ಸುಳ್ಯ: ಅಡಿಕೆ ಹಳದಿ ಎಲೆರೋಗ ನಿರೋಧಕ ತಳಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಿಪಿಸಿಆರ್ಐ ವಿಜ್ಞಾನಿಗಳು ಸೋಮವಾರ ಸಂಪಾಜೆ-ಚೆಂಬು ಪ್ರದೇಶಕ್ಕೆ ಭೇಟಿ ನೀಡಿದರು. ಅನೇಕ ವರ್ಷಗಳಿಂದ ಹಳದಿ ಎಲೆರೋಗ ಇದ್ದ ತೋಟದಲ್ಲಿ ಈಗಲೂ ಹಸಿರಾಗಿರುವ ಅಡಿಕೆ ಮರಗಳನ್ನು ಗುರುತು ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು. ಮುಂದೆ ಇನ್ನೂ ಹಲವು ತೋಟಗಳಿಗೆ ಭೇಟಿ ನೀಡಿ, ರೋಗ ರಹಿತ ಮರಗಳನ್ನು ಗುರುತಿಸುವ ಕೆಲಸ ನಡೆಸಲಿದೆ.
ಅಡಿಕೆ ಹಳದಿ ಎಲೆರೋಗಕ್ಕೆ ಸುಳ್ಯ ತಾಲೂಕಿನ ಸಂಪಾಜೆ ಹಾಗೂ ಕೊಡಗು ಜಿಲ್ಲೆಯ ಚೆಂಬು ಪ್ರದೇಶವು ಹಾಟ್ಸ್ಫಾಟ್ ಎಂದು ಗುರುತಿಸಲಾಗಿತ್ತು. ಕಳೆದ ಅನೇಕ ವರ್ಷಗಳಿಂದ ಈ ಪ್ರದೇಶದಲ್ಲಿ ಹಳದಿ ಎಲೆರೋಗ ಕಂಡುಬಂದು ವಿಸ್ತರಣೆಯಾಗಿತ್ತು. ಅನೇಕ ವರ್ಷಗಳಿಂದಲೂ ಹಳದಿ ಎಲೆರೋಗ ಇದ್ದು ಅಂತಹ ತೋಟದಲ್ಲಿ ಈಗಲೂ ಹಸಿರಾಗಿರುವ ಮರಗಳಿಗೆ ರೋಗ ನಿರೋಧಕ ಶಕ್ತಿ ಇದೆ ಎಂಬುದು ಸಾಮಾನ್ಯವಾಗಿರುವ ಅಧ್ಯಯನ. ಇದೀಗ ಅಂತಹ ಮರಗಳ ಗುರುತು ಮಾಡುವ ಕಾರ್ಯವನ್ನು ಸಿಪಿಸಿಆರ್ಐ ವಿಜ್ಞಾನಿಗಳ ತಂಡ ಮಾಡುತ್ತಿದೆ. ಮುಂದೆ ಈ ಮರಗಳ ಆರೈಕೆ ಮಾಡಿದ ಬಳಿಕ ರೋಗದ ಅಂಶಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ ರೋಗ ಮುಕ್ತವಾಗಿರುವ ಮರ ಎಂಬ ಖಾತ್ರಿ ಬಳಿಕ ಮುಂದಿನ ವರ್ಷ ಅಂತಹದ್ದೇ ಮರಗಳ ನಡುವೆ ಪರಾಸ್ಪರ್ಶ ನಡೆಸಿ ರೋಗ ನಿರೋಧಕ ತಳಿ ಅಭಿವೃದ್ಧಿ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
ಸೋಮವಾರ ಸಂಪಾಜೆ ಚೆಂಬು ಪ್ರದೇಶದಲ್ಲಿ ಸಿಪಿಸಿಆರ್ಐ ವಿಟ್ಲದ ಬೆಳೆ ಉತ್ಪಾದನಾ ವಿಭಾಗದ ವಿಜ್ಞಾನಿ ಡಾ.ಭವಿಷ್ಯ ಅವರ ನೇತೃತ್ವದಲ್ಲಿ ಮರಗಳನ್ನು ಗುರುತು ಮಾಡುವ ಕೆಲಸ ನಡೆಯಿತು. ಶ್ರೀನಿವಾಸ ನಿಡಿಂಜಿ, ರವಿ ಬಾಲೆಂಬಿ, ಗಿರೀಶ್ ಚಂದಡ್ಕ, ಭವ್ಯಾನಂದ ಕೊಯಿಂಗೋಡಿ ಅವರ ತೋಟಗಳಿಗೆ ಭೇಟಿ ನೀಡಿದರು. ಸಂಪಾಜೆ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅವರ ನೇತೃತ್ವದ ತಂಡ ಸಹಕಾರ ನೀಡಿತು. ಈ ಸಂದರ್ಭ ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ, ಕೃಷಿಕರಾದ ಭವ್ಯಾನಂದ ಕೊಯಿಂಗೋಡಿ, ಶ್ರೀನಿವಾಸ ನಿಡಿಂಜೆ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಇದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ