|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪರಿಚಯ: ಯಕ್ಷದ್ಯುಮಣಿ ಮೋಹನ್ ಕುಮಾರ್ ಅಮ್ಮುಂಜೆ

ಪರಿಚಯ: ಯಕ್ಷದ್ಯುಮಣಿ ಮೋಹನ್ ಕುಮಾರ್ ಅಮ್ಮುಂಜೆ



ಶ್ರೀಮತಿ ದಿ.ಸುಶೀಲ ಬೆಳ್ಚಡ್ತಿ ಹಾಗೂ ದಿ.ವೆಂಕಪ್ಪ ಬೆಳ್ಚಡ ದಂಪತಿಯ ಐವರು ಮಕ್ಕಳಲ್ಲಿ ಕೊನೆಯ ಮಗನಾಗಿ ದಿನಾಂಕ 4-07-1973ರಂದು ಮೋಹನ್ ಕುಮಾರ್ ಅಮ್ಮುಂಜೆ ಇವರ ಜನನ. ಈರ್ವರು ಅಕ್ಕಂದಿರಾದ ಶಾಂಭವಿ, ಭವಾನಿ ಹಾಗೂ ಈರ್ವರು ಅಣ್ಣಂದಿರಾದ ಸುರೇಶ್ ಬೆಳ್ಚಡ, ಜನಾರ್ಧನ ಅಮ್ಮುಂಜೆ ಇವರ ಪ್ರೀತಿಯ ಅನುಜ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಯಕ್ಷಗಾನದ ಗುರುಗಳು:-

ಗುಂಡಿಲ ಗುತ್ತು ಜಿ.ಶಂಕರ ಶೆಟ್ಟಿ, ಪಡ್ರೆ ಚಂದು ಗುರುಗಳು, ಕೋಳ್ಯೂರು ರಾಮಚಂದ್ರ ರಾಯರು (ಧರ್ಮಸ್ಥಳ ಲಲಿತಕಲಾ ಕೇಂದ್ರ). ಕಟೀಲು ಮೇಳದಲ್ಲಿರುವಾಗ 'ಯಕ್ಷಗಾನ ಕಲಾರಂಗ ಉಡುಪಿ' ಇವರು ಆಯೋಜಿಸಿದ್ದ ಕಲಾವಿದರ ಪುನಶ್ಚೇತನ ಶಿಬಿರ ಸಿದ್ದವನ ಗುರುಕುಲ ಉಜಿರೆಯಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್ಟರು 10 ದಿನದಲ್ಲಿ ಗುರುಗಳಾಗಿದ್ದಾರೆ.


ನಮ್ಮ ಕುಟುಂಬದಲ್ಲಿ ಯಾರೂ ಯಕ್ಷಗಾನ ಕಲಾವಿದರಿಲ್ಲ. ಆದರೆ ಎಲ್ಲರೂ ಯಕ್ಷಾಭಿಮಾನಿಗಳು. ತಾಯಿ, ಮಾವ ಬಿಕರ್ನಕಟ್ಟೆ ಲಕ್ಷ್ಮಣ ಬೆಳ್ಚಡ, ಭಾವ ದಯಾನಂದ ಬಿಕರ್ನಕಟ್ಟೆ, ಅಣ್ಣಂದಿರು, ದೊಡ್ಡ ಭಾವ ಕಲಾಯಿ ಶೀನ ಬೆಳ್ಚಡ, ಅಕ್ಕಂದಿರು ಎಲ್ಲರೂ ಯಕ್ಷಾಭಿಮಾನಿಗಳು.

ಸ‌ಣ್ಣ ಪ್ರಾಯದಲ್ಲಿ ತಾಯಿ ನಮ್ಮನ್ನು ಯಕ್ಷಗಾನ ನೋಡುವುದಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆಗ ನನಗೂ ಯಕ್ಷಗಾನದಲ್ಲಿ ಆಸಕ್ತಿ ಮೂಡಿತು. ಹಿರಿಯರ ಈ ಯಕ್ಷಾಭಿಮಾನವೇ ನಾನು ಯಕ್ಷಗಾನ ಕಲಾವಿದನಾಗಲು ಪ್ರೇರಣೆಯಾಯಿತು ಎಂದು ಅಮ್ಮುಂಜೆ ಅವರು ಹೇಳುತ್ತಾರೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಮೆಚ್ಚಿನ ಪ್ರಸಂಗಗಳು:

ಪುರಾಣದ ಎಲ್ಲ ಪ್ರಸಂಗಗಳು ಅಚ್ಚುಮೆಚ್ಚು. ಪುರುಷೋತ್ತಮ ಪೂಂಜರು ಬರೆದ ಮಾನಿಷಾದ ನನ್ನ ಬಹಳ ಇಷ್ಟದ ಪ್ರಸಂಗ. ಅದರಲ್ಲಿ ಬರುವ ಪ್ರತಿಯೊಂದು ಪಾತ್ರವೂ ನನಗಿಷ್ಟ ಎನ್ನುತ್ತಾರೆ ಅಮ್ಮುಂಜೆಯವರು.


ನೆಚ್ಚಿನ ವೇಷಗಳು:

ಪುಂಡು ವೇಷ ಮತ್ತು ಕಿರೀಟ ವೇಷ ನನಗಿಷ್ಟ.

ಪುಂಡುವೇಷದಲ್ಲಿ ಸುಧನ್ವ, ಅಭಿಮನ್ಯು, ಬಭ್ರುವಾಹನ, ಕರ್ಣಭೇದನದ ಕರ್ಣ, ರೂಕ್ಷ, ಚಂಡಾಸುರ, ಕಿರಾತ ಶ್ರೀನಿವಾಸ, ಮನ್ಮಥ, ಕುಶ, ದೇವವ್ರತ, ಮತ್ತು ಉಳಿದ ಎಲ್ಲಾ ಪುಂಡು ವೇಷಗಳು.

ಕಿರೀಟದಲ್ಲಿ ಋತುಪರ್ಣ, ಕರ್ಣ, ಇಂದ್ರಜಿತು, ಹಿರಣ್ಯಾಕ್ಷ, ಶಿಶುಪಾಲ, ದಕ್ಷ ಮೋದಲಾದ ಪಾತ್ರಗಳು.


ಮೇಳದ ತಿರುಗಾಟ:

ಶ್ರೀ ಕಟೀಲು ಮೇಳದಲ್ಲಿ 27 ವರ್ಷ, ಶ್ರೀ ಎಡನೀರು ಮೇಳದಲ್ಲಿ 2 ವರ್ಷ, ಶ್ರೀ ಬಪ್ಪನಾಡು ಮೇಳದಲ್ಲಿ 1 ವರ್ಷ ತಿರುಗಾಟ ನಡೆಸಿ, ಪ್ರಸ್ತುತ ಶ್ರೀ ಕಟೀಲು ಮೇಳದಲ್ಲಿ ಈ ವರ್ಷ 31ನೇ ವರ್ಷದ ತಿರುಗಾಟ.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಗಡಿಬಿಡಿಯಲ್ಲಿ ರಂಗಸ್ಥಳಕ್ಕೆ ಹೋಗಬಾರದು ಎಂಬ ಕೋಳ್ಯೂರು ಗುರುಗಳ ನಿರ್ದೇಶನದಂತೆ ರಂಗಸ್ಥಳಕ್ಕೆ ವೇಷ ಹೋಗುವ ಅರ್ಧ ಗಂಟೆಯ ಮೊದಲು ವೇಷ ಕಟ್ಟಿ ತಯಾರಾಗುತ್ತೇನೆ. ವೇಷ ತಯಾರಾದ ಮೇಲೆ, ನಂತರ ರಂಗದಲ್ಲಿ ತನ್ನ ವೇಷದ ನಡೆಯನ್ನು ಮನನ ಮಾಡಿಕೊಂಡು, ಪ್ರಸಂಗ ಪದ್ಯಗಳನ್ನು ನೋಡಿಕೊಂಡು, ಪುರಾಣ ಪುಸ್ತಕ ಓದಿ, ಹಿರಿಯ ವೇಷಧಾರಿಗಳ ವೇಷಗಳನ್ನು ನೋಡಿ ಅಭ್ಯಾಸ ಮಾಡುತ್ತೇನೆ/ ಮಾಡಿಕೊಂಡು ರಂಗಕ್ಕೆ ಹೋಗಲು ತಯಾರಿ ನಡೆಸುತ್ತೇನೆ ಎಂದು ಅಮ್ಮುಂಜೆ ಅವರು ಹೇಳುತ್ತಾರೆ.


ಯಕ್ಷಗಾನದ ಇಂದಿನ ಸ್ಥಿತಿಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:

ಯಕ್ಷಗಾನ ಎಂಬುದು ಒಂದು ಶ್ರೀಮಂತ ಕಲೆ. ಈಗ ಮೇಳಗಳಲ್ಲಿ ತುಂಬಾ ಸುಧಾರಣೆ ಆಗಿದೆ. ನಾನು ಮೇಳಕ್ಕೆ ಸೇರುವಾಗ ಗದ್ದೆಯಲ್ಲಿ ಯಕ್ಷಗಾನ, ಚೌಕಿಗೆ (top) ಟಾಪ್ ಇಲ್ಲ, ಕಲಾವಿದರಿಗೆ ಹೋಗುವುದಕ್ಕೆ ಲಾರಿ. ಈಗ ಬಸ್, ಪ್ಲಾಟ್ ಫಾರಂ, ಮಳೆಗಾಲದ ಸಂಭಾವನೆ, ಮೆಡಿಕ್ಲೇಮ್ ಮೊದಲಾದ ಅನುಕೂಲಗಳು ಬಂದಿದೆ. ಕಲಾವಿದರಿಗಾಗಿ ಯಕ್ಷಗಾನ ಕಲಾರಂಗ (ರಿ) ಉಡುಪಿ, ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ , ಕಟೀಲು ಮೇಳದಲ್ಲಿ ಯಕ್ಷಬೋಧಿನಿ ಟ್ರಸ್ಟ್ ಮೊದಲಾದ ಸಂಸ್ಥೆಗಳು ಕಲಾವಿದರಿಗಾಗಿ ಅನೇಕ ಸಹಾಯಗಳನ್ನು ಮಾಡುತ್ತಿದೆ.

ಯಕ್ಷಗಾನದತ್ತ ವಿದ್ಯಾವಂತರು, ಯುವಕರು, ಕಾಲೇಜು ಹುಡುಗರು ಆಕರ್ಷಿತರಾಗುತ್ತಿದ್ದಾರೆ. ಯಕ್ಷಗಾನ ಕಲಾವಿದರು ರಂಗದಲ್ಲಿಯೂ ಅನೇಕ ಹೊಸ ಪ್ರಯೋಗಗಳನ್ನು ಪರಂಪರೆಗೆ ಧಕ್ಕೆ ಬಾರದ ಹಾಗೆ ಆವಿಷ್ಕಾರ ಹಾಗೂ ಬದಲಾವಣೆಗಳನ್ನು ಮಾಡುತ್ತಿದ್ದಾರೆ.


ಈಗ ಪ್ರೇಕ್ಷಕರು ಪ್ರಜ್ಞಾವಂತ ಪ್ರೇಕ್ಷಕರು ವಿದ್ಯಾವಂತ ಪ್ರೇಕ್ಷಕರು ವಿಮರ್ಶಕರು ಬುದ್ಧಿವಂತ ಪ್ರೇಕ್ಷಕರು ಯಕ್ಷಗಾನ ನೋಡುತ್ತಿದ್ದಾರೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

(ಈಗ ಪ್ರಜ್ಞಾವಂತ, ವಿದ್ಯಾವಂತ, ಬುದ್ಧಿವಂತ ಪ್ರೇಕ್ಷಕರು, ವಿಮರ್ಶಕರು ಯಕ್ಷಗಾನ ನೋಡುತ್ತಿದ್ದಾರೆ.)

ಹಾಗಾಗಿ ಕಲಾವಿದರಾದ ನಾವು ರಂಗಸ್ಥಳದಲ್ಲಿ ಬಹಳ ಜಾಗೃತರಾಗಿರಬೇಕು. ಪ್ರೇಕ್ಷಕರು ಯಕ್ಷಗಾನ ನೋಡಿದ ಮೇಲೆ ಕಲಾವಿದನ ಪಾತ್ರದ ಒಳ್ಳೆದು-ಕೆಟ್ಟದ್ದು ಎರಡನ್ನೂ ಕಲಾವಿದನಲ್ಲಿ ಹೇಳಬೇಕು. ನಮ್ಮನ್ನು ನಾವು ತಿದ್ದಿಕೊಳ್ಳುವುದಕ್ಕೆ ಇದು ಬಹಳ ಸಹಕಾರಿ.


ಕಲಾವಿದ ರಂಗದಲ್ಲಿ ಶ್ರೀಮಂತನಾಗಿದ್ದಾನೆ. ನಿಜ ಜೀವನದಲ್ಲಿ ನನ್ನಂತಹ ಎಷ್ಟೋ  ಬಡ ಕಲಾವಿದರಿದ್ದಾರೆ. ಯಕ್ಷಗಾನ ಉಳಿಯಬೇಕಾದರೆ ಕಲಾವಿದ ಉಳಿಯಬೇಕು. ಹಾಗಾಗಿ ಕಲಾವಿದರ ಜೀವನದ ಬಗ್ಗೆ ಕಲಾಭಿಮಾನಿಗಳು, ಸಂಘ-ಸಂಸ್ಥೆಗಳು, ಸರಕಾರ, ದೇವಾಲಯಗಳು, ಯಜಮಾನರುಗಳು ಅವನ ನಿವೃತ್ತಿಯ ಬಳಿಕ ಅವನ ಜೀವನದ ಆಸರೆಗಾಗಿ ಯೋಚಿಸಬೇಕು ಎಂಬುದು ನನ್ನ ವಿಜ್ಞಾಪನೆ. ತನ್ನ ನಿವೃತ್ತಿಯ ಬಳಿಕ ಜೀವನ ನಿರ್ವಹಣೆ ಹೇಗೆ ಎಂಬುದೇ ಕಲಾವಿದರ ಚಿಂತೆ. ಹಾಗಾಗಿಯೇ ಯುವಕರು ಯಕ್ಷಗಾನವನ್ನು ವೃತ್ತಿಯನ್ನಾಗಿ ಸ್ವೀಕರಿಸಲು ಹಿಂಜರಿಯುತ್ತಿದ್ದಾರೆ.


ಯೋಜನೆಗಿಂತ ಯೋಚನೆಯೇ ಹೆಚ್ಚಾಗಿದೆ. ನಾನು ಯಕ್ಷಗಾನವನ್ನು ನಂಬಿದವ. ನನ್ನ ಜೀವನ ನಿರ್ವಹಣೆಯೇ ಯಕ್ಷಗಾನದಿಂದ. ಬೇರೆ ಯಾವುದೇ ಆದಾಯಗಳಿಲ್ಲ.

ಮಳೆಗಾಲದಲ್ಲಿ ನಿಡ್ಲೆ ಮಹಾಗಣಪತಿ ಯಕ್ಷಗಾನ ಮಂಡಳಿಯಲ್ಲಿ ವೇಷಧಾರಿಯಾಗಿ ಹೋಗುತ್ತಿದ್ದೆ. ಕೊರೋನಾದಿಂದಾಗಿ ಎರಡು ವರ್ಷದಿಂದ ಯಾವುದೂ ಇಲ್ಲ.


ಯಕ್ಷಗಾನದಲ್ಲಿ 30 ವರ್ಷ ತಿರುಗಾಟ ಮಾಡಿದರು ಯಾವುದೇ ಶಿಷ್ಯರಿಗೆ ನಾಟ್ಯಾಭ್ಯಾಸ ಮಾಡಿಸಿಲ್ಲ. ಈಗ ನಾನು ಗುರುಗಳಿಂದ ಕಲಿತದ್ದನ್ನು ಹೇಳಿಕೊಡುವುದಕ್ಕೆ ಪ್ರಾರಂಭಿಸಿದ್ದೇನೆ. ಪೊಳಲಿಯಲ್ಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ, ಹಾಗೂ ಉಮಾಶಿವ ದೇವಸ್ಥಾನ ಕಲ್ಲಡ್ಕದಲ್ಲಿ ಯಕ್ಷಗಾನ ತರಬೇತಿ ಪ್ರಾರಂಭವಾಗಿದೆ. ಬೇರೆ ಕಡೆಯಿಂದಲೂ ಅಪೇಕ್ಷೆಗಳು ಬರುತ್ತಿದೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ನನ್ನನ್ನು ಬಾಲ್ಯದಲ್ಲಿ ಸಾಕಿದವರು ನನ್ನ ತಾಯಿ, ಅಕ್ಕಂದಿರು ಹಾಗೂ ಅಣ್ಣಂದಿರು. ವಿದ್ಯಾಭ್ಯಾಸ ಕೊಡಿಸಿದವರು ದೊಡ್ಡ ಅಣ್ಣ ಸುರೇಶ್ ಬೆಳ್ಚಡ. ಯಕ್ಷ ಜೀವನದಲ್ಲಿ ನನಗೆ ನಿರ್ದೇಶಕನಾಗಿ ಇರುವುದು ಅಣ್ಣ ಜನಾರ್ದನ ಅಮ್ಮುಂಜೆ; ಕೆನರಾ ಇಂಜಿನಿಯರಿಂಗ್ ಕಾಲೇಜು ಉದ್ಯೋಗಿ, ಸಂಘಟಕ, ನಿರೂಪಕ.

ನನ್ನ ಸಹಧರ್ಮಿಣಿ ಶಶಿಕಲಾ ಹಾಗೂ ಮನೆಯ ಎಲ್ಲರೂ ನನ್ನ ಯಕ್ಷ ಜೀವನಕ್ಕೆ ಸಹಕಾರಿಯಾಗಿದ್ದಾರೆ. ಕಟೀಲು ಮೇಳದಲ್ಲಿ ಪ್ರಸ್ತುತ ಶ್ರೀದೇವಿಪ್ರಸಾದ್ ಶೆಟ್ಟಿಯವರ ಸಮರ್ಥ ಯಜಮಾನಿಕೆಯಲ್ಲಿ, ಪೊಳಲಿ ಶ್ರೀ ರಾಜರಾಜೇಶ್ವರಿ ತಾಯಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ ಹಾಗೂ ಶ್ರೀ ಭಗವತಿ ಮಾತೆ ಹಾಗೂ ಸರ್ವ ದೈವ ದೇವರುಗಳ ಆಶೀರ್ವಾದದಿಂದ, ಕಟೀಲು ಆಸ್ರಣ್ಣ ಬಂಧುಗಳ ಆಶೀರ್ವಚನದಿಂದ, ಅಪಾರ ಯಕ್ಷಾಭಿಮಾನಿಗಳ ಆಶೀರ್ವಾದ ಪ್ರೋತ್ಸಾಹದಿಂದ ಕಟೀಲು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದೇನೆ.


ಸನ್ಮಾನದ ಲೆಕ್ಕ ಇಟ್ಟಿಲ್ಲ, ಬಹಳಷ್ಟು ಆಗಿದೆ.

ಪ್ರಶಸ್ತಿಗಳು - ಅಮ್ಮುಂಜೆ ರಜತ ಪರ್ವದಲ್ಲಿ ಅಭಿಮಾನಿಗಳು ಸನ್ಮಾನಿಸಿ 'ಯಕ್ಷದ್ಯುಮಣಿ' ಎಂಬ ಪ್ರಶಸ್ತಿಯನ್ನು ಹಾಗೂ

ಯಕ್ಷಾರಾಧನಾ ಕಲಾಕೇಂದ್ರ ಉರ್ವ ಇವರು 'ಯುವ ಯಕ್ಷ ಕಲಾರಾಧಕ' ಪ್ರಶಸ್ತಿಯನ್ನು ಕೊಟ್ಟಿದ್ದಾರೆ.

ಕಟೀಲು ಮೇಳದಲ್ಲಿರುವಾಗ ತುಂಬಾ ಸನ್ಮಾನಗಳು ಆಗಿದೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ನನಗೆ ಯಕ್ಷಗಾನದ ಮೊದಲ ಹೆಜ್ಜೆ ಹೇಳಿಕೊಟ್ಟ ಗುರುಗಳು ಗುಂಡಿಲ ಗುತ್ತು ಜಿ. ಶಂಕರ ಶೆಟ್ಟಿಯವರು ಸನ್ಮಾನಿಸಿದ್ದಾರೆ. ಯಕ್ಷಕಲಾ ಪೊಳಲಿ, ವೀರಯೋಧ ಯಾದವ ಫ್ರೆಂಡ್ಸ್ ಅಮ್ಮುಂಜೆ, ಚೀರುಂಭ ಭಗವತೀ ತೀಯಾ ಸಮಾಜ ಸಂಘ ಮುಡಾಯಿಕೋಡಿ, ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆಯ ರಜತ ಮಹೋತ್ಸವದಲ್ಲಿ, ವಿನಾಯಕ ಯಕ್ಷ ಕಲಾ ತಂಡ ಕೆರೆಕಾಡು, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಪೊಳಲಿ ಘಟಕದ ಸನ್ಮಾನ, ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಅಭಿಮಾನಿಗಳು ಮುಂಬೈ, ಸಸಿಹಿತ್ಲು ಶ್ರೀ ಭಗವತೀ ತೀಯಾ ಸಂಘ ಎಕ್ಕಾರು ಬಜಪೆ ಬೈಲು ಮತ್ತು ಭಗವತಿ ಮಲೆಯಾಳಿ ಬಿಲ್ಲವ ಸಂಘ ನಿಡ್ಡೋಡಿ, ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಧರ್ಮಸ್ಥಳ, ಲಿಂಗಮಾರು ಶಿವಣ್ಣ ಶೆಟ್ಟಿ ಮತ್ತು ಮಕ್ಕಳು ವಾಮಂಜೂರು, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು, ಶ್ರೀ ಕೃಷ್ಣ ಯಕ್ಷಸಭಾ ಮಂಗಳೂರು, ಯಕ್ಷಾಮೃತ ವಾಮಂಜೂರು ಇವರಿಂದ ಯಕ್ಷಾಮೃತ ಪ್ರಶಸ್ತಿ ೨೦೧೮, ಶ್ರೀದೇವಿ ಭಕ್ತ ವೃಂದ ಕೆಂಜಾರು, ಪ್ರಭಾಕರ ಡಿ ಸುವರ್ಣ ಅವರ ಸುವರ್ಣ ಪ್ರತಿಷ್ಠಾನ ಕರ್ನಿರೆ ವತಿಯಿಂದ ಸನ್ಮಾನ, ಶ್ರೀ ಭಗವತಿ ಯಕ್ಷಾಭಿಮಾನಿ ಬಳಗ ಬಜ್ಪೆ, ಮಲೆಯಾಳಿ ಬಿಲ್ಲವ ಸೇವಾ ಸಂಘ (ರಿ), ಯುವ ವೇದಿಕೆ ಹಾಗೂ ಮಹಿಳಾ ವೇದಿಕೆ ಇರಾ ಕಲ್ಲಾಡಿ, ಪೊಳಲಿ ಸೇವಾ ಸಹಕಾರಿ ಸಂಘ (ರಿ). ಅಲ್ಲದೆ ಮೈಸೂರು, ಬೆಂಗಳೂರು, ಹೊಸಪೇಟೆ, ಚೆನೈ ಮೊದಲಾದ ಕಡೆಗಳಲ್ಲಿ ಸನ್ಮಾನಿಸಿದ್ದಾರೆ.


ಪುರಾಣ ಪುಸ್ತಕ ಓದುವುದು, ಕ್ರಿಕೆಟ್ ಆಡುವುದು ಹಾಗೂ ನೋಡುವುದು ಇವರ ಹವ್ಯಾಸಗಳು.


ವಿದೇಶ ಪ್ರಯಾಣ:- ಸಿಂಗಾಪುರ, ಮಸ್ಕತ್, ದುಬೈ, ಬೆಹ್ರೈನ್, ಅಬುಧಾಬಿಯಲ್ಲಿ ಯಕ್ಷಗಾನದಲ್ಲಿ ಭಾಗವಹಿಸಿದ್ದೇನೆ.

ಶ್ರೀಮತಿ ವಿದ್ಯಾ ಕೋಳ್ಯೂರರ ಯಕ್ಷಮಂಜೂಷಾ ತಂಡದಲ್ಲಿ ಕಾಶಿ, ಅಯೋಧ್ಯೆಯಲ್ಲಿ ಹಿಂದಿ ಯಕ್ಷಗಾನದಲ್ಲಿ ಪಾತ್ರ ಮಾಡಿದ್ದು ಬಹಳ ಸಂತೋಷ ಕೊಟ್ಟಿದೆ ಎಂದು ಅಮ್ಮುಂಜೆಯವರು ಹೇಳುತ್ತಾರೆ


01-06-2003 ರಂದು ಶಶಿಕಲಾ ಅವರನ್ನು ವಿವಾಹವಾಗಿ ಮಕ್ಕಳಾದ ವೈಶಾಖ್ ಎಂ ಅಮ್ಮುಂಜೆ, ವೈಷ್ಣವಿ ಎಂ ಅಮ್ಮುಂಜೆ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


Photo Click:- Manjunath Bairy, Vaishak Kotian, Diwanagraphy.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم