ಮಕ್ಕಳಿಗೆ ಕಲಿಕಾ ಸ್ವಾತಂತ್ರ್ಯ ನೀಡಬೇಕು: ಬಿ.ಸಿ. ನಾಗೇಶ್
ಪುತ್ತೂರು: ಹೊಸ ಶಿಕ್ಷಣ ಈ ದೇಶಕ್ಕೆ ಹೊಸ ದಿಕ್ಕನ್ನು ನೀಡಬಲ್ಲದು. ಮಕ್ಕಳಿಗೆ ಕಲಿಕಾ ಸ್ವಾತಂತ್ರ್ಯವನ್ನು ನೀಡಬೇಕು. ವಿದ್ಯೆ ದಾನಕ್ಕಿರುವುದು, ಮಾರಾಟಕ್ಕಲ್ಲ ಎಂಬ ನಿಲುವು ನಮ್ಮದಾಗಬೇಕು. ಭಾರತೀಯ ಶಿಕ್ಷಣದೊಂದಿಗೆ, ಸಂಸ್ಕಾರಯುತ ಶಿಕ್ಷಣವನ್ನು ನೀಡುವುದು ನಮ್ಮ ಉದ್ದೇಶ ಎಂದು ಕರ್ನಾಟಕ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಹೇಳಿದರು.
ಅವರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ) ಇದರ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್ಇ) ಇದರ ನೂತನ ಕಟ್ಟಡ ಹಾಗೂ ‘ವಿಜ್ಞಾನ ದೀಪಿಕಾ’ 3ಡಿ ವಿಜ್ಞಾನ ಉದ್ಯಾನವನ ಇವುಗಳನ್ನು ಲೋಕಾರ್ಪಣೆಗೊಳಿಸಿ ಬುಧವಾರ ಮಾತನಾಡಿದರು.
ಪ್ರಾಚೀನ ಕಾಲದಲ್ಲಿ ದೇಶೀಯ ಗುರುಕುಲ ಶಿಕ್ಷಣಕ್ಕೆ ಪ್ರಾಶಸ್ತ್ಯವಿತ್ತು. ಅದು ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಹೊಂದಿತ್ತು. ಆದರೆ ಆಂಗ್ಲರು ಅವರ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದು ಈ ವ್ಯವಸ್ಥೆಯನ್ನು ಬದಲಾಯಿಸಿದರು. ಇಂದಿಗೂ ಅದೇ ಪದ್ಧತಿ ಜಾರಿಯಲ್ಲಿದೆ. ವ್ಯಕ್ತಿ ಕೇಂದ್ರಿತವಾದ, ಸಂಕುಚಿತ, ಸ್ವಾರ್ಥಪರ ಯೋಚನೆಯನ್ನು ಬಿತ್ತುವ ಶಿಕ್ಷಣ ಪದ್ಧತಿ ಇದಾಗಿದೆ. ಸನಾತನವಾದ ಗುರುಕುಲ ಸಂಸ್ಕೃತಿಯಿಂದ ಭಾರತ ವಿಶ್ವಗುರುವಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.
ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಮಾತನಾಡಿ, ಪ್ರಾಚೀನ ಕಾಲದಲ್ಲಿ ಸೂರ್ಯೋದಯ ಭಾರತದಲ್ಲಿ ಆಗಿತ್ತು. ಬೆಳಕು ಜಗತ್ತಿಗೆ ಪಸರಿಸಿತ್ತು. `ಎಲ್ಲರಿಗೂ ಶಿಕ್ಷಣ ಎನ್ನುವ ಸಮಷ್ಠಿ ಶಿಕ್ಷಣದ ಪರಿಕಲ್ಪನೆಯನ್ನು ವಿಶ್ವಕ್ಕೆ ಕೊಟ್ಟಿರುವುದು ಭಾರತ ದೇಶ ಎಂಬುದು ನೆನಪಿರಲಿ. ನಮ್ಮ ಧರ್ಮ-ಸಂಸ್ಕೃತಿಯನ್ನು ಆಧರಿಸಿದ ಶಿಕ್ಷಣವನ್ನು ನಾವು ಕೊಡಬೇಕು. ಶಿಕ್ಷಣವನ್ನೂ ದಂದೆಯಾಗಿಸಿಕೊಂಡವರ ನಡುವೆ ವಿವೇಕಾನಂದ ವಿದ್ಯಾಸಂಸ್ಥೆಗಳು ಪ್ರತ್ಯೇಕವಾಗಿ ನಿಲ್ಲುತ್ತವೆ. ರಾಷ್ಟ್ರಹಿತ, ರಾಷ್ಟ್ರ ಭಕ್ತಿಯನ್ನು ಶಿಕ್ಷಣದ ಮೂಲಕ ನೀಡುವ ಉದ್ದೇಶವನ್ನಿರಿಸಿಕೊಂಡ ವಿವೇಕಾನಂದ, ರಾಷ್ಟ್ರ ಚಿಂತನೆಯ ವಿದ್ಯಾಸಂಸ್ಥೆಯಾಗಿದೆ. ಎಲ್ಲಿ ಸೂರ್ಯ ಹುಟ್ಟುತ್ತಾನೋ ಅಲ್ಲಿ ಬೆಳಕು ಜಾಸ್ತಿ. ಅಂತೆಯೇ ಈ ವಿದ್ಯಾಸಂಸ್ಥೆಗಳೂ ಕೂಡ ಕತ್ತಲಿನಿಂದ ಬೆಳಕಿಗೆ ಬರಲು ಸಹಕರಿಸುತ್ತಿವೆ ಎಂದು ನೂತನ ಕಟ್ಟಡಕ್ಕೆ ‘ದೇವದೀಪ್ತಿ’ ಎಂದು ನಾಮಕರಣ ಮಾಡಿ ಆಶೀರ್ವಚನವನ್ನು ನೀಡಿದರು.
‘ಕಲ್ಪನಾ ಚಾವ್ಲಾ’ ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಜಿಲ್ಲೆಯು ಶಿಕ್ಷಣ ಕಾಶಿಯಾಗಿದೆ. ಪುತ್ತೂರನ್ನು ಕೇಂದ್ರೀಕರಿಸಿ ನಡೆಯುತ್ತಿರುವ ವಿವೇಕಾನಂದ ವಿದ್ಯಾವರ್ಧಕ ಸಂಘವು ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸದೆ ಒಂದು ಸಿದ್ದಾಂತವನ್ನಿರಿಸಿಕೊಂಡು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ. ಕಲಿಕೆಯಲ್ಲಿ ಹಿಂದುಳಿದವರಿಗೂ ಹೇರಳವಾದ ಅವಕಾಶ ಇಲ್ಲಿ ಸಿಗುತ್ತಿದೆ. ಮಾತೃಭಾಷೆಯ ಜೊತೆಗೆ ಆಂಗ್ಲ ಮಾಧ್ಯದಲ್ಲಿಯೂ ಶಿಕ್ಷಣ ದೊರೆಯುತ್ತಿದೆ ಎಂದರು.
ಬಯಲು ರಂಗಮಂದಿರವನ್ನು (ಆ್ಯಂಪಿಥಿಯೇಟರ್) ಉದ್ಘಾಟನೆ ಮಾಡಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಇತಿಹಾಸವನ್ನು ಅರ್ಥೈಸಿಕೊಂಡವರು ಇತಿಹಾಸ ನಿರ್ಮಿಸಲು ಸಾಧ್ಯ. ವೃತ್ತಿ ನಿರ್ಮಾಣ ಮತ್ತು ರಾಷ್ಟ್ರ ನಿರ್ಮಾಣ ನಮ್ಮ ಶಿಕ್ಷಣದ ಉದ್ದೇಶವಾಗಬೇಕು. ಮಕ್ಕಳನ್ನು ರಾಷ್ಟ್ರದ ಆಸ್ತಿಯನ್ನಾಗಿ ಮಾಡುವ ಪ್ರಯತ್ನವನ್ನು ವಿವೇಕಾನಂದ ವಿದ್ಯಾಸಂಸ್ಥೆಗಳು ಮಾಡುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ರಾಜಕೀಯದಲ್ಲಿ ಧರ್ಮವಿರಬೇಕು. ಆದರೆ ಧರ್ಮದಲ್ಲಿ ರಾಜಕೀಯವಿರಬಾರದು. ಧರ್ಮಕೇಂದ್ರಿತ ಶಿಕ್ಷಣ ವ್ಯವಸ್ಥೆಯ ಅಗತ್ಯವಿದೆ. ಪಠ್ಯಗಳಲ್ಲಿ ಭಾರತೀಯ ಸಂಸ್ಕೃತಿ, ಆಚರಣೆಗಳು ಹಾಗೆಯೇ ದೇಶಕ್ಕಾಗಿ ಹೋರಾಡಿದ ವೀರರ, ರಾಷ್ಟ್ರ ಭಕ್ತರ ಉಲ್ಲೇಖವಾಗಬೇಕು. ದೇಶಾಧಾರಿತ, ಸಂಸ್ಕಾರ ಆಧಾರಿತ ಶಿಕ್ಷಣದ ಅಗತ್ಯವಿದೆ. ಈ ಕಾರಣದಿಂದ ಶುರುವಾದದ್ದು ವಿವೇಕಾನಂದ ವಿದ್ಯಾಸಂಸ್ಥೆ ಎಂದು ಹೇಳಿದರು.
ಚಿಣ್ಣರ ಚಿಲುಮೆಯನ್ನು ಪುತ್ತೂರು ನಗರಸಭೆಯ ಅಧ್ಯಕ್ಷ ಜೀವಂಧರ್ ಜೈನ್, ಸಿ.ಬಿ.ಎಸ್.ಇ ಸ್ಕೂಲ್ ಆ್ಯಪನ್ನು ಮಂಗಳೂರಿನ ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್ನ ಜನರಲ್ ಮ್ಯಾನೇಜರ್ ಯೋಗೀಶ್ ಆಚಾರ್ಯ ಅನಾವರಣಗೊಳಿಸಿದರು.
ಈ ಸಂದರ್ಭ ವಿವೇಕಾನಂದ ಪಾಲಿಟೆಕ್ನಿಕ್ ಪ್ರಾಚಾರ್ಯ ಗೋಪಿನಾಥ್ ಶೆಟ್ಟಿ, ಸಿವಿಲ್ ಕನ್ಸ್ಟ್ರಕ್ಟರ್ ಗೋಪಾಲ್ ಮೂಲ್ಯ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿನಿ ಸಿಂಚನ ಲಕ್ಷ್ಮಿ ಇವರನ್ನು ಗೌರವಿಸಲಾಯಿತು. ಅಂತರ್ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಜ್ಞಾನ ಮಾದರಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ(ಸಿಬಿಎಸ್ಸಿ)ಯ ಮುಖ್ಯಶಿಕ್ಷಕಿ ಸಿಂಧು ಉಪಸ್ಥಿತರಿದ್ದರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ(ಸಿಬಿಎಸ್ಇ)ಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ(ಸಿಬಿಎಸ್ಇ)ಯ ಆಡಳಿತ ಮಂಡಳಿ ಸಂಚಾಲಕ ಭರತ್ ಪೈ ಸ್ವಾಗತಿಸಿ, ಅಧ್ಯಕ್ಷೆ ವಸಂತಿ ಕೆದಿಲ ವಂದಿಸಿದರು. ನರೇಂದ್ರ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ವಿಘ್ನೇಶ್ ಕಾರ್ಯಕ್ರಮ ನಿರ್ವಹಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ