ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಗ್ರಾಮದ ಕಜೆಕೋಡಿ ಶ್ರೀ ಉಮಾಮಹೇಶ್ವರ ಸಪರಿವಾರ ದೇವಸ್ಥಾನವು ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ದೇವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕಕ್ಕೆ ಅಣಿಯಾಗಿದೆ.
ವೇ.ಮೂ.ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ಫೆ.13 ಮತ್ತು 14 ರಂದು ದೇವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಕ್ಷೇತ್ರದ ಇತಿಹಾಸ:
ಪುರಾತನ ಕಾಲದಲ್ಲಿ ಲಿಂಗಾಯಿತರಿಂದ ಆರಾಧಿಸಲ್ಪಡುತ್ತಿದ್ದ ದೇವಸ್ಥಾನವು ಕಾಲಾನಂತರದಲ್ಲಿ ಬ್ರಾಹ್ಮಣರಿಗೆ ಕ್ರಯ,ವಿಕ್ರಯದಲ್ಲಿ ನೀಡಲ್ಪಟ್ಟ ಶಿವ ಸಾನಿಧ್ಯವೆಂದು ಎಂದು ಇತಿಹಾಸವಿದೆ. ಪಂಚಾಯತನ ಪದ್ಧತಿಯಂತೆ ಈ ಕ್ಷೇತ್ರ ಪೂಜಿಸಲ್ಪಡುತ್ತಿತ್ತು ಎಂಬುದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದ್ದು, ಕಾಲ ಕ್ರಮೇಣ ಈ ಕ್ಷೇತ್ರ ಭೂಗರ್ಭ ಸೇರಿಕೊಂಡಿತ್ತು.
ಇಲ್ಲಿ ಶಿವಲಿಂಗ ಸಹಿತ ಪಾಣಿಪೀಠದ ಸುತ್ತ ಶ್ರೀ ಗಣಪತಿ, ಭದ್ರಕಾಳಿ, ವೀರಭದ್ರ ಇತ್ಯಾದಿ ಸಹದೇವರುಗಳು ಇರಲಿದೆ. ಇವೆಲ್ಲವು ಒಂದೇ ಆಲಯದೊಳಗೆ ಇರುವುದು ವಿಶೇಷವಾಗಿದೆ.
ಪ್ರಸ್ತುತ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಯು.ಎಸ್.ಚಂದ್ರಶೇಖರ್ ಭಟ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಎಸ್.ರಾಮಕೃಷ್ಣ ಸನಂಗುಳಿ ಅವರ ನೇತೃತ್ವದಲ್ಲಿ ವಿವಿಧ ಉಪಸಮಿತಿಗಳು, ಭಕ್ತರ ಹಾಗೂ ಕಾರ್ಯಕರ್ತರ ತಂಡಗಳು ಕಾರ್ಯೋನ್ಮುಖವಾಗಿದೆ.
ಫೆ.13 ರಂದು ಬೆಳಗ್ಗೆ ಕಲಾಬಾಗಿಲಿನಿಂದ ಹೊರೆಕಾಣಿಕೆ ಮೆರವಣಿಗೆ ಶ್ರೀಕ್ಷೇತ್ರಕ್ಕೆ ಅಗಮಿಸಲಿದೆ. ಬಳಿಕ ವಿವಿಧ ವೈವಿಕ ವಿಧಾನಗಳು ಜರಗಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಸ್ಥಳೀಯ ಮಕ್ಕಳಿಂದ ವಿವಿಧ ವಿನೋದಾವಳಿಗಳು, ಶ್ರೀ ಉಮಾಮಹೇಶ್ವರ ಗೆಳೆಯರ ಬಳಗದ ಯುವಕರಿಂದ ಮನೋರಂಜನ ಕಾರ್ಯಕ್ರಮ ನಡೆಯಲಿದೆ.
ಫೆ.14 ರಂದು 8.57 ರ ಮೀನ ಲಗ್ನದಲ್ಲಿ ಶ್ರೀ ದೇವರ ಪ್ರತಿಷ್ಠೆ, 108 ಕಲಶಾರಾಧನೆ, ಬಳಿಕ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ನಂತರ ಶಾಸಕ ರಾಜೇಶ್ ನಾಕ್ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಚಿವರುಗಳಾದ ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ರಮಾನಾಥ ರೈ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಸಂಜೆ ವಿವಿಧ ಭಜನಾ ತಂಡದಿಂದ ಭಜನೆ, ರಾತ್ರಿ ಸುಡುಮದ್ದು ಪ್ರದರ್ಶನ, ಕಾರ್ಕಳ ಕಂಬ್ಲಗುಡ್ಡೆ ಓಂ ಶ್ರೀ ನಾಗಶಕ್ತಿ ಯಕ್ಷಗಾನ ಮಂಡಳಿಯವರಿಂದ ಅಜ್ಜನ ಪಜ್ಜೆ ಯಕ್ಷಗಾನ ಕಾರ್ಯಕ್ರಮ ಜರಗಲಿದೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ