ನುಡಿನಮನ: ಮುಳಿಯಾಲ ಭೀಮ ಭಟ್ಟರು ಇನ್ನು ನೆನಪು ಮಾತ್ರ

Upayuktha
0



ಶ್ರೀ ದೇವೀ ಮಹಾತ್ಮೆಯ "ಶ್ರೀ ದೇವಿ" ಪಾತ್ರದ ಮೂಲಕ ಸಿದ್ದಿ ಪ್ರಸಿದ್ದಿ ಪಡೆದು ಹಲವು ದಶಕಗಳ ಕಾಲ ತೆಂಕುತಿಟ್ಟಿನ ತುಳು- ಕನ್ನಡ ಪ್ರಸಂಗಗಳಲ್ಲಿ ಮೆರೆದಿದ್ದ ಮುಳಿಯಾಲ ಭೀಮಭಟ್ಟರು ಇಂದು ಕಾಂತಾವರದಲ್ಲಿ ನಿಧನರಾದರು.


ಮುಳಿಯಾಲ ಭೀಮ ಭಟ್ಟರ ಪಡುಬಿದ್ರೆಯ ಅಂತಿಮ ಸಂಮಾನದ ಚಿತ್ರ ಇದು.

15.01.22 ... ಹತ್ತು ದಿನಗಳ ಹಿಂದೆ , ಪಡುಬಿದ್ರೆ ದೇವಸ್ಥಾನದಲ್ಲಿ "ಪೂಲ ವಿಠಲ ಶೆಟ್ಟಿ ಪ್ರಶಸ್ತಿ" ಯನ್ನು ಸೇವಾರ್ಥಿ ರಾಧಾ ವಿಠಲ ಶೆಟ್ಟಿಯವರ ಸುಪುತ್ರ, ಮುಂಬೈಯ ಉದ್ಯಮಿ ಸತೀಶ್ ವಿ. ಶೆಟ್ಟಿಯವರು ನೀಡಿ ಗೌರವಿಸಿದರು.


ಕಾಂತಾವರದಲ್ಲಿ ಡಾ.ಜೀವಂಧರ ಬಲ್ಲಾಳರ ಔದಾರ್ಯದಿಂದ ವರ್ಷ ತೊಂಭತ್ತರ ವೃದ್ದ ಭೀಮ ಭಟ್ಟರು ಒಂದೂವರೆ  ದಶಕಗಳಿಂದ ವಿಶ್ರಾಂತ ಜೀವನ  ನಡೆಸುತ್ತಿದ್ದರು. ಪಡುಬಿದ್ರೆಯ ಸಂಮಾನಕ್ಕಾಗಿ ಮುಳಿಯಾಲದವರ ಪ್ರತಾಣದ ವ್ಯವಸ್ಥೆ ಮಾಡಿದವರು ಸಂಘಟಕ ಮಹಾವೀರ ಪಾಂಡಿಯವರು.


ಹೊಸ ಗಾಲಿ ಕುರ್ಚಿಯನ್ನು ಭೀಮಭಟ್ಟರಿಗೆ ನೀಡಿ, ಅದರಲ್ಲಿ ಕುಳ್ಳಿರಿಸಿ, ಕಟೀಲು ಮೇಳದ ರಂಗಸ್ಥಳದ ಎದುರಲ್ಲಿ ಸಂಮಾನಿಸಲಾಯಿತು. ಐಕಳ ವಿಶ್ವನಾಥ ಶೆಟ್ಟಿ, ವಿಶುಕುಮಾರ್ ಉಚ್ಚಿಲ್, ಜನಾರ್ಧನ ಅಮ್ಮುಂಜೆ ಜೊತೆಗಿದ್ದರು. ಭೀಮಭಟ್ಟರೊಂದಿಗೆ ಹತ್ತು ಕಲಾವಿದರನ್ನು, ಹದಿನೆಂಟು ಸಾಧಕರನ್ನೂ ಅಂದು ಸಂಮಾನಿಸಲಾಗಿತ್ತು. ನಾನು ಆ ಕಾರ್ಯಕ್ರಮವನ್ನು ಸಂಯೋಜಿಸಿ, ನಿರೂಪಿಸಿದ್ದೆ.


ನಾನು ಭೀಮಭಟ್ಟರ ಶಿಷ್ಯರಲ್ಲೊಬ್ಬ.ನನ್ನ ಯಕ್ಷ ಗುರುಗಳ ಪಟ್ಟಿಯ ಮೊದಲ ಗುರುಗಳು ಭೀಮಭಟ್ಟರು.

ಸಂತ ಅಲೋಷಿಯಸ್ ಪ.ಪೂ.ಕಾಲೇಜು ವಿದ್ಯಾರ್ಥಿ ಆಗಿದ್ದಾಗ ಅಂದು ಉಪಾನ್ಯಾಸಕರಾಗಿದ್ದ ಡಾ. ನಾ.ದಾ.ಶೆಟ್ಟಿ ಯವರ ಮುಂದಾಳ್ತನದ ತರಬೇತಿ ತರಗತಿಯಲ್ಲಿ ನಾನು ಭೀಮ ಭಟ್ಟರಿಂದ ಯಕ್ಷಗಾನ "ಪ್ರವೇಶ" ಕಲಿತಿದ್ದೆ.


ಗುರುಗಳ ವೇಷವನ್ನು ನಾನು ನೋಡಿದ್ದು ಸುಂಕದಕಟ್ಟೆ ಮೇಳದಲ್ಲಿ. ಪುರಭವನದಲ್ಲಿ ನಡೆದಿದ್ದ ದೇವೀಮಾಹಾತ್ಮೆ ಜೋಡಾಟದ ದೇವಿಉ ಪಾತ್ರವನ್ನೂ ಆಸ್ವಾದಿಸಿದ್ದೆ. ಈಶ್ವರ, ಭಸ್ಮಾಸುರ, ಅಯ್ಯಪ್ಪ, ಶತ್ರುಘ್ನ, ಕಾರ್ತ್ಯವೀರ್ಯ, ಮೂಕಾಸುರ ಮೊದಲಾದ ಪಾತ್ರಗಳ ನಿರ್ಚಹಣೆಯ ಸೊಬಗನ್ನು ಕಂಡಿದ್ದೇನೆ.


ಅವರಬಗ್ಗೆ ಅವರ ಒಡನಾಡಿ ಕಲಾವಿದರ, ಅಭಿಮಾನಿ ಪ್ರೇಕ್ಷಕರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದೇನೆ. ದಶಕದ ಮೊದಲು ನಮ್ಮಕುಡ್ಲ ಟಿ.ವಿ.ಗೆ ನವರಾತ್ರಿ ವಿಶೇಷ ಸಂದರ್ಶನ ನಡೆಸಿದ್ದೆ. ಆಸ್ರಣ್ಣ ಪ್ರಶಸ್ತಿಯನ್ನು ಪ್ರದೀಪ ಕುಮಾರ ಕಲ್ಕೂರರ ಜೊತೆ ಸೇರಿ ನೀಡಿದ್ದೆ.


ಪೊಳಲಿ ಸಂಮಾನದಲ್ಲಿ ಅಭಿನಂದನಾ ಭಾಷಣ ಮಾಡುವ ಅವಕಾಶ ನನಗೆ ದೊರಕಿತ್ತು. ಆ ಭಾಷಣವನ್ನು ಪಾಂಡಿಯವರು ಹಲವಾರು ಬಾರಿ ಮೊಬೈಲ್ ಮೂಲಕ ಗುರುಗಳಿಗೆ ಕೇಳಿಸಿದ್ದರಂತೆ.  


ಕಾಂತಾವರದ ಜಾತ್ರೆ ನಡೆಯುತ್ತಿದ್ದಗಲೇ ಭೀಮ ಭಟ್ಟರು ಜೀವನ ಯಾತ್ರೆಯನ್ನು ಮುಗಿಸಿದ್ದರು!!!!

ಅಂತ್ಯಸಂಸ್ಕಾರಕ್ಕೆ ಅವರ ಪುತ್ರಿ, ಅಳಿಯನಿಗೆ ಬರಲು ಸಾಧ್ಯವಾಗಲಿಲ್ಲ. ಜೊತೆಯಲ್ಲಿ ಇದ್ದ ಹತ್ತಾರು ಮಂದಿ (ಡಾ. ಬಲ್ಲಾಳ, ಪಾಂಡಿ ಸೇರಿ) ನಿಜ ಅರ್ಥದ ಬಂಧುಗಳು.

ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂಬ ಪ್ರಾರ್ಥನೆ.


ಪಡುಬಿದ್ರೆಯ ಕೊನೆಯ ಸಂಮಾನದ ನಂತರ..

* ಸಂಮಾನದಲ್ಲಿ ದೊರೆತ ಗೌರವ ನಿಧಿಯಿಂದ ರೂ. ಮೂರು ಸಾವಿರ ತೆಗೆದಿರಿಸಿ, ಹಳೆ ಸಾಲವೊಂದನ್ನು ಭಟ್ಟರು ತೀರಿಸಿದ್ದರು.

* ಗಾಲಿ ಕುರ್ಚಿಯಲ್ಲಿ ಕುಳಿತು ಕಾಂತೇಶ್ವರನ ಸಾನಿಧ್ಯಕ್ಕೆ ಬರುವ ಹಲವರೊಂದಿಗೆ ಮಾತುಕತೆಯಾಡಿದ್ದರು.

-ಕದ್ರಿ ನವನೀತ ಶೆಟ್ಟಿ

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top