ಉಜಿರೆ: ಖಗೋಳ ವಿಜ್ಞಾನ ಹಾಗೂ ಆಕಾಶಕಾಯಗಳ ಬಗೆಗಿನ ಆಸಕ್ತಿದಾಯಕ ವಿಷಯಗಳ ಕುರಿತು ಜ್ಞಾನ ಹೊಂದುವುದು ಅಗತ್ಯ ಎಂದು ಬೆಂಗಳೂರಿನ ಯು.ಐ.ಎಂ.ಇ ಯ ಸಂಸ್ಥಾಪಕ ಸತ್ಯ ಕುಮಾರ ಶರ್ಮ ಅಭಿಪ್ರಾಯಪಟ್ಟರು.
ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಭೌತಶಾಸ್ತ್ರ ವಿಭಾಗದ 'ಪಿಸಿಕಾ' ಭೌತಶಾಸ್ತ್ರ ಸಂಘ ಆಯೋಜಿಸಿದ್ದ ದ್ಯುತಿ ದೂರದರ್ಶಕ ಉದ್ಘಾಟನೆ ಹಾಗೂ ಆಕಾಶ ವೀಕ್ಷಣಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕಾಲೇಜಿನ ಸಂಪನ್ಮೂಲವಾಗಿರುವ ವಿಶೇಷ ದ್ಯುತಿ ದೂರದರ್ಶಕವನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು. ಕಾಲೇಜಿನಲ್ಲಿರುವ ದೂರದರ್ಶಕವನ್ನು ಬಳಸಿಕೊಂಡು ಆಕಾಶ ವೀಕ್ಷಣೆ, ನಕ್ಷತ್ರ ವೀಕ್ಷಣೆಯಂತಹ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವಿಜ್ಞಾನ ಹಾಗೂ ವಿಜ್ಞಾನೇತರ ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ಬಗ್ಗೆ ಅಭಿರುಚಿಯನ್ನು ಹೆಚ್ಚಿಸಬಹುದು.
ಎಸ್. ಡಿ. ಎಂ ಸ್ನಾತಕೋತ್ತರ ಕೇಂದ್ರದ ಈ ದೂರದರ್ಶಕವು ಸಂಪೂರ್ಣ ಸ್ವಯಂಚಾಲಿತವಾಗಿದ್ದು ಒಂದು ಲಕ್ಷಕ್ಕೂ ಹೆಚ್ಚು ಆಕಾಶಕಾಯಗಳ ಡೇಟಾಬೇಸ್ ಅನ್ನು ಹೊಂದಿದೆ. ಇದು ಆರು ಇಂಚಿನ ನ್ಯೂಟೇನಿಯಂ ಟೆಲಿಸ್ಕೊಪ್ ಆಗಿದ್ದು ಮೂರು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುತ್ತದೆ. ಜಿ.ಪಿ.ಸ್, ವೈ.ಪೈಗಳಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು ಲಕ್ಷಂತಾರ ಕಿ. ಮೀ ದೂರದ ಗ್ರಹ, ನಕ್ಷತ್ರಗಳನ್ನು ಸ್ಪಷ್ಟವಾಗಿ ಇದರ ಮೂಲಕ ವೀಕ್ಷಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಸ್. ಡಿ ಎಂ.ಶಿಕ್ಷಣ ಸಂಸ್ಥೆಯ ಉಪಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ದೂರದರ್ಶಕವನ್ನು ಉದ್ಘಾಟಿಸಿ ಮಾತನಾಡಿದರು. ಈ ದೂರದರ್ಶಕವು ಕಾಲೇಜಿನ ಒಂದು ಹೆಮ್ಮೆಯಾಗಿದೆ. ಈಗಿನ ಹಾಗೂ ಮುಂಬರುವ ವಿದ್ಯಾರ್ಥಿಗಳಿಗೆ ಇದು ಉಪಯೋಗವಾಗಲಿ ಎಂದು ಶುಭಹಾರೈಸಿದರು.
ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಪಿ. ವಿಶ್ವನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಕಾಶ ವೀಕ್ಷಣೆ ಶೈಕ್ಷಣಿಕ ಹವ್ಯಾಸವಾಗಬೇಕು. ಸುತ್ತ ಮುತ್ತಲಿನ ಶಾಲಾ ಮಕ್ಕಳಿಗಾಗಿಯೇ ಆಕಾಶ ವೀಕ್ಷಣೆ ಕಾರ್ಯಕ್ರಮವನ್ನು ವಿಭಾಗ ಹಮ್ಮಿಕೊಳ್ಳಬೇಕು ಎಂದು ಅಧ್ಯಕ್ಷೀಯ ನುಡಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ವಿಜ್ಞಾನ ವಿಭಾಗದ ಡೀನ್ ಪ್ರೊ. ಎಸ್. ಎನ್ ಕಾಕತ್ಕರ್, ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ, ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಭೌತಶಾಸ್ತ್ರದ ವಿದ್ಯಾರ್ಥಿನಿ ಅನುಪಮಾ ಸ್ವಾಗತಿಸಿ, ನಿರೂಪಿಸಿ, ವಿದ್ಯಾರ್ಥಿ ಕೀರ್ತನ್ ಕುಮಾರ್ ವಂದಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ