ಮಂಗಳೂರು: ಬದುಕಿನಲ್ಲಿ ತಪ್ಪುಗಳು ಸಹಜ. ತಪ್ಪುಗಳಾಗದಿದ್ದರೆ ಹೊಸತನ್ನು ಕಲಿಯಲು ಹಾಗೂ ಅನುಭವ ಗಳಿಸಲು ಅಸಾಧ್ಯ, ಎಂದು ಚಾರ್ಟೆಡ್ ಅಕೌಂಟೆಂಟ್ ಸಿ.ಎ ಅನ್ವೇಶ್ ಶೆಟ್ಟಿ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ರವೀಂದ್ರ ಕಲಾಭವನದಲ್ಲಿ ಗುರುವಾರ ಆಯೋಜಿಸಿದ್ದ 'ಪರಿಚಯ್ ದಿವಸ್ - 2022' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಉದಾಹರಿಸಿ ತಪ್ಪುಗಳನ್ನು ತಿದ್ದಿಕೊಂಡು ಬದುಕು ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಉದಯ್ ಕುಮಾರ್ ಎಂ ಎ ಮಾತನಾಡಿ, ತಪ್ಪುಗಳು ತಪ್ಪೇ ಹೊರತು ಅಪರಾಧವಲ್ಲ. ತಪ್ಪಿನಿಂದ ಪಾಠ ಕಲಿತು ಸಮಾಜಕ್ಕೆ ಮಾದರಿಯಾಗುವುದು ನಮ್ಮ ಗುರಿಯಾಗಬೇಕು, ಎಂದರು. ವಾಣಿಜ್ಯ ವಿಭಾಗದ ಡಾ. ಅಬೂಬಕ್ಕರ್ ಸಿದ್ಧಿಕ್ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡಬೇಕೇ ಹೊರತು ಬರೀ ಪ್ರಮಾಣಪತ್ರಗಳಲ್ಲ. ವಿಫಲತೆಗಳೇ ಸಫಲತೆಗೆ ಸಾಂದಿ ಹಾಡುತ್ತವೆ ಎಂದರು.
ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಡಾ. ಯತೀಶ್ ಕುಮಾರ್ ಮಾತನಾಡಿ, ಬರೀ ಅದೃಷ್ಟವನ್ನು ನಂಬಿ ಕೂರಬೇಡಿ, ಯಶಸ್ಸಿಗೆ ಸ್ವಪ್ರಯತ್ನವೂ ಬೇಕು ಎಂದರು. ಪ್ರಾಂಶುಪಾಲ (ಉಸ್ತುವಾರಿ) ಡಾ. ಹರೀಶ್ ಕುಮಾರ್ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಅಂತಿಮ ವಿಭಾಗದ ವಿದ್ಯಾರ್ಥಿನಿಯರಾದ ಅರ್ಚನಾ.ಎಸ್ ಸ್ವಾಗತಿಸಿದರೆ, ಪ್ರಿಯಾ ಡಿʼಸೋಜಾ ವಂದಿಸಿದರು. ಕಾವ್ಯರಾಮ್ ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ