ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಜಂಟಿ ಸಹಭಾಗಿತ್ವದಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಮೂರು ಕೃತಿಗಳ 'ಮನನ' ಕಾರ್ಯಕ್ರಮ ಕುವೆಂಪು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ. ನಂದೀಶ್ ಹಂಚೆ, ರಂಜನೆ ಮತ್ತು ಮಾಹಿತಿಗೆ ಇಂದು ಹಲವು ಸಾಧನಗಳು ನಮ್ಮ ಮುಂದಿವೆ. ಆದರೆ ಕೃತಿಗೆ ಸಂವಾದಿಯಾದುದು ಯಾವುದೂ ಇಲ್ಲ. ಕೃತಿಯೊಂದು ಉಂಟು ಮಾಡುವ ಪರಿಣಾಮ ಮಹತ್ತರವಾದುದು. ಕೃತಿಗಳ ಓದಿನ ಕಡೆಗೆ ವಿದ್ಯಾರ್ಥಿಗಳು ಮುಖ ಮಾಡಬೇಕಾಗಿದೆ ಎಂದರು. ಶಿಕ್ಷಣ ಬರೀ ಉದ್ಯೋಗ ಸೃಷ್ಟಿಸುವ ಯಾಂತ್ರಿಕ ಕ್ಷೇತ್ರವಾಗದೆ, ಮನುಷ್ಯನ ಮನಸ್ಸು, ಶೀಲ, ಸಭ್ಯತೆ, ಜಾಗೃತವಾಗುವಂತೆ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಸಾಹಿತ್ಯದ ಮರು ಓದು, ಮನನದಿಂದಾಗಿ ಸಮಾಜದಲ್ಲಿರುವ ಯೋಚನಾ ಪದ್ದತಿಯನ್ನು ಬದಲಿಸಬಹುದು. ಕಾದಂಬರಿಯೆಂದರೆ ಅದು ಅಕ್ಷರದ ಗುಚ್ಛವಲ್ಲ. ಜೀವನಾನುಭವದ ಕಲಾತ್ಮಕ ಅಭಿವ್ಯಕ್ತಿ. ಆದರೆ ಜೀವನಾನುಭವಗಳು ಬದಲಾಗುತ್ತಿದ್ದಂತೆ ಕೃತಿ ಉಂಟುಮಾಡುವ ಪರಿಣಾಮಗಳು ವಿಭಿನ್ನವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮೂರು ಕೃತಿಗಳಾದ 'ಸ್ವಪ್ನ ಸಾರಸ್ವತ' 'ಅರಮನೆ' ಮತ್ತು 'ತೇರು'ಗಳ ಮನನ ಕಾರ್ಯಕ್ರಮ ನಡೆಯಿತು.
ಗೋಪಾಲ ಕೃಷ್ಣ ಪೈ ವಿರಚಿತ ಕಾದಂಬರಿ 'ಸ್ವಪ್ನ ಸಾರಸ್ವತ'ವನ್ನು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ್ ಕುಂಬ್ಳೆ ವಿಶ್ಲೇಷಿಸಿ, ವಲಸೆಯ ಹಿನ್ನೆಲೆಯುಳ್ಳ ಈ ಕಾದಂಬರಿ ಚಾರಿತ್ರಿಕ ಎಳೆಯೊಂದನ್ನು ಕಥಾವಸ್ತುವಾಗಿ ಇತಿಹಾಸ ಮತ್ತು ಕಥನವನ್ನು ಕಟ್ಟಿಕೊಡುತ್ತದೆ ಎಂದರು. 'ಸ್ವಪ್ನ ಸಾರಸ್ವತ'ವು, ಪೋರ್ಚುಗೀಸರ ಮತಾಂಧ ಆಕ್ರಮಣದಿಂದಾಗಿ ಸಾರಸ್ವತ ಸಮುದಾಯ ಮತ್ತು ಮಾನವೀಯತೆಯ ಮೇಲಾದ ದೌರ್ಜನ್ಯ, ಶೋಷಣೆಗಳನ್ನು ಎತ್ತಿ ಹಿಡಿಯುತ್ತದೆ ಎಂದರು.
ಕುಂ. ವೀರಭದ್ರಪ್ಪ ರಚಿಸಿದ 'ಅರಮನೆ' ಕಾದಂಬರಿಯನ್ನು ವಿಶ್ಲೇಷಿಸಿದ ಡಾ. ದಿನಕರ್ ಎಸ್. ಪಚ್ಚನಾಡಿ, ಕಾದಂಬರಿಯು ಚಾರಿತ್ರಿಕ, ಧಾರ್ಮಿಕ ಮತ್ತು ಸಾಮಾಜಿಕ ಆಯಾಮಗಳನ್ನೊಳಗೊಂಡಿದೆ. ವರ್ತಮಾನದ ನೆಲೆಗಟ್ಟಿನಲ್ಲಿ ಭವಿಷ್ಯವನ್ನು ರೂಪಿಸಬಹುದು ಎಂದು 'ಅರಮನೆ' ತಿಳಿಸುತ್ತದೆ. ಬಳ್ಳಾರಿಯ ಕುಗ್ರಾಮದ ಸುತ್ತಲು ನಡೆಯುವ ಈ ಕಥಾವಸ್ತು ಪ್ರಸ್ತುತ ನಡೆಯುವ ರಾಜಕೀಯ ವಿದ್ಯಮಾನಗಳ ಚೌಕಟ್ಟಿನಲ್ಲೂ ವಿಶ್ಲೇಷಿಸಬಹುದು ಎಂದರು.
'ತೇರು' ಕೃತಿಯನ್ನು ಕತೆಗಾರ್ತಿ ಸ್ನೇಹಲತಾ ದಿವಾಕರ್ ವಿಶ್ಲೇಷಿಸಿದರು. 'ತೇರು' ಸಾಮಾಜಿಕ ಸ್ಥಿತಂತರಗಳನ್ನು ಅವಲೋಕಿಸುತ್ತದೆ. ಕಾದಂಬರಿಯಲ್ಲಿ ಬರುವ ತೇರಿನ ವರ್ಣನೆಯು ಸಾಮಾಜಿಕ ವ್ಯವಸ್ಥೆಯನ್ನು ಚಿತ್ರಿಸುತ್ತದೆ. ಕಾದಂಬರಿಯಲ್ಲಿರುವ 'ಸಾವಜ್ಜ' ಭೂತ ವರ್ತಮಾನದ ಕೊಂಡಿಯಾಗಿ, ಸಾಮುದಾಯಿಕ ಮತ್ತು ವ್ಯಕ್ತಿ ಪ್ರಜ್ಞೆಗೆ ಸಾಕ್ಷಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಟಿ. ಎ. ಎನ್ ಖಂಡಿಗೆ ಉಪಸ್ಥಿತರಿದ್ದರು. ಡಾ ಯೋಗಿಶ್ ಕೈರೋಡಿ ಸ್ವಾಗತಿಸಿದರು. ಪತ್ರಿಕೋದ್ಯಮ ವಿದ್ಯಾರ್ಥಿನಿ ಆಯನ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ