ಈ ದಿನ ಇಡಿಯ ಭಾರತವೇ ಊರಿಗೆ ಊರೇ ಸಂಭ್ರಮಿಸುವ ಸುದಿನ. ಜನರಿಗೆ ಹಬ್ಬದ ಜೊತೆ ಹೆಮ್ಮೆಯೂ ಹೌದು. ಕ್ಯಾಲೆಂಡರ್ ವರ್ಷದ ಮೊದಲ ರಾಷ್ಟ್ರೀಯ ಹಬ್ಬ.ಭಾರತದ ಸಂವಿಧಾನ ಜಾರಿಗೆ ಬಂದು ಭಾರತ ಗಣರಾಜ್ಯವಾದ ಅವಿಸ್ಮರಣೀಯ ದಿನ ಜನವರಿ 26. ಹಳ್ಳಿಯಿಂದ ದಿಲ್ಲಿಯವರೆಗೆ ನಡೆಯುವ ಗಣರಾಜ್ಯೋತ್ಸವದಲ್ಲಿ ಜನರು ರಾಷ್ಟ್ರೀಯತೆಯನ್ನು ಮೆರೆಯುತ್ತಾರೆ.
ಗಣರಾಜ್ಯೋತ್ಸವದಲ್ಲಿನ ಕಣ್ಮನ ಸೆಳೆಯುವ ಪ್ರಮುಖ ಅಂಶ ಎಂದರೆ ಅಲ್ಲಿ ನಡೆಯುವ ಪರೇಡ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು. ಇವುಗಳಲ್ಲಿ ಎನ್.ಸಿ.ಸಿ ತನ್ನದೇ ಆದ ಛಾಪು ಮೂಡಿಸಿದೆ. ಪ್ರಸ್ತುತ ದಿನಗಳಲ್ಲಿ ಭಾರತದಾದ್ಯಂತ ಹಲವು ಶಾಲಾ ಕಾಲೇಜುಗಳಲ್ಲಿ ಎನ್.ಸಿ.ಸಿಯನ್ನು ಪಠ್ಯದೊಂದಿಗೆ ಸ್ವಯಂಪ್ರೇರಿತವಾಗಿ ಸೇರಿಸಿಕೊಳ್ಳಲಾಗಿದೆ. ಶಿಸ್ತು, ಸಮಯಪ್ರಜ್ಞೆ, ದೇಶಪ್ರೇಮ ಮೊದಲಾದವುಗಳ ಜೊತೆಗೆ ಯಾವುದೇ ರೀತಿಯ ಭೇದಭಾವವಿಲ್ಲದೆ ವಿದ್ಯಾರ್ಥಿಗಳಲ್ಲಿ ಭ್ರಾತೃತ್ವ ಮನೋಭಾವವನ್ನು ಬೆಳೆಸುತ್ತಾ ಬರುವ ಎನ್.ಸಿ.ಸಿ ನಮ್ಮ ದೇಶದ ಬಲಿಷ್ಠ ಯುವ ಸಂಘಟನೆ ಎಂದರೆ ತಪ್ಪಲ್ಲ.
ಎನ್ .ಸಿ.ಸಿ ಯಲ್ಲಿ ಅದೆಷ್ಟು ಶಿಬಿರಗಳಿವೆ. ಆದರೆ ಪ್ರತಿಯೊಬ್ಬ ಕೆಡೆಟ್ ಗೆ ಆರ್.ಡಿ.ಸಿ ಒಂದು ಕನಸು.
ಆರ್.ಡಿ.ಸಿ ಎಂದರೆ ರಿಪಬ್ಲಿಕ್ ಡೇ ಕ್ಯಾಂಪ್ ನವದೆಹಲಿಯಲ್ಲಿ ನಡೆಯುವ ಈ ಕ್ಯಾಂಪ್ ಗೆ ಆಯ್ಕೆಯಾಗೋದು ಅಷ್ಟೇನು ಸುಲಭವಲ್ಲ. ಇದೀಗ ಪುತ್ತೂರಿನ ವಿವೇಕಾನಂದ ಕಾಲೇಜಿನ ಪ್ರಥಮ ಬಿ.ಎ.ಸಿ ವಿದ್ಯಾರ್ಥಿನಿ ಹೇಮಸ್ವಾತಿ ಜನವರಿ 27ರಂದು, ಗಣರಾಜ್ಯೋತ್ಸವದ ಪ್ರಯುಕ್ತ ಹಲವು ಗಣ್ಯ ವ್ಯಕ್ತಿಗಳ ಮುಂದೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮತ್ತು 28ರಂದು ನಡೆಯುವ ಪಿ.ಎಂ ರಾಲಿಯಲ್ಲಿ ಕಾಣಿಸಿಕೊಳ್ಳಲಿರುವ ಇವರು ಸುಳ್ಯ ತಾಲೂಕು ಕೊಡಿಯಾಲ ಗ್ರಾಮದ ಉದಯಶಂಕರ್. ಕೆ ಮತ್ತು ವಸಂತಲಕ್ಷ್ಮಿ ದಂಪತಿಗಳ ಸುಪುತ್ರಿ.
ಹೇಮಸ್ವಾತಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಪಡೆದು, ಪ್ರೌಢಶಿಕ್ಷಣವನ್ನು ಬೆಳ್ಳಾರೆ ಸರಕಾರಿ ಪ್ರೌಢಶಾಲೆಯಲ್ಲಿ ಪೂರೈಸಿ, ಪದವಿ ಪೂರ್ವ ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದದಲ್ಲಿ ಪೂರ್ಣಗೊಳಿಸಿ ಪ್ರಸ್ತುತ ಅದೇ ವಿದ್ಯಾಸಂಸ್ಥೆಯಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇವರ ಸಾಧನೆಗೆ ಮನೆಯಲ್ಲಿ ಉತ್ತಮ ಪ್ರೋತ್ಸಾಹವಿದ್ದು, ಎನ್.ಸಿ.ಸಿ , ಕಲಿಕೆಯ ಜೊತೆಗೆ ಸಂಗೀತ, ಯಕ್ಷಗಾನ, ಭಾಗವತಿಕೆ, ಭರತನಾಟ್ಯದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.ಇವರ ತಂಗಿ ದೇವಿಕಾ ಕೂಡ ಸಂಗೀತ, ಯಕ್ಷಗಾನ ಮತ್ತು ಭರತನಾಟ್ಯದಲ್ಲೂ ಸೈ ಎನಿಸಿಕೊಂಡಿದ್ದಾರೆ.
ಇವರು ತನ್ನ ಪ್ರೌಢ ಶಿಕ್ಷಣದ ಅವಧಿಯಲ್ಲಿ ಜೆ.ಡಬ್ಲ್ಯು ಆಗಿ ಎ ಸರ್ಟಿಫಿಕೇಟ್ ಪಡೆದ ನಂತರದಲ್ಲಿ ಪದವಿಪೂರ್ವ ವಿದ್ಯಾಭ್ಯಾಸದ ಸಮಯದಲ್ಲಿ ಎಸ್.ಡಬ್ಲ್ಯೂ ಆಗಿ ಸೇರಿ, ಪ್ರಸ್ತುತ ವಿವೇಕಾನಂದ ಕಾಲೇಜಿನ ಎನ್.ಸಿ.ಸಿ ಘಟಕದ ಜೆ.ಯು.ಒ ಆಗಿ ಕರ್ನಾಟಕ ಗೋವಾ ಡೈರೆಕ್ಟರೇಟ್ ನ ಮಂಗಳೂರು ಗ್ರೂಪಿನ 19/ಕಾರ್ ಮಡಿಕೇರಿ ಬೆಟಾಲಿಯನ್ ನ ಪ್ರತಿನಿಧಿಯಾಗಿ ಗಣರಾಜ್ಯೋತ್ಸವ ಪರೇಡ್ನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.
ಎನ್.ಸಿ.ಸಿಯಲ್ಲಿ ಚುರುಕಿನ ಚಿನ್ನಾರಿ ಆಗಿರುವ ಈಕೆ ಜೆಡಬ್ಲ್ಯು ಆಗಿದ್ದಾಗಲೇ ಆಳ್ವಾಸ್ನಲ್ಲಿ ನಡೆದ ಸಿ.ಎ.ಟಿ.ಸಿ ಕ್ಯಾಂಪ್ ನಲ್ಲಿ ಭಾಗವಹಿಸಿ ಬೆಸ್ಟ್ ಕೆಡೆಟ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇವರು 2021ರ ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿನ ಡೆಲ್ಲಿ ಸ್ಕೂಲ್ ನಲ್ಲಿ ನಡೆದ ಐ.ಡಿ.ಎಸ್.ಸಿ ಕ್ಯಾಂಪಿನಲ್ಲಿ ಮಡಿಕೇರಿ ಬೆಟಾಲಿಯನ್ ನನ್ನು ಪ್ರತಿನಿಧಿಸಿದರು. ಹೇಮಸ್ವಾತಿ ಅಕ್ಟೋಬರ್ ತಿಂಗಳಿನಿಂದ ಡಿಸೆಂಬರ್ನ ವರೆಗೆ ರಾಜ್ಯದ ವಿವಿಧೆಡೆ ನಡೆದ ಆರು ಪೂರ್ವಸಿದ್ಧತೆ ಸುತ್ತುಗಳನ್ನು ಯಶಸ್ವಿಯಾಗಿ ಪೂರೈಸಿ ದೆಹಲಿಯ ಗಣರಾಜ್ಯೋತ್ಸವ ಪರೇಡ್ನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.
ಸಾಂಸ್ಕೃತಿಕ ಕ್ಷೇತ್ರದಲ್ಲಿನ ಸಾಧನೆ:
ಇವರು ಸಂಗೀತದಲ್ಲಿ ಜೂನಿಯರ್ ಮುಗಿಸಿದ್ದು, ಸುಮತಿ,ಮಾಲಿನಿ,ವೀಣಾ ಇವರಿಂದ ಸಂಗೀತವನ್ನು ಕರಗತ ಮಾಡಿ,ಭರತನಾಟ್ಯವನ್ನು ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಅವರಿಂದ ಕಲಿತು, ಜೂನಿಯರ್ ಮತ್ತು ಸೀನಿಯರ್ ಪೂರ್ಣಗೊಳಿಸಿದ್ದಾರೆ. ಇನ್ನು ಯಕ್ಷಗಾನವನ್ನು ವಾಸುದೇವ ಬೆಳ್ಳಾರೆ ಅವರ ಗರಡಿಯಲ್ಲಿ ಪಳಗಿ, ಭಾಗವನ್ನು ದಿ. ಪದ್ಯಾಣ ಗಣಪತಿ ಭಟ್ ಅವರಿಂದ ಕಲಿತರು. ಸುಮಾರು ಇನ್ನೂರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿರುವ ಹೇಮಸ್ವಾತಿ ಕಲಿಕೆಯಲ್ಲೂ ಎತ್ತಿದೆ ಕೈ.
ಮಗಳ ಸಾಧನೆ ನಮಗೆ ಬಹಳ ಖುಷಿ ನೀಡಿದೆ. ಊರವರು ಮಗಳ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುವಾಗ ಹೆಮ್ಮೆಯೆನಿಸುತ್ತದೆ, ಮುಂದಿನ ಅವಳ ಎಲ್ಲಾ ಯಶಸ್ಸಿನ ಹಾದಿಗೆ ನಾವು ಪ್ರೊತ್ಸಾಹವನ್ನು ನೀಡುತ್ತೇವೆ. ಎಂದು ಹೇಳುತ್ತಾರೆ ಹೇಮಸ್ವಾತಿ ಅವರ ತಂದೆ ಉದಯ್ ಶಂಕರ್
ಹೇಮಸ್ವಾತಿಯ ಛಲ ಮತ್ತು ಪರಿಶ್ರಮದಿಂದ ಈ ವರ್ಷದ ರಿಪಬ್ಲಿಕ್ ಡೇ ಕ್ಯಾಂಪ್ ಗೆ ಭಾಗವಹಿಸುವಂತಾಗಿದೆ. ಮನೆಯವರ ಪ್ರೋತ್ಸಾಹ ಶಿಕ್ಷಕರ ಸಹಕಾರ ಇದ್ದಾಗ ಯಾರು ಬೇಕಾದರೂ ಏನನ್ನು ಸಾಧಿಸಬಹುದು ಎಂಬುದಕ್ಕೆ ಹೇಮಸ್ವಾತಿಯೇ ಸಾಕ್ಷಿ. ಎಂದು ಹೇಳುತ್ತಾರೆ ಲೆ. ಭಾಮೀ ಅತುಲ್ ಶೆಣೈ
ಫೊರೆನ್ಸಿಕ್ ಎಕ್ಸ್ಪರ್ಟ್ ಆಗಬೇಕೆಂಬ ಮಹದಾಸೆಯನ್ನು ಹೊತ್ತುಕೊಂಡಿರುವ ಬಹುಮುಖ ಪ್ರತಿಭೆ ಹೇಮಸ್ವಾತಿಯ ಮುಂದಿನ ಪ್ರತಿ ಹೆಜ್ಜೆಗಳು ಸುಖಕರವಾಗಿರಲಿ ಎಂದು ಆಶಿಸೋಣ.
-ಸಂದೀಪ್.ಎಸ್.ಮಂಚಿಕಟ್ಟೆ
ತೃತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ