ಪುತ್ತೂರು ಫೆ. 22: ವಿದ್ಯಾರ್ಥಿ ಜೀವನದಲ್ಲಿ ಸಕಾರಾತ್ಮಕ ತರಬೇತಿಗಳು ಅತ್ಯಗತ್ಯವಾಗಿದೆ. ಸಾಹಿತ್ಯ ಆಸಕ್ತಿ ಹಾಗೂ ಓದುವ ಹವ್ಯಾಸ ಬೆಳೆಸಿಕೊಂಡಾಗ ಬರವಣಿಗೆಯ ಕೌಶಲ್ಯ ಕರಗತವಾಗಲು ಸಾಧ್ಯ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಇಂತಹ ಧನಾತ್ಮಕ ವಿಚಾರಗಳ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಮಾನವಿಕ ಸಂಘ ಮತ್ತು ಐಕ್ಯೂಎಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಕಲರವ 2022’ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.
ಪತ್ರಿಕೋದ್ಯಮಕ್ಕೆ ವಿಷಯ ಆಯ್ಕೆಯ ಕಟ್ಟುಪಾಡುಗಳಿಲ್ಲ. ನಕರಾತ್ಮಕ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡದೆ, ಪತ್ರಿಕೋದ್ಯಮದ ಧರ್ಮವನ್ನು ಪರಿಪಾಲಿಸಬೇಕು. ಈ ಮೂಲಕ ಧನಾತ್ಮಕ ಪತ್ರಕರ್ತರನ್ನು ರೂಪಿಸುವ ಕಾರ್ಯ ವಿದ್ಯಾರ್ಥಿ ಹಂತದಲ್ಲೇ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಹಾಗು ಐಕ್ಯೂಎಸಿ ಘಟಕದ ಸಂಯೋಜಕ ಶಿವಪ್ರಸಾದ್ ಕೆ ಎಸ್ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ವೇದಿಕೆಯಲ್ಲಿ ಮಾನವಿಕ ಸಂಘದ ಸಂಯೋಜಕ ಡಾ ಶ್ರೀಧರ್ ನಾಯಕ್ ಮತ್ತು ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ತಾರ ಕರುಣ್ ಉಪಸ್ಥಿತರಿದ್ದರು.
ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್ ಸ್ವಾಗತಿಸಿ, ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ ಅರುಣ್ ಕಿರಿಮಂಜೇಶ್ವರ ವಂದಿಸಿದರು. ವಿದ್ಯಾರ್ಥಿನಿ ಜಯಶ್ರೀ ಆರ್ಯಾಪು ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಧಾ ಪ್ರಶಸ್ತಿ ವಿವರ
ಚರ್ಚಾ ಸ್ಪರ್ಧೆ:
ವಿಕಸನ ತಂಡ ಪ್ರಥಮ, ಮಣಿಕರ್ಣಿಕ ತಂಡ ದ್ವಿತೀಯ
ನಿರೂಪಣೆ ಸ್ಫರ್ಧೆ:
ವಿಕಸನ ತಂಡದ ಶ್ರೀಜನಿ ಪ್ರಥಮ, ಶರತ್ ಕೆ ಎನ್ ದ್ವಿತೀಯ
ಮಾಕ್ ಪ್ರೆಸ್:
ವಿಕಸನ ತಂಡದ ನಮನ್ ಶೆಟ್ಟಿ, ರುಚಿತ ಹೆಗ್ಡೆ ದ್ವಿತೀಯ
ಛಾಯಾ ಚಿತ್ರ ಸ್ಪರ್ಧೆ:
ವಿಕಾಸ ತಂಡದ ಶ್ರೀಹರ್ಷ ಪ್ರಥಮ, ವಿಕಸನ ತಂಡದ ನಮನ್ ಶೆಟ್ಟಿ ದ್ವಿತೀಯ
ಲೇಖನ ಬರವಣಿಗೆ ಸ್ಫರ್ಧೆ:
ವಿಕಸನ ತಂಡದ ಯಶಸ್ವಿನಿ ಪ್ರಥಮ, ಮಣಿಕರ್ಣಿಕ ಶುಭ್ರ ಪುತ್ರಕಳ ದ್ವಿತೀಯ
ಸರ್ಪ್ರೈಸ್ ಇವೆಂಟ್:
ಪಾಂಚಜನ್ಯ ಮತ್ತು ನಯನ ತಂಡ ಪ್ರಶಸ್ತಿ ಪಡೆಯಿತು.
ವಿಕಾಸ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆಯಿತು. ವಿಕಸನ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ