ಉಡುಪಿ: ಹೊರ ರಾಜ್ಯದ ನೋಂದಣಿ ಹೊಂದಿರುವ ವಾಹನಗಳು ಕರ್ನಾಟಕದಲ್ಲಿ 3 ತಿಂಗಳಿಗಿಂತ ಹೆಚ್ಚು ದಿನಗಳಿಂದ ರಾಜ್ಯದಲ್ಲಿದ್ದರೂ ಕರ್ನಾಟಕದ ತೆರಿಗೆ ಪಾವತಿಸದೇ ಓಡಾಡುತ್ತಿರುವುದು ಕಂಡು ಬಂದಿದೆ. ಈ ರೀತಿ ಹೊರ ರಾಜ್ಯದ ವಾಹನಗಳು ರಾಜ್ಯದ ತೆರಿಗೆ ಪಾವತಿಸದೇ ಜಿಲ್ಲೆಯಲ್ಲಿ ಓಡಾಡುತ್ತಿರುವುದು ಕಂಡು ಬಂದರೆ ತಪಾಸಣೆ ವೇಳೆ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಆದ್ದರಿಂದ ಇಂತಹ ವಾಹನಗಳ ಮಾಲೀಕರು ಕೂಡಲೇ ಕರ್ನಾಟಕದ ತೆರಿಗೆಯನ್ನು ಕಟ್ಟುವ ಮೂಲಕ ದಂಡದಿಂದ ಅಥವಾ ಕಾನೂನು ಕ್ರಮದಿಂದ ಪಾರಾಗಬಹುದು ಎಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.
ಹೊರ ರಾಜ್ಯದ ವಾಹನಗಳಿಗೆ BH Series (ಬಿಎಚ್ ಸರಣಿ) ವಾಹನವನ್ನಾಗಿ ಪರಿವರ್ತಿಸುವ ಏಕರೂಪದ ತೆರಿಗೆಯನ್ನು ಪಾವತಿಸಲು ಆನ್ಲೈನ್ನ ಸೇವಾ ಸಿಂಧು ಪೋರ್ಟಲ್ನಲ್ಲಿ ಅವಕಾಶವಿದೆ. ಆದ್ದರಿಂದ ಅಂತಹ ಮಾಲೀಕರು ಈ ಸೌಲಭ್ಯವನ್ನು ಬಳಸಿಕೊಂಡು ತಮ್ಮ ವಾಹನದ ನೋಂದಣಿ ಸಂಖ್ಯೆಯನ್ನು ಬಿಎಚ್ ಸರಣಿಗೆ ಬದಲಾಯಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸರಕಾರಿ/ ಅರೆ ಸರಕಾರಿ / ರಾಜ್ಯ ಸ್ವಾಮ್ಯತೆಯಿರುವ ಸಂಸ್ಥೆಗಳ ವಾಹನದ ಮಾಲೀಕರ ವಿಳಾಸ ಪುರಾವೆ, ಸಂಬಂಧಿತ ಉದ್ಯೋಗ ಖಾತರಿ ಪತ್ರದ ಪ್ರತಿ ಹಾಗೂ ಸಂಬಂಧಪಟ್ಟ ಇಲಾಖೆಯ ಸೇವಾ ಗುರುತಿನ ಚೀಟಿ ಹಾಗೂ ತಮ್ಮ ಮೇಲಧಿಕಾರಿಗಳ ಪ್ರಮಾಣ ಪತ್ರ, ರಹವಾಸಿ ಪ್ರಮಾಣ ಪತ್ರ (ಆಧಾರ ಸಹಿತ) ಹಾಜರುಪಡಿಸಲು ತಿಳಿಸಬಹುದಾಗಿದೆ.
ಹೊರ ರಾಜ್ಯದ ವಾಹನ ಮಾಲೀಕರು ಈ ರಾಜ್ಯಕ್ಕೆ ವಲಸೆ ಬಂದ ಕೂಡಲೇ ಸ್ವ ಇಚ್ಛೆಯಿಂದ ಕೂಡ ಕರ್ನಾಟಕ ರಾಜ್ಯದ ತೆರಿಗೆಯನ್ನು ಪಾವತಿಸಬಹುದಾಗಿರುತ್ತದೆ. ಈ ಮಾಧ್ಯಮ ಪ್ರಕಟಣೆಯೇ ಅಂತಿಮ ನೋಟೀಸು ಎಂದು ಪರಿಗಣಿಸಿ ತೆರಿಗೆ ಪಾವತಿಸುವ ಮೂಲಕ ವಾಹನದ ಮುಟ್ಟುಗೋಲು, ಮತ್ತು ದಂಡ ಪಾವತಿಯಿಂದ ತಪ್ಪಿಸಿಕೊಳ್ಳಬೇಕಾಗಿ ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ ಗಂಗಾಧರ ಅವರ ಪ್ರಕಟಣೆ ಸೂಚಿಸಿದೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ