ಹಸಿರು ಇಲ್ಲದೆ ಗಿಡವು
ಒಣಗಿತೆಂದೆನಬೇಡ
ಕಾಲವನು ಕಾಯುವಲಿ
ವ್ಯವಧಾನ ಎಮಗಿರಲು
ಒಣಗಿರುವ ಕೊಂಬೆಯೂ
ಚಿಗುರಿ ಮೇಲ್ಬರಬಹುದು.
ಕಾಯದಲಿ ಕಸುವಿಲ್ಲ
ಎನುವಂಥ ಕಾಲಕ್ಕೆ
ಒಂದಿನಿತು ಕಾಯುವಲಿ
ಒಲವನ್ನು ತೋರಿದರೆ
ಕಾಲವೇ ಬಲವನ್ನು
ಕೆಲಕಾಲ ಕೊಡಬಹುದು.
ಕಾಂಡದೊಳಗಿರುವಂಥ
ಜೀವ ಕಂಡವರಾರು
ಖಂಡಿಸದೆ ಉಳಿಸಿರಲು
ಬದುಕು ಕಂಡಿದುದಕ್ಕೆ
ಚಿಗುರಿರುವ ಎಲೆ ಸಾಕ್ಷಿ
ಒಳಗಿರುವ ಚೇತನಕೆ
ನಮ್ಮಲ್ಲು ಒಮ್ಮೊಮ್ಮೆ
ಚೈತನ್ಯ ಇಲ್ಲದೆಯೆ
ಕೊರಡಿನಂತಿರುವಾಗ
ಯಾವುದೋ ಗಳಿಗೆಯಲಿ
ಮೂಡುವುದು ಚಿಗುರಾಸೆ
ಕೊರಡು ಕೊನರುವ ರೀತಿ
********
ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ