ಡಾ। ರಾಜಕುಮಾರ್ ಅಭಿನಯದ ಪರೋಪಕಾರಿ ಸಿನೆಮಾದಲ್ಲಿ ಪಿ.ಬಿ. ಶ್ರೀನಿವಾಸ್ ಹಾಡಿದ ಆರ್.ಎನ್. ಜಯಗೋಪಾಲ್ ಅವರ ಹಾಡಿನಲ್ಲಿ ಬರುವ ಸಾಲು. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ.... ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ.. ಈ ಪದ್ಯದಲ್ಲಿ ಇಂಥ ಹಲವಾರು ಸಾಲುಗಳಿವೆ. ಇವು ಮಕ್ಕಳಿಗೆ ಪಾಠದ ಜತೆ ಒಂದು ಉತ್ಕೃಷ್ಟ ಸಂಸ್ಕಾರವನ್ನೇ ಹೇಳಿಕೊಡುತ್ತವೆ. ಅಂದಿನ ಸಿನೆಮಾ ಪದ್ಯಗಳಲ್ಲೂ ಒಂದು ನೀತಿ ಇರುತ್ತಿತ್ತು, ಪಾತ್ರಗಳಲ್ಲೂ ಒಂದು ಆದರ್ಶವಿರುತ್ತಿತ್ತು. ಅಂತೆಯೇ ಒಂದು ಸಿನೆಮಾ ಅಥವಾ ನಾಟಕವನ್ನು ನೋಡಿ ಬಂದಾಗ ಧನ್ಯತಾ ಭಾವ ಮೂಡುತ್ತಿತ್ತು. ಏನೇ ಇರಲಿ ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬಂಥ ವಿಚಾರಕ್ಕೆ ಬಂದಾಗ ಅದೆಷ್ಟು ತೂಕ ಹೊಂದಿದೆ ಈ ವಾಕ್ಯದಲ್ಲಿ ಎಂದರೆ ಅದು ಬಲ್ಲವರು ಮಾತ್ರ ಬಲ್ಲರು. ಯಾವುದೇ ಧನಕನಕಗಳಿರಬಹುದು, ಸ್ಥಿರಾಸ್ತಿಗಳಿರಬಹುದು ಮಾನವನು ಸಹಜವಾಗಿ ಗಳಿಸುವುದು ತನ್ನ ಸ್ವಾರ್ಥಕ್ಕೋಸ್ಕರವೇ. ಅದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ತನಗೆಷ್ಟು ಬೇಕು ಎನ್ನುವುದು ಮಾತ್ರ ಅವರವರ ಮನೋಭಾವಕ್ಕೆ ಬಿಟ್ಟಂಥ ವಿಚಾರ. ಕೂಡಿಟ್ಟ ಧನವಾಗಲಿ, ಸಂಪತ್ತಾಗಲಿ ಅತಿಯಾಗಲು ತೊಡಗಿದಾಗ ಅಥವಾ ತನ್ನ ಅಗತ್ಯಗಳಿಗೆ ಮಿಕ್ಕಿ ಬೆಳೆಯತೊಡಗಿದಾಗ ಒಂದು ಸಣ್ಣ ಗೌಪ್ಯತೆ ಪ್ರಾರಂಭವಾಗುತ್ತದೆ. ತನ್ನಲ್ಲಿ ಅವಶ್ಯಕತೆಗಿಂತಲೂ ಹೆಚ್ಚಿದೆ ಎಂಬ ಭಾವ ಬರತೊಡಗಿದರೆ ಅದು ಸತ್ಯ. ಆದರೆ ಆ ಭಾವವನ್ನು ಅದುಮಿ ಹೆಚ್ಚಾಗಿರುವುದು ನನ್ನ ಭವಿಷ್ಯದಲ್ಲಿ ಉಪಯೋಗಕ್ಕೆ ಬರುವುದೆಂದು ಕ್ರೋಢೀಕರಣಕ್ಕೆ ತೊಡಗಿಕೊಂಡಾಗ ಅಪಾಯದ ಪ್ರವೇಶವಾದಂತೆಯೇ. ಇದರಿಂದಾಗಿ ಆ ವ್ಯಕ್ತಿ ತನ್ನ ಸಂಪತ್ತನ್ನು ಬಚ್ಚಿಡಲು ಪ್ರಾರಂಭಿಸುತ್ತಾನೆ. ಕೊನೆಕೊನೆಗೆ ಹೆಂಡತಿ ಮಕ್ಕಳಿಗೆ ಗೊತ್ತಾಗದಂತೆಯೂ ಬಚ್ಚಿಡಲು ಪ್ರಾರಂಭವಾದಾಗ ಅದರ ಮುಂದಿನ ಹಂತವೇ ಪರರಿಗೆ ಎನ್ನುವಂಥದ್ದು. ಅದು ಹೇಗೆಂದರೆ.... ಬಚ್ಚಿಡುವುದೆಂದರೆ ಯಾರಿಗೂ ತಿಳಿಯಬಾರದೆಂಬ ಉದ್ದೇಶವಿರುವುದರಿಂದ ಅದು ಬಚ್ಚಿಟ್ಟವನಿಗೆ ಮಾತ್ರ ತಿಳಿದಿರುವ ಸತ್ಯ. ಮನುಷ್ಯರಿಗೆ ಪ್ರಾಯವಾದಂತೆ ವಿಸ್ಮೃತಿಯೂ ಉಂಟಾಗುವುದು ಸಹಜ. ದಿನಕಳೆದಂತೆ ದೌರ್ಬಲ್ಯಗಳು ಹೆಚ್ಚಾದಾಗ ಬಚ್ಚಿಟ್ಟಂಥ ಸಂಪತ್ತಾಗಲಿ, ಬಚ್ಚಿಟ್ಟ ಜಾಗಗಳಾಗಲಿ ಮರೆತೇ ಹೋದರೆ ಆ ಸಂಪತ್ತು ಪರರಿಗಲ್ಲದೆ ಬಚ್ಚಿಟ್ಟವನಿಗೆ ದೊರಕೀತೇ? ಎಷ್ಟೊಂದು ಅರ್ಥಪೂರ್ಣವಲ್ಲವೇ ಈ ವಾಕ್ಯ..
ಇನ್ನು ಕೊಟ್ಟದ್ದು ತನಗೆ ಎಂಬುದು ಹೇಗೆಂದು ನೋಡೋಣ. ಯಾರು ತನ್ನ ಗಳಿಕೆಯನ್ನವಲಂಬಿಸಿ ತನ್ನ ಅವಶ್ಯಕತೆಗಳಿಗೆ ಮಿಕ್ಕಿದ್ದನ್ನು ಇನ್ನೊಬ್ಬರ ಕಷ್ಟದಲ್ಲಿ ವಿನಿಯೋಗಿಸಿಕೊಳ್ಳುತ್ತಾನೋ ಅಂಥ ಕೊಡುಗೆಯು ಶ್ರೇಷ್ಠತೆಯನ್ನೊಳಗೊಂಡಿದೆ. ಇಲ್ಲಿ ಕೂಡ ನಿಸ್ವಾರ್ಥತೆಯಿಂದ ಕೊಟ್ಟಂಥ ಕೊಡುಗೆಯೇ ಶ್ರೇಷ್ಠ. ಕೊಟ್ಟದ್ದು ತನಗೆ ಎಂದುಕೊಂಡು, ಯಾರು ಯಾರಿಗೆ ಎಷ್ಟೆಷ್ಟು ಕೊಟ್ಟಿದ್ದೇನೆ ಎಂಬ ಲೆಕ್ಕವಿಟ್ಟುಕೊಂಡರೆ ಅದು ಸಾಧುವಲ್ಲ ಸಾಧ್ಯವೂ ಇಲ್ಲ. ಯಾಕೆಂದರೆ ಕೊಡುವುದು ಮಾತ್ರ ನಮ್ಮ ಕಾಯಕ. ಅದು ತನ್ನದಲ್ಲ ಈ ಕೊಡುಗೆಯಿಂದ ಪಡೆದುಕೊಂಡವನಿಗೆ ಒಳ್ಳೆಯದಾಗಲಿ ಎಂಬ ಒಂದೇ ಭಾವ ಇದ್ದಾಗ ಅದರ ಲೆಕ್ಕ ದೇವರಲ್ಲಿ ಜಮೆಯಾಗುತ್ತದೆ. ಅದಲ್ಲದೆ ನಮಗೆ ವಿಸ್ಮೃತಿ ಬಂದಂತೆ ದೇವನಿಗೆ ವಿಸ್ಮೃತಿ ಇಲ್ಲ. ಹಾಗೂ ಬಚ್ಚಿಟ್ಟ ಸಂಪತ್ತಿನ ಅರಿವು ಬಚ್ಚಿಟ್ಟವನಿಗೆ ಮಾತ್ರ ಇರಬಹುದು. ಆದರೆ ಕೊಟ್ಟ ಸಂಪತ್ತಿನ ಅರಿವು ಕೋಡುವವನಿಗೆ ಮರೆತರೂ ಪಡಕೊಂಡವನು ಯಾವತ್ತೂ ಮರೆಯಲಾರ. ಆತ ಕೂಡ ಕೊಡುವ ಸಂದರ್ಭ ಬಂದಾಗ ಕೊಡದೇ ಇರಲಾರ ಅಥವಾ ಇರಬಾರದು. ನಾವು ಯಾವ್ಯಾವಾಗ ಕೊಡುವ ಅವಕಾಶ ಬಂದಾಗ ಕೊಟ್ಟಿಟ್ಟಿದ್ದೇವೋ ಅದೆಲ್ಲವೂ ನಮಗೆ ಕಷ್ಟಗಳು ಬಂದಾಗ ಒಂದಕ್ಕೆ ಹತ್ತು ಪಟ್ಟಿನಷ್ಟು ಒದಗಿ ಬರುತ್ತದೆ ಎನ್ನುವುದು ಖಂಡಿತ ಸತ್ಯವೇ. ಇದು ನನಗೆ ಅತ್ಯಂತ ನಂಬಿಕೆ ಇರುವ ವಿಷಯ. ಬರಿದೆ ನಂಬಿಕೆ ಮಾತ್ರವಲ್ಲ ನನ್ನ ಅನುಭವವೂ ಹೌದು. ಇಲ್ಲಿ ಕೊಟ್ಟದ್ದು ತನಗೆ ಎಂದರೆ ಕೊಟ್ಟ ದ್ರವ್ಯವೇ ಹಿಂತಿರುಗಿ ಬರುತ್ತದೆ ಎಂದಲ್ಲ. ಆದರೆ ನಮಗೆ ಯಾವುದರ ಅಗತ್ಯವಿದೆಯೋ ಅದು ಕೂಡಿ ಬರುವುದೇ ಇದರ ಮರ್ಮ.
ನಾವು ಒಂದು ದಿನಕ್ಕೆ ನೂರು ರೂಪಾಯಿ ಸಂಪಾದನೆ ಮಾಡಿದರೆ ಅದರಿಂದ ಹತ್ತು ರೂಪಾಯಿಯನ್ನು ಕೊಟ್ಟಾಗ ನಮ್ಮ ಆದಾಯದಲ್ಲಿ ಶೇಕಡಾ ಹತ್ತರಷ್ಟು ಕೊಟ್ಟಂತೆಯೇ. ಅದೇರೀತಿ ನಮಗೆ ಕಷ್ಟ ಬಂದಾಗ ದೇವರು ಕೊಡಿಸುವ ಪರಿಯೂ ಹೀಗೇ ಇರುತ್ತದೆ. ಒಬ್ಬನ ಆದಾಯ ದಿನಕ್ಕೆ ಒಂದು ಸಾವಿರವಾದರೆ ಆತನಿಂದ ಶೇಕಡಾ ಹತ್ತು ಎಂದರೆ ನೂರು ರೂಪಾಯಿಯನ್ನೇ ನಮಗೆ ಕೊಡಿಸುತ್ತಾನೆ. ಅಂದರೆ ಭಾವನೆಯಲ್ಲಿ ಇವೆರಡರ ಮೌಲ್ಯವೂ ಒಂದೇ. ದೇವರ ಲೆಕ್ಕದಲ್ಲಿ ವಸ್ತುವಿನ ಮೌಲ್ಯವೆಂದರೆ ಅದು ಅದರ ಹಿಂದಿನ ಭಾವವನ್ನು ಅವಲಂಬಿಸಿದೆ. ನಮ್ಮ ಅವಶ್ಯಕತೆ ಮತ್ತು ಕೊಳ್ಳುವ ಯೋಗ್ಯತೆಯನ್ನವಲಂಬಿಸಿ ಕೊಡುವವರು ದೊರಕುತ್ತಾರೆ. ಇದೆಲ್ಲವೂ ಕೊಟ್ಟದ್ದರ ಪರಿಣಾಮ.
(ನನ್ನ ಮಡದಿ ಲಕ್ಷ್ಮಿಯು ಒಂದು ಕಾಲದಲ್ಲಿ ಬಡಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಳು. ಆಗ ದಿನ ಒಂದಕ್ಕೆ ನೂರರಿಂದ ನೂರಐವತ್ತರಷ್ಟು ಸಂಪಾದನೆಯಾಗುತ್ತಿತ್ತು. ಅದು ಕೂಡ ವಾರದಲ್ಲಿ ಮೂರು ನಾಲ್ಕು ದಿನಗಳಷ್ಟೇ. ಆ ಸಮಯದಲ್ಲೂ ಅವಳಿಂದಾದಷ್ಟು ಅಂದರೆ ಹತ್ತೋ ಇಪ್ಪತ್ತೋ ರೂಪಾಯಿಗಳನ್ನು ಯಾರಿಗಾದರೂ ಕೊಟ್ಟೇ ಬರುತ್ತಿದ್ದಳು. ಅದರಿಂದ ಅವಳಿಗೆ ಅದೆಷ್ಟೋ ಆನಂದವಿರುತ್ತಿತ್ತು. ಒಂದು ಘಟನೆಯನ್ನು ಇಲ್ಲಿ ನಾನು ಹೇಳಲೇಬೇಕು. ಲಕ್ಷ್ಮಿಯ ಅನಾರೋಗ್ಯದ ಸಂದರ್ಭದಲ್ಲಿ ಪ್ರತಿ ವಾರಕ್ಕೊಂದು ಸಲ ಮಂಗಳೂರಿಗೆ ಚಿಕಿತ್ಸೆಗೆ ಹೋಗಬೇಕಿತ್ತು. ಪ್ರತಿಯೊಂದು ಬಾರಿಯೂ ಹದಿನೈದು ಸಾವಿರಕ್ಕೂ ಮಿಕ್ಕಿ ಹಣದ ಅವಶ್ಯಕತೆ ಇರುತ್ತಿತ್ತು. ಹಾಗೆ ಒಂದು ಸಲ ಆಸ್ಪತ್ರೆಯಲ್ಲಿ ನಮ್ಮ ಚಿಕಿತ್ಸೆಗಳೆಲ್ಲ ಕಳೆದು ಬಿಲ್ ಪಾವತಿಸಲು ನಾನು ಹೋಗಿದ್ದೆ. ಆಗ ಲಕ್ಷ್ಮಿಯ ಪಕ್ಕದಲ್ಲೊಂದು ಹೆಂಗಸು ಅಳುತ್ತ ಕೂತಿದ್ದಳು. ಈಕೆ ಅವಳನ್ನು ವಿಚಾರಿಸಿದಾಗ ಆಕೆಯ ಗಂಡನ ಚಿಕಿತ್ಸೆಗೆ ಹಣದ ಕೊರತೆಯಿಂದ ಹೊಂದಿಸಿಕೊಳ್ಳುವುದರಲ್ಲಿ ಕಷ್ಟವೆಂದು ಗೊತ್ತಾಯಿತು. ಈಕೆಯ ಮನಸ್ಸು ಅಂಥ ವಿಚಾರಗಳಿಗೆ ಬಹಳ ಬೇಗ ಕರಗಿ ಹೋಗುತ್ತದೆ. ನಾನು ಬಿಲ್ ಪಾವತಿಸಿ ಬಂದೊಡನೆ ಲಕ್ಷ್ಮಿ ನನ್ನಲ್ಲಿ ' ನಿಮ್ಮಲ್ಲಿ ಜಾಸ್ತಿ ಇದ್ದರೆ ಎರಡು ಸಾವಿರ ರೂಪಾಯಿ ಕೊಡಿ. ನನ್ನ ಪಕ್ಕದಲ್ಲಿ ಕೂತಿದ್ದವಳು ಬಹಳ ಕಷ್ಟದಲ್ಲಿದ್ದಾಳೆ. ನಮ್ಮಿಂದಾದ ಸಹಾಯ ಮಾಡೋಣ. ನಮಗೆ ದೇವರು ಇವತ್ತಿಗೆ ಬೇಕಾದಷ್ಟು ಕೊಟ್ಟಿದ್ದಾನೆ ಮುಂದಿನ ಸರತಿಗೆ ಏನಾದರು ಮಾಡೋಣ ' ಎಂದಾಗ ನನಗೆ ಇಲ್ಲವೆನ್ನಲಾಗಲಿಲ್ಲ. ಲಕ್ಷ್ಮಿಯ ಕೊಡುವ ಗುಣಕ್ಕೆ ನನಗೆ ಮಾತೇ ಹೊರಡಲಿಲ್ಲ. ಅದೂ ಅಲ್ಲದೆ ಲಕ್ಷ್ಮಿಗೆ ಇದರಿಂದ ಆನಂದವುಂಟಾಗುವುದಾದರೆ ನಾನು ಅದೆಷ್ಟು ಕಷ್ಟಗಳನ್ನೂ ಅನುಭವಿಸಿಯೇನು ಎಂಬ ನಿರ್ಧಾರದಿಂದ ಹಣವನ್ನು ಕೊಡಲು ಹೇಳಿದೆ. ನಾನು ಕೊಡುವವಳೆಂಬ ಅಹಂಕಾರವಿರದ ಭಾವ, ಅಂತೆಯೆ ಆಕೆ ಪಡಕೊಳ್ಳುವವಳೆಂಬ ದೈನ್ಯತೆಯ ಭಾವ ಇವೆರಡರ ಸಂಗಮ ಆ ಕ್ಷಣದಲ್ಲಿ ಒಂದು ಅಭೂತಪೂರ್ವವಾದ ಸನ್ನಿವೇಶವನ್ನೇ ಸೃಷ್ಟಿ ಮಾಡಿತು. ಮನುಷ್ಯತ್ವದ ಆ ಒಂದು ಕ್ಷಣಕ್ಕೆ ಸಾಕ್ಷಿಯಾದದ್ದು ನನ್ನ ಪುಣ್ಯ ವಿಶೇಷ. ಏನೇ ಇರಲಿ ಕೊಡುವುದರಲ್ಲಿ ಇಷ್ಟೊಂದು ಆನಂದವಿದೆಯೆಂದು ನಾನು ಲಕ್ಮಿಯಿಂದಲೇ ಕಲಿತ ಪಾಠ... ನಾವೇ ಬಹಳ ಕಷ್ಟದಲ್ಲಿದ್ದೇವೆ. ಅಂಥದ್ದರಲ್ಲಿ ಇನ್ನೊಬ್ಬರಿಗೆ ಈ ಪರಿಯ ಕೊಡುಗೆಯನ್ನು ಕೊಡುವುದೆಂದರೆ ಅದು ಲಕ್ಷ್ಮಿಯಂಥವರಿಗೆ ಮಾತ್ರ ಸಾಧ್ಯ. ಇದಕ್ಕೆ ನನಗೆ ಲಕ್ಷ್ಮಿ ನನ್ನ ಹೆಂಡತಿಯಾಗಿದ್ದಳು ಎನ್ನಲು ಬಹಳ ಹೆಮ್ಮೆಯಾಗುತ್ತಿರುವುದು. ನಂತರ ಕೊಟ್ಟದ್ದು ತನಗೇ ಎಂಬಂತೆ ಲಕ್ಷ್ಮಿಗೆ ದೇವರು ಒಂದು ರೂಪಾಯಿ ಕೂಡ ಹಣದ ಕೊರತೆಯಾಗದಂತೆ ವ್ಯವಸ್ಥೆಯನ್ನೇ ಮಾಡಿಕೊಟ್ಟಿರುವುದು ಮಾತ್ರ ಆ ಒಂದು ವಾಕ್ಯಕ್ಕೆ ಭಾಷ್ಯವನ್ನೇ ಬರೆದಂಥ ಅನುಭವ ನನಗಾಗಿದೆ..)
ಕೊಡುವುದೆಂದರೆ ಬರಿದೆ ಸಂಪತ್ತಲ್ಲ. ನಾವು ಮಕ್ಕಳಿಗೆ ಏನನ್ನು ಸಂಸ್ಕಾರವೆಂದು ಕೊಟ್ಟಿದ್ದೇವೋ ಅದೇ ಮುಂದಕ್ಕೆ ನಮಗೆ ಕಟ್ಟಿಟ್ಟ ಬುತ್ತಿ. ಒಳ್ಳೆಯ ಸಂಸ್ಕಾರ ಕೊಟ್ಟಲ್ಲಿ ನಮ್ಮ ಆಪತ್ಕಾಲಕ್ಕೆ ಅಥವಾ ಮುದಿತನಕ್ಕ ಒಳ್ಳೆಯ ಫಲ ದೊರಕೀತು. ಸಂಸ್ಕಾರ ಕೊಡದೆ ಬಚ್ಚಿಟ್ಟರೆ ಅಂಥ ಮಕ್ಕಳು ಪರರಿಗೆ ನೆರವಾದಾವು. ನಮಗೆ ನಿರೀಕ್ಷೆ ಬಹಳವಿರದು. ಅಂತೆಯೇ ನಾವು ಈ ಪ್ರಕೃತಿಯಿಂದಲೂ ಪಾಠ ಕಲಿಯಬೇಕಿದೆ. ಹೇಗೆಂದರೆ ಹಿಂದಿನವರು ಸ್ಥಳೀಯ ದನಗಳನ್ನು ಸಾಕಿ ಹಾಲು, ಗೊಬ್ಬರವನ್ನು ಪಡಕೊಂಡು ಸಾವಯುವ ಪದಾರ್ಥಗಳನ್ನೇ ಭೂತಾಯಿಗೆ ಕೊಡುತ್ತಿದ್ದುದರಿಂದ ಆಕೆ ಕಾಲಕಾಲಕ್ಕೆ ಸರಿಯಾಗಿ ಮಳೆ ಬೆಳೆಗಳನ್ನು ಕೊಡುತ್ತಿದ್ದಳು. ನಾವು ಕೊಟ್ಟದ್ದರ ನೂರು ಪಟ್ಟು ಪ್ರಕೃತಿ ನೀಡುತ್ತಿದ್ದಳು. ಆದರೆ ಈಗ ನಾವು ಸಹಜವಾಗಿ ಪ್ರಕೃತಿಗೆ ದೊರೆಯುವುದನ್ನು ಬಚ್ಚಿಟ್ಟಿದ್ದರಿಂದ ಅಥವಾ ಕೊಡಬಾರದ್ದನ್ನು ಕೊಟ್ಟಿದ್ದರಿಂದ ಕಾಲದ ಸಮತೋಲನವೇ ತಪ್ಪುವಂಥ ವಿದ್ಯಮಾನ ಇಂದು ಸೃಷ್ಟಿಯಾಗಿದೆ ಎಂದರೆ ಕೊಟ್ಟದ್ದು ತನಗೆ ಎನ್ನುವಲ್ಲಿಗೆ ನುಡಿ ಅದೆಷ್ಟು ಮಾರ್ಮಿಕ? ಇವತ್ತು ನಾವೇನು ಪ್ರಕೃತಿ ವಿಕೋಪಗಳಿಂದ, ಕೊರೋನದಂಥ ಮಹಾ ಮಾರಿಗಳಿಂದ, ಭಯೋತ್ಪಾದನೆಯಂಥ ವಿಚ್ಛಿದ್ರಕಾರಿ ಗುಣಗಳಿಂದ ಕಷ್ಟ ಪಡುತ್ತಿರುವುದೂ ಮಾನವೀಯತೆಯನ್ನು ಬಚ್ಚಿಟ್ಟು ಸ್ವಾರ್ಥವನ್ನಷ್ಟೇ ಪ್ರಕೃತಿಗೆ ನೀಡಿದ ಪರಿಣಾಮವೆಂದೆನಿಸುವುದಿಲ್ಲವೇ? ಅದರ ಬದಲು ಸ್ವಾರ್ಥವನ್ನು ಬಚ್ಚಿಟ್ಟು ಮಾನವೀಯತೆಯನ್ನು ಕೊಟ್ಟಿದ್ದರೆ ಪರಿಣಾಮವೇ ಬೇರೆಯಾಗುತ್ತಿತ್ತು. ಈ ಗುಟ್ಟು ಪುಟಾಣಿ ಮಕ್ಕಳಿಗೆ ಮಾತ್ರವಲ್ಲ ಮನುಜಕುಲಕ್ಕೇ ಗೊತ್ತಿರಬೇಕಾದ ರಟ್ಟಾಗಬೇಕಾದ ಗುಟ್ಟು. ಏನಂತೀರಿ....?
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ