ಸುನೀತೆಯರಸ ಕಣವಿ ಕಣಕಣದಿ ಲಹರಿ
ಹರಿಸಿ ಕಾವ್ಯದ ಧಾರೆ ಭಾವದಂಗಳದಿ
ಶತಮಾನ ಮುಕ್ಕಾಲು ಜಾರಿ ಮತ್ತಿಪ್ಪತ್ತು
ಗತ ಗಾತ್ರ ಮುಪ್ಪಡರಿ ತಂದಿತಾಪತ್ತು
ಕಾಮ ಪ್ರಲೋಭನೆ ಸಹಿತ ಅಹಿತ ಅಸಹನೆ
ನವ್ಯದಲು ಬದಲಿರುವ ಲೇಖನಿಯ ಚಲನೆ
ನುಡಿಸಿರಿಯ ಕಿರೀಟವನು ಧರಿಸಿದ್ದರಂದು
ನಮ್ಮೂರ ನುಡಿತೇರನೆಳೆದ ದಿನದಂದು.
ಗಾಯನಕೆ ಅತಿಯೋಗ್ಯ ಕಾವ್ಯಗಳ ಮಹಿಮ
ಲೇಖ ಪ್ರಬಂಧ ದಲು ಆಗಿ ನಿಸ್ಸೀಮ
ಪ್ರಸಾರ ಭಾರತಿಯಲ್ಲಿ ಸ್ವರ ಬಾನಿನಗಲ
ಪಸರಿಸಿದ ಸಿಹಿ ನುಡಿಯ ಹಂಚಿ ಜಗದಗಲ.
ವಿಶಿಷ್ಟ ಟೊಪ್ಪಿಗೆಯಿರದೆ ಪದ ಚಲನೆಯಿರದು
ಮಾತಿನಲು ಬೆಳ್ಳಿಯದು ಮಿನಗು ಬರದಿರದು
ಬರೆದ ಸಾಹಿತ್ಯಗಳ ಪಟ್ಟಿಯೇತಕೆ ಈಗ
ಸೊರಗದಿಹ ಕಾವ್ಯ ಪ್ರಪಂಚದಲ್ಲಿರೆ ಸರಾಗ
ಪಡೆದ ಪ್ರಶಸ್ತಿ ಬೆಲೆ ಕಟ್ಟೆ ತಿಣುಕಿದರು ಸೋಲು
ಬರಹಗಳು ಕವನಗಳು ಶಿಶುಗೀತೆ ಶಿಶುವಾಗಿ
ನವಿಲೂರು ಮನೆಯಿಂದ ಮಧುರ ಚೆನ್ನನಜೊತೆಗೆ
ಮಣ್ಣಿನ ಮೆರವಣಿಗೆ ಎರಡು ದಡದೆಡೆಯಲ್ಲು ಹೊತ್ತು
ಕನ್ನಡದ ಕಾಲು ಶತಮಾನ ಜಾರಿದ ಮೇಲೆ
ಆಕಾಶ ಬುಟ್ಟಿಯನು ಹೆಣೆದವನೇ
ನೆಲಮುಗಿಲ ಜೀವಧ್ವನಿ ಕಾರ್ತಿಕದ ಮೋಡದಲು
ಹೊಂಬೆಳಕು ಮಧುಚಂದ್ರ ದಾರಿದೀಪ
ಏನಿಲ್ಲ ಏನುಂಟು ಎಲ್ಲೆಲ್ಲಿಯೂ ನಂಟು
ಉತ್ಸವದ ಮೂರ್ತಿ ಗಂಗಾ ಗರಿಯ ಗತ್ತು
ಅಪರೂಪ ವ್ಯಕ್ತಿತ್ವ ಅತಿರೂಪ ಸಾಹಿತ್ಯ
ನೆಪಕಾಗಿ ಜಾಲತಾಣದ ಕಾವ್ಯದಂತೇನು ಅಲ್ಲ
-ಡಾ ಸುರೇಶ ನೆಗಳಗುಳಿ, ಮಂಗಳೂರು
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ