ಉದ್ಯೋಗ ಗಿಟ್ಟಿಸಿಕೊಳ್ಳಬೇಕಾದರೆ ವಿಷಯದ ಬಗ್ಗೆ ಕನಿಷ್ಠ ಜ್ಞಾನವಿರಬೇಕು: ಮುರಳಿಕೃಷ್ಣ.ಕೆ.ಎನ್

Upayuktha
0

 

ಪುತ್ತೂರು ಜ.19: ಯಾವುದೇ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆದುಕೊಳ್ಳಬೇಕಾದರೆ ಆಯಾ ವಿಷಯದ ಬಗ್ಗೆ ಕನಿಷ್ಠ ಜ್ಞಾನವನ್ನು ಹೊಂದುವುದರ ಅಗತ್ಯವಿದೆ. ಜ್ಞಾನದ ಜೊತೆಗೆ ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ವಿಷಯದಲ್ಲಿ ನೈಪುಣ್ಯರಾಗಿರಬೇಕು. ಭಾಷೆಯ ಮೇಲಿನ ಹಿಡಿತವೂ ಅವಶ್ಯಕವಾಗಿರುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ರೂಪಿಸಿಕೊಳ್ಳಬೇಕು ಎಂದು ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳೀಕೃಷ್ಣ ಕೆ.ಎನ್ ಹೇಳಿದರು.


ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಉದ್ಯೋಗ ಮತ್ತು ತರಬೇತಿ ಘಟಕ ಹಾಗೂ ಉಜಿರೆಯ ರುಡ್ ಸೆಟ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಸ್ವ ಉದ್ಯೋಗ ಜಾಗೃತಿ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಭಾಗವಹಿಸಿ ಬುಧವಾರ ಮಾತನಾಡಿದರು.


ಆಧುನಿಕ ಜಗತ್ತಿನ ಪ್ರವೃತ್ತಿಯಿಂದ ಹೊರಬಂದು ನಮ್ಮದೇ ಆದ ಜಗತ್ತನ್ನು ನಿರ್ಮಿಸಿಕೊಳ್ಳಬೇಕು. ಜೊತೆಗೆ ವಿದ್ಯಾರ್ಥಿಗಳು ಸ್ವ ಉದ್ಯಮವನ್ನು ಪ್ರಾರಂಭಿಸಲು ಸಹಕರಿಸುವ ಆಯೋಜನೆಯನ್ನಿಟ್ಟುಕೊಂಡು, ಕಾಲೇಜು ಉದ್ಯೋಗ ಹಾಗೂ ತರಬೇತಿ ಘಟಕವನ್ನು ಪ್ರಾರಂಭಿಸಲಾಗಿದೆ. ಮುಂದೆ ಏನಾದರೂ ಸಾಧನೆ ಮಾಡಬೇಕು ಎಂಬ ಆಸಕ್ತಿ ಇರುವ ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಎಂದು ಹೇಳಿದರು.


ಈ ಸಂದರ್ಭದಲ್ಲಿ ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಎಂ.ಸುರೇಶ್ ಕುಮಾರ್ ಮಾತನಾಡಿ, ರುಡ್ ಸೆಟ್ ಎಂಬುದು ಡಾ.ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯಾಗಿದೆ. ಸ್ವ ಉದ್ಯೋಗ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡುವ ಸಂಸ್ಥೆ ಇದಾಗಿದೆ. ನಾವೆಲ್ಲರೂ ಸ್ವ ಉದ್ಯೋಗವನ್ನು ಹೊಂದುವುದರ ಜೊತೆಗೆ ಇತರರಿಗೂ ಉದ್ಯೋಗವನ್ನು ನೀಡುವ ಮೂಲಕ ನಿರುದ್ಯೋಗವನ್ನು ದೂರ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್ ಮಾತನಾಡಿ, ಮಾಹಿತಿಯ ಕೊರತೆಯಿಂದಾಗಿ ನಾವು ಜೀವನದಲ್ಲಿ ಹೆಜ್ಜೆಗಳನ್ನು ಮುಂದಿಡಲು ಹೆದರುತ್ತೇವೆ. ಈ ರೀತಿಯಾದ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ರುಡ್ ಸೆಟ್ ಸಂಸ್ಥೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.


ಈ ಸಂದರ್ಭ ಮುಖ್ಯ ಅತಿಥಿಯಾಗಿ ಆಗಮಿಸಿದ ಎಂ.ಸುರೇಶ್ ಕುಮಾರ್ ಹಾಗೂ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ರವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.


ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಅಶ್ವಿನಿ ವೈ.ಪಿ ಪ್ರಾರ್ಥಿಸಿದರು. ಉದ್ಯೋಗ ಹಾಗೂ ತರಬೇತಿ ಘಟಕದ ಸಂಯೋಜಕಿ ಹಾಗೂ ವ್ಯವಹಾರ ಹಾಗೂ ಆಡಳಿತ ವಿಭಾಗದ ಮುಖ್ಯಸ್ಥೆ ರೇಖಾ ಸ್ವಾಗತಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಮಂಜುಳಾ ವಂದಿಸಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಸ್ವಸ್ತಿ ವಿ.ಎಚ್ ಕಾರ್ಯಕ್ರಮವನ್ನು ನಿರೂಪಿಸಿದರು.


ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿಯಾದ ಹಿರಿಯ ತರಬೇತುದಾರ ಅಬ್ರಹಾಂ ಜೇಮ್ಸ್ ರವರಿಂದ ಸ್ವ ಉದ್ಯೋಗದ ಕುರಿತು ಮಾಹಿತಿ ಹಾಗೂ ತರಬೇತಿ ಕಾರ್ಯಾಗಾರ ನಡೆಯಿತು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top