ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರು ಎಲ್ಲರನ್ನು ಅಗಲಿ ಇಂದು 11ನೇ ದಿನ. ಇಂಥ ನೋವಿನ ನಡುವೆಯೂ ಅವರ ಪತ್ನಿ ಅಶ್ವಿನಿ, ಪೊಲೀಸ್ ಇಲಾಖೆಗೆ ಪತ್ರ ಬರೆದು ಕೃತಜ್ಞತೆ ಸಲ್ಲಿಸಿದ್ದಾರೆ. ನಮ್ಮ ನೋವನ್ನು ಅಡಗಿಸಿಟ್ಟುಕೊಂಡು ಅವರನ್ನು ಸಕಲ ಗೌರವಗಳೊಂದಿಗೆ ಕಳುಹಿಸಿಕೊಡಬೇಕಿತ್ತು. ಅಂತಿಮ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಿ, ಮೆರವಣಿಗೆ ಹಾಗೂ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಸಾಕಷ್ಟು ಪೊಲೀಸ್ ನಿಯೋಜಿಸಿ, ಕಾನೂನು ಸುವ್ಯವಸ್ಥೆಗೆ ಎಲ್ಲಿಯೂ ಧಕ್ಕೆ ಆಗದಂತೆ ನೋಡಿಕೊಂಡಿದ್ದೀರಿ. ನಮ್ಮ ಇಡೀ ಕುಟುಂಬ ಹಾಗೂ ಎಲ್ಲ ಅಭಿಮಾನಿಗಳ ಪರವಾಗಿ ನಿಮಗೆ ಮತ್ತು ಎಲ್ಲ ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಪತ್ರದ ಮುಖಾಂತರ ಕೃತಜ್ಞತೆ ಸಮರ್ಪಿಸಿದ್ದಾರೆ.
ಈ ಪತ್ರವನ್ನು ಬೆಂಗಳೂರು ನಗರದ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಕಳುಹಿಸಿ ಕೊಟ್ಟಿದ್ದಾರೆ. ಪುನೀತ್ ಅವರ ನಿಧನದಿಂದ ಕೋಟ್ಯಾಂತರ ಅಭಿಮಾನಿಗಳು ಅತೀವ ನೋವನ್ನು ಅನುಭವಿಸಿದ್ದರು. ಲಕ್ಷಗಟ್ಟಲೆ ಅಭಿಮಾನಿಗಳು ಕಂಠೀರವ ಸ್ಟುಡಿಯೋದತ್ತ ಧಾವಿಸಿ ನೆಚ್ಚಿನ ನಟನ ಅಂತಿಮ ದರ್ಶನಕ್ಕೆ ಕಾತರಿಸುತ್ತಿದ್ದರು.
ಆ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ಹರಸಾಹಸವೇ ಆಗಿತ್ತು. ಆದರೆ ಪೊಲೀಸ್ ಇಲಾಖೆ ಅದನ್ನು ತುಂಬಾ ಸಮಚಿತ್ತದಿಂದ ನಿರ್ವಹಿಸಿ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಅಪ್ಪು ಪತ್ನಿ ಅಶ್ವಿನಿ ಅವರು ಪತ್ರ ಬರೆಯುವ ಮೂಲಕ ಇಲಾಖೆಗೆ ಧನ್ಯವಾದ ಸಲ್ಲಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ