ಬೆಂಗಳೂರು: ರೈತರನ್ನು ದೇಶದ ಸಂಪತ್ತು ಎಂದು ಸಂಬೋಧಿಸುತ್ತೇವೆ. ಕೃಷಿ ಕ್ಷೇತ್ರದಲ್ಲಿ ಅವರ ಪಾತ್ರ ಅತ್ಯಂತ ಗಣನೀಯವಾದ್ದು. ಇದರಿಂದ ದೇಶ ಕೂಡ ಪ್ರಗತಿ ಪಥದಲ್ಲಿ ಸಾಗಲು ಅನುಕೂಲವಾಗುತ್ತಿದೆ.
ಇತ್ತೀಚೆಗೆ ರೈತರಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ, ಕಾಯ್ದೆಯ ಬಗ್ಗೆ ಅನೇಕ ತೆರನಾದ ವಾದ ವಿವಾದಗಳು ನಡೆಯುತ್ತಲೇ ಇದೆ. ಇನ್ನೊಂದು ಕಡೆ ಚುನಾವಣೆಯು ಕೂಡ ಸಮೀಪಿಸುತ್ತಿದೆ. ಕೆಲವೊಮ್ಮೆ ರಾಜಕೀಯ ಬದಲಾವಣೆಗಳು ಕೂಡ ಜನರ ಮೇಲೆ ಪ್ರಭಾವವನ್ನು ಬೀರುತ್ತದೆ.
ರೈತರಿಗೆ ಸಂಬಂಧಿಸಿದಂತೆ ಅವರ ಆದಾಯವನ್ನು ದ್ವಿಗುಣಗೊಳಿಸುವಂತೆ ಅದಕ್ಕೆ ಪೂರಕವಾಗಿ ಮತ್ತಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬ್ಯಾಡಗಿಯಲ್ಲಿ ವಿಧಾನಪರಿಷತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ರೈತರಿಗೆ ಸಿಹಿಸುದ್ದಿ ನೀಡಿದ್ದಾರೆ. "ರೈತರ ಬೆಳವಣಿಗೆಯಾದರೆ ಮಾತ್ರ ದೇಶ ಪ್ರಗತಿಯಾಗುತ್ತದೆ. ರೈತರನ್ನು ದೇಶದ ಬೆನ್ನೆಲುಬು ಎಂದು ಕರೆಯುತ್ತೇವೆ. ಹಾಗಿರುವಾಗ ಮುಂದಿನ ದಿನಗಳಲ್ಲಿ ಇನ್ನಷ್ಟು ರೈತಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು" ಎಂದು ಅವರು ಹೇಳಿದ್ದಾರೆ.