ಅಂಬಿಕಾ ಪದವಿ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

Upayuktha
0

ಹಿಂದೂ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ದೊರಕುವಂತಾಗಬೇಕು : ಕೇಶವ ಪ್ರಸಾದ ಮುಳಿಯ


ಪುತ್ತೂರು: ನಮ್ಮ ದೇಶದಲ್ಲಿ ಬೇರೆ ಬೇರೆ ಧರ್ಮದ ಮಕ್ಕಳಿಗೆ ಆಯಾ ಧಾರ್ಮಿಕ ಶಿಕ್ಷಣ ದೊರಕುತ್ತಿದೆ. ಆದರೆ ದೇಶದ ಎಪ್ಪತ್ತೆಂಟು ಶೇಕಡಾ ಜನರಿರುವ ಹಿಂದೂ ಧರ್ಮದ ಮಕ್ಕಳಿಗೆ ಮಾತ್ರ ಅಂತಹ ಧಾರ್ಮಿಕ ಶಿಕ್ಷಣ ದೊರಕುತ್ತಿಲ್ಲ. ಆದ್ದರಿಂದ ಪ್ರತಿಯೊಂದು ಶಾಲೆಗಳಲ್ಲೂ ಧಾರ್ಮಿಕ ಶಿಕ್ಷಣ ದೊರಕಬೇಕು. ಆಗ ಎಲ್ಲರಿಗೂ ಧಾರ್ಮಿಕ ಶಿಕ್ಷಣ ದೊರೆತಂತಾಗುತ್ತದೆ ಎಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ ಮುಳಿಯ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ರಕ್ಷಕ ಶಿಕ್ಷಕ ಸಂಘದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.


ನಮ್ಮ ಕಾಮನೆಗಳು ಧರ್ಮ ಮತ್ತು ಅರ್ಥವನ್ನು ಮೀರಿ ಮುನ್ನುಗ್ಗಬಾರದು. ಹಾಗಾದಾಗ ಅದರಿಂದ ಸಾಮಾಜಿಕ ಹಾನಿಯಾಗುವುದಕ್ಕೆ ಆರಂಭವಾಗುತ್ತದೆ. ಹೀಗೆ ಧರ್ಮ, ಅರ್ಥ ಮತ್ತು ಕಾಮನೆಗಳನ್ನು ಸರಿಯಾಗಿ ಬಳಸಿಕೊಳ್ಳುವುದಕ್ಕೆ ಅತ್ಯುತ್ತಮ ಶಿಕ್ಷಣದ ಅಗತ್ಯವಿದೆ. ಭಾರತೀಯ ತತ್ವಶಾಸ್ತ್ರದ ಅಧ್ಯಯನ ಅತ್ಯುತ್ತಮ ವಿದ್ಯಾರ್ಥಿಗಳನ್ನು ರೂಪಿಸಬಲ್ಲುದು ಎಂದರಲ್ಲದೆ ಇಂದಿನ ಶಿಕ್ಷಣ ವಿದ್ಯೆಯನ್ನು ಒದಗಿಸಿಕೊಡುತ್ತದೆಯಾದರೂ ಅದನ್ನು ಹೇಗೆ ಬಳಸಬೇಕೆಂದು ತಿಳಿಸಿಕೊಡದಿರುವುದೇ ಎಲ್ಲಾ ಸಮಸ್ಯೆಗಳಿಗೂ ಮೂಲವೆನಿಸಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಪದವಿ ಮಹಾವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಮಾತನಾಡಿ ಮಕ್ಕಳಲ್ಲಿ ಸಂಸ್ಕಾರ, ದೇಶಪ್ರೇಮವನ್ನು ತುಂಬುವ ಕಾರ್ಯವನ್ನು ಅಂಬಿಕಾ ಪದವಿ ಮಹಾವಿದ್ಯಾಲಯ ನಿರಂತರವಾಗಿ ನಡೆಸಿಕೊಂಡು ಬಂದಿದೆ. ಭಾರತೀಯ ತತ್ವಜ್ಞಾನವನ್ನು ವಿಜ್ಞಾನದೊಂದಿಗೆ ಒದಗಿಸಿಕೊಡುತ್ತಿರುವ ದೇಶದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೂ ಅಂಬಿಕಾ ಮಹಾವಿದ್ಯಾಲಯ ಪಾತ್ರವಾಗಿದೆ ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಇಂದು ಭಾರತದಲ್ಲಿ ಸತ್ಯವನ್ನು ಹೇಳುವುದಕ್ಕೆ ಅಂಜಬೇಕಾದ ಪರಿಸ್ಥಿತಿಯಿದೆ. ಕೇವಲ ಕೆಲವು ಮಂದಿಗೆ ಬೇಸರವಾಗಬಾರದೆಂದು ಹಲವು ಮಂದಿಗೆ ಸತ್ಯ ದರ್ಶನ ಮಾಡಿಸುವುದಕ್ಕೆ ಅಳುಕು ಕಾಡುತ್ತಿದೆ. ಆದರೆ ಅಂಬಿಕಾ ಶಿಕ್ಷಣ ಸಂಸ್ಥೆ ಇತಿಹಾಸದ ಸತ್ಯಗಳನ್ನು ತಿಳಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ನಮಗಿಂದು ನೈತಿಕವಾಗಿ ಸದೃಢರಾಗಿರುವ ಯುವಸಮುದಾಯ ಬೇಕಾಗಿದೆ. ಭವಿಷ್ಯದ ಭಾರತವನ್ನು ಕಟ್ಟುವುದಕ್ಕೆ ಪ್ರಾಮಾಣಿಕ ಹಾಗೂ ಸಂಸ್ಕಾರಯುತ ವಿದ್ಯಾರ್ಥಿಗಳ ಅವಶ್ಯಕತೆ ಇದೆ. ಅಂತಹ ವಿದ್ಯಾರ್ಥಿಗಳನ್ನು ರೂಪಿಸುವಂತಹ ಶಿಕ್ಷಣವನ್ನು ಅಂಬಿಕಾ ಸಂಸ್ಥೆ ಒದಗಿಸಿಕೊಡುತ್ತದೆ ಎಂದು ಹೇಳಿದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ, ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿ ರಾಮ ಭಟ್ ಕೆದಿಮಾರ್ ಉಪಸ್ಥಿತರಿದ್ದರು. ನೂತನವಾಗಿ ಕಾಲೇಜಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಭಾರತೀಯ ಪರಂಪರೆಯಂತೆ ಆರತಿ ಬೆಳಗಿ, ತಿಲಕವನ್ನಿಟ್ಟು ಸ್ವಾಗತಿಸಲಾಯಿತು.


ವಿದ್ಯಾರ್ಥಿನಿ ಪ್ರಿಯಾ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಾಚಾರ್ಯರಿಂದ ನೂತನ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ನಡೆಯಿತು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top