವರಣವನ್ನು ನೀಡಲು ಯಕ್ಷಗಾನ ಕಲೆಯು ಹೋರಾಡಿದಷ್ಟು, ಪ್ರೋತ್ಸಾಹಿದಷ್ಟು ಬೇರಾವ ಸಂಘಟನೆಗಳು, ಸಾಹಿತಿಗಳು ಹೋರಾಡಿರಲು ಸಾಧ್ಯವಿಲ್ಲ. ಹಾಗಾಗಿ ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ಹಾಗೂ ಉಳಿಸುವಲ್ಲಿ ಯಕ್ಷಗಾನದ ಪಾತ್ರ ಮಹತ್ತರವಾದುದು. ಹಾಗಾಗಿ ಕನ್ನಡಿಗರು ಯಕ್ಷಗಾನ ಮತ್ತು ಯಕ್ಷಗಾನದ ಸಾಹಿತ್ಯಕ್ಕೆ ಕೃತಜ್ಞರಾಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ ವಿಚಾರಗಳನ್ನು ಭಾವನಾತ್ಮಕ ಅನುಭವಿಸಿ ಅಭಿವ್ಯಕ್ತಿಸಬೇಕು. ಈ ಅನುಭವದ ಸವಿಯು ಮಾತೃಭಾಷೆಯಲ್ಲಿ ಮಾತನಾಡುವುದರಿಂದ ಮಾತ್ರ ಸಾಧ್ಯ. ಮಾತೃಭಾಷೆಯ ಕುರಿತಾಗಿ ಅಸಡ್ಡೆ ಸಲ್ಲ, ಕೀಳರಿಮೆಯನ್ನು ತೊಡೆದುಹಾಕಿ, ಗೌರವಿಸುವುದು ಅಗತ್ಯವಾಗಿದೆ. ನಮ್ಮ ಮಾತೃಭಾಷೆಯಾದ ಕನ್ನಡವು ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂದು ಮೂರು ವಿಭಾಗವಾಗಿರುವ ಸಮೃದ್ಧ ಭಾಷೆಯಾಗಿದೆ. ಕುವೆಂಪು, ಬೇಂದ್ರೆ, ಮಾಸ್ತಿ ಮುಂತಾದ ಅನೇಕರು ಕನ್ನಡ ಸಾಹಿತ್ಯವನ್ನು ವಿಸ್ತರಿಸಿದ್ದಾರೆ. ಅವರ ಮುಂದಿನ ಪೀಳಿಗೆಯಾದ ಈಗಿನ ಯುವಜನತೆಯು ವಿಪುಲವಾಗಿ ಸಾಹಿತ್ಯ ಬರವಣಿಗೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಅಂತಹ ಆಸ್ತಕರಿಗೆ ಪ್ರೋತ್ಸಾಹ ಕೊಡುವ ಕಾರ್ಯ ಜನಸಾಮಾನ್ಯರು ಮಾಡಿದರೆ ಶ್ರೇಷ್ಠ ಸಾಹಿತ್ಯ ಮತ್ತು ಸಾಹಿತಿ ಹೊರಬರಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಪಂಚಮಿ ಪ್ರಾರ್ಥಿಸಿ, ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಗಿರೀಶ್ ಭಟ್ ಇಳಂತಿಲ ಪ್ರಸ್ಥಾವನೆಗೈದರು. ವಿದ್ಯಾರ್ಥಿನಿ ಪ್ರಕೃತಿ ಸ್ವಾಗತಿಸಿ, ನಿಶ್ಚಿತಾ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿ ಮೋಹನ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ