ಅಪರೂಪದ ವ್ಯಕ್ತಿಗೆ ಅರ್ಹ ಗೌರವ

Upayuktha
0

 



ಯಾವ ಸಂಘಟನೆಗಳ ಪದಾಧಿಕಾರಿಯೋ ಮುಖಂಡನೋ ಅಲ್ಲ. ಯಾವುದೇ ರಾಜಕೀಯ ಪಕ್ಷದಲ್ಲಿ ಸ್ಥಾನ ಮಾನವೂ ಇಲ್ಲ.‌ ಯಾವುದೇ ಮೆಗಾ ಉತ್ಸವ ಸಮಿತಿಗಳಲ್ಲೂ ಪ್ರಮುಖ ಜವಾಬ್ದಾರಿ ಸ್ಥಾನಗಳಿಲ್ಲ. ಆದರೆ ಸ್ಥಾನ ಮಾನ, ಸಂಚಾಲಕತ್ವ ಪದಾಧಿಕಾರಗಳನ್ನು ಹೊತ್ತವರಿಗಿಂತ ಕೆಲವು ಪಟ್ಟು ಹೆಚ್ಚು ಕೆಲಸಗಳನ್ನು ಯಾವ ಪ್ರಚಾರ ಸಂಮಾನಗಳ ಹಂಗು ನಿರೀಕ್ಷೆಗಳಿಲ್ಲದೇ ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುವ ಈ ವ್ಯಕ್ತಿ ಓರ್ವ ಅಸಾಮಾನ್ಯ ಸಾಮಾಜಿಕ ಕಾರ್ಯಕರ್ತ.


ಹೆಸರು ಸತೀಶ್ ಕುಮಾರ್, ಮೂಲತಃ ಕೇರಳದ ಮಂಜೇಶ್ವರದವರು. ಕಳೆದ ಅನೇಕ ವರ್ಷಗಳಿಂದ ಉಡುಪಿಯಲ್ಲಿ ಸಣ್ಣ ಮಟ್ಟಿನ ವ್ಯವಹಾರವನ್ನು ಸುವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿರುವ ವ್ಯಕ್ತಿ.


ಪ್ರವೃತ್ತಿಯಲ್ಲಿ ಓರ್ವ ಅಪ್ರತಿಮ ಸಾಮಾಜಿಕ ಕಾರ್ಯಕರ್ತ. ಹಿಂದೂ ವಿಚಾರಗಳಲ್ಲಿ ಅತ್ಯಂತ ನಿಷ್ಠೆ ಹೊಂದಿರುವ ಇವರು ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ  ಉಡುಪಿಯ ಆಸುಪಾಸಿನಲ್ಲಿ ನಡೆಯುವ ಅನೇಕ ಪರ್ಯಾಯೋತ್ಸವ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥೀ, ಶಾರದಾ ಪೂಜೆ, ಹಿಂದೂ ಸಮಾಜೋತ್ಸವ, ಧರ್ಮಸಂಸತ್, ಬಾಬಾ ರಾಮ್ ದೇವ್ ಯೋಗ ಶಿಬಿರ, ಅಯೋಧ್ಯೆ ನಿಧಿ ಸಂಗ್ರಹ ಅಭಿಯಾನ, ಗೋರಕ್ಷಾ, ಗೋಭಿಕ್ಷೆ, ಗೋವಿಗಾಗಿ ಮೇವು ಅಭಿಯಾನಗಳು, ವಿಶ್ವ ಗೋಸಮ್ಮೇಳನ, ಭಾರತೀಯ ಗೋಯಾತ್ರೆ, ಅನೇಕ ದೇವಳಗಳ ಬ್ರಹ್ಮಕಲಶೋತ್ಸವ ಶ್ರೀನಿವಾಸ ಕಲ್ಯಾಣೋತ್ಸವ, ವಿಶ್ವ ತುಳು ಸಮ್ಮೇಳನ, ಹೀಗೆ ಒಂದಲ್ಲ ಎರಡಲ್ಲ, ಅನೇಕ ಬೃಹತ್ ಉತ್ಸವ ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೇ ಆದರೆ ಆತ್ಯಂತಿಕವಾದ ಶ್ರದ್ಧೆಯಿಂದ ಸ್ವಯಂಸೇವಕನಾಗಿ ದುಡಿಯುತ್ತಿರುವ ಓರ್ವ ತೀರಾ ಅಪರೂಪದ ವ್ಯಕ್ತಿ. ಈ ಉತ್ಸವಗಳು ಮುಗಿದ ನಂತರ ಅಲ್ಲಿಂದ ಅದೃಶ್ಯರಾಗುವ ಇವರು ನಂತರ ತಾನು ನಿರ್ವಹಿಸಿದ ಕರ್ತವ್ಯಕ್ಕೆ ಪ್ರತಿಯಾಗಿ ಯಾವ ಸಂಮಾನ ಅಥವಾ ಕನಿಷ್ಠ ಒಂದು ಶಾಲು ಹಾಕಿ ಗೌರವಿಸ್ತೇವೆ ಅಂದಾಗಲೂ ತೀರಾ ಸಂಕೋಚ ಪಡುವ ಸ್ವಭಾವದವರು.‌ 

ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946


ಸಂಜೆಯಾಗುತ್ತಲೇ ತನ್ನ ವ್ಯಾಪಾರದ ಕೆಲಸ ಮುಗಿಸಿ ಇಂತಹ ಉತ್ಸವಗಳಲ್ಲಿ ಹಾಜರಾಗುವ ಇವರು ನಡು ರಾತ್ರಿ, ಅಪರಾತ್ರಿ ವರೆಗೂ ನಗರಾಲಂಕಾರ ಸ್ವಚ್ಛತೆ ಮೊದಲಾದ ಕೆಲಸಗಳಲ್ಲಿ ಭಾಗಿಯಾಗ್ತಾರೆ. ಇಂತಹ ಸಮಿತಿಗಳ ಸಂಚಾಲಕತ್ವ ವಹಿಸಿಕೊಂಡವರೂ ಕೆಲವು ಬಾರಿ ಪತ್ತೆನೇ ಇರಲ್ಲ. ಆದ್ರೆ ಆ ಗೊಡವೆಗೇ ಹೋಗದ ಇವರು ಯಾರು ಬರಲಿ ಬಾರದಿರಲಿ ತಾನೊಂದು ಪುಟ್ಡ ಏಣಿ ಹಿಡ್ಕೊಂಡು ಒಂದಷ್ಟು ಪತಾಕೆ, ಬಂಟಿಂಗ್ಸ್ ಗಳನ್ನು ಹಿಡ್ಕೊಂಡು ತನ್ನ ಪಾಡಿಗೆ ತಾನೆಂಬಂತೆ ಅತ್ಯಂತ ಶಿಸ್ತಿನಿಂದ ಕೆಲಸ ಯಾವ ಉದಾಸೀನವೂ ಇಲ್ಲದೇ ಕಂಬ ಕಂಬಗಳಿಗೆ ಹತ್ತಿ ಕಟ್ಟಿ ಮಾಡಿ ಮುಗಿಸ್ತಾರೆ.‌ ಅದೇ ರೀತಿ ಊಟೋಪಚಾರ ವ್ಯವಸ್ಥೆಗಳಲ್ಲಿ ಬಡಿಸುವುದು, ಎಂಜಲೆಲೆ ಎತ್ತುವುದು, ಸ್ವಚ್ಛತೆಯ ಕೆಲಸಗಳನ್ನು ನಿರ್ವಹಿಸುವುದು, ಮನೆ, ಅಂಗಡಿಗಳಿಗೆ ತೆರಳಿ ಆಮಂತ್ರಣ ಪತ್ರಿಕೆ ಹಂಚುವುದು, ಲಕ್ಷದೀಪೋತ್ಸವಗಳಲ್ಲಿ ಸಾಲು ದೀಪ ಹಚ್ಚುವ ಕೆಲಸ, ಪ್ರಚಾರ ಬ್ಯಾನರ್ ಗಳನ್ನು ಕಟ್ಟುವುದು, ಉತ್ಸವಗಳ ವಸತಿ ವ್ಯವಸ್ಥೆ, ಅತಿಥಿ ಅಭ್ಯಾಗತರ ಆತಿಥ್ಯ ನಿರ್ವಹಣೆ. ವೇದಿಕೆ ಸಭಾಂಗಣ ಗಳನ್ನು ಸಿದ್ಧಪಡಿಸುವುದು ಹೀಗೆ ಸತೀಶ್ ಕುಮಾರ್ ನಿರ್ವಹಿಸುವ ಕೆಲಸಗಳು ಒಂದಲ್ಲ ಎರಡಲ್ಲ. ಯಾವುದೇ ಕೆಲಸ ಅಂತ ಅನ್ನಿಸದ ಆದರೆ ಉತ್ಸವಗಳ ಯಶಸ್ಸಿನಲ್ಲಿ ಬಹುಮುಖ್ಯ ಪಾತ್ರವಹಿಸುವ ಸೂಕ್ಷ್ಮಾತಿಸೂಕ್ಷ್ಮ ಕೆಲಸಗಳನ್ನೂ ನಿರ್ವಂಚನೆಯಿಂದ, ಮೌನವಾಗಿ ನಿರ್ವಹಿಸುವ ಸತೀಶ್ ಕುಮಾರ್ ಓರ್ವ ಶ್ರೇಷ್ಠ ಸಾಮಾಜಿಕ ಕಾರ್ಯಕರ್ತ ಅಂದರೆ ಅತಿಶಯವಲ್ಲ.‌  


ಇವರನ್ನು ಶುಕ್ರವಾರ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ರಾಜಾಂಗಣದ ಸಭೆಯಲ್ಲಿ ಅಭಿನಂದಿಸಿ ಸಂಮಾನಿಸಿರುವುದು ಅತ್ಯಂತ ಸಂತೋಷದ ಸಂಗತಿ. ಮತ್ತು ನಿಜವಾದ ನಿಸ್ಪೃಹ ಸಾಮಾಜಿಕ ಕಾರ್ಯಕರ್ತನಿಗೆ ಸಂದ ಅರ್ಹ ಗೌರವವಾಗಿದೆ. ಆ ಕಾರಣಕ್ಕೆ ಶ್ರೀಪಾದರಿಗೂ ಅಭಿವಂದನೆಗಳನ್ನು ಸಲ್ಲಿಸಬೇಕು.‌

ಅಂದಹಾಗೆ ಇವರ ಪತ್ನಿ ಮಂಜೇಶ್ವರ ವ್ಯಾಪ್ತಿಯ ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆಯೂ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top