ಉಡುಪಿ ಕಾಲೇಜಿನ ಹಿಜಬ್ ಸುದ್ದಿ ಪಾಕಿಸ್ತಾನ, ಅಲ್ಜಜಜೀರಾ ಟೀವಿಗಳಲ್ಲಿ ಎಲ್ಲಕ್ಕಿಂತ ಮೊದಲು ಬರಬೇಕಾದರೆ ಇದರ ಹಿಂದೆ ಬಹು ದೊಡ್ಡ ಷಡ್ಯಂತ್ರ ಇದೆ, ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟದಾಗಿ ತೋರಿಸುವ, ಭಾರತದಲ್ಲಿ ಮುಸ್ಲಿಮರು ಸುರಕ್ಷಿತರಲ್ಲ ಎಂಬ ಭಾವನೆ ಮೂಡಿಸಲು ಈ ವಿವಾದವನ್ನು ಮತೀಯವಾದಿ ಸಂಘಟನೆಗಳು ವಿದ್ಯಾರ್ಥಿನಿಯರಿಗೆ ತರಬೇತಿ ಕೊಟ್ಟು ಮಾಡಿಸಿದೆ. ಇದರ ಹಿಂದೆ ಉಗ್ರ ಸಂಘಟನೆಗಳ ಕೈವಾಡ ಇದೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.
ಹಿಜಬ್ ವಿವಾದ ಆರಂಭವಾಗಿದ್ದು ಉಡುಪಿ ಹೆಮ್ಮಕ್ಕಳ ಸರಕಾರಿ ಪಿಯು ಕಾಲೇಜಿನಲ್ಲಿ. ಈ ವಿವಾದ ಈಗ ಅಂತಾರಾಷ್ಟ್ರೀಯ ಮಟ್ಟ ದಲ್ಲೂ ಚರ್ಚೆಯಾಗುತ್ತಿದೆ. ಈ ಪ್ರಕರಣವನ್ನು ಆರಂಭದಿಂದಲೂ ಈ ವರೆಗೆ ನಿಭಾಯಿಸುತ್ತಿರುವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾಗಿರುವ ಉಡುಪಿ ಶಾಸಕ ಕೆ. ರಘುಪತಿ ಭಟ್ ವಿವಾದದ ಕುರಿತು ಮಾಧ್ಯಮದ ಜತೆ ಮಾತನಾಡಿದ್ದಾರೆ.
ಸಂದರ್ಶನ: ಜಿತೇಂದ್ರ ಕುಂದೇಶ್ವರ ಉಡುಪಿ
ಸಾಂಸ್ಕೃತಿಕ ನಗರಿಯಲ್ಲಿ ಹಿಜಬ್- ಕೇಸರಿ ಶಾಲು ವಿವಾದ ಏಕೆ ವೈರಲ್ ಆಯಿತು?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆಗಳಾದರೂ ಮೂಲ್ಕಿ ಗಡಿ ದಾಟುತ್ತಿರಲಿಲ್ಲ. ಶಾಂತಿಯಿಂದ ಬಾಳುತ್ತಿದ್ದೆವು. ಮತೀಯ ಸಂಘಟನೆ ಎಸ್ಡಿಪಿಐ, ರಾಜಕೀಯ ಲಾಭಗಳಿಸಬೇಕು, ಕಾಂಗ್ರೆಸಿಗೆ ಸಿಗುವ ಮುಸ್ಲಿಂ ಮತಗಳನ್ನು ತಾವು ಗಳಿಸಬೇಕು ಎಂದು ಯೋಚನೆ ಮಾಡಿ ಷಡ್ಯಂತ್ರ ಮಾಡಿದರು. ಇದಕ್ಕಾಗಿ ಎಸ್ಡಿಪಿಐ ಪಕ್ಷದವರು ಮಕ್ಕಳನ್ನು ಗುಪ್ತ ಸ್ಥಳದಲ್ಲಿ ತರಬೇತಿ ಮಾಡಿದರು. ತಮ್ಮ ಮತಗಳು ಎಸ್ಡಿಪಿಐ ಕೊಳ್ಳೆ ಹೊಡೆಯುವುದು ಗೊತ್ತಾಗಿ ಇದನ್ನು ತಡೆಯಲು ಕಾಂಗ್ರೆಸ್ ಬಹಳ ಪ್ರಯತ್ನ ಮಾಡಿತು. ಹೇಳಿಕೆ ಕೊಡದೇ ಇರಲು ಕಾಂಗ್ರೆಸ್ ನಿರ್ದೇಶನ ಕೂಡಾ ನೀಡಿತ್ತು.
ಎಸ್ಡಿಪಿಐ ಪೂರ್ಣ ಯಶಸ್ವಿಯಾದ ಬಳಿಕ ಅನಿವಾರ್ಯವಾಗಿ ಮುಸ್ಲಿಂ ಮತಗಳು ಕೈ ತಪ್ಪಿ ಹೋದರೆ ಎಂಬ ಭೀತಿಯಿಂದ ಈಗ ಸ್ಪರ್ಧೆಗೆ ಬಿದ್ದವರಂತೆ ಹೇಳಿಕೆ ನೀಡುತ್ತಿದ್ದಾರೆ.
ಪ್ರಕರಣ ನಿಭಾಯಿಸುವಲ್ಲಿ ಸರಕಾರ, ನೀವು ಸೋತಿರೇ?
ನಾವು ಸಂಪೂರ್ಣ ಪ್ರಯತ್ನ ಮಾಡಿದ್ದೇನೆ. ಒಂದು ಹಂತದಲ್ಲಿ ಯಶಸ್ವಿಯಾಗಿದ್ದೆವು ಕೂಡಾ. ಉಡುಪಿ ಕಾಲೇಜಿನಲ್ಲಿ 6 ಮಕ್ಕಳು ಬಿಟ್ಟರೆ, 75 ಮುಸ್ಲಿಂ ಹೆಣ್ಣುಮಕ್ಕಳು ನಿನ್ನೆವರೆಗೂ ಹಿಜಬ್ ಹಾಕದೆ ಬಂದಿದ್ದಾರೆ, ಉಡುಪಿಯ 12 ಸರಕಾರಿ ಪಿಯು ಕಾಲೇಜುಗಳಿಗೆ ನಾನೇ ಅಧ್ಯಕ್ಷ. ಅಲ್ಲಿ ಹಿಜಬ್ ತೆಗೆದಿಟ್ಟೇ ಸಮವಸ್ತ್ರ ಹಾಕುತ್ತಿದ್ದಾರೆ.
ಉಡುಪಿಯ ಕಾಲೇಜುಗಳಲ್ಲಿ ಹಿಜಬ್ಗೆ ಪ್ರತಿಯಾಗಿ ಕೇಸರಿ ಶಾಲು ಹಾಕಲು ಹೋದರು, ಎರಡಕ್ಕೂ ನಾವು ಅವಕಾಶ ನೀಡಲೇ ಇಲ್ಲ. ಸಮವಸ್ತ್ರ ಕಡ್ಡಾಯದ ಕುರಿತು ಸರಕಾರ ಆದೇಶ ಬಂದ ಮೇಲೆ, ಕುಂದಾಪುರ ಸರಕಾರಿ ಕಾಲೇಜಿನಲ್ಲಿ 26 ಹೆಣ್ಮಕ್ಕಳು ಮೊದಲ ಬಾರಿಗೆ ಹಿಜಾಬ್ ಹಾಕಿಕೊಂಡರು. ಹಿಜಾಬ್ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇದರಿಂದಾಗಿ ಅದೇ ದಿನ ಅಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದರು.
ಹಿಜಾಬ್ ಇದ್ದ ಕಡೆಯೂ ಅದನ್ನು ತೆಗೆಯಬೇಕು ಎಂಬ ಪ್ರತಿಭಟನೆ ಆರಂಭವಾಯಿತು. ಸರಕಾರಿ ಆದೇಶ ಬಂದ ಮೇಲೆ ಕಾಲೇಜಿಗೆ ಹೋಗಿ ವಿನಂತಿ ಮಾಡಿದ್ದೇನೆ. ಕೋರ್ಟಲ್ಲಿ ತೀರ್ಪು ಬರುವವರೆಗೆ ಕಾಯಿರಿ ಎಂದು ಮನವಿ ಮಾಡಿದ್ದೇವೆ. ಸರಕಾರ ಆದೇಶ ಬಂದ ಬಳಿಕ ಎಂಜಿಎಂ ಕಾಲೇಜಿನಲ್ಲಿ ಹಿಜಾಬ್ ವಿರೋಧಿಸಿ "ಕೇಸರಿ ಶಾಲು" ಪ್ರತಿಭಟನೆ ಆರಂಭವಾಯಿತು.
ಹಿಜಬ್ ಇಲ್ಲದ ಮುಸ್ಲಿಂ ವಿದ್ಯಾರ್ಥಿನಿಯರ ಫೋಟೊ ಇತ್ಯಾದಿ ದಾಖಲೆಗಳನ್ನು ಈಗ ಬೆನ್ನು ಬೆನ್ನಿಗೆ ಬಿಡುಗಡೆ ಮಾಡುತ್ತಿದ್ದೀರಿ, ಮೊದಲೇ ಮಾಡಿಲ್ಲ ಏಕೆ?
ಕಾಲೇಜಿನ ವಿದ್ಯಾರ್ಥಿನಿಯರ ಭಾವಚಿತ್ರಗಳಿರುವ ಪುಸ್ತಕಗಳ ದಾಖಲೆ ಇತ್ತು. ಆದರೆ ಇದೆಲ್ಲ ಮಾಧ್ಯಮಕ್ಕೆ ಬಿಡುಗಡೆ ಮಾಡಿ ಸುಮ್ಮನೆ ರಗಳೆ ಆಗುವುದು ಬೇಡ. ಇನ್ನು ಕೇವಲ ಒಂದು ತಿಂಗಳು ಪಾಠ ಇರೋದು, ಆಮೇಲೆ ಪರೀಕ್ಷೆ ನಡೆಯುತ್ತದೆ, ವಿವಾದ ಮುಗಿಯಬಹುದು ಎಂದು ಸುಮ್ಮನೆ ಇದ್ದೆವು. ಅವರು ಕೋರ್ಟಿಗೆ ಅರ್ಜಿ ಹಾಕಿದ ಮೇಲೆ ನಾವು ದಾಖಲೆಗಳನ್ನು ಕೋರ್ಟಿಗೆ ಕೊಟ್ಟೆವು. ಈಗ ಮಾಧ್ಯಮಕ್ಕೆ ಬಿಡುಗಡೆ ಮಾಡಿದೆವು.
ಹಿಜಬ್ಧಾರಿಗಳ ಹಠದಿಂದಾಗಿ ಈ ವಿವಾದ ಮುಂದವರಿಯತು. ಮೊದಲಿಗೆ ಹಿಜಬ್ ಹಾಕುವ ಕುರಿತು ಮಕ್ಕಳು ಮನೆಯ ಗಂಡಸರ ಹತ್ತಿರ ಕೇಳಿ ಬರುತ್ತೇವೆ ಎಂದರು. ಮನೆಯ ಗಂಡಸರ ಬಳಿ ಕೇಳಿದರೆ ವಿವಾದ ಬೆಳೆಯುತ್ತಿರಲಿಲ್ಲ. ಸಂಘಟನೆಯವರ ಮಾತು ಕೇಳಿ ಪ್ರತಿಭಟನೆಗೆ ಬಂದರು.
ವಾತಾವರಣ ಹಾಳು ಮಾಡಬೇಡಿ,ಮತೀಯ ಸಂಘಟನೆಗಳ ಪ್ರವೇಶದಿಂದ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ಸಾರಿ ಸಾರಿ ಹೇಳಿದೆವು. ಕೇಳಲಿಲ್ಲ.
ಇದರ ಹಿಂದೆ ಎಸ್ಡಿಪಿಐ ಇದ್ದರೆ ಅವರು ಸಮುದಾಯದ ಮತಗಳನ್ನು ಪಡೆದಷ್ಟೂ ಬಿಜೆಪಿಗೆ ಲಾಭ ಹೀಗಾಗಿ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಆರೋಪ ಇದೆ?
ಹಾಗಲ್ಲ, ಬಿಜೆಪಿಯ ಮತದಾರರು ವಿದ್ಯಾವಂತರು, ಅವರು ಈ ಗಲಭೆಗಳನ್ನು ಕೋಮುಭಾವನೆ ಕೆರಳಿಸುವುದನ್ನು ಇಷ್ಟ ಪಡುವುದಿಲ್ಲ ನಾವು ಆಡಳಿತದಲ್ಲಿದ್ದೇವೆ, ಉಡುಪಿಯಲ್ಲಿ ಐದಕ್ಕೆ ಐದೂ ಶಾಸಕರಿದ್ದೇವೆ, ಹೀಗಾಗಿ ನಮಗೆ ನಷ್ಟವೇ ಹೊರತು ಲಾಭವಿಲ್ಲ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಮ್ಮ ನಿಲುವಿಗೆ ಸಮರ್ಥನೆ ಸಿಗದೆ ಹಿನ್ನಡೆಯಾಗುತ್ತಿದೆಯಲ್ಲ?
ಇದು ಷಡ್ಯಂತ್ರದ ಭಾಗ. ಭಾರತದ ಹೆಸರು ಕೆಡಿಸಲು, ಭಾರತದಲ್ಲಿ ಮುಸ್ಲಿಮರಿಗೆ ರಕ್ಷಣೆ ಇಲ್ಲ ಎಂದು ಬಿಂಬಿಸುವ ಹುನ್ನಾರ ಇದು, ವಿದೇಶಿ ಕೈವಾಡವಿದೆ.
ಡಿ.30ರಂದು ಹಿಜಬ್ ಧರಿಸಲು ಅವಕಾಶ ಕೊಡಿ ಎಂದು ಲಿಖಿತವಾಗಿ ಕಾಲೇಜಿಗೆ ಮನವಿ ಕೊಟ್ಟರು. 31 ರಂದು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಹಾಕುತ್ತಾರೆ ಅಚ್ಚರಿ ಎಂದರೆ 31ನೇ ತಾರೀಕಿನಂದೇ ಪಾಕಿಸ್ತಾನದ ಟೀವಿ, ಅಲ್ಜಜೀರ ಇತ್ಯಾದಿ ವಿದೇಶಿ ಸುದ್ದಿ ವಾಹಿನಿಗಳಲ್ಲಿ ಸುದ್ದಿ ಸ್ಪೋಟಗೊಂಡಿತು. ಬಳಿಕ ಎನ್ಡಿ ಟಿವಿಯಲ್ಲಿ ಬಂತು. ಆ ಚಾನೆಲ್ ಕುರಿತು ನಿಮಗೆ ಗೊತ್ತೇ ಇದೆ.
ಸ್ಥಳೀಯ ಪತ್ರಿಕೆ, ಸ್ಥಳೀಯ ವಾಹಿನಿಗಳು ಆರಂಭದಲ್ಲಿ ಸುದ್ದಿಯೇ ಮಾಡಿಲ್ಲ. ರಾಷ್ಟ್ರೀಯ ವಾಹಿನಿಗಳು ಮಾಡಿದ ಮೇಲೆ ಎಲ್ಲೆಡೆ ಸುದ್ದಿ ಬಂತು.
ಆನ್ಲೈನ್ ಪಾಠ ಪರಿಹಾರವಾಗಬಹುದಿತ್ತಲ್ಲ?
ಆನ್ ಲೈನ್ ಪಾಠದ ಸಲಹೆ ನಾನೇ ನೀಡಿದ್ದು. ವಿವಾದ ಪರಿಹರಿಸಿ ಎಂದು ಮುಸ್ಲಿಂ ಮುಖಂಡರು ನಮ್ಮ ಬಳಿ ಬಂದರು. ಹಿಜಬ್ ಇಲ್ಲದೆ ಕಾಲೇಜಿಗೆ ಬರಲು ಸಾಧ್ಯವಾಗುವುದಿಲ್ಲವಾದರೆ ಒಂದು ತಿಂಗಳು ಆನ್ ಲೈನ್ ಕ್ಲಾಸ್ ಮಾಡೋಣ ಎಂದು ನಾನೇ ಸಲಹೆ ಮಾಡಿದೆ. ಅವರು ಒಪ್ಪಿಲ್ಲ. ಅದೇ ಸಮಯಕ್ಕೆ ಸಮವಸ್ತ್ರ ಕಡ್ಡಾಯ ಆದೇಶ ಬಂತು. ವಿದ್ಯಾರ್ಥಿನಿಯರಿಗೆ ಮಿಸ್ ಆದ ೧ ತಿಂಗಳು ಹಾಜರಿ ಕೊಡುತ್ತೇವೆ, ತಪ್ಪಿದ ಪಾಠಕ್ಕೆ ಹೆಚ್ಚುವರಿ ಕ್ಲಾಸ್ ತೆಗೆದುಕೊಳ್ಳುತ್ತೇವೆ, ತರಗತಿಗೆ ಬನ್ನಿ ಎಂದು ನಾವು ವಿನಂತಿಸಿದಾಗಲೂ ಒಪ್ಪಿಲ್ಲ.
ಇಬ್ಬರು ವಿದ್ಯಾರ್ಥಿನಿಯರಂತೂ ಪೂರ್ತಿ ಬ್ರೈನ್ ವಾಶ್ ಆದಂತೆ ಮಾತನಾಡುತ್ತಾರೆ. ಹೆತ್ತವರ ಮಾತುಳನ್ನು ಕೇಳುತ್ತಿಲ್ಲ. ಇದರ ಹಿಂದೆ ಹಣಕಾಸಿನ ವ್ಯವಹಾರವೂ ನಡೆದಿದೆ ಎಂಬ ಗುಪ್ತ ವರ್ತಮಾನ ಬಂದಿದೆ
ಅಲ್ಲಾಹು ಅಕ್ಬರ್ ಎಂದು ಕೂಗಿದ ವಿದ್ಯಾರ್ಥಿನಿಗೆ ಸಂಘಟನೆ 5 ಲಕ್ಷ ಘೋಷಿಸಿದೆ, ಕೇಸರಿ ಶಾಲು ಹಾಕಿದವರಿಗೆ?
ಅಲ್ಲಾ ಹು ಅಕ್ಬರ್ ಮತ್ತು ಜೈ ಶ್ರೀರಾಮ್ ಶಾಲೆಯೊಳಗೆ ಕೂಗೋದು ಬೇಡ, ಹಿಜಬ್ ಪ್ರತಿಭಟನೆ ಮಾಡಿದ ಆರು ಮಂದಿಯೂ ಬಡ ಮಕ್ಕಳು, ಹಣಕಾಸಿನ ಆಮಿಷ ಕೊಟ್ಟು ಈ ರೀತಿ ಮಾಡಲಾಗಿದೆ. ಧರ್ಮಗ್ರಂಥದಲ್ಲಿ ತರಗತಿ ಕೋಣೆ ಒಳಗೆ ಹಿಜಬ್ ಹಾಕಲೇಬೇಕು ಎಂದು ಕಡ್ಡಾಯ ಇಲ್ಲ.
ಒಂದು ವೇಳೆ ಅವರು ಹೇಳಿದಂತೆ ಅಷ್ಟು ಧಾರ್ಮಿಕವಾಗಿ ಶಿಕ್ಷಣ ಬೇಕಾದರೆ ಮದರಸ ಅಥವಾ ಮುಸ್ಲಿಂ ಶಿಕ್ಷಣ ಸಂಸ್ಥೆಗೆ ಹೋಗಿ ಎಂದು ಸಲಹೆ ಮಾಡಿದ್ದೆ. ಆಗ ಅವರು "ನಮಗೆ ಆಗಲ್ಲ, ಅಲ್ಲಿ ತುಂಬಾ ಫೀಸ್ ಇದೆ" ಎಂದು ಅವಲತ್ತುಕೊಂಡಿದ್ದರು.
ಕೇಸರಿ ಶಾಲು ಸರಬರಾಜು ಮಾಡಿದವರು ಯಾರು? ಜಾಗರಣ ವೇದಿಕೆಯವರಂತೆ?
ಹಿಂದೂ ಪರ ಹೋರಾಟ ಆದಾಗ ಹಿಂದೂ ಸಂಘಟನೆ ಅದರಲ್ಲಿ ತೊಡಗಿಸಿಕೊಳ್ಳುವುದು ಸಹಜ. ದೇಶ ಒಡೆಯುವ, ಸಮಾಜಘಾತಕ ಸಂಘಟನೆಗಳು ಮತೀಯ ಗಲಭೆ ಮಾಡಿದಾಗ, ತಲವಾರ್, ಮಾರಕಾಯುಧ ಹಿಡಿದು ಬರುವಾಗ ಹಿಂಜಾವೇ ಪ್ರವೇಶ ಮಾಡಿರಬಹುದು, ನನಗೆ ಮಾಹಿತಿ ಇಲ್ಲ. ಆದರೆ ವಿವಾದಕ್ಕೆ ಅವರು ಪ್ರಚೋದನೆ ಮಾಡಿಲ್ಲ.
ಹಿಜಬ್ ಸ್ತ್ರೀಯರಿಗೆ ರಕ್ಷಣೆ ಕೊಡುತ್ತದೆಯೆ? ಲೈಂಗಿಕ ಶೋಷಣೆ ತಪ್ಪಿಸುತ್ತದೆಯೇ?
ಕಾಮುಕರಿಗೆ ಇದ್ಯಾವುದೂ ಕಾಣುವುದಿಲ್ಲ. ಧಾರ್ಮಿಕ ಮುಖಂಡರುಗಳು ಮುಸ್ಲಿಂ ನಟ- ನಟಿಯರಿಗೆ ಕಟ್ಟುಪಾಡುಗಳನ್ನು ಹೇರಲಿ. ಅವರು ಅದು ಮಾಡೋದಿಲ್ಲ. ಉದ್ಯೋಗ, ಲಾಭ ಇರುವಲ್ಲಿ ಅದ್ಯಾವುದೂ ಅಳವಡಿಸುವುದಿಲ್ಲ. ಧರ್ಮಕ್ಕೆ (ಉಚಿತ) ಶಿಕ್ಷಣ ಸಿಗುವಲ್ಲಿ ಅವರಿಗೆ ಧರ್ಮದ ನೆನಪಾಗುತ್ತದೆ.
ಬಿಕಿನಿ, ಹಿಜಬ್ ಯಾವುದೇ ದಿರಿಸು ಧರಿಸಿ ಬರಲಿ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ ಅಲ್ವಾ?
ಬಿಕಿನಿ ಸಂಸ್ಕೃತಿಯವರು ಹಾಗೆಯೇ ಹೇಳೋದು. ಶಾಲೆಗಳಲ್ಲಿ ಬಿಕಿನಿಯೂ ಹಾಕಬಾರದು, ಹಿಜಬ್ ಹಾಕಬಾರದು, ಸಮಾನ ಯುನಿಫಾರ್ಮ್ ಹಾಕಬೇಕು ಎಂದು ಹೇಳುವವರು ನಾವು.
ಸಂಪರ್ಕ: kundeshwara@gmail.com
9945666324
(ಕೃಪೆ: ವಿಶ್ವವಾಣಿ)
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ