ಮೂಲವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ: ಅಭಿಷೇಕ್ ಎನ್
ಪುತ್ತೂರು: ಮೂಲವಿಜ್ಞಾನ ಕ್ಷೇತ್ರ ಇಂದು ಅಸಂಖ್ಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಆದರೆ ಅನೇಕ ಮಂದಿ ವಿದ್ಯಾರ್ಥಿಗಳಿಗೆ ಈ ಬಗೆಗಿನ ಮಾಹಿತಿ ಇರದಿರುವುದು ದುರದೃಷ್ಟಕರ. ವೈದ್ಯ, ತಂತ್ರಜ್ಞರಾಗುವ ಕನಸನ್ನು ಹೊಂದಿದಂತೆಯೇ ಮೂಲವಿಜ್ಞಾನ ಕ್ಷೇತ್ರದಲ್ಲಿ ಸಾಧಿಸಿ ವಿಜ್ಞಾನಿಯಾಗುವ ಕನಸನ್ನು ವಿದ್ಯಾರ್ಥಿಗಳು ಹೊಂದಬೇಕಾಗಿದೆ. ಸಂಶೊಧನಾ ಕ್ಷೇತ್ರ ಇಂದು ಪ್ರತಿಭಾವಂತ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಎದುರು ನೋಡುತ್ತಿದೆ ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಅಭಿಷೇಕ್ ಎನ್ ಹೇಳಿದರು.
ಅವರು ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ದ್ವಿತೀಯ ವರ್ಷದ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮೂಲವಿಜ್ಞಾನದ ಅವಕಾಶಗಳು ಎಂಬ ವಿಷಯದ ಬಗೆಗೆ ಸೋಮವಾರ ಮಾತನಾಡಿದರು.
ವಿದ್ಯಾರ್ಥಿಗಳು ಮೊದಲಿಗೆ ತಮ್ಮ ಆಸಕ್ತಿ ಕ್ಷೇತ್ರವನ್ನು ಗುರುತಿಸಿಕೊಳ್ಳಬೇಕು. ಎಲ್ಲರೂ ವೈದ್ಯರಾಗುವ ಅಥವ ತಂತ್ರಜ್ಞರಾಗುವ ಉದ್ದೇಶ ಹೊಂದಿರುವುದಿಲ್ಲ. ಅಂತಹವರು ಮೂಲವಿಜ್ಞಾನವನ್ನು ಗಂಭೀರವಾಗಿ ಪರಿಗಣಿಸಬೇಕು. ಇಂದು ಬಿಎಸ್ಸಿಯಂತಹ ಪದವಿ ಓದಿದವರು ಸರ್ಕಾರಿ ಉದ್ಯೋಗದಲ್ಲೂ ಪಾರಮ್ಯತೆ ಸಾಧಿಸುತ್ತಿದ್ದಾರೆ. ವಿವಿಧ ಸರ್ಕಾರಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯುತ್ತಿದ್ದಾರೆ. ಎಷ್ಟೋ ಮಂದಿ ವಿಜ್ಞಾನಿಗಳಾಗಿ ಹೊರಹೊಮ್ಮುತ್ತಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ ವಿಜ್ಞಾನೇತರ ಕ್ಷೇತ್ರಗಳಿಗೆ ಮನಮಾಡುವ ವಿದ್ಯಾರ್ಥಿಗಳು ಇಂಟಗ್ರೇಟೆಡ್ ಬಿಕಾಂನಂತಹ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂದು ಬ್ಯಾಂಕಿಂಗ್ ಕ್ಷೇತ್ರ ಅಪಾರ ಉದ್ಯೋಗಗಳನ್ನು ಸೃಷ್ಟಿಸಿಕೊಡುತ್ತಿದೆ. ಇಂಟಗ್ರೇಟೆಡ್ ಬಿಕಾಂ ಪದವಿಯು ಬ್ಯಾಂಕಿಂಗ್ ಹಾಗೂ ಸಿ.ಎ ಕ್ಷೇತ್ರಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡಿಕೊಡುತ್ತದೆ ಎಂದರು.
ಹಾಗೆಯೇ ಪದವಿ ಹಂತದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಆಯ್ಕೆಯಾಗಬಲ್ಲುದು. ಅಪರಿಮಿತ ಉದ್ಯೋಗಗಳನ್ನು ಈ ಕ್ಷೇತ್ರ ಒದಗಿಸಿಕೊಡುತ್ತಿದೆ. ಬರವಣಿಗೆ, ಮಾತುಗಾರಿಕೆಯೇ ಮೊದಲಾದ ಪ್ರತಿಭೆಯ ಮೂಲಕ ಉದ್ಯೋಗ ಪಡೆದುಕೊಂಡು ಬಾನೆತ್ತರಕ್ಕೇರುವುದಕ್ಕೆ ಈ ರಂಗ ಅವಕಾಶ ಕಲ್ಪಿಸುತ್ತದೆ. ಅಂತೆಯೇ ಐಚ್ಚಿಕ ಇಂಗ್ಲಿಷ್, ಮನಃಶಾಸ್ತ್ರದಂತಹ ವಿಷಯಗಳು ಉತ್ತಮ ಭವಿಷ್ಯವನ್ನು ಕಟ್ಟಿಕೊಡುವಲ್ಲಿ ಸಹಕರಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಉಪಸ್ಥಿತರಿದ್ದು ಕಾರ್ಯಕ್ರಮ ನಿರ್ವಹಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ