ಲಲಿತಕಲಾ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ

Upayuktha
0

ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕಲಾ ವಿಷಯದ ಬಗ್ಗೆ ಆಸಕ್ತಿ ಮೂಡಿಸಬೇಕು: ರಾಧಾಕೃಷ್ಣ ಕಲ್ಚಾರ್


ಪುತ್ತೂರು: ವಿದ್ಯಾರ್ಥಿಗಳು ಕಲೆಯ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಿಕೊಳ್ಳುವುದರ ಜೊತೆಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಯ ಜೀವನಶೈಲಿಗೆ ಕಲಾತ್ಮಕವಾದ ಆಯಾಮವಿದೆ. ಬದುಕಿಗೆ ಕಲಾತ್ಮಕ ಆಯಾಮವನ್ನು ನೀಡುವ ಹಾಗೂ ಅದರೆಡೆಗೆ ಆಸಕ್ತಿಯನ್ನು ಜಾಗೃತಿಗೊಳಿಸುವ ವೇದಿಕೆಯಾಗಿ ಲಲಿತಕಲಾ ಸಂಘ ಕಾರ್ಯನಿರ್ವಹಿಸುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಹಾಗೂ ಲೇಖಕ ರಾಧಾಕೃಷ್ಣ ಕಲ್ಚಾರ್ ಹೇಳಿದರು.


ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಆಯೋಜಿಸಿದ ಲಲಿತಕಲಾ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿ ಮಂಗಳವಾರ ಮಾತನಾಡಿದರು.


ಮನಸ್ಸು ಹಾಗೂ ದೇಹಕ್ಕೆ ಅವಿನಾಭಾವ ಸಂಬಂಧವಿದೆ. ದೇಹ ಮತ್ತು ಮನಸ್ಸು ಬೇರೆಯಾಗಿ ಯೋಚಿಸಲು ಸಾಧ್ಯವಿಲ್ಲ. ದೇಹಕ್ಕೆ ಶ್ರಮ ಹೆಚ್ಚಾದಾಗ ಮನಸ್ಸು ಯೋಚಿಸುವುದನ್ನು ಕಡಿಮೆ ಮಾಡುತ್ತದೆ. ಇವೆರಡನ್ನು ಸಾಮರಸ್ಯದಿಂದ ಸೂಕ್ಷ್ಮತೆಯಿಂದ ಗಮನಿಸಿ, ಮನಸ್ಸಿಗೆ ಮಾನಸಿಕ ತರಬೇತಿ ನೀಡಿ ಪ್ರಭಾವಶಾಲಿಯಾಗಿಸುವ ಕೆಲಸವನ್ನು ಲಲಿತ ಕಲಾ ಸಂಘ ಮಾಡುತ್ತದೆ. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಓದುವ ಹವ್ಯಾಸವು ನಮ್ಮ ಯೋಚನಾ ಶಕ್ತಿಯನ್ನು ವಿಸ್ತರಿಸುತ್ತದೆ ಹಾಗೂ ಬೆಳೆಸುತ್ತದೆ. ಕಲಾಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದಾಗ ಕಲೆಯು ನಮ್ಮನ್ನು ಸಂಸ್ಕಾರಯುತರನ್ನಾಗಿಸುತ್ತದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ ಎನ್ ಮಾತನಾಡಿ , ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸಿಗುವ ಪ್ರತಿಯೊಂದು ಅವಕಾಶಗಳನ್ನು ಬಾಚಿಕೊಳ್ಳುವ ಮಟ್ಟಿಗೆ ಆಸಕ್ತಿ ಹೊಂದಿರಬೇಕು. ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಲಲಿತ ಕಲಾಸಂಘ ಸಹಕಾರಿಯಾಗಿದೆ. ಕಲೆಯ ಮಹತ್ವವನ್ನು ಅರ್ಥ ಮಾಡಿಸುವುದರಲ್ಲಿ ಈ ಸಂಘವು ಪ್ರಮುಖ ಪಾತ್ರ ವಹಿಸುತ್ತಿದೆ. ಲಲಿತಕಲೆ ಹಾಗೂ ಜಾನಪದ ಕಲೆಗಳನ್ನು ಗುರುತಿಸಿ ಬೆಳೆಸುವ ಕಾರ್ಯ ನಡೆಯಬೇಕಿದ್ದು, ನಾವೆಲ್ಲರೂ ಕಲಾಪ್ರಜ್ಞೆ ಇರುವ ಶ್ರೋತೃಗಳಾಗಬೇಕು ಎಂದು ನುಡಿದರು.


ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸದಸ್ಯೆ ಶುಭಾ ಅಡಿಗ ಮಾತನಾಡಿ, ಲಲಿತ ಕಲೆ ಎನ್ನುವುದು ಜೀವನ ಕಲೆಯಾಗಿದ್ದು, ಕೇವಲ ಆರ್ಥಿಕ ಭೋಗವನ್ನು ನೀಡದೆ ಜೀವನವನ್ನು ರೂಪಿಸುವ ಹಾಗೂ ಜೀವನದ ಸೌಂದರ್ಯವನ್ನು ಆನಂದಿಸುವ ಕೆಲಸವನ್ನು ಮಾಡುತ್ತದೆ. ಪ್ರತಿಯೊಬ್ಬರಲ್ಲೂ ಒಬ್ಬ ಕಲಾವಿದ ಇರುತ್ತಾನೆ. ಆ ಕಲಾವಿದನ ಅನಾವರಣ ಮುಖ್ಯವಾಗಿರುತ್ತದೆ. ಹೆತ್ತವರು ಹಾಗೂ ಗುರುಗಳು ಇಂತಹ ಕಲೆಗಳನ್ನು ಗುರುತಿಸುತ್ತಾರೆ. ಹಲವಾರು ಬಾರಿ ನಮ್ಮೊಳಗಿನ ಕಲಾವಿದನನ್ನು ನಾವೇ ಹುಡುಕಬೇಕಾಗುತ್ತದೆ. ಇಂತಹ ಅವಕಾಶಗಳನ್ನು ಲಲಿತ ಕಲಾ ಸಂಘ ಒದಗಿಸುತ್ತದೆ. ಇದರ ಸದುಪಯೋಗ ಪಡಿಸಿಕೊಂಡಾಗ ಜೀವನ ಸುಲಲಿತವಾಗುತ್ತದೆ ಎಂದು ತಿಳಿಸಿದರು.


ಗೆಜ್ಜೆ, ತಾಳವನ್ನು ಪ್ರದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಸಾಂಕೇತಿಕ ಉದ್ಘಾಟನೆ ದೊರಕಿತು. ಕಾರ್ಯಕ್ರಮದಲ್ಲಿ ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ವಿಕಸನ ವಿಶೇಷ ಸಂಚಿಕೆಯನ್ನು ಉದ್ಘಾಟಕರಾದ ರಾಧಾಕೃಷ್ಣ ಕಲ್ಚಾರ್ ಬಿಡುಗಡೆಗೊಳಿಸಿದರು.


ಈ ವೇಳೆ ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆಯೋಜಿಸಲಾದ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು. ಆನಂತರ ಲಲಿತಕಲಾ ಸಂಘದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣುಗಣಪತಿ ಭಟ್ ಉಪಸ್ಥಿತರಿದ್ದರು.


ಲಲಿತಕಲಾ ಸಂಘದ ಸಂಯೋಜಕ ಡಾ.ಶ್ರೀಶ ಕುಮಾರ್‌ ಪ್ರಸ್ತಾಪನೆಗೈದರು. ವಿದ್ಯಾರ್ಥಿಗಳಾದ ವಿಭಾಶ್ರೀ, ಅನುಷಾ, ಶಿಲ್ಪಾ ಪ್ರಾರ್ಥಿಸಿದರು. ಲಲಿತಕಲಾ ಸಂಘದ ಅಧ್ಯಕ್ಷೆ ನಿಧಿ ಸ್ವಾಗತಿಸಿ, ಕಾರ್ಯದರ್ಶಿ ಅನನ್ಯ.ಟಿ ವಂದಿಸಿದರು. ಪ್ರಥಮ ಬಿ.ಸಿ.ಎ ವಿದ್ಯಾರ್ಥಿನಿ ಭಕ್ತಿಶ್ರೀ ಎಸ್‌ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top