ವೀರನಾರಾಯಣ ದೇವಸ್ಥಾನ ಕುಲಾಲರ ಅಸ್ಮಿತೆ: ಮಯೂರ್ ಉಳ್ಳಾಲ್
ಮಂಗಳೂರು: ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಜೀರ್ಣೋದ್ಧಾರದ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಆ ಪ್ರಯುಕ್ತ ನವೆಂಬರ್ 14 ರಂದು ರವಿವಾರ ದೇವಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘ ಮತ್ತು ವೀರನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ಜಂಟಿಯಾಗಿ ಭಜನೆ, ಗೋಪೂಜೆ, ಸತ್ಯನಾರಾಯಣ ಮಹಾಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ದೇವಸ್ಥಾನದ ತಂತ್ರಿಗಳಾಗಿರುವ ಶ್ರೀಹರಿ ಉಪಾಧ್ಯಾಯರ ಮಾರ್ಗದರ್ಶನದಂತೆ ಪ್ರಧಾನ ಅರ್ಚಕರು ಜನಾರ್ದನ್ ಭಟ್ ಅವರು ಶ್ರೀದೇವರಿಗೆ ವಿಶೇಷ ಪೂಜೆ ನಡೆಸಿದರು. ಆ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲ ಸಂಘದ ಅಧ್ಯಕ್ಷ ಮಯೂರ ಉಳ್ಳಾಲ್ ದಂಪತಿಗಳಿಂದ ಗೋ ಪೂಜೆ ನೆರವೇರಿತು.
ಜಿಲ್ಲಾ ಕುಲಾಲ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ.ಎ ಸಾಲ್ಯಾನ್ ಮತ್ತು ಪದಾಧಿಕಾರಿಗಳು ಸದಸ್ಯರು ಹಾಗೂ ವೀರನಾರಾಯಣ ದೇವಸ್ಥಾನದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಮನೋಜ್ ಮತ್ತು ಪದಾಧಿಕಾರಿಗಳು ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಶ್ರೀ ಸತ್ಯನಾರಾಯಣ ಮಹಾಪೂಜೆ, ಅನ್ನಸಂತರ್ಪಣೆ ನೆರವೇರಿತು.
ಆ ಪೂಜೆ ನಡೆದ ಬಳಿಕ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಜಿಲ್ಲಾ ಸಂಘದ ಅಧ್ಯಕ್ಷರು ಮಯೂರ್ ಉಳ್ಳಾಲ್ ಮಾತನಾಡುತ್ತಾ ಶ್ರೀ ವೀರನಾರಾಯಣ ಕ್ಷೇತ್ರ ಸಮಸ್ತ ಹಿಂದೂ ಬಾಂಧವರ ಕ್ಷೇತ್ರವಾಗಿದೆ. ಆದರೆ ಇತಿಹಾಸದಿಂದಲೇ ಕ್ಷೇತ್ರವನ್ನು ಕುಲಾಲ ಸಮಾಜ ಬಂಧುಗಳು ಆಡಳಿತವನ್ನು ನಡೆಸುತ್ತ ಬಂದಿದ್ದಾರೆ. ಮುಂದೆಯೂ ನಡೆಸುತ್ತೇವೆ. ಕ್ಷೇತ್ರ ಜೀರ್ಣೋದ್ಧಾರ ಆಗಬೇಕೆಂದು ಸಂಕಲ್ಪ ಮಾಡಿದ್ದೇವೆ. ಮುಂದಿನ ತಿಂಗಳು ಜೀರ್ಣೋದ್ಧಾರದ ದೊಡ್ಡ ಮಟ್ಟಿನ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ. ಅದಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕುಲಾಲ ಸಮಾಜ ಬಾಂಧವರು ಸೇರುವವರು ಇದ್ದಾರೆ. ಕ್ಷೇತ್ರದಲ್ಲಿ ಕೆಲವೇ ದಿನಗಳ ಹಿಂದೆ ಭಜನೆ ಸತ್ಯನಾರಾಯಣ ಪೂಜೆ ಗೋಪೂಜೆ ಮಾಡಬೇಕೆಂದು ನಿರ್ಧಾರ ಮಾಡಿದ್ದೆವು. ಅದಕ್ಕೆ ಸಾವಿರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಸೇರಿಕೊಂಡಿರುವುದು ಅಭಿಮಾನ ತಂದಿದೆ. ದೇಶ ವಿದೇಶಗಳಿಂದ ಸಮಾಜ ಬಾಂಧವರು ಕ್ಷೇತ್ರದ ಮೇಲೆ ಭಕ್ತಿಯಿಂದ ಸಹಕಾರವನ್ನು ನೀಡುವ ಭರವಸೆ ನೀಡಿದ್ದಾರೆ. ಶ್ರೀ ವೀರನಾರಾಯಣ ಕ್ಷೇತ್ರ ಕುಲಾಲರ ಅಸ್ಮಿತೆ ಎಂದು ನುಡಿದರು.
ವೇದಿಕೆಯಲ್ಲಿ ದೇವಾಲಯದ ಆಡಳಿತ ಮೊಕ್ತೇಸರರಾದ ಪುರುಷೋತ್ತಮ್ ಕುಲಾಲ್, ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಎ ದಾಮೋದರ, ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಕಾರ್ಯಧ್ಯಕ್ಷ ಬಿ ಪ್ರೇಮಾನಂದ ಕುಲಾಲ್, ವೀರನಾರಾಯಣ ಸೇವಾ ಸಮಿತಿ ಅಧ್ಯಕ್ಷ ಸುಂದರ ಕುಲಾಲ್, ದೇವಸ್ಥಾನದ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಗೀತಾ ಮನೋಜ್, ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಸಾಲ್ಯಾನ್, ಹಾಗೂ ದಯಾನಂದ ಅಡ್ಯಾರ್, ಎಂಪಿ ಬಂಗೇರ, ರಾಮಣ್ಣ ಉಪ್ಪಿನಂಗಡಿ, ಪುಂಡರೀಕಾಕ್ಷ, ಭಾಸ್ಕರ್ ಪೆರುವಾಯಿ ಸುರೇಶ್ ಕುಲಾಲ್ ಬಂಟ್ವಾಳ, ಸುರೇಶ್ ಕುಲಾಲ್ ಮಲಲಿ, ಬಿಜೆಪಿಯ ಹಿರಿಯ ನಾಯಕಿ ರೂಪಾ ಡಿ ಬಂಗೇರ, ನಾಗೇಶ್ ಕುಲಾಲ್ ಕುಲಾಯಿ, ಕಿರನ್ ಅಟ್ಲೂರು, ಉದ್ಯಮಿ ಅನಿಲ್ ದಾಸ್, ಸುರೇಶ್ ಕುಲಾಲ್, ಮಂಗಳಾದೇವಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನವೀನ್ ಕುಲಾಲ್ ಪುತ್ತೂರು ನಿರೂಪಿಸಿದರು. ಪ್ರವೀಣ್ ಬಸ್ತಿ ವಂದನಾರ್ಪಣೆಗೈದರು. ಬೆಳಿಗ್ಗಿನಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಇದೇ ಸಂದರ್ಭ ಪುತ್ತೂರಿನ ಕುಂಬಾರರ ಗುಡಿಕೈಗಾರಿಕಾ ಸಹಕಾರಿಸಂಘದಿಂದ ಮಣ್ಣಿನಿಂದ ತಯಾರಿಸಲಾದ ಮಣ್ಣಿನ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ