ಗೋಕರ್ಣ: ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಆನೂರು ಕೃಷ್ಣ ಶರ್ಮ ಅವರ ಮಾರ್ಗದರ್ಶನದಲ್ಲಿ ಇಲ್ಲಿಗೆ ಸಮೀಪದ ಅಶೋಕೆಯಲ್ಲಿ ಈ ತಿಂಗಳ 11 ಹಾಗೂ 12ರಂದು ವೈಭವದ 2ನೇ ಸಂಗೀತೋತ್ಸವ ಆಯೋಜಿಸಲಾಗಿದೆ.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ನವೆಂಬರ್ 11ರಿಂದ ಎರಡನೇ ಸಂಗೀತೋತ್ಸವ
November 10, 2021
0
ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಗೆ ತಾವು ಇಚ್ಛಿಸಿದ ಪಾರಂಪರಿಕ ಸಂಗೀತ ವಿದ್ಯೆ, ಕಲೆಯನ್ನು ಪ್ರಾತ್ಯಕ್ಷಿಕೆ ಮೂಲಕ ಕಲಿಯಲು ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಈ ಸಂಗೀತೋತ್ಸವ ಆಯೋಜಿಸಲಾಗಿದೆ. ಎರಡು ದಿನಗಳ ಸಂಗೀತೋತ್ಸವದ ಸಾನ್ನಿಧ್ಯವನ್ನು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ವಹಿಸಲಿದ್ದು, ಆನೂರು ಅನಂತಕೃಷ್ಣ ಶರ್ಮ ಉಪಸ್ಥಿತರಿರುವರು. ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ ಎಂದು ಸಂಗೀತ ವಿಭಾಗದ ಮುಖ್ಯಸ್ಥ ರಘುನಂದನ ಬೇರ್ಕಡವು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮೊದಲನೇ ದಿನ ಬೆಳಿಗ್ಗೆ 9.30ರಿಂದ ರಾತ್ರಿ 7.30ರವರೆಗೆ ವಿದ್ಯಾವಿಶ್ವ ಸಭಾಂಗಣದಲ್ಲಿ ನಡೆಯುವ ಸಂಗೀತೋತ್ಸವದಲ್ಲಿ ಮೈಸೂರು ವಿಜಯಸೂರ್ಯ ತಂಡದಿಂದ ನಾಗಸ್ವರ ವಾದನ, ವಿಷ್ಣು ರಾಮಪ್ರಸಾದ್ ಅವರಿಂದ ನವತಾರ, ಸಿದ್ಧಾರ್ಥ ಬೆಳ್ಮಣ್ಣು ತಂಡದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ, ಲಯ ಲಾವಣ್ಯ ತಂಡದಿಂದ ತಾಳವಾದ್ಯ, ಅಂಕುಶ್ ನಾಯಕ್ ತಂಡದಿಂದ ಸಿತಾರ್ ವಾದನ, ಶಿವಲಿಂಗ ರಾಜಪುರ್ ಮತ್ತು ತಂಡದಿಂದ ಬಾನ್ಸುರಿ ವಾದನ, ವಿದ್ವಾನ್ ಟಿ.ವಿ.ರಾಮಪ್ರಸಾದ್ ತಂಡದಿಂದ ಕರ್ನಾಟಕ ಶಾಸ್ತ್ರೀಯ ಗಾಯನ ನಡೆಯಲಿದೆ.
ಎರಡನೇ ದಿನ ಅಂದರೆ ನವೆಂಬರ್ 12ರಂದು ಬೆಳಿಗ್ಗೆ 10.30ರಿಂದ ಸಂಜೆ 5ರವರೆಗೆ ನಡೆಯುವ ಸಂಗೀತೋತ್ಸವದಲ್ಲಿ ಸುಮಾ ಹೆಗಡೆಯವರ ಸಂತೂರ್ ವಾದನ, ತೇಜಸ್ವಿನಿ ಶಶಿಭೂಷಣ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ, ಗೋಪಾಲ್ ವೆಂಕಟರಮಣ ಅವರ ವೀಣಾ ವಾದನ, ಮಂಗಳ ರವಿ, ಸುನೀತ ಮುರಳಿ ಮತ್ತು ರವಿ ಅವರ ಭಾವ ಸಂಗಮ, ಕುಮಾರಿ ಸಂಜನಾ ಮತ್ತು ತಂಡದಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ಸಂಗೀತ ರಸಿಕರಿಗೆ ರಸದೌತಣ ಒದಗಿಸಲಿವೆ. ಎರಡು ದಿನಗಳ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.
Tags
Share to other apps