‘ಜ್ಞಾನ ಹೊಂಗಿರಣ - ಶ್ರೀ ಗೋಪಾಲದಾಸರು’

Upayuktha
0

25, ಪುಷ್ಯ ಬಹುಳ ಅಷ್ಟಮಿ – ಶ್ರೀಗೋಪಾಲದಾಸರ ಆರಾಧನೆ



ಮಾರ್ಗಶಿರ- ಪುಷ್ಯಮಾಸಗಳು ಹರಿದಾಸರುಗಳಿಗೆ ಸಂತಸ ತರುವ ದಿನಗಳು. ಹರಿದಾಸರು ಭಗವಂತನಲ್ಲಿ ಭಕ್ತಿಯನ್ನು ಬೇಡಲು ಸದಾ ಕಾತುರಾಗಿರುತ್ತಾರೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಶ್ರೀ ಗೋಪಾಲ ದಾಸರು. ಕರ್ನಾಟಕ ಹರಿದಾಸ ಚತುಷ್ಟಯರಲ್ಲಿ ಪ್ರಸಿದ್ಧರಾದ ಮತ್ತು ಪೂಜ್ಯತೆ, ಜನಪ್ರಿಯತೆಯನ್ನು ಪಡೆದ ಮಹಾನುಭಾವರು. 

ತಿರುಪತಿ ತಿಮಪ್ಪನ ಬಿಳಿಪಟ್ಟೆ ನಾಮಗಳ ನಡುವೆ ಕಸ್ತೂರಿ ತಿಲಕದಂತೆ ಸುಗಂಧಮಯ ಅಸ್ತಿತ್ವ ಗೋಪಲದಾಸರದು. ಢಾಳಾದ ಪಟ್ಟೆಗಳ ಪೈಕಿ ಒಂದು ವಿಜಯದಾಸರ ಧವಳಕೀರ್ತಿಯಾದರೆ,ಇನ್ನೊಂದು ಜಗನ್ನಾಥದಾಸವರ್ಯರ ಕಣ್ಣುಕುಕ್ಕುವ ಜ್ಞಾನ ಪ್ರತಿಭೆ. ಈ ಇಬ್ಬರು ಮಹಾಮಹಿಮರ ಮಧ್ಯೆ, ನೋಡಿದರೆ ಮಾತ್ರ ಅರಿವಿಗೆ ಬರು ಗೋಪಾಲದಾಸರ ಪ್ರಭಾವ.


‘ಭಕ್ತಿಯಲ್ಲಿ ಭಾಗಣ್ಣ’ ನೆನಿಸಿ ಅಪರೋಕ್ಷ ಜ್ಞಾನಿಗಳಾದ ಗೋಪಾಲದಾಸರು ಗಣೇಶಾಂಶ ಸಂಭೂತರು. ಗಾಯತ್ರಿ ಮಂತ್ರದ ಸಾಧನೆಯಿಂದ ಸಿದ್ಧಿಪಡೆದವರು. ವಿಜಯದಾಸರ ಕಂಕಣಾಕಾರ ಸುಳಾದಿಯನ್ನು ಚಕ್ರಾಬ್ಜ ಮಂಡಲದಲ್ಲಿಟ್ಟು, ಬೀಜಾಕ್ಷರಗಳನ್ನು ಯಥಾಸ್ಥಾನದಲ್ಲಿ ಮೂಡಿಸಿ ಉಪಾಸನೆಗೆ ಅನುವು ಮಾಡಿಕೊಟ್ಟ ಅಪೂರ್ವ ಹರಿದಾಸ ಕಲಾವಿದರು. ಭಗವಂತನ ದಾಸರ ಮನೆಯ ಬಾಗಿಲ ಕಾಯುವ ಕುನ್ನಿ ತಾನು ಎಂದು  ಸ್ವಾಹಂಕಾರ ಖಂಡನಾಮಾರ್ಗದಿಂದ ದಾಸಭಾವದ ತುಟ ್ಟತುದಿಗೇರಿದ ವೈರಾಗ್ಯನಿಧಿಗಳು. 

     

ದಾಸ ಚಳುವಳಿಯ ಉತ್ತರಾರ್ಧದಲ್ಲಿ ಪ್ರಮುಖ ಹೆಸರಾಗಿ, ಕೀರ್ತನೆಗಳಲ್ಲಿ ಶಾಸ್ತ್ರ ವಿಚಾರವನ್ನು ಎರಕಹೊಯ್ಯುವುದರಲ್ಲಿ ವಿಶೇಷ ಆಸಕ್ತಿಯಿರುವ ಭಕ್ತಿ ಪ್ರಪಂಚದ ವಿಹಾರಿಗಳು. ವಿಜಯದಾಸರಿಗೆ ಬಲಭುಜ, ದಾಸಕೂಟಕ್ಕೆ ಎತ್ತಿದ ಧ್ವಜವಾಗಿ ಗುರುಸೇವಾ ಧುರಂಧರರು, ಯಾರಾದರೂ ಗುರುನಿಂದನೆಯನ್ನು ಮಾಡಿದ್ದು ಅವರ ಕಿವಿಗೆ ಬಿದ್ದೊಡ್ಡನೆಯೇ ದೋಷ ಪರಿಹಾರಾರ್ಥವಾಗಿ ಉಪವಾಸ ಆಚರಿಸುತ್ತಿದ್ದರು. ಇವರ ಈ ವಿಚಿತ್ರ ಗುರುಭಕ್ತಿ ನೋಡಿ ವಿಜಯದಾಸರೇ ಎಷ್ಟೋ ಬಾರಿ ಚಿಕಿತರಾಗುತ್ತಿದ್ದರು.


ಮಾನವಿ ಶ್ರೀನಿವಾಸಾಚಾರ್ಯರಿಗೆ ತಮ್ಮ ಜೀವಿತಾವಧಿಯ ಬಹುಸಾರವತ್ತಾದ ನಲವತ್ತು ವರ್ಷಗಳನ್ನು ಆರ್ಯುದಾನ ಮಾಡಿ ಪ್ರಪಂಚವನ್ನೇ ಬೆರಗುಗೊಳಿಸಿ ಈ ತ್ಯಾಗದ ಫಲವೇ ದಾಸಸಾಹಿತ್ಯದ ದಿಗ್ವಿಜಯ ಕಹಳೆ ,ತತ್ವಸುಧೆಯ ರಸಪ್ರವಾಹ ‘ಹರಿಕಥಾಮೃತ ಸಾರ’ ದಾಸರ ಈ ಜೀವದಾನ ಪ್ರಕರಣದಿಂದ ಕರ್ಣನಿಗೂ ಗ್ರಹಣ ಹಿಡಿಯಿತೆಂದರೆ ಅತಿಶಯೋಕ್ತಿಯಲ್ಲ.


ಮಡಿ, ಆಚಾರ, ಸಂಪ್ರದಾಯಗಳನ್ನು ವೈಚಾರಿಕವಾಗಿ ಅರ್ಥೈಸಿರುವ ಗೋಪಾಲದಾಸರು ‘ಹೊಟ್ಟೆಯೊಳಗಣ ಕಾಮಕ್ರೋಧಗಳ ಬಿಟ್ಟರೆ ಅದು ನಿಜವಾದ ಮಡಿ’ ಎಂದಿದ್ದಾರೆ. ದಾಸರು ಬಿಂಬಾಪರೋಕ್ಷಿಗಳಾಗಿ ಸಿದ್ದಿ ಪಡೆದು ಜೀವನ್ಮುಕ್ತರಾದರು. ಲೋಕ ಸಂಗ್ರಹಾರ್ಥವಾಗಿ ನೀಡಿದ ಸಾಹಿತ್ಯದಲ್ಲಿ ಅವರ ಸಾಧನೆ ಬೋಧನೆ ಎರಡೂ ಪಡಿಮೂಡಿವೆ. ವಿಜಯದಾಸರ ನಂತರ ಹೆಚ್ಚು ಸುಳಾದಿ ರಚಿಸಿ ತತ್ವಾನುಷ್ಠಾನಗಳನ್ನು ಬೋಧಿಸಿದವರು ಗೋಪಾಲದಾಸರು. ಅಂದಿನ ಗೊಂದಲದ ಪರಿಸ್ಥಿತಿಯಲ್ಲ್ಲಿ ತಿಳಿಗನ್ನಡದ ಈ ದಾಸಬೋಧೆ ಸಾಧಕರಿಗೆ ಒಳ್ಳೆಯ ಉಪಾಯವೆನಿಸಿತು.


ಅವರ ಕವಿತಾ ಸಾಮಥ್ರ್ಯವೆಂದರೆ – ಕಲ್ಲೆದೆಯ ಕುಲಗೇಡಿಗಳನ್ನು ಬಿಲ್ಲಿನಂತೆ ಬಗ್ಗಿಸಿ, ಬಳಿಸಿಕೊಳ್ಳುವ ಮಧುರರಸ ಪರಿವಾರ ಪುಷ್ಟಿಯಿಂದ ಹೃದಯಂಗಮವಾಗಿರುವ ಕಲಾಸಿರಿ ಪಾಮರಿನಿಗೂ ಪಾರಮಾರ್ಥಿಕ ಜ್ಯೋತಿಯನ್ನು ಬೆಳಗುವ ಸಾಹಿತ್ಯ ಸೊಬಗು –ದಾಸರು ಸರಳ ಜೀವಿಯಾದರೂ ಉದ್ಧಾಮ ತಾತ್ವಿಕರು.  

ಗೋಪಾಲದಾಸರ ನುಡಿಗಳು ಹೃದಯ ಬೆಳಗುವ ಸೊಡರುಗಳು. ಇವರ ಕೃತಿಗಳಲ್ಲಿ ನಾದ, ಅರ್ಥ ಗಾಂಭೀರ್ಯ, ಮಾಧುರ್ಯ, ಭಕ್ತಿಯ ಸೆಳೆತ ಸಮೃದ್ದವಾಗಿದೆ. ಇವು ಆತ್ಮಾನುಸಂಧಾನದ ಭಾವಪೂರ್ಣ ಅನುಭವಗಳಾಗಿವೆ. ದಾಸರ ಪದಗಳಲ್ಲಿ ಬದುಕಿನ ತತ್ವ ಸಂಹಿತೆಯಿದೆ.


ಐಜಿ ವೆಂಕಟರಾಮಾಚಾರ್ಯರು ಮತ್ತು ಹೆಳವನಕಟ್ಟೆ ಗಿರಿಯಮ್ಮ ಮೊದಲಾದವರು ಅವರ ಶಿಷ್ಯವರ್ಗಕ್ಕೆ ಸೇರಿದ ಪ್ರಮುಖರು .ಶ್ರೀದಾಸರ ಉಪದೇಶವಾಣಿಗೂ ಸಹಸ್ರಾರು ಭಕ್ತರ ಹೃದಯಗಳನ್ನು ಅಂತಃಕರಣಗಳನ್ನು ನಿರ್ಮಲಗೊಳಿಸುತ್ತದೆ. ಸಚ್ಚಾರಿತ್ರ್ಯ, ಸಜ್ಜನಿಕೆಯನ್ನು ರೂಢಿಸಿ ಸುಸಂಸ್ಕøತ ಆರೋಗ್ಯ ಸ್ವಸ್ಥ ಸಮಾಜರಚನೆಗೆ ಸಹಕಾರಿ.


ಅಗಣಿತ ಗುಣ ಮಹಿಮ

ಒಮ್ಮೆ ಇವರು ತಮ್ಮ ಶಿಷ್ಯರಿಗೆ ಮಧ್ಯರಾತ್ರಿ ತಮ್ಮ ತಪೋಬಲ ಪ್ರಭಾವದಿಂದ ಸೂರ್ಯನನ್ನು ದರ್ಶನ ಮಾಡಿಸಿದ್ದರು. ಲೋಕ ಸಂಚಾರ ಮಾಡುತ್ತಾ ಒಮ್ಮೆ ಮಲೆಬೆನ್ನೂರಿಗೆ ಬಂದ ಗೋಪಾಲದಾಸರಿಗೆ ಹೆಳವನಕಟ್ಟೆ ಗಿರಿಯಮ್ಮನವರನ್ನು ಕಂಡರು. ಗಿರಿಯಮ್ಮನವರ ಭಕ್ತಿಗೆ ಮೆಚ್ಚಿ ಆಕೆಗೆ ಗೋಪಾಲಕೃಷ್ಣನ ವಿಗ್ರಹವೊಂದನ್ನು ದಯಪಾಲಿಸಿದರು. ಗದ್ವಾಲ್ ಸಂಸ್ಥಾನಕ್ಕೆ ಸೇರಿದ ಐಜಿ ಗ್ರಾಮದಲ್ಲಿ ವೆಂಕಟನರಸಿಂಹಾ ಚಾರ್ಯರೆಂಬ ಪಂಡಿತರ ಪುತ್ರ ಶುದ್ಧ ಶುಂಠಿಯಾಗಿದ್ದನು. ಅವನಿಗೆ 18 ವರ್ಷ ಕಳೆದರೂ, ವಿದ್ಯೆ ನೈವೇದ್ಯವಾಗಿತ್ತು. ಆಗ ಪಂಡಿತರು ಬೇರೆ ದಾರಿ ಕಾಣದೆ, ಗೋಪಾಲದಾಸರ ಬಳಿ ಸಾರಿದಾಗ ಅವರ ಅನುಗ್ರಹದಂತೆ ಪಂಡಿತರ ಪುತ್ರ ಒಂದೇ ವರ್ಷದಲ್ಲಿ ಉದ್ಧಾಮ ಪಂಡಿತನಾದುದು, ಮುಂದೆ ವಾಸುದೇವ ವಿಠಲ ಅಂಕಿತದಿಂದ ಕೀರ್ತನೆಗಳನ್ನು ರಚಿಸಿದುದು ಗೋಪಾಲದಾಸರ ಮಹಿಮೆಗೊಂದು ನಿದರ್ಶನವಷ್ಟೆ.


ಎಲ್ಲರಲ್ಲಿ ನೀನಿರುವೆ:

ಗೋಪಾಲದಾಸರ ‘ಎಲ್ಲಿ ನೋಡಲು ನೀನಿಲ್ಲದ ಸ್ಥಳವಿಲ್ಲ. ಎಲ್ಲರಲಿ ನೀನು ಎಲ್ಲ ಪ್ರೇರಕ ಕೀರ್ತನೆ ಮತ್ತು ಧನ್ವಂತರಿಯನ್ನು ಕುರಿತು ಅವರು ರಚಿಸಿದ ‘ಆವ ರೋಗವು ಎನಗೆ ದೇವ ಧನ್ವಂತ್ರಿ’ ಕೀರ್ತನೆಯಂತೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಈ ಕೀರ್ತನೆಯಲ್ಲಿ ಭಕ್ತಿಯ ರಸವೇ ಹರಿದು ಬಂದಿದೆ. ‘ಹರಿ ಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆ, ಹರಿಯ ಕೀರ್ತನೆ ಕೇಳಿಸದೆನ್ನ ಕಿವಿಗೆ, ಹರಿ ಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆ ಎಂದು ಮರುಗುವ ಗೋಪಾಲದಾಸರು, ‘ಸಾವಧಾನದಿ ಎನ್ನ ಕೈ ಪಿಡಿದು ನೋಡಯ್ಯಾ’ ಎಂದು ಆ ಶ್ರೀಹರಿಯನ್ನು ಪ್ರಾರ್ಥಿಸುತ್ತಾರೆ.


ತೈಲಧಾರೆಯಂತೆ ಮನಸ್ಸು ಏಕಮುಖವಾಗಿ ದೇವರೆಡೆಗೆ ಹರಿಯಬೇಕು. ಅದುವೇ ನಿಜವಾದ ಧ್ಯಾನ. ಜಪದಲ್ಲಿ ನಿಷ್ಠೆ, ಏಕಾಗ್ರತೆ ಏಕೀಭವಿಸಿದಾಗ ಮಾತ್ರವೇ ಅದು ಸಾಧನೆಯ ಮಾರ್ಗವಾಗುತ್ತದೆ. ಸಾಧನೆಯ ಮಾರ್ಗದಲ್ಲಿ ‘ನಾನು ಎಂಬುದು ಅಳಿಯಬೇಕು ನನ್ನನ್ನು ಅಳಿಸು. ನಿನ್ನನ್ನು ಮೆರೆಸು. ಬಂದು ನೆಲಸು ಹೃದಯ ಪದ್ಮದಲಿ ಎಂಬ ಮಂತ್ರವನ್ನು ಅಳವಡಿಸಿಕೊಳ್ಳಬೇಕು ಎನ್ನುತ್ತಿದ್ದರು. ಗೋಪಾಲದಾಸರ ಪ್ರತಿಯೊಂದು ಸುಳಾದಿ, ಕೀರ್ತನೆಯಲ್ಲೂ ಈ ಅಂಶಗಳ ಭಾವವಿದೆ. ಉದಾ: ‘ಕರ್ತೃ ನಾನೆಂದರೆ ದೋಷ ಫಲವು ಪ್ರಾಪ್ತಿ| ಕರ್ತನಲ್ಲೆಂದರೆ ಸಾಧನೆಗೆ ಫಲವಿಲ್ಲ’, ಎನ್ನ ಅಜ್ಞಾನವೆಲ್ಲ ನಿನ್ನಾಧಿನವಯ್ಯ ಎನ್ನ ಕರಣಚೇಷ್ಟೆ ವ್ಯಾಪಾರ ನಿನ್ನಾಧೀನ’ ಕೃತಿಗಳನ್ನು ಸ್ಮರಿಸಿಕೊಳ್ಳಬಹುದು.


ಆಂತರಿಕ ಸಾಧನೆ ಮುಖ್ಯ:

ಅನೇಕ ಮಂದಿ ಹೊರಗಿನಿಂದ ಹೇಗಿರಬೇಕು ಎಂದು ಬೋಧಿಸುತ್ತಾರೆ. ಇನ್ನಿಲ್ಲದ ಜಪ, ತಪ ಅನುಷ್ಠಾನ, ನೇಮ, ನಿಷ್ಠೆಗಳ ಪಾಠ ಮಾಡುತ್ತಾರೆ. ಆದರೆ ಯಾರೊಬ್ಬರೂ ಆಂತರ್ಯದಲ್ಲಿ ಹೇಗಿರಬೇಕು ಎನ್ನುವುದನ್ನು ತಿಳಿಸುವುದಿಲ್ಲ. ಅಂತರಂಗದ ಸಾಧನೆ ಇಲ್ಲದೆ ಕೇವಲ ಬಾಹ್ಯ ವೇಷದಿಂದ, ಜಪ-ತಪದಿಂದ, ಏನನ್ನೂ ಸಾಧಿಸಲು ಸಾಧ್ಯವಿಲ್ಲ’ ಎಂದು ತಿಳಿಹೇಳಿದವರೇ ಗೋಪಾಲದಾಸರು. ಮಧ್ವಾಚಾರ್ಯರ ಅಷ್ಟಭಾವಗಳನ್ನು ಆಧರಿಸಿ, ಗೋಪಾಲದಾಸರು ಸುಳಾದಿಯೊಂದನ್ನು ರಚಿಸಿದ್ದಾರೆ. ಅದರಲ್ಲಿ ‘ಭಾವಾಷ್ಟಪುಷ್ಪಂಗಳ ದೇವಗೆ ಅರ್ಪಿಸುವ, ಭಾವನೆಯನು ಕೇಳಿ ಭಕ್ತ ಜನರು, ಜೀವರಿಂದ ಈ ಧರ್ಮ ಎಂದಿಗೆ ಆದದಲ್ಲ. ದೇವನಲ್ಲಿವೆ ಇಂಥ ಗುಣಗಳುಂಟು’ ಎನ್ನುತ್ತಾರೆ. ಪುಷ್ಪಗಳು ನಮ್ಮ ಭಾವದಲ್ಲಿ ಅರಳಬೇಕು, ಎಲ್ಲವನ್ನೂ ಅವನಿಗೆ ಸಮರ್ಪಿಸಬೇಕು ಎನ್ನುತ್ತಾರೆ.


ಇಂದು ಮೊಸರಕಲ್ಲು, ಉತ್ತನೂರು, ಸಂಕಾಪುರದಲ್ಲಿ ದಾಸರಕಂಬ, ತಂಬೂರಿ, ಅರ್ಚಿಸಿದ ದೇವರ ಪ್ರತಿಮೆಗಳನ್ನು, ಬಾಳಿದ ಮನೆಯನ್ನು ನೋಡಬಹುದಾಗಿದೆ. ಈ ಮೂರು ಸ್ಥಳಗಳಲ್ಲಿ ಪ್ರತಿವರ್ಷ ಪುಷ್ಯ ಕೃಷ್ಣ ಅಷ್ಟಮಿಯಂದು ಸಹಸ್ರಾರು ಭಕ್ತರಿಂದ ಆರಾಧನೆ ಜರಗುತ್ತದೆ.  

ಆಗತಾದಿ ತ್ರಿಕಾಲಜ್ಞಂ ಆಗಮಾರ್ಥ ವಿಶಾರದಂ |

ತ್ಯಾಗಬೋಗ ಸಮಾಯುಕ್ತಂ ಭಾಗಣ್ಣಾರ್ಯ ಗುರುಂಭಜೇ || 

1721ರಿಂದ 1762ರ ಅವಧಿಯಲ್ಲಿ ಜೀವಿಸಿದ್ದ ಗೋಪಾಲದಾಸರು ಗೋಪಾಲ ವಿಠಲನೆಂಬ ಅಂಕಿತದಲ್ಲಿ ಸಾವಿರಕ್ಕೂ ಹೆಚ್ಚು ಕೀರ್ತನೆಗಳನ್ನು ಮತ್ತು ಸುಳಾದಿಗಳನ್ನೂ ರಚಿಸಿದವರು. ಮಧ್ವಾಚಾರ್ಯರ ದ್ವೈತತತ್ವವನ್ನು  ಕೀರ್ತನೆಗಳ ಮೂಲಕ ಪ್ರಚಾರ ಮಾಡಿದ ಗೋಪಾಲದಾಸರು ಗಾಯತ್ರೀ ಮಂತ್ರದ ಸಿದ್ಧಿ ಪಡೆದವರಾಗಿದ್ದರು. ಅಪರೋಕ್ಷ ಜ್ಞಾನದಿಂದ ತ್ರಿಕಾಲ ಭವಿಷ್ಯ ಹೇಳಬಲ್ಲವರಾಗಿದ್ದರು. ವೇದೋಪನಿಷತ್ತುಗಳ ಆಳವಾದ ಅಧ್ಯಯನ ಮಾಡಿದ್ದರು.


ಮೂಲ ಹೆಸರು ಭಾಗಣ್ಣ. ತಂದೆ ಶ್ರೀ ಮುರಾರಿ ರಾಯರು. ತಾಯಿ ವೆಂಕಮ್ಮ. ರಾಯಚೂರು ಜಿಲ್ಲೆಯ ಉತ್ತನೂರು ಎಂಬ ಹಳ್ಳಿಯಲ್ಲಿ ಜನಿಸಿದ ಈತ “ಭಕ್ತಿಯಲಿ ಭಾಗಣ್ಣ”ನೆಂಬ ಖ್ಯಾತಿ ಪಡೆದರು. ತಮ್ಮ ಆಯುಷ್ಯದ 40 ವರ್ಷಗಳನ್ನು ಜಗನ್ನಾಥದಾಸರಿಗೆ ಧಾರೆ ಎರೆದು ಅವರು ‘ಹರಿಕಥಾಮೃತಸಾರ’ ಕೃತಿ ರಚಿಸಲು ನೆರವಾದರು. ಆಗ ಅವರ ವಯಸ್ಸು ಕೇವಲ ಮೂವತ್ಮೂರು ವರ್ಷ. ತ್ಯಾಗವೇ ಹರಿಪೂಜೆಯೆಂದು ನಂಬಿದ್ದ ಗೋಪಾಲದಾಸರು ತಮ್ಮ ಜೀವಿತ ಕಾಲದಲ್ಲಿ ಅನೇಕ ಪವಾಡಗಳನ್ನು ತೋರಿದ್ದರು.


ಭಾ ಎಂದು ನಲಿಸಲು ಭಕುತಿ ಹುಟ್ಟಿಸುವವನು ಶ್ರೀಯರಸ ಪಾದದಲಿ 

ಗ ಎಂದುಚ್ಚರಿಸಲು ಗಂಗಾ ಜನಕ ಭವತೋಯದಿಂತಡಿಗೊತ್ತುವ 

ಣ್ಣ ಎಂದುಪಾಸನೆ ಮಾಡುವ ಸುಜನರ ಕಾಯ ಕ್ಲೇಶವ ಕಳೆದು ಶ್ರೀವರದ ಗೋಪಾಲ ವಿಠಲದಾಸರು ||


-ಡಾ. ಗುರುರಾಜ ಪೋಶೆಟ್ಟಿಹಳ್ಳಿ

ಸಂಸ್ಕೃತಿ ಚಿಂತಕರು:

9739369621

ಇ-ಮೇಲ್ : padmapranava@yahoo.com

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top