|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ 1500ನೇ ಮದ್ಯವರ್ಜನ ಶಿಬಿರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ 1500ನೇ ಮದ್ಯವರ್ಜನ ಶಿಬಿರ

ವರ್ಚುವಲ್‌ ಕಾನ್ಫರೆನ್ಸ್ ಮೂಲಕ ಸಂದೇಶ ನೀಡಿದ ಡಾ. ಡಿ ವೀರೇಂದ್ರ ಹೆಗ್ಗಡೆ


ಧರ್ಮಸ್ಥಳ ಜ.07: 'ಯಾವುದೇ ಔಷಧಿ, ಇಂಜಕ್ಷನ್, ಮದ್ದು ಮಾತ್ರೆಗಳಿಲ್ಲದೆ, ಯಾವುದೇ ಅಡ್ಡ ಪರಿಣಾಮಗಳುಂಟು ಮಾಡದೆ ನೇರವಾಗಿ ಮನಮುಟ್ಟುವ ಕೆಲಸ ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರಗಳಿಂದ ಆಗುತ್ತಿದೆ. ವ್ಯಸನಗಳಲ್ಲಿ ಒಳ್ಳೆಯ ವ್ಯಸನ, ಒಳ್ಳೆಯ ಚಟುವಟಿಕೆಗಳು, ಒಳ್ಳೆಯ ಸಂಸ್ಕಾರಗಳು ಇರುವ ಹಾಗೆ ಕೆಟ್ಟ ವ್ಯಸನಗಳು, ಕೆಟ್ಟ ಚಟುವಟಿಕೆಗಳು, ಕೆಟ್ಟ ಸಂಸ್ಕಾರಗಳಿರುತ್ತವೆ. ಇವುಗಳಲ್ಲಿ ಒಳ್ಳೆಯ ಅಭ್ಯಾಸ ಯಾವುದು ಕೆಟ್ಟ ಅಭ್ಯಾಸ ಯಾವುದು ಎಂಬುದನ್ನು ಗುರುತಿಸುವುದೇ ಅತೀ ಪ್ರಾಮುಖ್ಯವಾದ ವಿಚಾರ.


ಕೆಲವೊಮ್ಮೆ ಕೆಟ್ಟ ಅಭ್ಯಾಸಗಳನ್ನೇ ಉತ್ತಮ ಎಂಬುದಾಗಿ ತಿಳಿದಾಗ ಅಂತಹವರಿಗೆ ಮನಪರಿವರ್ತನೆಯ ಜೊತೆಗೆ ದೈಹಿಕ, ಮಾನಸಿಕ ಚಿಕಿತ್ಸೆಯನ್ನು ನೀಡಿ ಸನ್ಮಾರ್ಗದಲ್ಲಿ ನಡೆಸುವ ಪ್ರಯತ್ನ ಮಾಡಬೇಕಾಗುತ್ತದೆ. ಶಾಶ್ವತ ಸಂತೋಷವನ್ನು ಬಯಸುವವರು ಧರ್ಮದ ದಾರಿಯಲ್ಲಿಯೇ ನಡೆಯಬೇಕು. ಕ್ಷಣಿಕ ಸಂತೋಷಕ್ಕಾಗಿ ಮದ್ಯಪಾನ, ಡ್ರಗ್ಸ್, ಮುಂತಾದ ವ್ಯಕ್ತಿತ್ವವನ್ನು ನಾಶ ಮಾಡುವ ಚಟಗಳಿಂದ ಹೊರಬಂದು ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ದೃಢಚಿತ್ತದಿಂದ ಸಂಕಲ್ಪ ಶಕ್ತಿಯನ್ನು ಬೆಳೆಸಿ ಸತ್ಯ, ಅಹಿಂಸೆ, ಸತ್ಸಂಗದಂತಹ ವಿಶಿಷ್ಠ ವಿಚಾರಗಳನ್ನು ಮೈಗೂಡಿಸಿಕೊಂಡು ಸಂಸಾರದಲ್ಲಿ ನೆಮ್ಮದಿ, ಸಾಮಾಜಿಕ ಗೌರವದೊಂದಿಗೆ ಆರ್ಥಿಕ ಸದೃಢತೆಯಿಂದ ಬಾಳಿದಾಗ ಕುಟುಂಬ ಮತ್ತು ಸಮಾಜ ಸುಭೀಕ್ಷೆಯ ಪಥದಲ್ಲಿ ಮುನ್ನಡೆಯಲು ಸಾಧ್ಯ.


ಇದಕ್ಕಾಗಿಯೇ ವ್ಯಸನ ಮುಕ್ತಿಗಾಗಿ ಶಿಬಿರಗಳನ್ನು ಆಯೋಜನೆ ಮಾಡಿ ಕೆಟ್ಟ ಚಟಗಳಿಂದ ಮುಕ್ತಿ ಹೊಂದಲು ಯೋಜನೆಯ ಮೂಲಕ ಸತತ ಪ್ರಯತ್ನ ನಡೆಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವರ್ಚುವಲ್‌ ಕಾನ್ಫರೆನ್ಸ್ ಮೂಲಕ ಸಂದೇಶ ನೀಡಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಜನಜಾಗೃತಿ ವೇದಿಕೆ ಮೂಲಕ ಮಂಡ್ಯ ಜಿಲ್ಲೆಯ, ಮದ್ದೂರು ತಾಲೂಕಿನ, ಶ್ರೀ ಸೋಮೇಶ್ವರ ಸಭಾಭವನ, ಬೆಸಗರಹಳ್ಳಿ ಎಂಬಲ್ಲಿ ನಡೆದ 1500ನೇ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.


ಶಿಬಿರವು ಒಂದು ವಾರಗಳ ಕಾಲ ನಡೆಯುತ್ತಿದ್ದು, ಮಂಡ್ಯ ಜಿಲ್ಲೆಯ ವಿವಿಧೆಡೆಯಿಂದ 61 ಮಂದಿ ಶಿಬಿರಾರ್ಥಿಗಳು ದಾಖಲಾಗಿದ್ದರು. ಜನಜಾಗೃತಿ ಜಿಲ್ಲಾಧ್ಯಕ್ಷರಾದ ಶ್ರೀ ನಿಂಗೇ ಗೌಡ, ಸಭಾಭವನದ ಮಾಲಕರಾದ ಶ್ರೀ ಸೋಮೇಗೌಡ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಸಂದರ್ಶ ಪಿ., ಮೈಸೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಗಂಗಾಧರ ರೈ., ಮಂಡ್ಯ ಜಿಲ್ಲೆಯ ಯೋಜನೆಯ ನಿರ್ದೇಶಕರಾದ ಶ್ರೀ ವಿನಯಕುಮಾರ್ ಸುವರ್ಣ, ಯೋಜನಾಧಿಕಾರಿ ಶ್ರೀ ಬಿ.ಆರ್. ಯೋಗೀಶ್, ಜನಜಾಗೃತಿ ಯೋಜನಾಧಿಕಾರಿ ಶ್ರೀ ಭಾಸ್ಕರ ಎನ್., ಶಿಬಿರಾಧಿಕಾರಿ ಶ್ರೀ ದಿವಾಕರ ಪೂಜಾರಿ, ಆರೋಗ್ಯ ಸಹಾಯಕಿ ಶ್ರೀಮತಿ ಫಿಲೋಮಿನಾ ಡಿ’ಸೋಜ ಶಿಬಿರ ನಡೆಸುವಲ್ಲಿ ಸಹಕರಿಸಿರುತ್ತಾರೆ. ವರ್ಚುವಲ್‌ ಕಾನ್ಪರೆನ್ಸ್ ಸಭೆಯಲ್ಲಿ ಯೋಜನೆಯ ಮುಖ್ಯ ನಿರ್ವಹಣಾಧಿಕಾರಿಗಳಾದ ಶ್ರೀ ಅನಿಲ್ ಕುಮಾರ್, ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ.ಪಾಸ್, ಯೋಜನಾಧಿಕಾರಿ ಶ್ರೀ ಮೋಹನ್ ಉಪಸ್ಥಿತರಿದ್ದರು.


1500ನೇ ಶಿಬಿರದ ಅಂಗವಾಗಿ 12 ಶಿಬಿರಗಳ ಆಯೋಜನೆ, 750 ವ್ಯಸನಿಗಳಿಗೆ ಚಿಕಿತ್ಸೆ


ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ 1500ನೇ ಶಿಬಿರ ನಡೆದರೆ, ಕೊಡಗು ಜಿಲ್ಲೆಯ ಪಿರಿಯಾಪಟ್ಟಣ, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಳಘಟ್ಟ, ಹೊಸಪೇಟೆಜಿಲ್ಲೆಯ ಹೂವಿನಹಡಗಲಿ ತಾಲೂಕು, 2 ವಿಶೇಷ ಮದ್ಯವರ್ಜನ ಶಿಬಿರಗಳು, ಜಗಳೂರು, ರಾಮನಗರ, ರೋಣ, ರಾಮದುರ್ಗ, ಅಥಣಿ ತಾಲೂಕು ಹೀಗೆ 12 ಕಡೆಗಳಲ್ಲಿ ಶಿಬಿರಗಳನ್ನು ಜನವರಿ ತಿಂಗಳಿನಲ್ಲಿ ಆಯೋಜಿಸಲಾಗಿದೆ ಎಂದು ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಮಾಹಿತಿ ನೀಡಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم