ಮೂಡುಬಿದಿರೆ: ಆಳ್ವಾಸ್ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ನಿಕಾಯದ ಡೀನ್ ವೇಣುಗೋಪಾಲ ಶೆಟ್ಟಿ ‘ಕನ್ನಡದ ಬಗೆಗೆ ನಮ್ಮಲ್ಲಿ ಮೂಡುತ್ತಿರುವ ಅನಾಧರದಿಂದಾಗಿ, ಇಂದು ನಮ್ಮ ನಡುವೆ ಕನ್ನಡ ಅನಾಮಧೇಯವಾಗಿ ಉಳಿಯುವಂತಾಗಿದೆ. ಕನ್ನಡಿಗರಲ್ಲಿ ಸ್ವಾಭಿಮಾನದ ಕೊರತೆ ಎದ್ದು ಕಾಣುತ್ತಿದೆ. ಕನ್ನಡ ರಾಜ್ಯೋತ್ಸವದ ಈ ಸಂಧರ್ಭದಲ್ಲಿ ಸಂಭ್ರಮಾಚರಣೆಯ ಜತೆಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದರು.
ಕನ್ನಡದ ಭವ್ಯ ಪರಂಪರೆಯನ್ನು ವಿವರಿಸಿದ ಅವರು, ಕನ್ನಡದ ಮೊದಲ ಶಾಸನ-ಹಲ್ಮಿಡಿ ಶಾಸನ, ಕಪ್ಪೆ ಅರೆಭಟ್ಟನ ಶಾಸನ, ಕನ್ನಡದ ಮೊದಲ ಕೃತಿ-ಕವಿರಾಜ ಮಾರ್ಗ, ವಚನ ಸಾಹಿತ್ಯದ ಸಂಪತ್ಭರಿತ ಹೊಳಹುಗಳ ಬಗ್ಗೆ ತಿಳಿಸಿದರು. ಮೊದಲಿಗೆ ನಮ್ಮಲ್ಲಿ ಕನ್ನಡದ ಬಗ್ಗೆ ಪ್ರೀತಿ ಮೂಡಿ, ಮನೆ-ಮನಗಳಲ್ಲಿ ಕನ್ನಡ ವ್ಯಾಪಕವಾಗಿ ಬಳಕೆಯಾಗುವಂತಾಗಬೇಕು ಎಂದರು. ಇದೇ ಸಂಧರ್ಭದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್ಕುಮಾರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ,ಕಾಲೇಜಿನ ಕನ್ನಡ ಸಂಘದ ಸಂಯೋಜಕರು ಮತ್ತು ಉಪನ್ಯಾಸಕ ವೃಂದದವದರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಯಾಂತ್ರಿಕ ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿನಿ ಭೂಮಿಕ ಕಾರ್ಯಕ್ರಮವನ್ನು ನೆರವೇರಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ