|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕವನ: ಅನುಭವಿಸಲೇಬೇಕು

ಕವನ: ಅನುಭವಿಸಲೇಬೇಕು



ಕಷ್ಟಗಳು ಬರಬಹುದು 

ಇಷ್ಟವಿಲ್ಲದೆ ಕೂಡ

ಅಷ್ಟಕ್ಕೆ ಹೆದರುತ್ತ ಕೂರಲುಂಟೆ

ಅಷ್ಟಿಷ್ಟು ಮಾಡಿರುವ 

ಮುಷ್ಟಿ ಗಾತ್ರದ ಪುಣ್ಯ 

ಅಟ್ಟಾಡಿಸದೆ ಅದನು ಬಿಡುವುದುಂಟೆ.


ಹಸಿವೆಮಗೆ ಬರಲುಂಟು

ತುಸುಕೂಡ ದಯವಿರದೆ 

ಹಸಿವೆಂದು ಕೈಕಟ್ಟಿ ಕೂರಲುಂಟೆ 

ಬಸಿದು ಬೆವರನು ಸತತ 

ನಿಶಿಹಗಲು ಗಳಿಸಿರುವ 

ಅಶನದಾ ಪಡಿ ಇರಲು ಭಯವು ಉಂಟೆ.


ಮಳೆಯು ಬರುವುದು ಸಹಜ

ಇಳೆಯ ಕಾವದು ಏರಿ 

ಚಳಿ ಗಾಳಿ ಬಂತೆಂದು ಹೆದರಲುಂಟೆ

ಗಳಿಕೆಯಲಿ ಉಳಿಸುತ್ತ 

ಮಳೆಯ ರಕ್ಷಣೆಗೆಂದು 

ಗಳಿಸಿದ್ದ ಸೂರಿರಲು ಬವಣೆಯುಂಟೆ.


ಹುಲಿಯು ಹಸುವನು ಹಿಡಿದು 

ಕೊಲಬಹುದೆ ಆದರೂ 

ಹುಲಿಗಂಜಿದೊಡೆ ಹಸುವು ಬದುಕಲುಂಟೆ

ಹುಲಿಯತ್ತ ನರನಿತ್ತ 

ಬಲಿಯನ್ನು ಪಡೆಯುತ್ತ   

ಛಲ ತೋರಲೂ ಹಸುವು ಹೆದರಲುಂಟೆ


ಹುಟ್ಟಿಸಿಹ ಭಗವಂತ 

ಕೊಟ್ಟು ಹೊಸ ಬಟ್ಟೆಯನು 

ಇಟ್ಟುಕೋ ಜೋಪಾನ ಎಂದನಂತೆ

ಬಟ್ಟೆ ಕೆಡುವುದು ಸಹಜ 

ಕೆಟ್ಟು ಹರಿವುದು ಸಹಜ 

ಕೊಟ್ಟ ಅವಧಿಗು ಮುನ್ನ ತೊರೆಯಲುಂಟೆ.


ಜನಬಲವೊ ಧನಬಲವೊ

ತನುವಿನೊಳಗಿನ ಬಲವೊ

ಎನಿತಾದರೂ ಸುಖವ ಕೊಡಲು ಉಂಟೆ 

ಮನದೊಳಗೆ ಸಂತೃಪ್ತಿ

ಅನವರತ  ನಿಶ್ಚಿಂತೆ 

ಮನುಜ ನಿನಗಿರಲದಕೆ ಎಣೆಯು ಉಂಟೆ. 

*************

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post