ಯುವ ರೆಡ್‌ ಕ್ರಾಸ್‌ಗೆ ವಿಶ್ವವಿದ್ಯಾನಿಲಯದಿಂದ ಮತ್ತಷ್ಟು ಪ್ರೋತ್ಸಾಹ; ವಿಶೇಷ ಪ್ರಶಸ್ತಿ ನೀಡಲು ನಿರ್ಧಾರ

Upayuktha
0

 

ಮಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಯುವ ರೆಡ್‌ ಕ್ರಾಸ್‌ ಕಾರ್ಯಕ್ರಮ ಅಧಿಕಾರಿಗಳು ಮತ್ತು ಸ್ವಯಂಸೇವಕರಿಗೆ ವಿಶ್ವವಿದ್ಯಾಲಯದಿಂದ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಘೋಷಿಸಿದ್ದಾರೆ.


ಮಂಗಳೂರು ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿ ಮಂಗಳವಾರ ನಡೆದ ಯುವ ರೆಡ್ ಕ್ರಾಸ್ ನ ಸಲಹಾ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ತಂತ್ರಾಂಶದ ಮೂಲಕ ಯುವ ರೆಡ್ ಕ್ರಾಸ್ ನಲ್ಲಿ ಉತ್ತಮ ಕಾರ್ಯ ನಿರ್ವಹಿಸುವ ಕಾಲೇಜುಗಳ ಕಾರ್ಯಕ್ರಮ ಅಧಿಕಾರಿಗಳು ಮತ್ತು ಸ್ವಯಂಸೇವಕರನ್ನು ಗುರುತಿಸಲಾಗುವುದು. ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಯುವ ರೆಡ್ ಕ್ರಾಸ್ ನಲ್ಲಿ ಅತ್ಯುತ್ತಮ ಸಾಧನೆ ತೋರಿದ ಒಂದು ಕಾಲೇಜಿಗೆ ಪಾರಿತೋಷಕ ನೀಡಿ ಗೌರವಿಸಲಾಗುವುದು. ಇಬ್ಬರು ಕಾರ್ಯಕ್ರಮ ಅಧಿಕಾರಿಗಳಿಗೆ 'ಉತ್ತಮ ಕಾರ್ಯಕ್ರಮ ಅಧಿಕಾರಿ' ಪ್ರಶಸ್ತಿ ನೀಡಲಾಗುವುದು ಹಾಗೂ ಸಕ್ರಿಯವಾಗಿ ತೊಡಗಿಸಿಕೊಂಡ ಸ್ವಯಂಸೇವಕರಿಗೆ ತಲಾ ರೂ.5000ದಂತೆ ನಗದು ಬಹುಮಾನ ಮತ್ತು ಪಾರಿತೋಷಕ ನೀಡಲಾಗುವುದು ಎಂದರು.


ಸಭೆಯಲ್ಲಿ ಯುವ ರೆಡ್ ಕ್ರಾಸ್ ಗೆ ಪ್ರತ್ಯೇಕ ಪಠ್ಯವನ್ನು ರಚಿಸಲು ಸಮಿತಿ ರಚಿಸಲು ನಿರ್ಣಯಿಸಲಾಯಿತು. ಮುಂದಿನ ದಿನಗಳಲ್ಲಿ ಕಾಲೇಜುಗಳಲ್ಲಿ ಯುವ ರೆಡ್ ಕ್ರಾಸ್ ಘಟಕ ಹೆಚ್ಚು ಕಾರ್ಯಶೀಲವಾಗುವಂತೆ ಮಾಡಲು ವಿಶ್ವವಿದ್ಯಾನಿಲಯ ದಿಟ್ಟ ಹೆಜ್ಜೆಗಳನ್ನು ಇಡಲಿದೆ ಎಂದು ಕುಲಸಚಿವ ಡಾ. ಕಿಶೋರ್‌ ಕುಮಾರ್‌ ಸಿ ಕೆ ತಿಳಿಸಿದರು. ವಿವಿಯ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ.ಗಣಪತಿ ಗೌಡ, 2021- 22ರಲ್ಲಿ ಕೈಗೊಂಡ ಕಾರ್ಯಕ್ರಮಗಳ ವರದಿ ಮಂಡಿಸಿದರು. 2022 - 23ನೇ ಸಾಲಿನ ಆಯವ್ಯಯಕ್ಕೆ ಮಂಜೂರಾತಿ ನೀಡಲಾಯಿತು. ಇದೆ ಸಂದರ್ಭದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ವಿಶ್ವವಿದ್ಯಾನಿಲಯವನ್ನು ಸಭೆ ಅಭಿನಂದಿಸಿತು. ನೋಡಲ್ ಅಧಿಕಾರಿಗಳು ಸ್ವಾಗತ ಕೋರಿ ವಂದನೆ ಸಲ್ಲಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
To Top