ಪದ್ಯಾಣರಿಂದ ಪದ್ಯಾಣ ಪರಂಪರೆಯ ಭಾಗವತಿಕೆ: ಕಲ್ಕೂರ
ಮಂಗಳೂರು: ಯಕ್ಷಗಾನ ರಂಗದಲ್ಲಿ ಪದ್ಯಾಣರು ಮರೆಯಲಾರದ ಮಹಾನ್ ಭಾಗವತರು. ಅವರಿಂದಲೇ ಪದ್ಯಾಣ ಪರಂಪರೆ ಪ್ರಸಿದ್ಧಿಗೆ ಬಂತು. ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಅವರು ಬದುಕಿಗೆ ವಿದಾಯ ಹೇಳಿರುವುದು ಯಕ್ಷಗಾನದ ವಲಯದಲ್ಲಿ ವಿಷಾದ ಮೂಡಿಸಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ವರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು.
ಇತ್ತೀಚೆಗೆ ನಿಧನರಾದ ತೆಂಕುತಿಟ್ಟಿನ ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ಟರಿಗೆ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಜರಗಿದ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿದರು.
ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ, ಪತ್ರಕರ್ತ ಶ್ರೀಕರ ಭಟ್ ಉಜಿರೆ, ಪ್ರಸಂಗಕರ್ತ ನಿತ್ಯಾನಂದ ಕಾರಂತ ಪೊಳಲಿ, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಜಿ.ಕೆ. ಭಟ್ ಸೇರಾಜೆ, ಶ್ರೀಕೃಷ್ಣ ಯಕ್ಷಸಭಾದ ಸುಧಾಕರ ರಾವ್ ಪೇಜಾವರ, ಕುಟುಂಬ ವೈದ್ಯ ಡಾ. ಜಿ.ಕೆ. ಭಟ್ ಸೇರಾಜೆ, ವಕೀಲರಾದ ರಾಮಚಂದ್ರ ಮಾಣಿಪ್ಪಾಡಿ, ಪದ್ಯಾಣ ಗಣವತಿ ಭಟ್ಟರ ಕಲಾಸಾಧನೆಯನ್ನು ಸ್ಮರಿಸಿ ಶ್ರದ್ಧಾಂಜಲಿ ಸಮರ್ಪಿಸಿದರು.
ಗಾಯಕ ತೋನ್ಸೆ ಪುಷ್ಕಳ ಕುಮಾರ್ ಯಕ್ಷಗಾನ ಧಾಟಿಯಲ್ಲಿ ಗಾನ ನಮನ ಸಲ್ಲಿಸಿದರು. ಜನಾರ್ದನ ಹಂದೆ, ವಿಜಯಲಕ್ಷ್ಮೀ ಜಿ. ಶೆಟ್ಟಿ, ಮಹಾದೇವ ವಿ.ಕೆ, ದಾಮೋದರ ರಾವ್ ವೇಜಾವರ ಮೊದಲಾದವರು ಪದ್ಯಾಣರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕೊನೆಯಲ್ಲಿ ಸಾರ್ವಜನಿಕ ಮೌನ ಪ್ರಾರ್ಥನೆಯೊಂದಿಗೆ ಅಗಲಿದ ಚೇತನಕ್ಕೆ ಸದ್ಗತಿ ಕೋರಲಾಯಿತು.