ನೇತಾಜಿ ಸುಭಾಷ್ಚಂದ್ರ ಬೋಸರ 125ನೇ ಜಯಂತಿ- ಪರಾಕ್ರಮ ದಿನ
‘ಜೀ ಹುಜೂರ್’ ಎನ್ನದ ಗಂಡುಗಲಿ ನೇತಾಜಿ “ನೀವು ನನಗೆ ರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ” ಎನ್ನುತ್ತಿದ್ದರು. ಅವರ ದಾರಿ ಗಾಂಧೀಜಿಯ ಅಹಿಂಸಾ ಮಾರ್ಗಕ್ಕಿಂತ ಭಿನ್ನವಾಗಿತ್ತು. ರಕ್ತ ಚೆಲ್ಲಿ ಸ್ವಾತಂತ್ರ್ಯ ಪಡೆಯಬೇಕೇ ಹೊರತು, ಗೋಗರೆಯುವ ಮಾರ್ಗದಿಂದ ಯಾವ ಲಾಭವೂ ಇಲ್ಲ ಎಂದು ಅವರು ಭಾವಿಸಿದ್ದರು. ಅಂದಮಾತ್ರಕ್ಕೆ ಅವರು ತಲೆಯಲ್ಲಿ ರಕ್ತ ಕ್ರಾಂತಿಯನ್ನೇ ತುಂಬಿಕೊಂಡಿದ್ದರು ಎಂದು ಭಾವಿಸಬೇಕಿಲ್ಲ.
ಆ ಕಾಲಕ್ಕೆ ಐಸಿಎಸ್ (Indian civil service) ಪಾಸಾಗಲು ಹೆಚ್ಚೂ ಕಡಿಮೆ ಸಾಧ್ಯವೇ ಇರಲಿಲ್ಲ! ಪಾಸಾಗಲು ಬ್ರಿಟಿಷರೇ ಅವಕಾಶ ಕೊಡುತ್ತಿರಲಿಲ್ಲ. ಸತ್ಯೇಂದ್ರನಾಥ್ ಬೋಸ್ ನಂತರ ಸುಭಾಶ್ಚಂದ್ರ ಬೋಸ್ ಐಸಿಎಸ್ಲ್ಲಿ ಇಂಗ್ಲೆಂಡಿಗೇ 4ನೆಯವರಾಗಿ ತೇರ್ಗಡೆಯಾದರು. ಸಂದರ್ಶನದ ವೇಳೆ ಅಗೌರವ ತೋರಿದ ಗವರ್ನರ್ಗೇ ಸಡ್ಡು ಹೊಡೆದು ‘ನೀನು ಹೆಚ್ಚೆಂದರೆ ನನ್ನನ್ನು ಐಸಿಎಸ್ನಿಂದ ತಿರಸ್ಕರಿಸಬಹುದು. ಆದರೆ, ಆ ಅವಕಾಶ ನಿನಗೆ ಕೊಡುವುದಿಲ್ಲ. ನಿನ್ನ ಐಸಿಎಸ್ಸನ್ನು ನಾನೇ ತಿರಸ್ಕರಿಸುತ್ತಿದ್ದೇನೆ” ಎಂದು ಹೊರಬಂದರು.
1930ರಲ್ಲಿ ನಡೆದ ಅಸಹಕಾರ ಚಳವಳಿಯಲ್ಲಿ ಬಂಧಿತರಾದ ಸುಭಾಷ್ ಅದೇ ವರ್ಷ ನಡೆದ ಚುನಾವಣೆಯಲ್ಲಿ ಕಲ್ಕತ್ತಾದ ಮೇಯರ್ ಆಗಿ ಆಯ್ಕೆಯಾದರು. ನಂತರವೂ ಬಂಧನ ತಪ್ಪಲಿಲ್ಲ. ಈ ಮಧ್ಯೆ ತೀವ್ರ ಅನಾರೋಗ್ಯಕ್ಕೊಳಗಾದ ಬೋಸರಿಗೆ ಟಿಬಿ ಕಾಯಿಲೆ ಬಂದಿದೆ ಎಂದು ತಿಳಿಯಿತು. ಒಂದು ಕಡೆ ಚಿಕಿತ್ಸೆ ನೆಪದಲ್ಲಿ ದೇಶದಿಂದ ಹೊರದಬ್ಬಿದರೆ ದೊಡ್ಡ ತಲೆನೋವು ಕಡಿಮೆಯಾಗುತ್ತದೆ ಎಂದು ಬ್ರಿಟಿಷರು ಭಾವಿಸಿದರೆ ಇನ್ನೊಂದೆಡೆ ದೇಶದಿಂದ ಹೊರಹೋದರೆ ಬ್ರಿಟಿಷರ ಅಡ್ಡಿ ಆತಂಕಗಳಿಲ್ಲದೆ ತಮ್ಮ ಚಟುವಟಿಕೆಗಳನ್ನು ಇನ್ನೂ ತೀವ್ರಗೊಳಿಸಬಹುದೆಂದು ಬೋಸ್ ಭಾವಿಸಿದರು.
1933, ಫೆಬ್ರವರಿ 23ರಂದು ಯುರೋಪಿನತ್ತ ಪಯಣ ಆರಂಭಿಸಿದ ಬೋಸ್ ವಿದೇಶಗಳಲ್ಲಿದ್ದ್ದು ಭಾರತೀಯ ಕ್ರಾಂತಿಕಾರಿಗಳನ್ನು, ಯುರೋಪಿನ ಸಮಾಜವಾದಿಗಳನ್ನೂ ಭೇಟಿಯಾಗಿ ಭಾರತದ ಸ್ವಾತಂತ್ರ್ಯ ಚಳುವಳಿಗೆ ಬೆಂಬಲ ಕೋರಿದರು. ಇಟಲಿಯ ಸರ್ವಾಧಿಕಾರಿ ಬೆನೆಟ್ ಮುಸೋಲಿನಿಯನ್ನು ಭೇಟಿ ಮಾಡಿದ ನಂತರ ವಿಯೆನ್ನಾವನ್ನೇ ತಮ್ಮ ಚಟುವಟಿಕೆಯ ಕೇಂದ್ರವಾಗಿಸಿಕೊಂಡರು. 1936, ಮಾರ್ಚ್ 27ರಂದು ಭಾರತಕ್ಕೆ ಆಗಮಿಸಿದ ಕೂಡಲೇ ಬೋಸರನ್ನು ನೇರವಾಗಿ ಸೆರೆಮನೆಗೆ ಕಳುಹಿಸಲಾಯಿತು. ಬೋಸ್ 1938ರಲ್ಲಿ ಕಾಂಗ್ರೆಸ್ ಅಧ್ಯಕ್ಷರೂ ಆದರು. ಆ ನಂತರ ಗಾಂಧೀಜಿಯವರೊಂದಿಗಿನ ಭಿನ್ನಾಭಿಪ್ರಾಯದ ಹಿನ್ನಲೆಯಲ್ಲಿ ಸ್ವಾತಂತ್ರ್ಯ ಗಳಿಸುವುದಷ್ಟೇ ನಮ್ಮೆಲ್ಲರ ಏಕಮಾತ್ರ ಗುರಿಯಾಗಬೇಕು, ವೈಯಕ್ತಿಕ ಪ್ರತಿಷ್ಠೆ ಹಾಗೂ ಮಹತ್ವಾಕಾಂಕ್ಷೆಗೆ ಪಕ್ಷ-ಚಳುವಳಿ ಒಡೆಯಬಾರದು ಎಂಬ ಕಾರಣಕ್ಕೆ ಅಧ್ಯಕ್ಷ ಸ್ಥಾನಕ್ಕೇ ಬೋಸ್ ರಾಜಿನಾಮೆ ನೀಡಿದರು. ಅಷ್ಟೇ ಅಲ್ಲ, 1941, ಜನವರಿ 19ರಂದು ಬ್ರಿಟಿಷರ ಕಣ್ತಪ್ಪಿಸಿ ಜರ್ಮನಿ ಹಾಗೂ ಜಪಾನ್ಗೆ ತೆರಳುವ ಮೂಲಕ ದೇಶದಿಂದಲೇ ಹೊರನಡೆದರು.
ವಿದೇಶದಲ್ಲೇ ಆಝಾದ್ ಹಿಂದ್ ಫೌಜ್ ಕಟ್ಟಿದ್ದ ಅವರು ಬಂದೂಕಿನಿಂದ ಸ್ವಾತಂತ್ರ್ಯ ಪಡೆಯಲು ಮುಂದಾದರು. 1943ರಲ್ಲಿ ಬ್ರಿಟಿಷರಿಂದ ಮುಕ್ತಿ ಪಡೆದ ನಮ್ಮ ದೇಶದ ಮೊಟ್ಟಮೊದಲ ಭಾಗಗಳೆಂದರೆ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳು. ಅವುಗಳನ್ನು ಗೆದ್ದುಕೊಂಡ ಸುಭಾಷ್ ಸ್ವರಾಜ್ ಹಾಗೂ ಶಹೀದ್ ಎಂದು ಹೆಸರಿಟ್ಟು ಅಲ್ಲಿ ದಾಸ್ಯಮುಕ್ತ ಆಡಳಿತ ಆರಂಭಿಸಿದರು.
ಭಾರತಕ್ಕೆ ಸ್ವಾತಂತ್ರ್ಯ ಕೊಡುವ ವಿಧೇಯಕವನ್ನು ಪ್ರಧಾನಿ ಅಟ್ಲಿ ಬ್ರಿಟನ್ ಸಂಸತ್ತಿನ ಮುಂದಿಟ್ಟಾಗ ವಿನ್ಸ್ಟನ್ ಚರ್ಚಿಲ್ ಖಡಾಖಂಡಿತವಾಗಿ ವಿರೋಧಿಸಿದರು. 1938ರಲ್ಲಿ ಬ್ರಿಟನ್ ಪ್ರವಾಸ ಕೈಗೊಂಡಿದ್ದಾಗ ಲೇಬರ್ ಪಕ್ಷದ ನೇತಾರರಾದ ಕ್ಲಿಮೆಂಟ್ ಅಟ್ಲಿ, ಅರ್ಥರ್ ಗ್ರೀನ್ವುಡ್, ಹೆರಾಲ್ಡ್ ಲಾಸ್ಕಿ, ಮೊದಲಾದವರಿಗೆ ಭಾರತಕ್ಕೆ ಏಕೆ ಸ್ವಾತಂತ್ರಯ ನೀಡಬೇಕು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇ ಸುಭಾಶ್ಚಂದ್ರ ಬೋಸ್! ಅದು 1947ರಲ್ಲಿ ನಮ್ಮ ನೆರವಿಗೆ ಬಂತು. ಅಂತಹ ಗಂಡುಸಿಂಹದ ಜನ್ಮದಿನವಿದು.
1897, ಜನವರಿ 23ರಂದು ಜನಿಸಿದ ಸುಭಾಶ್ಚಂದ್ರ ಬೋಸ್ ಅವರ 125ನೇ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. 1945ರಲ್ಲಿ ವಿಮಾನ ಅಪಘಾತದಲ್ಲಿ ಅಂತ್ಯ ಕಂಡರು ಎಂದು ಹೇಳಲಾಗಿದೆ. ಆದರೆ ಅವರ ನಿಗೂಢ ಸಾವಿನ ಸತ್ಯ ಶೋಧ ಮಾಡಲಾಗಿಲ್ಲ ಎಂಬುದೇ ಒಂದು ದುರಂತ. ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ನಮ್ಮೊಳಗೆ ಸ್ವಾಭಿಮಾನ, ಹೋರಾಟ ಮನೋಭಾವನೆ, ಸ್ವಾತಂತ್ರ್ಯದ ಕಿಚ್ಚು, ಕೆಚ್ಚು ತುಂಬಿದ ಅವರು ಪ್ರಾತಃ ಸ್ಮರಣೀಯರು.
-ತುರುವೇಕೆರೆ ಪ್ರಸಾದ್
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ